Advertisement

ಹೆದ್ದಾರಿ ದರೋಡೆ ಪ್ರಕರಣ: ಆರೋಪಿಗಳಿಬ್ಬರ ಬಂಧನ

09:58 AM Jan 17, 2022 | Team Udayavani |

ಹುಣಸೂರು: ಮೈಸೂರು-ಹುಣಸೂರು ಹೆದ್ದಾರಿಯ ಬಿಳಿಕೆರೆ ಬಳಿ ಜ.6 ರಂದು ನಡೆದಿದ್ದ ಹೆದ್ದಾರಿ ದರೋಡೆ ಪ್ರಕರಣವನ್ನು ಬೇಧಿಸಿರುವ ಬಿಳಿಕೆರೆ ಠಾಣಾ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಕಾರು ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ತುಮಕೂರಿನಿಂದ ಹುಣಸೂರು ಮಾರ್ಗವಾಗಿ ಕೇರಳದ ಕೂತುಪುರಂಗೆ  ಕಬ್ಬಿಣ ತುಂಬಿದ್ದ ಲಾರಿಯನ್ನು ಜ.6 ರಂದುಅಡ್ಡಗಟ್ಟಿದ ಬೆಂಗಳೂರಿನ ಐದು ಮಂದಿ ದರೋಡೆ ಕೋರರ ತಂಡ ಲಾರಿ ಚಾಲಕ ಮೇಲೆ ಹಲ್ಲೆ ನಡೆಸಿ, ಆತನ ಬಳಿ ಇದ್ದ 10 ಸಾವಿರ ರೂ ನಗದು, ಒಂದು ಮೊಬೈಲ್ ಹಾಗೂ ಲಾರಿ ಕೀಯನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಲಾರಿ ಚಾಲಕ ಕಾರಿನ ನಂಬರನ್ನು ಗುರುತಿಟ್ಟುಕೊಂಡು ಬಿಳಿಕೆರೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಅಪರ ಪೊಲೀಸ್ ಅಧೀಕ್ಷಕ ಶಿವಕುಮಾರ್, ಡಿವೈಎಸ್‌ಪಿ. ಎಂ.ರವಿಪ್ರಸಾದ್ ಮಾರ್ಗದರ್ಶನದಲ್ಲಿ, ಬಿಳಿಕೆರೆ ಠಾಣೆ ನಿರೀಕ್ಷಕ ರವಿಕುಮಾರ್ ನೇತೃತ್ವದ ತಂಡ ಅರೋಪಿಗಳಿಬ್ಬರನ್ನು ಬೆಂಗಳೂರಿನಲ್ಲಿ ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದು ದರೋಡೆ ಮಾಡಿದ್ದ 2 ಸಾವಿರ ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಉಳಿದ ಮೂವರು ಆರೋಪಿಗಳಿಗೆ ಬಲೆ ಬೀಸಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ಶಿವನಂಜು, ಸಿಬ್ಬಂದಿಗಳಾದ ಮಿತ್ರಕುಮಾರ್, ರವಿಕುಮಾರ್, ರವಿ, ಬಿ.ಪಿ.ರವಿ ನೇತೃತ್ವದ ತಂಡ ಭಾಗವಹಿಸಿದ್ದು, ಪೊಲೀಸರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಟಾಕಾರಿ ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next