Advertisement

ಹೈಟೆಕ್‌ ಗ್ರಂಥಾಲಯಕ್ಕೆ ಶೀಘ್ರ ಉದ್ಘಾಟನೆ ಭಾಗ್ಯ!

09:01 PM Aug 27, 2021 | Team Udayavani |

ಉಡುಪಿ: ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಒಳಾಂಗಣ ವಿನ್ಯಾಸಕ್ಕೆ ಹಣಕಾಸು ಕೊರತೆಯಿಂದ ಸ್ಥಗಿತಗೊಂಡ ಕಾಮಗಾರಿ ಇದೀಗ ಪ್ರಾರಂಭಗೊಂಡಿದೆ. ಉದ್ಘಾಟನೆ ಭಾಗ್ಯ ಸಮೀಪಿಸುತ್ತಿದೆ.

Advertisement

ನೂತನ ಡಿಜಿಟಲ್‌ ಗ್ರಂಥಾಲಯ ಅಜ್ಜರಕಾಡು ಸಮೀಪದ ಸುಮಾರು 20 ಸೆಂಟ್ಸ್‌ ಜಾಗದಲ್ಲಿ 5.18 ಕೋ.ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಅದಕ್ಕಾಗಿ ಆಸ್ಕರ್‌ ಫೆರ್ನಾಂಡಿಸ್‌ ರಾಜ್ಯಸಭೆ ಸದಸ್ಯರ ನಿಧಿಯಿಂದ 99.50 ಲ.ರೂ., ನಗರಾಭಿವೃದ್ಧಿ ಪ್ರಾಧಿಕಾರದಿಂದ 87.50 ಲ.ರೂ., ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ 2.51 ಕೋ., ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಅವರ ಸಂಸದರ ನಿಧಿಯಿಂದ 5 ಲ. ರೂ. ಬಳಕೆ ಮಾಡಲಾಗಿದೆ. ಇನ್ನು ಸುಮಾರು 74 ಲ.ರೂ. ಅನುದಾನ ಬಿಡುಗಡೆಯಾಗಬೇಕಿದೆ.

5 ವರ್ಷಗಳ ಕಾಯುವಿಕೆ
2016ರಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ವಿಶಾಲ್‌ ಹಾಗೂ ಮಾಜಿ ಸಚಿವ ವಿನಯ ಕುಮಾರ್‌ ಅವರ ಅವಧಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಗಿತ್ತು. 2019ರ ಮಾರ್ಚ್‌ನಲ್ಲಿ ಜಿಲ್ಲಾ ಗ್ರಂಥಾಲಯದ ಕಾಮಗಾರಿ ಪೂರ್ಣಗೊಂಡಿತ್ತು. ಅನುದಾನದ ಕೊರತೆಯಿಂದ ಒಳಾಂಗಣದ ವಿನ್ಯಾಸ ಕಾಮಗಾರಿ ಬಾಕಿ ಉಳಿಸಲಾಗಿತ್ತು.

ಹೈಟೆಕ್‌ ಮಾದರಿ ಕಟ್ಟಡ
ಜಿಲ್ಲಾ ಕೇಂದ್ರ ಗ್ರಂಥಾಲಯ ಕಟ್ಟಡ ಹೈಟೆಕ್‌ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಅತ್ಯಾಧುನಿಕ ಮಾದರಿಯ ತಂತ್ರಜ್ಞಾನ ಸೌಲಭ್ಯ ಗಳನ್ನು ಅಳವಡಿಸಲಾಗಿದೆ. ತಳಮಹಡಿ ಸೇರಿದಂತೆ ಒಟ್ಟು ನಾಲ್ಕು ಮಹಡಿಗಳಿವೆ. ತಳಮಹಡಿಯಲ್ಲಿ ವಾಹನ ನಿಲುಗಡೆ, ಲಿಫ್ಟ್, ಮೆಟ್ಟಿಲು, ಜನರೇಟರ್‌ ಹಾಗೂ ಪುಸ್ತಕ ಸಂಗ್ರಹ ಕೊಠಡಿ ನಿರ್ಮಿಸಲಾಗಿದೆ. ನೆಲ ಮಹಡಿ ಯಲ್ಲಿ ಹಿರಿಯ ನಾಗರಿಕರ ಕೊಠಡಿ, ಹಾಗೂ ಮಕ್ಕಳ ಪುಸ್ತಕ ವಿಭಾಗ, ದಿನಪತ್ರಿಕೆಗಳ ವಿಭಾಗ, ವಾರ, ತಿಂಗಳ ಪತ್ರಿಕೆಗಳಿಗೆ ಪ್ರತ್ಯೇಕ ವಿಭಾಗ ಗಳಾಗಿ ವಿಂಗಡಿಸಲಾಗಿದೆ. ಮೊದಲ ಮಹಡಿಯು ಕಂಪ್ಯೂಟರ್‌ ಕೊಠಡಿ, ಡಿಜಿಟಲ್‌ ಗ್ರಂಥಾಲಯ, ಕಿರು ಸಭಾಂಗಣ ನಿರ್ಮಿಸಲಾಗಿದೆ. ಎರಡನೇ ಮಹಡಿಯಲ್ಲಿ 100 ಜನರು ಕುಳಿತುಕೊಳ್ಳುವ ಸಭಾಂಗಣ, ಕಚೇರಿ, ಓದುವ ಕೊಠಡಿಯನ್ನು ಒಳಗೊಂಡಿದೆ.

