Advertisement

ಸಿದ್ದರಾಮಯ್ಯಗೆ ಹೈಕಮಾಂಡ್‌ ಲಗಾಮು

03:45 AM May 14, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದರೆ ನಾನೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಅವರಿಗೆ “ಹೈಕಮಾಂಡ್‌’ ಲಗಾಮು ಹಾಕಿದಂತಿದೆ.

Advertisement

ಹೀಗಾಗಿಯೇ, “ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಹೈಕಮಾಂಡ್‌ ನಿರ್ಧರಿಸುತ್ತದೆ’ ಎಂದು ದಿಢೀರ್‌ ರಾಗ ಬದಲಾಯಿಸಲಿದ್ದಾರೆ. ಸಿದ್ದರಾಮಯ್ಯ ಅವರು ಮುಂದೆಯೂ ನಾನೇ ಮುಖ್ಯಮಂತ್ರಿ ಎಂದು ಪ್ರತಿಪಾದಿಸಿದರೆ ಇತರೆ ಸಮುದಾಯಗಳು ಕಾಂಗ್ರೆಸ್‌ನಿಂದ ದೂರವಾಗುತ್ತವೆ. ಜತೆಗೆ ಅವರು ಪದೇ ಪದೇ ಆ ರೀತಿ ಹೇಳಿಕೆ ನೀಡಿದರೆ ಪಕ್ಷಕ್ಕೆ ಮುಳುವಾಗುತ್ತದೆ ಎಂದು ಮೂಲ ಕಾಂಗ್ರೆಸ್ಸಿಗರು ಹೈಕಮಾಂಡ್‌ವರೆಗೂ ದೂರು ತಲುಪಿಸಿದ್ದರು.

ಈ ಸರ್ಕಾರದಲ್ಲೇ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂಬ ಕೂಗು ಇದೆ. ಕನಿಷ್ಠ ಉಪ ಮುಖ್ಯಮಂತ್ರಿ ಸ್ಥಾನವಾದರೂ ಕೊಡಿ ಎಂಬ ಬೇಡಿಕೆ ಈಡೇರಿಸಲೂ ಆಗಲಿಲ್ಲ. ಪ್ರಬಲ ಸಮುದಾಯಗಳಾದ ಒಕ್ಕಲಿಗರು ಜೆಡಿಎಸ್‌ ಹಾಗೂ ಲಿಂಗಾಯಿತರು ಬಿಜೆಪಿಯತ್ತ ಎಂದು ಬಿಂಬಿತವಾಗಿದೆ.

ಇಂತಹ ಸಂದರ್ಭದಲ್ಲಿ ಮುಂದೆ ಅವಕಾಶ ಸಿಕ್ಕರೆ ದಲಿತ, ವಕ್ಕಲಿಗ, ಲಿಂಗಾಯಿತ, ಮುಸ್ಲಿಂ ಸಮುದಾಯಕ್ಕೆ ಅವಕಾಶ ಕಲ್ಪಿಸುವ ಸಂದೇಶ ಪಕ್ಷದ ವೇದಿಕೆ ಹಾಗೂ ಕಾರ್ಯಕ್ರಮಗಳಲ್ಲಿ ರವಾನೆಯಾಗಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯ ಅವರೇ  ಮುಂದೆಯೂ ಮುಖ್ಯಮಂತ್ರಿಯಾಗುವುದಾದರೆ ನಾವ್ಯಾಕೆ ಬೆಂಬಲಿಸಬೇಕು ಎಂದು ದಲಿತ, ಒಕ್ಕಲಿಗ, ಲಿಂಗಾಯಿತ ಸಮುದಾಯ  ತಿರುಗಿಬಿದ್ದರೆ ಕಷ್ಟವಾಗುತ್ತದೆ ಎಂದು ಮೂಲ ಕಾಂಗ್ರೆಸ್ಸಿಗರು ಹೈಕಮಾಂಡ್‌ ಮುಂದೆ ಅವಲತ್ತುಕೊಂಡ ಪರಿಣಾಮ ಸಿದ್ದರಾಮಯ್ಯ ರಾಗ ಬದಲಿಸುವಂತಾಗಿದೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿಯಾಗಿ ಸರ್ಕಾರದ ನೇತೃತ್ವ ವಹಿಸಿದ್ದರಿಂದ ಮುಂದಿನ ಚುನಾವಣೆ ನೇತೃತ್ವ ಸಹಜವಾಗಿ ನಿಮ್ಮದೇ ಇರಲಿದೆ. ಆದರೆ, ಮತ್ತೆ ಪಕ್ಷ ಅಧಿಕಾರಕ್ಕೆ ಬಂದರೆ ನಾನೇ ಮುಖ್ಯಮಂತ್ರಿ ಎಂದು ಹೇಳುವುದು ಬೇಡ. ಈಗಾಗಲೇ ನೀಡಿರುವ ಹೇಳಿಕೆಗೆ ಸೂಕ್ತ ವೇದಿಕೆಯಲ್ಲಿ ಸ್ಪಷ್ಟನೆ ನೀಡಿ ಎಂದು ಹೈಕಮಾಂಡ್‌ ಸೂಚನೆ ನೀಡಿತ್ತು.

