Advertisement

ನವ ಕಾಶ್ಮೀರದ ಕನಸನ್ನು ತೆರೆದಿಟ್ಟ ಪ್ರಧಾನಿ ಮೋದಿ : ನಮೋ ಭಾಷಣದ Highlights

09:53 AM Aug 10, 2019 | Hari Prasad |

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ಮತ್ತು 35 (ಎ) ಪರಿಚ್ಛೇದವನ್ನು ರದ್ದುಗೊಳಿಸಿದ ಬಳಿಕ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿದರು.

Advertisement

370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ದೇಶದ ಜನರಲ್ಲಿ ಅದರಲ್ಲೂ ಮುಖ್ಯವಾಗಿ ಜಮ್ಮು ಕಾಶ್ಮೀರ ಮತ್ತು ಲಢಾಕ್ ಭಾಗದ ನಾಗರಿಕರಲ್ಲಿ ಉಂಟಾಗಿದ್ದ ಆತಂಕವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ತಾವು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ದೂರಗೊಳಿಸಿದರು.

ಮಾತ್ರವಲ್ಲದೆ ಪ್ರಾಕೃತಿಕ ಸಮೃದ್ಧಿಯನ್ನು ಹೊಂದಿರುವ ಕಣಿವೆ ರಾಜ್ಯದಲ್ಲಿ ಆತಂಕವಾದ ಮತ್ತು ಅವಕಾಶವಾದವನ್ನು ದೂರಗೊಳಿಸಿ ಹೊಸ ಅವಕಾಶಗಳತ್ತ ಜನ ತೆರೆದುಕೊಳ್ಳಬೇಕು ಮತ್ತು ಇದಕ್ಕೆ ಬೇಕಾದ ಸರ್ವ ಸಹಕಾರವನ್ನು ಕೇಂದ್ರ ಸರಕಾರ ನೀಡಲಿದೆ ಎಂಬ ಭರವಸೆಯನ್ನು ಪ್ರಧಾನಿ ಮೋದಿ ಅವರು ತಮ್ಮ ಭಾಷಣದ ಮೂಲಕ ನೀಡಿದರು.

ಅವರ ಭಾಷಣದ ಮುಖ್ಯ ಅಂಶಗಳು ಇಲ್ಲಿವೆ…

– ಈ ದೇಶ ಇಂದು ಒಂದು ಐತಿಹಾಸಿಕ ನಿರ್ಣಯನ್ನು ಕೈಗೊಂಡಿದೆ.

Advertisement

– ಇನ್ನು ದೇಶದ ಎಲ್ಲಾ ನಾಗರಿಕರ ಹಕ್ಕು ಮತ್ತು ಬಾಧ್ಯತೆಗಳು ಸಮಾನವಾಗಿರುತ್ತದೆ.

– ಇದಕ್ಕಾಗಿ ನಾನು ನಿಮಗೆಲ್ಲರಿಗೂ ತುಂಬುಹೃದಯದ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ.

– 370 ವಿಧಿಯ ಕುರಿತಾಗಿ ಯಾರೂ ಚರ್ಚೆಯನ್ನೇ ಮಾಡುತ್ತಿರಲಿಲ್ಲ. ಈ ವಿಧಿ ಕಣಿವೆ ರಾಜ್ಯದಲ್ಲಿ ಭ್ರಷ್ಟಾಚಾರ, ಪರಿವಾರವಾದ ಮತ್ತು ಆತಂಕವಾದವನ್ನು ಪೋಷಿಸಿದೆ ಬಿಟ್ಟರೆ ಇನ್ನೇನೂ ಲಾಭವನ್ನುಂಟುಮಾಡಿಲ್ಲ.

– ಪಾಕಿಸ್ಥಾನ ಮೂಲಕ ಈ ವಿಧಿಯನ್ನೊಂದು ಅಸ್ತ್ರವನ್ನಾಗಿ ಬಳಸಲಾಗುತ್ತಿತ್ತು. ಮಾತ್ರವಲ್ಲದೆ ಇದರಿಂದಾಗಿ ಈ ಏಳು ದಶಕಗಳಲ್ಲಿ ಸರಿಸುಮಾರು 42 ಸಾವಿರ ನಿರ್ದೋಷಿಗಳು ತಮ್ಮ ಪ್ರಾಣತ್ಯಾಗ ಮಾಡಬೇಕಾದ ದುರ್ದೈವ ಉಂಟಾಗಿತ್ತು.

