Advertisement

ಅಮ್ಮ ಒಂದು ಪದ ಮಾತ್ರ ಅಲ್ಲ; ಭಾವನೆಗಳ ಆಗರ

01:40 AM Jun 19, 2022 | Team Udayavani |

ಹೊಸದಿಲ್ಲಿ: “ಅಮ್ಮ’- ಇದು ಕೇವಲ ಒಂದು ಪದವಲ್ಲ; ಭಾವನೆಗಳ ಆಗರ…
-ಶನಿವಾರ 100ನೇ ವಸಂತಕ್ಕೆ ಕಾಲಿಟ್ಟ ತಾಯಿ ಹೀರಾಬೆನ್‌ ಅವರಿಗೆ ಶುಭ ಕೋರಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಿದು.

Advertisement

ಹೀರಾಬೆನ್‌ ಅವರ ಜನ್ಮದಿನ ಪ್ರಯುಕ್ತ ಶನಿವಾರ ತಾಯಿಗೆಂದೇ ವಿಶೇಷವಾಗಿ ಬ್ಲಾಗ್‌ನಲ್ಲಿ ಬರೆದ ಮೋದಿ ತಮ್ಮ ವ್ಯಕ್ತಿತ್ವ, ಮನಸ್ಸು, ಆತ್ಮವಿಶ್ವಾಸವನ್ನು ರೂಪಿಸಿ ಬದುಕಿಗೆ ಹೊಸ ರೂಪ ಕೊಟ್ಟ ತಾಯಿಯ ತ್ಯಾಗ ಗಳನ್ನು ಸ್ಮರಿಸಿದ್ದಾರೆ. “ಗರೀಬ್‌ ಕಲ್ಯಾಣ'(ಬಡವರ ಕಲ್ಯಾಣ)ಕ್ಕಾಗಿ ದೃಢ ನಿಶ್ಚಯ ಕೈಗೊಳ್ಳಲು ನನ್ನ ಅಮ್ಮನೇ ಸ್ಫೂರ್ತಿ ಎಂದಿದ್ದಾರೆ. ವಿಶೇಷವೆಂದರೆ ಮೋದಿ ಅವರು ಜಾರಿಗೊಳಿಸಿದ‌ ಕೇಂದ್ರ ಸರಕಾರದ ಹಲವು ಯೋಜನೆಗಳಿಗೆ “ಗರೀಬ್‌ ಕಲ್ಯಾಣ್‌’ ಎನ್ನಲಾಗುತ್ತದೆ.

2001ರಲ್ಲಿ ಗುಜರಾತ್‌ ಸಿಎಂ ಆಗಿ ಆಯ್ಕೆಯಾದಾಗ ಅಮ್ಮ ಹೇಳಿದ್ದು ಒಂದೇ ಮಾತು – “ಸರಕಾರದಲ್ಲಿ ನಿನ್ನ ಕೆಲಸವೇನು ಎಂಬುದು ನನಗೆ ಅರ್ಥವಾಗದು. ಆದರೆ ನಾನು ಹೇಳುವುದೊಂದೇ- ಲಂಚ ಮಾತ್ರ ಸ್ವೀಕರಿಸಬೇಡ’. ಸುತ್ತಮುತ್ತಲಿನ ಜನರ ಸಂತೋಷವೇ ನನ್ನ ಅಮ್ಮನ ಸಂತೋಷವಾಗಿತ್ತು ಎಂದಿದ್ದಾರೆ ಮೋದಿ.

ಅಬ್ಟಾಸ್‌ ಮೇಲಿದ್ದ ಪ್ರೀತಿ
ನಾವು ಚಿಕ್ಕವರಿದ್ದಾಗ ತಂದೆಯವರ ಆತ್ಮೀಯ ಸ್ನೇಹಿತ ಅಕಾಲಿಕ ನಿಧನ ಹೊಂದಿದರು. ಅವರ ಪುತ್ರ ಅಬ್ಟಾಸ್‌ನನ್ನು ನಮ್ಮ ಮನೆಗೆ ಕರೆತಂದರು. ಅನಂತರ ಅಬ್ಟಾಸ್‌ ನಮ್ಮೊಂದಿಗೇ ಇದ್ದು, ವಿದ್ಯಾಭ್ಯಾಸ ಪೂರ್ಣಗೊಳಿಸಿದ. ನನ್ನ ಅಮ್ಮ ಸ್ವಂತ ಮಕ್ಕಳಾದ ನಮ್ಮಷ್ಟೇ ಕಾಳಜಿ, ಪ್ರೀತಿಯಿಂದ ಅಬ್ಟಾಸ್‌ನನ್ನೂ ನೋಡಿಕೊಂಡರು. ಪ್ರತೀ ವರ್ಷ ಈದ್‌ ಹಬ್ಬದಂದು ಅವನಿಗೆ ಇಷ್ಟವಾದ ತಿಂಡಿ-ತಿನಿಸುಗಳನ್ನು ಮಾಡಿಕೊಡುತ್ತಿದ್ದರು.