Advertisement

ಹೀಗಾಗಿ, ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂದರ್ಭದಲ್ಲಿ ಎದುರಾದ  ಈ ಕುರಿತ ಪ್ರಶ್ನೆಗೆ, ಒತ್ತಿ ಒತ್ತಿ ಸ್ಪಷ್ಟನೆ ನೀಡಿ, ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಹೈಕಮಾಂಡ್‌ ತೀರ್ಮಾನಿಸುತ್ತದೆ. ಕೂಸು ಹುಟ್ಟುವ ಮುನ್ನ ಕುಲಾವಿ ಹೊಲೆಸುವುದಿಲ್ಲ. ಕೆ.ಆರ್‌.ಪುರಂ ಸಮಾರಂಭದಲ್ಲಿ ಯಾರೋ ಅಭಿಮಾನಿಗಳು ಕೇಳಿದ್ದಕ್ಕೆ ಸಹಜವಾಗಿ ಹೇಳಿದೆಯಷ್ಟೇ ಎಂದು ಸಮಜಾಯಿಷಿ ನೀಡಿದರು. ಇದು ಹೈಕಮಾಂಡ್‌ “ಎಫೆಕ್ಟ್’ ಎಂದು ಹೇಳಲಾಗಿದೆ.

ಒನ್‌ಮ್ಯಾನ್‌ ಶೋ ಆರೋಪ
ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿ ಮೂರು ದಿನಗಳ ಕಾಲ ಠಿಕಾಣ ಹಾಕಿದ್ದ ಎಐಸಿಸಿ ಉಸ್ತುವಾರಿ ವೇಣುಗೋಪಾಲ್‌ ಅವರ ಮುಂದೆಯೂ ಬಹುತೇಕ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯವೈಖರಿ ಬಗ್ಗೆ ದೂರುಗಳ ಸುರಿಮಳೆಗೈದು ಆಕ್ರೋಶ ಹೊರಹಾಕಿದ್ದರು.

ಸಿದ್ದರಾಮಯ್ಯ “ಒನ್‌ ಮ್ಯಾನ್‌  ಶೋ’ ಮಾಡುತ್ತಿದ್ದಾರೆ. ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯತೆ ಮತ್ತು ಉತ್ತಮ ಸಂಪರ್ಕ, ಸಂಬಂಧ ಇಲ್ಲ. ಆನೆ ನಡೆದಿದ್ದೇ ದಾರಿ ಎಂಬಂತೆ ತಮ್ಮ ತೀರ್ಮಾನವೇ ಅಂತಿಮ. ಯಾರೂ ಪ್ರಶ್ನಿಸುವಂತಿಲ್ಲ ಎಂಬಂತೆ ನಿಲುವು ಹೊಂದಿದ್ದಾರೆ. ಇದು ಪಕ್ಷಕ್ಕೆ ಮಾರಕವಾಗಲಿದೆ ಎಂದು ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಸಂಪುಟದ ಬಹುತೇಕ ಹಿರಿಯ ಸಚಿವರು  ಈ ಬಗ್ಗೆ ಬೇಸರ ತೋಡಿಕೊಂಡಿದ್ದರು ಎಂದು ಹೇಳಲಾಗಿದೆ.

