Advertisement

ಗುರುವಾಯನಕೆರೆ –ಬೆಳ್ತಂಗಡಿ ಪೇಟೆ ಮಧ್ಯೆಯೇ ಸಾಗಲಿದೆ ಹೆದ್ದಾರಿ

10:13 PM Jul 28, 2021 | Team Udayavani |

ಬೆಳ್ತಂಗಡಿ: ಅಭಿವೃದ್ಧಿಯೆಡೆಗಿನ ಏನೇ ಯೋಜನೆಗಳು ದೂರದೃಷ್ಟಿಯುಳ್ಳ ಚಿಂತನೆಯಾಗಿರಬೇಕು. ಹೀಗಾಗಿ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ  -75ರ ಶಿರಾಡಿಗೆ ಪರ್ಯಾಯವಾಗಿ ರಾ.ಹೆ.-73ರ ಚಾರ್ಮಾಡಿಯನ್ನು ಮೇಲ್ದರ್ಜೆಗೇರಿಸುವುದು ಅನಿವಾರ್ಯ. ಈಗಾಗಲೇ ಬಿ.ಸಿ.ರೋಡ್‌ – ಅಡ್ಡಹೊಳೆ, ಬಿ.ಸಿ.ರೋಡ್‌-ಪುಂಜಾಲಕಟ್ಟೆ ಚತುಷ್ಪಥ ಕಾಮಗಾರಿ ಬಿರುಸಿನಿಂದ ಸಾಗಿದ್ದು, ಎರಡನೇ ಹಂತದ ಪುಂಜಾಲಕಟ್ಟೆ – ಚಾರ್ಮಾಡಿ ಚತುಷ್ಪಥಕ್ಕಾಗಿ ಸರ್ವೇ ಆರಂಭಗೊಂಡಿದೆ.

Advertisement

ರಾಷ್ಟ್ರೀಯ ಹೆದ್ದಾರಿ-73ರ ಮಂಗಳೂರು ವಿಲ್ಲುಪುರಂ ರಸ್ತೆಯ ಬಿ.ಸಿ. ರೋಡಿನಿಂದ ಪುಂಜಾಲಕಟ್ಟೆವರೆಗೆ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. 2018ರಲ್ಲಿ ಆರಂಭಗೊಂಡಿದ್ದ ಕಾಮಗಾರಿ 2020ರ ಡಿಸೆಂಬರ್‌ಗೆ ಪೂರ್ಣಗೊಳ್ಳಬೇಕಿತ್ತು. ಕೋವಿಡ್‌ನಿಂದಾಗಿ ವಿಳಂಬವಾಗಿದೆ.

ಈ ಮಧ್ಯೆ ದ್ವಿತೀಯ ಹಂತದಲ್ಲಿ ಪುಂಜಾಲಕಟ್ಟೆ-ಚಾರ್ಮಾಡಿ ನಡುವಣ 35 ಕಿ.ಮೀ. ಚತುಷ್ಪಥ ಕಾಮಗಾರಿ ಹಮ್ಮಿಕೊಳ್ಳುವುದಾಗಿ ಬೆಳ್ತಂಗಡಿ ನಿಡಿಗಲ್‌ ನೂತನ ಸೇತುವೆ ಲೋಕಾರ್ಪಣೆ ವೇಳೆ ಸಂಸದ ನಳಿನ್‌ ಕುಮಾರ್‌ ಕಟೀಲು ಘೋಷಿಸಿದ್ದರು. ಅದರಂತೆ ಈ ಹಿಂದೆ ನಡೆಸಿದ್ದ ಸರ್ವೇಯನ್ನು ಕೈಬಿಟ್ಟು ಹೊಸದಾಗಿ ಸರ್ವೇಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮುಂದಾಗಿದ್ದು ಉಜಿರೆ ವರೆಗಿನ ಸರ್ವೇ ಮುಕ್ತಾಯ ಹಂತದಲ್ಲಿದೆ.

383 ಕೋ.ರೂ. ಪ್ರಸ್ತಾವನೆ:

ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ಚತುಷ್ಪಥ ರಸ್ತೆ ಕಾಮಗಾರಿಗೆ 383 ಕೋ.ರೂ.ನ ಪ್ರಸ್ತಾವನೆಯನ್ನು ಕೇಂದ್ರದ ಮುಂದಿಡಲಾಗಿದೆ. ಗುರುವಾಯನಕೆರೆಯಿಂದ ಉಜಿರೆವರೆಗೆ ಅಂದಾಜು 80 ಕೋ.ರೂ. ವೆಚ್ಚದಲ್ಲಿ ರಸ್ತೆ ಮಧ್ಯಭಾಗದಿಂದ 13+13 ಮೀಟರ್‌ (ಒಟ್ಟು ರಸ್ತೆ 100 ಅಡಿ) ಅಗಲದ ಕಾಂಕ್ರೀಟ್‌ ಚತುಷ್ಪಥ ರಸ್ತೆ ಒಳಗೊಂಡಿದ್ದು ಒಂದೂವರೆ ಮೀಟರ್‌ ಮೀಡಿಯನ್‌, 1 ಮೀಟರ್‌ ಡ್ರೈನೇಜ್‌ ಸೇರಲಿದೆ.