– ನಾವು ರೂಪಿಸುವ ಕಾನೂನುಗಳ ಫಲ ಜಮ್ಮು ಕಾಶ್ಮೀರದ ನಾಗರಿಕರಿಗೆ ಲಭ್ಯವಾಗುತ್ತಿರಲಿಲ್ಲ. ದೇಶದೆಲ್ಲೆಡೆ ಮಕ್ಕಳಿಗೆ ಸಿಗುತ್ತಿರುವ ಶಿಕ್ಷಣ ಸೌಲಭ್ಯ ಜಮ್ಮು ಕಾಶ್ಮೀರದ ಮಕ್ಕಳಿಗೆ ಸಿಗುತ್ತಿರಲಿಲ್ಲ. ಮಹಿಳೆಯರಿಗೆ ದೇಶದೆಲ್ಲೆಡೆ ಅನ್ವಯವಾಗುವ ಕಾನೂನು ಇಲ್ಲಿನ ಮಹಿಳೆಯರ ಪಾಲಿಗೆ ಗಗನಕುಸುಮವಾಗಿತ್ತು.

– ಅದು ಕಾರ್ಮಿಕ ಕಾನೂನಾಗಿರಬಹುದು, ಸಫಾಯಿ ಕರ್ಮಚಾರಿಗಳಿಗೆ ಸಿಗುವ ಸೌಲಭ್ಯವಾಗಿರಬಹುದು ಇವೆಲ್ಲದರಿಂದಲೂ ಇದುವರೆಗೆ ಜಮ್ಮು ಕಾಶ್ಮೀರದ ನಾಗರಿಕರು ವಂಚಿತರಾಗಿದ್ದರು.

– ಕೇಂದ್ರ ಮತ್ತು ರಾಜ್ಯ ಸರಕಾರಗಳು ತನ್ನ ಉದ್ಯೋಗಿಗಳಿಗೆ ನೀಡುವ ಯಾವುದೇ ಸರಕಾರಿ ವೇತನ ಸೌಲಭ್ಯಗಳಿಂದಲೂ ಈ ಭಾಗದ ಸರಕಾರಿ ಉದ್ಯೋಗಿಗಳು ವಂಚಿತರಾಗಿದ್ದರು.

– ಇನ್ನು ಮುಂದೆ ಜಮ್ಮು ಕಾಶ್ಮೀರದಲ್ಲಿ ಸೇನಾ ನೇಮಕಾತಿ ರ್ಯಾಲಿಗಳನ್ನು ಆಯೋಜಿಸಲಾಗುವುದು. ಕೇಂದ್ರದಿಂದ ಒದಗಿಸಲಾಗುವ ವಿವಿಧ ವಿದ್ಯಾರ್ಥಿ ವೇತನ ಯೋಜನೆಗಳನ್ನು ಕಣಿವೆ ರಾಜ್ಯದ ವಿದ್ಯಾರ್ಥಿಗಳಿಗೂ ಉಪಯೋಗವಾಗುವಂತೆ ವಿಸ್ತರಿಸಲಾಗುವುದು.

– 370ನೇ ವಿಧಿಯನ್ನು ರದ್ದುಗೊಳಿಸುವ ಮತ್ತು ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾರ್ಪಾಡಿಸುವ ನಿರ್ಣಯವನ್ನು ನಾವು ಬಹಳ ಯೋಚನೆ ಮಾಡಿ ತೆಗೆದುಕೊಂಡಿದ್ದೇವೆ.