ಇದನ್ನೂ ಓದಿ:ಅತ್ಯಾಚಾರದಂಥ ಪ್ರಕರಣಗಳು  ನಡೆಯುತ್ತಿರುತ್ತವೆ,ಇದಕ್ಕೆ ಏನೂ ಮಾಡೋಕೆ ಆಗಲ್ಲ : ಸಚಿವ ಕತ್ತಿ

Advertisement

ಬೇಡಿಕೆ ಈಡೇರಿಕೆಗೆ
ಕಾಲ ಸನ್ನಿಹಿತ
ನಗರದಲ್ಲಿ ಒಂದು ಸುಸಜ್ಜಿತ ಕೇಂದ್ರ ಗ್ರಂಥಾಲಯ ನಿರ್ಮಾಣವಾಗಬೇಕು. ಎಲ್ಲ ಸೌಲಭ್ಯಗಳು ಗ್ರಂಥಾಲ ಯದಲ್ಲಿ ಸಿಗಬೇಕು ಎನ್ನುವುದು ಓದುಗರ ಹಲವು ದಶಕಗಳ ಆಸೆಯಾಗಿತ್ತು. ಆದರೆ, ಇದೀಗ ನನಸಾಗುವ ಕಾಲ ಸನ್ನಿಹಿತವಾಗಿದೆ. ಬಾಕಿ ಒಳಾಂಗಣ ವಿನ್ಯಾಸ ಕಾಮಗಾರಿ ವಿಳಂಬ ಮಾಡದೆ ನಿಗದಿತ ಅವಧಿ ಯೊಳಗೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಅನು ಕೂಲ ಮಾಡಿಕೊಡಬೇಕು ಎನ್ನುವುದು ಓದುಗರ ಒತ್ತಾಸೆಯಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆ ತಯಾರಿ
ಗ್ರಂಥಾಲಯದಲ್ಲಿ ಐಎಎಸ್‌, ಕೆಎಎಸ್‌, ಐಎಎಸ್‌ ಮುಂತಾದ ಸಿವಿಲ್‌ ಸರ್ವಿಸ್‌ ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ತರಬೇತಿ ನೀಡಲು ಕಿರು ಸಭಾಂಗಣ ಹಾಗೂ ಅಧ್ಯಯನಕ್ಕೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಅನುಕೂಲವಾಗುವಂತೆ ಗ್ರಂಥಾಲಯಕ್ಕೆ 24×7 ವಿದ್ಯುತ್‌ ಸಂಪರ್ಕ ಒದಗಿಸಲಾಗುತ್ತದೆ. ಅದಕ್ಕೆ ಪೂರಕ ಜನರೇಟರ್‌ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ನೆಲ ಮಹಡಿಯಲ್ಲಿ ಏಕಕಾಲಕ್ಕೆ 50ಕ್ಕೂ ಹೆಚ್ಚಿನ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಬಹುದು. ಕಟ್ಟಡ ಮುಂಭಾಗ ಇಂಟರ್‌ ಲಾಕ್‌ ಹಾಕಲಾಗಿದೆ.

ಗೋವಿಂದಾಚಾರ್ಯರ ಹೆಸರಿಡಲು ಮನವಿ
ದೇಶದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರಾದ ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ವಿದ್ಯಾವಾಚಸ್ಪತಿ ಗೋವಿಂದಾಚಾರ್ಯರು ಮಾಧ್ವ ತತ್ವದಲ್ಲಿ ಅಮೋಘ ಪಾಂಡಿತ್ಯ ಹೊಂದಿದ್ದರು. ಕನ್ನಡ ಹಾಗೂ ಸಂಸ್ಕೃತದಲ್ಲಿ ಹಲವು ಕೃತಿಗಳನ್ನೂ ರಚಿಸಿದ್ದಾರೆ. ಸಾಹಿತಿ, ವಿದ್ವಾಂಸ, ಪತ್ರಕರ್ತ, ಸಂಶೋಧಕ, ಅನುವಾದಕ, ಭಾಷಾಂತರಕಾರ, ಭಾಷ್ಯಕಾರ, ಕವಿ, ಪ್ರವಚನಕಾರ, ಉಪನ್ಯಾಸಕ ಹೀಗೆ ಬಹುವಿಧವಾಗಿ ಅಮೂಲ್ಯ ವಾಗ್ಮಿಯ ಕೊಡುಗೆ ಧಾರೆಯೆರೆದು ಉಡುಪಿಗೆ ಕೀರ್ತಿ ತಂದಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾ ಗ್ರಂಥಾಲಯಕ್ಕೆ ಅವರ ಹೆಸರು ಇಡುವುದು ಸೂಕ್ತವೆಂದು ಸರಕಾರಕ್ಕೆ ಮನವಿ ಮಾಡಲಾಗಿದೆ.
-ರಘುಪತಿ ಭಟ್‌, ಶಾಸಕ

ಒಳಾಂಗಣ ವಿನ್ಯಾಸ
ಜಿಲ್ಲಾ ಕೇಂದ್ರ ಗ್ರಂಥಾಲಯದ ಒಳಾಂಗಣ ವಿನ್ಯಾಸ ಕಾಮಗಾರಿ ಪ್ರಾರಂಭವಾಗಿದೆ. ಮುಂದಿನ ತಿಂಗಳ ಅಂತ್ಯಕ್ಕೆ ಕಾಮಗಾರಿ ಸಂಪೂರ್ಣಗೊಳ್ಳುವ ಸಾಧ್ಯತೆ ಇದೆ.
-ನಳಿನಿ, ಜಿ.ಐ. ಮುಖ್ಯ ಗ್ರಂಥಾಲಯಧಿಕಾರಿ
ಜಿಲ್ಲಾ ಕೇಂದ್ರ ಗ್ರಂಥಾಲಯ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next