Advertisement

ಭೂಸ್ವಾಧೀನ ಪ್ರಕ್ರಿಯೆಗೆ 100 ಕೋ.ರೂ.:

ಚತುಷ್ಪಥ ಕಾಮಗಾರಿಗೆ ಈಗಾಗಲೆ 383 ಕೋ.ರೂ. ಪ್ರಸ್ತಾವನೆ ಸಿದ್ಧಗೊಂಡಿದ್ದು ಭೂಸ್ವಾಧೀನಕ್ಕಾಗಿ 100 ಕೋ.ರೂ. ಮೀಸಲಿಡಲಾಗಿದೆ. ಹೆದ್ದಾರಿ ಇಲಾಖೆ ಸರ್ವೇ ಕಾರ್ಯದ ಜತೆ ಕಂದಾಯ ಇಲಾಖೆಯಿಂದಲೂ 5 ಮಂದಿ ಸರ್ವೇಕಾರ್ಯದಲ್ಲಿ ತೊಡಗಿದ್ದಾರೆ. ಡಿಪಿಆರ್‌ ಪೂರ್ಣಗೊಂಡ ಬಳಿಕ ಅಧಿಸೂಚನೆ ಪ್ರಕಟಗೊಳ್ಳಲಿದೆ. ಆಬಳಿಕ ಆಕ್ಷೇಪಣೆಗೆ ಅವಕಾಶವಿರಲಿದ್ದು 2022ರ ಜನವರಿಯಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ.

ಬೈಪಾಸ್‌ ರಸ್ತೆ ಚಿಂತನೆ ತಟಸ್ಥ :

ಹಲವು ಚರ್ಚೆ ಹಾಗೂ ವರ್ತಕರಲ್ಲಿ ಗೊಂದಲಗಳಿಗೆ ಕಾರಣವಾಗಿದ್ದ ಗುರುವಾಯನಕೆರೆ-ಉಜಿರೆ ವರೆಗಿನ ಬೈಪಾಸ್‌ ರಸ್ತೆ ಚಿಂತನೆ ಸದ್ಯದ ಮಾಹಿತಿಯಂತೆ ಕೈಬಿಡಲಾಗಿದೆ. ಬೆಳ್ತಂಗಡಿ-ಗುರುವಾಯನಕೆರೆ ಪೇಟೆ ಮಧ್ಯೆಯೇ ಚತುಷ್ಪಥ ಕಾಂಕ್ರೀಟ್‌ ರಸ್ತೆ ಸಾಗಲಿದೆ. ಇದು ವರ್ತಕರಲ್ಲಿ ಹಲವು ಗೊಂದಲಗಳಿಗೆ ಎಡೆಮಾಡಿದೆ. ಪೇಟೆ, ವ್ಯಾಪಾರ ಹೋದ ಬಳಿಕ ರಸ್ತೆ ಅಭಿವೃದ್ಧಿಯಾದರೇನು? ಆದ್ದರಿಂದ ಬೈಪಾಸ್‌ ಮಾಡಲಿ ಎನ್ನುತ್ತಾರೆ ಅವರು.

ರಾಷ್ಟ್ರೀಯ ಹೆದ್ದಾರಿ-73ರಲ್ಲಿ ಪುಂಜಾಲಕಟ್ಟೆಯಿಂದ-ಚಾರ್ಮಾಡಿ ವರೆಗೆ ಹೆದ್ದಾರಿ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ಆರಂಭಿಸಿವೆ. ಸರಕಾರದ ಮಟ್ಟದಲ್ಲಿ ಎಲ್ಲ ಪ್ರಕ್ರಿಯೆಗಳು ನಡೆದರೆ 2022ರ ಬಳಿಕ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.– ಕೃಷ್ಣಮೂರ್ತಿ, ಎಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಮಂಗಳೂರು ಉಪವಿಭಾಗ  

 

-ಚೈತ್ರೇಶ್‌ ಇಳಂತಿಲ

 

Advertisement

Udayavani is now on Telegram. Click here to join our channel and stay updated with the latest news.

Next