– ಇದುವರೆಗೆ ಕೇವಲ ಕಾಗದಲ್ಲೇ ಉಳಿದಿದ್ದ ಯೋಜನೆಗಳನ್ನು ನಾವು ಕಾರ್ಯರೂಪಕ್ಕೆ ತರಲಿದ್ದೇವೆ. ರೈಲ್ವೇ ಯೋಜನೆಗಳು, ರಸ್ತೆ ನಿರ್ಮಾಣ ಸೇರಿದಂತೆ ಜಮ್ಮು ಕಾಶ್ಮೀರದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನಾವು ಆದ್ಯತೆ ನೀಡಲಿದ್ದೇವೆ.

– ಜಮ್ಮು ಕಾಶ್ಮೀರದ ನನ್ನ ಸಹೋದರ ಸಹೋದರಿಯರಿಗೆ ನಾನೊಂದು ಮಾತನ್ನು ಸ್ಪಷ್ಟಪಡಿಸುತ್ತಿದ್ದೇನೆ. ನಿಮ್ಮ ಜನಪ್ರತಿನಿಧಿಗಳು ನಿಮ್ಮ ಮಧ್ಯದಿಂದಲೇ ಆರಿಸಿ ಬರಲಿದ್ದಾರೆ. ಇನ್ನು ಮುಂದೆಯೂ ಅಲ್ಲಿ ಶಾಸಕರು ಇರುತ್ತಾರೆ, ಮುಖ್ಯಮಂತ್ರಿಯೂ ಇರುತ್ತಾರೆ. ಇನ್ನು ನಾವೆಲ್ಲಾ ಸೇರಿ ಆತಂಕವಾದ ಮತ್ತು ಅವಕಾಶವಾದದಿಂದ ಜಮ್ಮು ಕಾಶ್ಮೀರವನ್ನು ನಾವು ಮುಕ್ತಗೊಳಿಸಬೇಕಾಗಿದೆ.

– ಇನ್ನು ಮುಂದೆ ಜಮ್ಮು ಕಾಶ್ಮೀರದಲ್ಲಿ ಹೊಸ ರಾಜಕೀಯ ಪರ್ವ ಆರಂಭಗೊಳ್ಳಲಿದೆ. ನಿಮಗೆ ಶೀಘ್ರದಲ್ಲಿಯೇ ನಿಮ್ಮ ಜನಪ್ರತಿನಿಧಿಗಳನ್ನು ಆರಿಸುವ ಅವಕಾಶ ಸಿಗಲಿದೆ. ಪಂಚಾಯತ್ ಚುನಾವಣೆಯ ಜೊತೆ ಜೊತೆಗೆ ಶಾಸನ ಸಭೆಗೂ ಚುನಾವಣೆ ನಡೆಯಲಿದೆ.

– ಇತ್ತೀಚೆಗೆ ಲಢಾಕ್ ನಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆರಿಸಿ ಬಂದ ಪ್ರತಿನಿಧಿಗಳು ಬಹಳ ಉತ್ತಮ ಕೆಲಸಗಳನ್ನು ಮಾಡುತ್ತಿರುವುದು ನನ್ನ ಅನುಭವಕ್ಕೆ ಬಂದಿದೆ.

– 370ನೇ ವಿಧಿ ರದ್ದುಗೊಂಡ ಬಳಿಕ ಇನ್ನು ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು ಇನ್ನಷ್ಟು ಉತ್ಸಾಹದಿಂದ ತಮ್ಮ ಕೆಲಸಗಳನ್ನು ನಿರ್ವಹಿಸಲಿದ್ದಾರೆ ಎಂಬ ಭರವಸೆ ನನ್ನದು.

– ಜಮ್ಮು ಕಾಶ್ಮೀರ ಮತ್ತು ಲಢಾಕ್ ಗಳ ನಾಗರಿಕರಲ್ಲಿ ನನ್ನ ಮನವಿ ಎಂದರೆ ನಿಮ್ಮ ನಿಮ್ಮ ಪ್ರದೇಶಗಳ ಅಭಿವೃದ್ದಿಗೆ ಕಂಕಣಬದ್ಧರಾಗಿ. ಪ್ರವಾಸೋದ್ಯಮವನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯಲು ನಿಮ್ಮ ಮತ್ತು ದೇಶದ ಎಲ್ಲಾ ನಾಗರಿಕರ ಸಹಕಾರ ನಮಗೆ ಅಗತ್ಯವಿದೆ.