ನನ್ನ ತಾಯಿಯ ಬದುಕಿನುದ್ದಕ್ಕೂ ಭಾರತದ ಮಾತೃಶಕ್ತಿಯ ತಪಸ್ಸು, ತ್ಯಾಗ ಮತ್ತು ಕೊಡುಗೆಯನ್ನು ಕಾಣುತ್ತೇನೆ. ನನ್ನಮ್ಮ ಮತ್ತು ಅವಳಂಥ ಕೋಟ್ಯಂತರ ಮಾತೆಯರನ್ನು ನೋಡುವಾಗ ಭಾರತೀಯ ಹೆಣ್ಣು ಮಕ್ಕಳಿಗೆ ಅಸಾಧ್ಯವಾದುದು ಏನೂ ಇಲ್ಲ ಎಂಬುದು ಅರಿವಿಗೆ ಬಂದಿದೆ. ಎಲ್ಲ ಅಮ್ಮಂದಿರಂತೆ ನನ್ನ ಅಮ್ಮನೂ ಸರಳತೆಯ ಸಾಕಾರಮೂರ್ತಿ. “ಔಪಚಾರಿಕವಾಗಿ ಶಿಕ್ಷಣ ಪಡೆಯದೆಯೂ ಕಲಿಯಲು ಸಾಧ್ಯ’ ಎನ್ನುವುದು ಆಕೆ ನನಗೆ ಕಲಿಸಿಕೊಟ್ಟ ಜೀವನಪಾಠ.

Advertisement

ಅಮ್ಮನ ದೂರದೃಷ್ಟಿ ನನಗೆ ಅಚ್ಚರಿ
ಒಂದು ಬಾರಿ ನಾನು ನನ್ನೆಲ್ಲ ಗುರುಗಳನ್ನೂ ಸಾರ್ವಜನಿಕವಾಗಿ ಸಮ್ಮಾನಿಸಬೇಕೆಂದು ಬಯಸಿದ್ದೆ. ಆಗ ನನ್ನ ಶ್ರೇಷ್ಠ ಗುರುವಾದ “ಅಮ್ಮ’ನನ್ನೂ ಗೌರವಿಸುವುದಾಗಿ ಹೇಳಿದ್ದೆ. ಆದರೆ ಅದನ್ನು ನಿರಾಕರಿಸಿದ್ದ ಅಮ್ಮ, ನಾನು ಸಾಮಾನ್ಯಳು. ನಾನು ನಿನಗೆ ಜನ್ಮ ನೀಡಿರಬಹುದು. ಆದರೆ ನೀನು ಇಷ್ಟು ಎತ್ತರಕ್ಕೆ ಬೆಳೆಯಲು ಆ ಭಗವಂತನೇ ಕಾರಣ ಎಂದಿದ್ದಳು. ಅನಂತರ ಆ ಕಾರ್ಯಕ್ರಮ ನಡೆಯಿತು. ಅಮ್ಮ ಭಾಗಿಯಾಗಲಿಲ್ಲ. ಆದರೆ ನನಗೆ ವರ್ಣಮಾಲೆಯನ್ನು ಹೇಳಿಕೊಟ್ಟ ಜೇಥಾಭಾಯಿ ಜೋಷಿ ಅವರ ಕುಟುಂಬದ ಯಾರನ್ನಾದರೂ ಕರೆಸಿ ಸಮ್ಮಾನಿಸಲೇಬೇಕು ಎಂದು ಸೂಚಿಸಿದ್ದಳು. ಅವಳ ಆಲೋಚನಾ ಲಹರಿ ಮತ್ತು ದೂರದೃಷ್ಟಿ ನನಗೆ ಯಾವತ್ತೂ ಅಚ್ಚರಿಯೇ.

