Advertisement

ಕಾಫಿನಾಡಲ್ಲಿ ಮತ್ತೊಂದು ಹೈಟೆಕ್‌ ಉದ್ಯಾನವನ

06:35 PM Mar 06, 2021 | Team Udayavani |

ಚಿಕ್ಕಮಗಳೂರು: ಜಿಲ್ಲೆ ಪ್ರವಾಸಿ ಕೇಂದ್ರವಾಗಿದ್ದು ನಗರದ ಅನತಿ ದೂರದಲ್ಲಿರುವ ಮಹಾತ್ಮ ಗಾಂಧಿಧೀಜಿ ಉದ್ಯಾನವನ ಹೈಟೆಕ್‌ ಸ್ಪರ್ಶ ಪಡೆದು ಜನರನ್ನು ತನ್ನತ್ತ ಸೆಳೆಯುತ್ತಿದೆ. ಈ ಉದ್ಯಾನವನ ಮಾದರಿಯಲ್ಲಿ ನಗರದ ಹೃದಯ ಭಾಗದಲ್ಲಿ 2.50 ಕೋಟಿ ರೂ. ವೆಚ್ಚದಲ್ಲಿ ಮತ್ತೂಂದು ಹೈಟೆಕ್‌ ಉದ್ಯಾನವನ ನಿರ್ಮಾಣವಾಗಲಿದೆ.

Advertisement

ನಗರಸಭೆ ಆವರಣದಲ್ಲಿ 2.50 ಕೋಟಿ ರೂ. ವೆಚ್ಚದಲ್ಲಿ ಈಗಿರುವ ಉದ್ಯಾನವನಕ್ಕೆ ಹೈಟೆಕ್‌ ಟಚ್ ಪಡೆಯುತ್ತಿದ್ದು ಉದ್ಯಾನವನ  ನಿರ್ಮಾಣಕ್ಕೆ ಸಮಗ್ರ ಯೋಜನಾ ವರದಿಯನ್ನು ತಯಾರಿಸಲಾಗಿದೆ. ನಗರಸಭೆ ಆವರಣದಲ್ಲಿ ಈಗಿರುವ ಉದ್ಯಾನವನದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಿರಿಯ ನಾಗರಿಕರು ಮತ್ತು ಸಾರ್ವಜನಿಕರು ನೆರಳಿನ ಆಶ್ರಯ ಪಡೆದು ನಿತ್ಯ ದಣಿವಾರಿಸಿಕೊಳ್ಳುತ್ತಾರೆ. ಈ ಹಿಂದೆ ಮುತ್ತಯ್ಯ ನಗರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಈ ಉದ್ಯಾನವನ್ನು ಅಭಿವೃದ್ಧಿಪಡಿಸಿ ಹೊಸಸ್ಪರ್ಶ ನೀಡಿದ್ದರು. ಆದರೆ, ನಿರ್ವಹಣೆ ಕೊರತೆಯಿಂದ ಉದ್ಯಾನವನ ಸೊರಗಿದೆ.

ಸದ್ಯ ಉದ್ಯಾನವನಕ್ಕೆ ಹೈಟೆಕ್‌ ಸ್ಪರ್ಶ ನೀಡಲು ನಗರಸಭೆ ಮುಂದಾಗಿದ್ದು, ಇರುವ 1 ಕೋಟಿ ರೂ. ಹಣದಲ್ಲಿ ಉದ್ಯಾನವನ ಅಭಿವೃದ್ಧಿಗೆ ಕ್ರಿಯಾಯೋಜನೆ ತಯಾರಿಸಲಾಗಿದೆ. ಇದೇ ತಿಂಗಳಲ್ಲಿ ಟೆಂಡರ್‌ ಕರೆಯಲಾಗುತ್ತಿದೆ. ಬಾಕಿ ಕಾಮಗಾರಿಗೆ ಮುಂದಿನ ಮಾರ್ಚ್‌ ತಿಂಗಳಲ್ಲಿ ಟೆಂಡರ್‌ ಕರೆಯುವ ಯೋಜನೆ ರೂಪಿಸಲಾಗಿದೆ.