ರಾಜ್ಯದ ಮಟ್ಟಿಗೆ ಸಿದ್ದರಾಮಯ್ಯ ಅವರೇ ಹೈಕಮಾಂಡ್‌ ಎಂಬಂತಾಗಿದೆ. ಜನತಾಪರಿವಾರ ಮೂಲದವರಿಗೆ ಹೆಚ್ಚು ಮಣೆ ಹಾಕಲಾಗುತ್ತಿದೆ. ಪಕ್ಷದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು  ಮುಖ್ಯಮಂತ್ರಿಯಾದರೂ ಕೆಪಿಸಿಸಿ ಕಚೇರಿಗೆ ಹೆಚ್ಚಾಗಿ ಬರುವುದಿಲ್ಲ. ವರ್ಷದಲ್ಲಿ ಎರಡು ಮೂರು ಬಾರಿ ಮಾತ್ರ ಸೀಮಿತ ಸಭೆ, ಕಾರ್ಯಕ್ರಮಗಳಿಗೆ ಬರುತ್ತಾರೆ ಎಂದು ದೂರಿದ್ದರು.

ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಹೈಕಮಾಂಡ್‌ “ಮಧ್ಯಪ್ರವೇಶ’ ಮಾಡಿದೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಕ್ಷದಲ್ಲಿ ಹುದ್ದೆ ಕೊಟ್ಟು ಕರ್ನಾಟಕದ ಹೊಣೆಗಾರಿಕೆಯನ್ನೂ ಕೊಟ್ಟು ಸಿದ್ದರಾಮಯ್ಯ ಅವರನ್ನು ಕಂಟ್ರೋಲ್‌ನಲ್ಲಿಡುವ ಪ್ರಯತ್ನಕ್ಕೆ ಮುಂದಾಗಿದೆ. ತಮಗೆ ಬೇಕಾದವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕುಳ್ಳಿÛರಿಸುವ ಸಿದ್ದರಾಮಯ್ಯ ಅವರ ಪ್ರಯತ್ನಕ್ಕೂ ಹಿನ್ನೆಡೆಯಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಖಡಕ್‌ ವೇಣುಗೋಪಾಲ್‌
ಈ ಹಿಂದೆ ಎಐಸಿಸಿ ಉಸ್ತುವಾರಿಯಾಗಿದ್ದ ದಿಗ್ವಿಜಯ್‌ಸಿಂಗ್‌ ಅವರು ಬೆಂಗಳೂರಿಗೆ ಆಗಮಿಸಿದಾಗ ಅವರೇ ಖುದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿ ಮಾಡುತ್ತಿದ್ದರು.  ಆದರೆ, ಹೊಸದಾಗಿ ನಿಯೋಜನೆಗೊಂಡ ಎಐಸಿಸಿ ಉಸ್ತುವಾರಿ ವೇಣುಗೋಪಾಲ್‌ ಬೆಂಗಳೂರಿಗೆ ಬಂದರೂ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿರಲಿಲ್ಲ. ಸಿದ್ದರಾಮಯ್ಯ ಅವರು ತಮ್ಮ ಸಂಸದೀಯ ಕಾರ್ಯದರ್ಶಿ ಗೋವಿಂದರಾಜು ಮೂಲಕ ವೇಣುಗೋಪಾಲ್‌ಗೆ ಕರೆ ಮಾಡಿಸಿದಾಗಲೂ ನಾನು ಬರಲಾಗದು. ಮುಖ್ಯಮಂತ್ರಿಯವರೇ ಕೆಪಿಸಿಸಿಗೆ ಬರಲಿ ಎಂದು ಖಡಕ್‌ ಆಗಿ ತಿಳಿಸಿದ್ದರು. ಆ ನಂತರ ಎರಡನೇ ದಿನ ಖುದ್ದು ಸಿದ್ದರಾಮಯ್ಯ ಕೆಪಿಸಿಸಿಗೆ ಬಂದು ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ  ತಮ್ಮ ನಿವಾಸಕ್ಕೆ ಉಪಹಾರಕ್ಕೆ ಬರುವಂತೆ ಆಹ್ವಾನ ನೀಡಿದರು. ವೇಣುಗೋಪಾಲ್‌ ಗಟ್ಟಿತನ ಪ್ರದರ್ಶಿಸಿ  ಹೈಕಮಾಂಡ್‌ ದುರ್ಬಲ ಅಲ್ಲ,  ಮುಖ್ಯಮಂತ್ರಿ ಸಹಿತ ಯಾರೇ ಆದರೂ ಪಕ್ಷವೇ ಸುಪ್ರೀಂ ಎಂದು ಬಿಸಿ ಮುಟ್ಟಿಸಿದ್ದರು  ಎಂದು ಹೇಳಲಾಗಿದೆ.

– ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next