ಅವಳು ಉಲ್ಲಾಸದ ಚಿಲುಮೆ
ನನ್ನ ಅಮ್ಮ ಎಂಥ ಸಂಕಷ್ಟವನ್ನೂ ಎದುರಿಸಿ ಪುಟಿದೇಳುವಂಥವಳು. ಸಣ್ಣ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು ಆಕೆ ಎದುರಿಸಿದ ನೋವು-ಸವಾಲುಗಳು ಹಲವು. ಹೆತ್ತತಾಯಿಯ ಮುಖವನ್ನೂ ನೋಡಲಾಗದ, ತಾಯಿಯ ಮಡಿಲಲ್ಲಿ ಬೆಚ್ಚಗೆ ಮಲಗಲೂ ಆಗದ ನತದೃಷ್ಟೆ. ಅಮ್ಮನ ಅಪ್ಪುಗೆಯೇ ಇಲ್ಲದ ಬಾಲ್ಯ ಅವಳದ್ದು. ನಮ್ಮ ಕುಟುಂಬವು ವಡ್ನಾಗರ್‌ನ ಸಣ್ಣ ಮಣ್ಣಿನ ಮನೆಯಲ್ಲಿ ವಾಸವಿತ್ತು. ಆಗ ಇದ್ದಿದ್ದು ಹೆಂಚಿನ ಛಾವಣಿ. ಮಳೆ ಬಂದಾಗ ಸೋರುತ್ತಿತ್ತು. ಮನೆಯೆಲ್ಲ ನೀರು ತುಂಬುತ್ತಿತ್ತು. ಅಮ್ಮ ಗಡಿಬಿಡಿಯಲ್ಲಿ ಇದ್ದಬದ್ದ ಪಾತ್ರೆಗಳು, ಬಕೆಟ್‌ಗಳನ್ನು ಇಟ್ಟು ಸೋರುತ್ತಿರುವ ನೀರನ್ನು ಹಿಡಿಯುತ್ತಿದ್ದಳು. ಎಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ಅವಳು ಎದೆಗುಂದಿದ್ದಿಲ್ಲ. ಅವಳೊಂದು ಉಲ್ಲಾಸದ ಚಿಲುಮೆ.

ಕರ್ತವ್ಯನಿಷ್ಠೆ ಪ್ರಜೆ
ಪಂಚಾಯತ್‌ನಿಂದ ಸಂಸತ್ತಿನವರೆಗೆ ಪ್ರತಿ ಚುನಾವಣೆಯಲ್ಲೂ ಹಕ್ಕು ಚಲಾಯಿಸಿರುವ ಅಮ್ಮ ತಾನು ಕರ್ತವ್ಯನಿಷ್ಠ ನಾಗರಿಕಳು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಅವಳ ಬದುಕು ಎಷ್ಟು ಸರಳವೆಂದರೆ ಈಗಲೂ ಅಮ್ಮನ ಹೆಸರಲ್ಲಿ ಆಸ್ತಿಯಿಲ್ಲ. ಆಕೆ ಚಿನ್ನದ ಆಭರಣ ತೊಟ್ಟಿದ್ದನ್ನು ನಾನು ನೋಡಿಯೇ ಇಲ್ಲ, ಅದರಲ್ಲಿ ಅವಳಿಗೆ ಆಸಕ್ತಿಯೂ ಇದ್ದಂತಿಲ್ಲ.

ಅಮ್ಮನ ಸ್ಮರಣ ಶಕ್ತಿ ಅಗಾಧವಾದದ್ದು. ಇತ್ತೀಚೆಗೆ ನಾನು, “ಪ್ರತೀ ದಿನ ಎಷ್ಟು ತಾಸು ಟಿವಿ ವೀಕ್ಷಿಸುತ್ತೀರಿ’ ಎಂದು ಕೇಳಿದ್ದೆ. “ಟಿವಿಯಲ್ಲಿ ಹೆಚ್ಚಿನವರು ಪರಸ್ಪರ ಕಾದಾಡುವುದರಲ್ಲೇ ನಿರತರಾಗಿರುತ್ತಾರೆ. “ನಾನು ಯಾರು ಸಾವಧಾನದಿಂದ ಸುದ್ದಿ ಓದಿ ಎಲ್ಲವನ್ನೂ ವಿವರಿಸುತ್ತಾರೋ, ಅಂಥ ಚಾನೆಲ್‌ ಮಾತ್ರ ನೋಡುತ್ತೇನೆ’ ಎಂದಿದ್ದರು ಅಮ್ಮ. ಆಕೆ ಜಗತ್ತಿನ ಆಗುಹೋಗುಗಳ ಬಗ್ಗೆ ಇಷ್ಟೆಲ್ಲ ತಿಳಿದುಕೊಂಡಿದ್ದಾಳಲ್ಲ ಎಂದು ನನಗೇ ಅಚ್ಚರಿಯಾಗಿತ್ತು.
ನನ್ನ ತಾಯಿ “ಕಬೀರಪಂಥ’ದವಳು. ದೇವರ ಮೇಲೆ ಅಪಾರವಾದ ನಂಬಿಕೆ. ಆದರೆ ಮೌಡ್ಯಗಳಿಂದ ದೂರ ಉಳಿದವಳು. ತನ್ನ ಕುಟುಂಬದ ಸದಸ್ಯರಲ್ಲೂ ಅಂಥದ್ದೇ ಗುಣಗಳನ್ನು ಬೆಳೆಸಿದವಳು.

