ಶಬರಿಮಲೆ: ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಯಾತ್ರೆಯ ಎರಡನೇ ದಿನವಾಗಿರುವ ರವಿವಾರ ದೇಶದ ಎಲ್ಲೆಡೆಯಿಂದ ಆಗಮಿಸಿದ್ದ ಭಕ್ತರು ಕಿಕ್ಕಿರಿದು ಸೇರಿದ್ದರು. ಮುಖ್ಯ ಅರ್ಚಕ ಎ.ಕೆ. ಸುಧೀರ್ ನಂಬೂದಿರಿ ಬೆಳಗ್ಗೆ 3 ಗಂಟೆಗೆ ದೇಗುಲದ ಬಾಗಿಲು ತೆರೆದು ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು. ಈ ಸಂದರ್ಭ ದಲ್ಲಿ ತುಪ್ಪದ ಅಭಿಷೇಕ (ನೈಯ್ಯಭಿಷೇಕಂ), ಮಹಾ ಗಣಪತಿ ಹೋಮ ನಡೆಸಲಾಯಿತು. ಕೇರಳ ಮುಜರಾಯಿ ಸಚಿವ ಕಡಕಂಪಳ್ಳಿ ಸುರೇಂದ್ರನ್, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಎನ್.ವಾಸು ಸೇರಿದಂತೆ ಪ್ರಮುಖರಿದ್ದರು.
ತಡೆಯಾಜ್ಞೆ ರೀತಿಯ ವ್ಯವಸ್ಥೆ ಇದೆ
ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ತಡೆಯಾಜ್ಞೆ ರೀತಿಯ ವ್ಯವಸ್ಥೆ ಇದೆ ಎಂದು ಕೇರಳ ಕಾನೂನು ಸಚಿವ ಎ.ಕೆ. ಬಾಲನ್ ಅವರು ತಿರುವನಂತಪುರದಲ್ಲಿ ತಿಳಿಸಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಕೋರ್ಟ್ ಆದೇಶ ಏನಿದೆಯೋ ಅದನ್ನು ಪಾಲನೆ ಮಾಡು ವುದು ಮಾತ್ರ ಸರಕಾರದ ಕರ್ತವ್ಯವಾಗಿದೆ.
ನ. 14ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನಲ್ಲಿ ಹಿಂದಿನ ಆದೇಶಕ್ಕೆ ತಡೆಯಾಜ್ಞೆ ನೀಡಿದೆಯೋ ಇಲ್ಲವೋ ಎನ್ನುವುದು ಪ್ರಶ್ನೆ. ನಿಜವಾಗಿ ಹೇಳುವುದಿದ್ದರೆ ತಡೆಯಾಜ್ಞೆ ಇಲ್ಲ. ಆದರೆ ತಡೆಯಾಜ್ಞೆ ಇರುವಂಥ ಸ್ಥಿತಿ ಇದೆ’ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ದೇಗುಲ ಪ್ರವೇಶಕ್ಕೆ ಅವಕಾಶ ಸಿಗದೆ ಇದ್ದುದಕ್ಕೆ ಆಂಧ್ರಪ್ರದೇಶದ ಮಹಿಳೆ ನಿರಾಸೆ ವ್ಯಕ್ತಪಡಿಸಿದ್ದಾರೆ.