ಕುಂದಾಪುರ: ಬೈಂದೂರು – ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರ ಹೆಮ್ಮಾಡಿಯಲ್ಲಿ ಸರ್ವಿಸ್ ರಸ್ತೆ ಮತ್ತು ಡಿವೈಡರ್ ಕ್ರಾಸಿಂಗ್ ನೀಡಬೇಕು ಎಂದು ಆಗ್ರಹಿಸಿ “ದಾರಿಗಾಗಿ ಧ್ವನಿ’ ಹೋರಾಟ ಸಮಿತಿ ನೇತೃತ್ವದಲ್ಲಿ ಜಾಲಾಡಿ, ಸಂತೋಷ್ನಗರ, ಹೊಸಕಳಿ ಮತ್ತಿತರರೆಡೆಯ ಗ್ರಾಮಸ್ಥರು ಶುಕ್ರವಾರ ಕಾಲ್ನಡಿಗೆ ಜಾಥಾದ ಮೂಲಕ ತೆರಳಿ ಹೆಮ್ಮಾಡಿ ಗ್ರಾ.ಪಂ. ಎದುರು ಬೃಹತ್ ಪ್ರತಿಭಟನೆ ನಡೆಸಿ, ಬೇಡಿಕೆ ಈಡೇರಿಕೆಗಾಗಿ ಒತ್ತಾ ಯಿಸಿದರು.
ಹೆಮ್ಮಾಡಿಯಿಂದ ಜಾಲಾಡಿಯ
ವರೆಗೆ ಮತ್ತು ಮೂವತ್ತುಮುಡಿಯಿಂದ ಹೆಮ್ಮಾಡಿಯ ಪೇಟೆಯ ವರೆಗೆ ಸರ್ವಿಸ್ ರಸ್ತೆ ನಿರ್ಮಿಸಬೇಕು. ಸಂತೋಷ್ನಗರ ಮತ್ತು ಜಾಲಾಡಿ ಮಧ್ಯೆ ಡಿವೈಡರ್ ಮಧ್ಯೆ ಕ್ರಾಸಿಂಗ್ ನೀಡಬೇಕು ಎನ್ನುವ ಬೇಡಿಕೆ ಮುಂದಿಟ್ಟುಕೊಂಡು, ಈ ಬೃಹತ್ ಪ್ರತಿಭಟನ ಮೆರವಣಿಗೆ ನಡೆಯಿತು. ತತ್ಕ್ಷಣವೇ ಡಿವೈಡರ್ ಅಗೆದು ಕ್ರಾಸಿಂಗ್ಗೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಕದಲುವುದಿಲ್ಲ ಎಂದು ಪ್ರತಿಭಟನನಿರತರು ಪಟ್ಟು ಹಿಡಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ಐಆರ್ಬಿ ಅಧಿಕಾರಿ ಪ್ರದೀಪ್ ಪ್ರತಿಭಟನ ನಿರತರೊಂದಿಗೆ ಮಾತನಾಡಿ, ಮೊದಲು ಸಿದ್ಧಪಡಿಸಿದ ಕರಡು ನಕ್ಷೆಯಲ್ಲಿ ಹೆಮ್ಮಾಡಿಯಲ್ಲಿ ಸರ್ವಿಸ್ ರಸ್ತೆ ಇರಲಿಲ್ಲ. ಆದರೆ ಇಲ್ಲಿನ ಜನರ ಬೇಡಿಕೆಯಂತೆ ಈಗ ನಕ್ಷೆಯಲ್ಲಿ ಸೇರಿಸಿಕೊಳ್ಳಲಾಗಿದೆ. ಆದರೆ ಇದಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಅನುಮೋದನೆ ಇನ್ನೂ ಸಿಕ್ಕಿಲ್ಲ. ಡಿವೈಡರ್ ಕ್ರಾಸಿಂಗ್ಗೆ ಮೇಲಾಧಿಕಾರಿಗಳ ಜತೆ ಮಾತನಾಡಿ, ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ತಾ.ಪಂ. ಸದಸ್ಯ ರಾಜು ದೇವಾಡಿಗ, ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಹರೀಶ್ ಭಂಡಾರಿ, ಉಪಾಧ್ಯಕ್ಷ ಅಂಥೋನಿ ಲೂಯಿಸ್, ಸಮಿತಿಯ ಅಧ್ಯಕ್ಷ ರಾಜು ಕಾಳೂರಮನೆ, ಕಾರ್ಯದರ್ಶಿ ಜನಾರ್ದನ ಪೂಜಾರಿ, ಸಮಿತಿಯ ಶಶಿಧರ ಹೆಮ್ಮಾಡಿ, ಸೋಮಶೇಖರ್ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.