ಮನೆ ಬಿಟ್ಟಾಗಲೂ ಆಶೀರ್ವದಿಸಿದ್ದಳು!
ನಾನು ಬಾಲ್ಯದಲ್ಲೇ ಮನೆ ತೊರೆಯಲು ನಿರ್ಧರಿಸಿದಾಗ ಅಪ್ಪ ಬಹಳ ನೊಂದುಕೊಂಡಿದ್ದರು. ಆದರೆ ಅಮ್ಮ ನನ್ನ ನಿರ್ಧಾರವನ್ನು ಅರಿತು ಆಶೀರ್ವದಿಸಿದ್ದಳು. ಅನಂತರ ಅಪ್ಪನಿಗೂ ನನ್ನ ಮನದಾಳ ಅರ್ಥವಾಗಿ ಅವರೂ ಹಾರೈಸಿದರು. ಅಮ್ಮ ನನ್ನ ನಿರ್ಧಾರವನ್ನು ಗೌರವಿಸಿ, ಉತ್ತೇಜಿಸಿದ್ದಳು.

ಸ್ವಾಭಿಮಾನ-ರಾಜಿಯಿಲ್ಲ
ಪ್ರಾಮಾಣಿಕತೆ ಮತ್ತು ಸ್ವಾಭಿಮಾನವೇ ನನ್ನ ಹೆತ್ತವರ ಅತೀ ದೊಡ್ಡ ಗುಣವಿಶೇಷಗಳು. ಬಡತನ ಮತ್ತು ಸವಾಲು ಗಳೊಂದಿಗೆ ಹೋರಾಡುತ್ತಿದ್ದರೂ ಅವರೆಂದೂ ಪ್ರಾಮಾಣಿಕತೆಯ ಪಥವನ್ನು ತೊರೆದವರಲ್ಲ,

ಸ್ವಾಭಿಮಾನದೊಂದಿಗೆ ರಾಜಿ ಮಾಡಿಕೊಂಡವರಲ್ಲ. ಎಲ್ಲ ಸಂಕಷ್ಟಗಳನ್ನು ಎದುರಿಸಲು ಅವರು ಪಾಲಿಸುತ್ತಿದ್ದ ಏಕೈಕ ಮಂತ್ರವೆಂದರೆ- ಪರಿಶ್ರಮ, ನಿರಂತರ ಕಠಿನ ಪರಿಶ್ರಮ.

ನನ್ನ ಅಪ್ಪ ಕೂಡ ಯಾರಿಗೂ ಹೊರೆಯಾಗಲಿಲ್ಲ. ಅಮ್ಮ ಕೂಡ ತನ್ನ ಕೆಲಸಗಳನ್ನು ತಾನೇ ನಿರ್ವಹಿಸುತ್ತಾಳೆ.ನನ್ನ ಜೀವನದಲ್ಲಿ ಆಗಿರುವ ಎಲ್ಲ ಒಳ್ಳೆಯದೂ, ನನ್ನ ವ್ಯಕ್ತಿತ್ವದಲ್ಲಿರುವ ಎಲ್ಲ ಒಳ್ಳೆಯತನವೂ ನನ್ನ ಹೆತ್ತವರಿಂದ ಬಂದಿರುವಂಥದ್ದು.

ತಾಯಿಯ ಪಾದಪೂಜೆ
ಶನಿವಾರ ಗುಜರಾತ್‌ನ ಗಾಂಧಿನಗರ ದಲ್ಲಿರುವ ತಮ್ಮ ಮನೆಗೆ ತೆರಳಿದ ಪ್ರಧಾನಿ ಮೋದಿ, ತಾಯಿಯ ಪಾದಗಳನ್ನು ತೊಳೆದು, ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. 1923ರ ಜೂನ್‌ 18ರಂದು ಜನಿಸಿದ ಹೀರಾಬೆನ್‌ ಅವರು 100ನೇ ವರ್ಷಕ್ಕೆ ಕಾಲಿಟ್ಟಿದ್ದು, ಹುಟ್ಟೂರು ವಡ್ನಾಗರದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಹ್ಮದಾಬಾದ್‌ನ ಜಗನ್ನಾಥ ದೇಗುಲದಲ್ಲಿ ಮೋದಿ ಕುಟುಂಬವು ಅನ್ನಸಂತರ್ಪಣೆ ಹಮ್ಮಿಕೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next