– ಒಂದು ಕಾಲದಲ್ಲಿ ಬಾಲಿವುಡ್ ಸಿನೇಮಾಗಳು ಜಮ್ಮು – ಕಾಶ್ಮೀರದಲ್ಲಿ ಚಿತ್ರೀಕರಣಗೊಳ್ಳುತ್ತಿದ್ದವು. ಆದರೆ ಕಾಲ ಬದಲಾದಂತೆ ಇದೆಲ್ಲವೂ ನಿಂತು ಹೋಯಿತು. ಈಗ ಮತ್ತೆ ಆ ಸುವರ್ಣ ಯುಗ ಪುನರಾರಂಭಗೊಳ್ಳಬೇಕಿದೆ. ಬಾಲಿವುಡ್, ತೆಲುಗು, ತಮಿಳು ಮತ್ತು ಎಲ್ಲಾ ಚಿತ್ರರಂಗದವರಲ್ಲಿ ನನ್ನ ಮನವಿ ಏನೆಂದರೆ ನೀವು ಬನ್ನಿ, ಕಣಿವೆ ರಾಜ್ಯದಲ್ಲಿ ನಿಮ್ಮ ಚಿತ್ರಗಳ ಶೂಟಿಂಗ್ ಕೈಗೊಳ್ಳಿ. ಈ ಮೂಲಕ ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶ ಸೃಷ್ಟಿಯಾಗಲಿದೆ.

– ಕಾಶ್ಮೀರದ ಸೇಬು, ಶಾಲು, ಕೇಸರಿ ಲಢಾಕ್ ನ ನೈಸರ್ಗಿಕಯುಕ್ತ ಆಹಾರ ಉತ್ಪನ್ನಗಳು ಹೀಗೆ ಜಮ್ಮು ಕಾಶ್ಮೀರ ಮತ್ತು ಲಢಾಕ್ ಪ್ರದೇಶದ ಎಲ್ಲಾ ವಿಶೇಷ ಮತ್ತು ವಿಶಿಷ್ಟ ಉತ್ಪನ್ನಗಳು ವಿಶ್ವದ ಮೂಲೆ ಮೂಲೆಗಳಿಗೆ ತಲುಪುವಂತಾಗಬೇಕು ಎನ್ನುವುದೇ ನಮ್ಮ ಆಶಯ.

– ಇಲ್ಲಿನ ಯುವಕರು ಕ್ರೀಡಾ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮುಂದಿನ ದಿನಗಳಲ್ಲಿ ಮೂಡಿಸುವಂತಾಗಬೇಕು.

– ಸೌರಶಕ್ತಿ ಉತ್ಪಾದನೆಯಲ್ಲೂ ಲಢಾಕ್ ಗೆ ವಿಫುಲ ಅವಕಾಶಗಳಿವೆ.

– ಎಲ್ಲಾ ಮತಬೇಧಗಳನ್ನು ಮರೆತು ಹೊಸ ಕಾಶ್ಮೀರದ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ.

– ಜಮ್ಮು – ಕಾಶ್ಮೀರ, ಲಢಾಕ್ ಜನರ ಚಿಂತೆ ನಮ್ಮೆಲ್ಲರ ಚಿಂತೆಯಾಗಬೇಕಾಗಿದೆ. ಅವರ ನೋವು ನಮ್ಮ ನೋವಾಗಬೇಕು. ಅವರನ್ನು ನಮ್ಮಿಂದ ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ.

– ಇನ್ನು ಈ ಪ್ರದೇಶದ ವ್ಯವಸ್ಥೆಯನ್ನು ಹಾಳುಮಾಡುವ ಸಂಚನ್ನು ರೂಪಿಸುವ ವಿಚ್ಛದ್ರಕಾರಿ ಶಕ್ತಿಗಳನ್ನು ಮೆಟ್ಟಿನಿಲ್ಲಲು ಅಲ್ಲಿನ ದೇಶಭಕ್ತ ನಾಗರಿಕರೊಂದಿಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ.