ಹೈಟೆಕ್‌ ಉದ್ಯಾನವನದಲ್ಲಿ ವಾಯುವಿಹಾರಕ್ಕೆ ಅನುಕೂಲವಾಗುವಂತೆ ಉದ್ಯಾನವನದ ಸುತ್ತಲೂ ಫುಟ್‌ಪಾತ್‌ ನಿರ್ಮಿಸಲಾಗುತ್ತದೆ. ನಗರಸಭೆ ಆವರಣದಲ್ಲಿ ಈಗಿರುವ ರಸ್ತೆಯ ಅಗಲೀಕರಣ, ಬಣ್ಣದ ಕಾರಂಜಿಯನ್ನು ನಿರ್ಮಿಸಲಾಗುತ್ತಿದೆ. ನಗರಸಭೆ ಹಳೇ ಕಟ್ಟಡದ ಮುಂದಿರುವ ಕಾರಂಜಿ ಮೈಸೂರು ಕೆ.ಆರ್‌.ಎಸ್‌. ಮಾದರಿಯಲ್ಲಿ ಸಂಗೀತ ಕಾರಂಜಿ ನಿರ್ಮಾಣವಾಗಲಿದೆ. ಸಾರ್ವಜನಿಕರನ್ನು ಆಕರ್ಷಿಸಲು ವಿಧವಿಧ ಹೂವಿನ ಗಿಡಗಳನ್ನು ಬೆಳೆಸಲಾಗುತ್ತಿದೆ. ಸಂಗೀತ ಕಾರಂಜಿಯನ್ನು ಕುಳಿತು ವೀಕ್ಷಿಸಲು ಅನುಕೂಲವಾಗುವಂತೆ ಆಡಿಟೋರಿಯಂ ನಿರ್ಮಿಸಲಾಗುತ್ತಿದೆ. ಉದ್ಯಾನವನದ ಸುತ್ತಲೂ ಬಣ್ಣಬಣ್ಣದ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗುತ್ತಿದೆ.

ಇನ್ನು ಉದ್ಯಾನವನದ ಒಂದು ಬದಿಯಲ್ಲಿ ಮಕ್ಕಳ ಆಟಿಕೆಗಳನ್ನು ಜೋಡಿಸಲಾಗುತ್ತಿದೆ. ಹಾಗೆಯೇ ಎಲ್ಲಾ ವಯೋಮಾನದವರಿಗೆ ದೈಹಿಕ ಕಸರತ್ತು ನಡೆಸಲು ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಓಪನ್‌ ಜಿಮ್‌ ತೆರೆಯಲಾಗುತ್ತಿದೆ. ಪ್ರವಾಸಿಗರ ಗಮನ ಸೆಳೆಯುತ್ತಿರುವ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಹೋಗುವ ಮಾರ್ಗಮಧ್ಯದಲ್ಲಿರುವ ಸಿರಿಕಾಫಿ ಕೇಂದ್ರದ ಮಾದರಿಯಲ್ಲಿ ಸುಂದರ ಮೂರ್ತಿಯನ್ನು ಉದ್ಯಾನವನದಲ್ಲಿ ನಿರ್ಮಿಸುವ ಯೋಚನೆಯೂ ಇದೆ.

Advertisement

ನಗರಸಭೆ ನೂತನ ಕಟ್ಟಡದ ಹಿಂಬದಿಯಲ್ಲಿ ಈಗಿರುವ ಆಡಿಟೋರಿಯಂಗೆ ಹೊಸ ರೂಪ ನೀಡಿ ಅಲ್ಲೊಂದು ದೊಡ್ಡ ವೇದಿಕೆಯನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ನಗರಸಭೆ ಹಾಗೂ ಇತರೆ ಕಾರ್ಯಕ್ರಮಗಳ ಆಯೋಜನೆಗೆ ಇದು ಅನುಕೂಲವಾಗಲಿದೆ. ಸಾರ್ವಜನಿಕರು ವಿಶ್ರಾಂತಿ ಪಡೆಯಲು ಮತ್ತು ವಿದ್ಯಾರ್ಥಿಗಳು ತಮ್ಮ ಪಠ್ಯಕ್ಕೆ ಸಂಬಂಧಿ ಸಿದಂತೆ ಚರ್ಚೆ ನಡೆಸಲು ಅನುಕೂಲವಾಗುವಂತೆ ಗೆಜೆಬೋಸ್‌ (ಗೋಪುರ ಮಾದರಿ)ನ್ನು ನಿರ್ಮಿಸಲಾಗುತ್ತಿದೆ ಹಾಗೂ ಅಲ್ಲಲ್ಲಿ  ಕಲ್ಲಿನ ಬೆಂಜ್‌ಗಳನ್ನು ಹಾಕಲಾಗುತ್ತದೆ. ಪ್ರತೀ ನಿತ್ಯ ನೂರಾರು ಜನರಿಗೆ ವಿಶ್ರಾಂತಿ ತಾಣವಾಗಿರುವ ನಗರಸಭೆ ಉದ್ಯಾನವನ ಹೈಟೆಕ್‌ ಸ್ಪರ್ಶ ಪಡೆಯುತ್ತಿ ರುವುದು ಜನರಲ್ಲಿ ಸಂತಸ ತಂದಿದೆ.

ಸಂದೀಪ ಜಿ.ಎನ್‌. ಶೇಡ್ಗಾರ್‌ 

Advertisement

Udayavani is now on Telegram. Click here to join our channel and stay updated with the latest news.

Next