– ಈದ್ ಹಬ್ಬ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ. ನಿಮಗೆಲ್ಲರಿಗೂ ಈದ್ ಹಬ್ಬದ ಶುಭಕಾಮನೆಗಳು. ಕಣಿವೆ ರಾಜ್ಯದಲ್ಲಿ ಈದ್ ಹಬ್ಬದ ಆಚರಣೆಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಈ ವಿಚಾರದಲ್ಲಿ ಅಲ್ಲಿನ ನಾಗರಿಕರಿಗೆ ಅಗತ್ಯವಿರುವ ಎಲ್ಲಾ ಸಹಕಾರ ಸೌಲಭ್ಯಗಳನ್ನು ನಮ್ಮ ಸರಕಾರ ಒದಗಿಸಲಾಗುವುದು.

– ನಮ್ಮ ದೇಶದ ಮುಕುಟ ಮಣಿ ಕಾಶ್ಮೀರದ ರಕ್ಷಣೆಗೆ ಸಾವಿರಾರು ಜನ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅವರಲ್ಲಿ ಜಮ್ಮು ಕಾಶ್ಮೀರ ಮತ್ತು ಲಢಾಕ್ ನ ಹಲವರಿದ್ದಾರೆ. ಅವರಲ್ಲಿ, ಪಾಕಿಸ್ಥಾನ ನುಸುಳುಕೋರರ ಕುರಿತಾಗಿ ಭಾರತೀಯ ಸೇನೆಗೆ ಮಾಹಿತಿ ನೀಡಿದ ಅಶೋಕ ಚಕ್ರ ಪುರಸ್ಕೃತ ಪೂಂಛ್ ಜಿಲ್ಲೆಯ ಮೌಲ್ವೀ ಗುಲಾಮುದ್ದೀನ್, ಲಢಾಕ್ ನ ಕರ್ನಲ್ ಸೋನಂ ವಾಂಚುಂಗ್ ಅವರಿಗೆ ಕಾರ್ಗಿಲ್ ಪರಾಕ್ರಮಕ್ಕಾಗಿ ಮಹಾವೀರ ಚಕ್ರ ಪುರಸ್ಕಾರ ಲಭಿಸಿತ್ತು. ಆತಂಕವಾದಿಯೊಬ್ಬನನ್ನು ಹೊಡೆದುರುಳಿಸಿದ್ದ ರಜೌರಿಯ ರುಕ್ಸಾನ ಕೌಸರ್ ಎಂಬ ದಿಟ್ಟ ಹೆಣ್ಣುಮಗಳಿಗೆ ಕೀರ್ತಿ ಚಕ್ರ ಪುರಸ್ಕಾರ ಲಭಿಸಿದೆ.

– ಇವರೆಲ್ಲಾ ಶಾಂತಿ, ಸುರಕ್ಷತೆಯ ಮತ್ತು ಸಮೃದ್ಧ ಜಮ್ಮು ಕಾಶ್ಮೀರದ ಕನಸನ್ನು ಕಂಡವರಾಗಿದ್ದಾರೆ. ನಾವು ಅದನ್ನು ಇಂದು ಸಾಕಾರಗೊಳಿಸಬೇಕಾಗಿದೆ. ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸುವಲ್ಲಿ ಶ್ರಮಿಸುವ ಮೂಲಕ ವಿಶ್ವಶಾಂತಿಗೂ ನಾವು ಕೊಡುಗೆ ನೀಡಬೇಕಾಗಿದೆ.

– ಬನ್ನಿ ಜಮ್ಮು ಕಾಶ್ಮೀರ ಮತ್ತು ಲಢಾಕ್ ಜನರ ಸಾಮರ್ಥ್ಯವೇನೆಂಬುದನ್ನು ನಾವು ಜಗತ್ತಿಗೇ ತೋರಿಸೋಣ. ಎಲ್ಲರಿಗೂ ಧನ್ಯವಾದಗಳು.

 

 

 

 

 

 

 

 

Advertisement

Udayavani is now on Telegram. Click here to join our channel and stay updated with the latest news.

Next