Advertisement

ದ. ಕ. ಜಿಲ್ಲೆಯಲ್ಲಿ ತಗ್ಗಿದ ಮಳೆ; ಪೂರ್ತಿಯಾಗಿ ಇಳಿಯದ ನೆರೆ

01:34 AM Jul 02, 2022 | Team Udayavani |

ಮಂಗಳೂರು: ಜಿಲ್ಲೆಯಲ್ಲಿ ಗುರುವಾರ ಸುರಿದು ಅವಾಂತರ ಸೃಷ್ಟಿಸಿದ್ದ ಭಾರೀ ಮಳೆ ಶುಕ್ರವಾರ ತುಸು ತಗ್ಗಿದೆ. ಜಿಲ್ಲೆಯಾದ್ಯಂತ ಉಂಟಾಗಿದ್ದ ನೆರೆ ಪ್ರಮಾಣ ಇಳಿಮುಖಗೊಂಡಿದೆ.

Advertisement

ಜಿಲ್ಲೆಯಲ್ಲಿ ಶುಕ್ರವಾರ ದಿನವಿಡೀ ಬಿಟ್ಟು ಬಿಟ್ಟು ಮಳೆಯಾಗಿದೆ. ಮಂಗಳೂರು ನಗರದಲ್ಲಿ ಬೆಳಗ್ಗೆವರೆಗೆ ಮಳೆ ಬಿಡುವು ಬಿಟ್ಟಿತ್ತು. ಬಳಿಕ ಬಿರುಸು ಪಡೆದಿತ್ತು. ಹಾನಿಗೊಳಗಾದ ಪ್ರದೇಶಗಳಿಗೆ ಮೇಯರ್‌, ಆಯುಕ್ತರು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಂಟ್ವಾಳ ತಾಲೂಕಿನ ಹಲವು ಕಡೆ ಮಳೆಯಾಗಿದ್ದು, ಸಣ್ಣ ಪುಟ್ಟ ಹಾನಿ ಸಂಭವಿಸಿದೆ. ಜಿಲ್ಲೆಯ ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ, ಧರ್ಮಸ್ಥಳ, ಕಡಬ, ಮಡಂತ್ಯಾರು, ಬಳ್ಳಮಂಜ, ಸುಬ್ರಹ್ಮಣ್ಯ, ಗುತ್ತಿಗಾರು, ಸಂಪಾಜೆ, ಸುಳ್ಯ, ಮೂಡುಬಿದಿರೆ, ಉಳ್ಳಾಲ, ಸುರತ್ಕಲ್‌, ಕಲ್ಲುಗುಂಡಿ, ಮಾಣಿ, ಬಂಟ್ವಾಳ, ಕನ್ಯಾನ, ವಿಟ್ಲ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಾದ ವರದಿಯಾಗಿದೆ.

ಆರೆಂಜ್‌ ಮತ್ತು ಎಲ್ಲೋ ಅಲರ್ಟ್‌
ದ.ಕ. ಜಿಲ್ಲೆಯಲ್ಲಿ ಮಳೆ ಬಿರುಸು ಪಡೆಯುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆಯು ಜು.4ರ ವರೆಗೆ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಈ ವೇಳೆ ಬಿರುಸಿನ ಮಳೆ, ಗಾಳಿ ಮತ್ತು ಸಮುದ್ರದ ಅಬ್ಬರ ಹೆಚ್ಚಿರುವ ನಿರೀಕ್ಷೆ ಇದೆ.

ಬಂಟ್ವಾಳ ತಾಲೂಕಿನಲ್ಲಿ ಅಧಿಕ ಮಳೆ
ಬಂಟ್ವಾಳ ತಾಲೂಕಿನಲ್ಲಿ ಅತ್ಯಧಿಕ ಮಳೆಯಾಗಿದೆ. ದ.ಕ. ಜಿಲ್ಲೆಗೆ ಹೋಲಿಕೆ ಮಾಡಿದರೆ ಬಂಟ್ವಾಳ ತಾಲೂಕಿನಲ್ಲಿ 108.9 ಮಿ.ಮೀ., ಮಂಗಳೂರಿನಲ್ಲಿ ಒಂದೇ ದಿನ 100.9 ಮಿ.ಮೀ. ಮಳೆಯಾಗಿದೆ. ಉಳಿದಂತೆ ಬೆಳ್ತಂಗಡಿ ತಾಲೂಕಿನಲ್ಲಿ 61.4 ಮಿ.ಮೀ., ಪುತ್ತೂರಿನಲ್ಲಿ 92.9 ಮಿ.ಮೀ., ಸುಳ್ಯದಲ್ಲಿ 74.7 ಮಿ.ಮೀ., ಮೂಡುಬಿದಿರೆಯಲ್ಲಿ 86.1 ಮಿ.ಮೀ. ಮತ್ತು ಕಡಬದಲ್ಲಿ 70.9 ಮಿ.ಮೀ. ಮಳೆಯಾದ ವರದಿಯಾಗಿದೆ.

ಮಳೆಯಿಂದ ಹಾನಿ
ಮಳೆಗೆ ಜಿಲ್ಲೆಯಲ್ಲಿ 74 ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದ್ದು ಸುಮಾರು 8.542 ಲಕ್ಷ ರೂ. ನಷ್ಟ ಉಂಟಾಗಿದೆ. 2.34 ಕಿ.ಮೀ.ನಷ್ಟು ವಿದ್ಯುತ್‌ ತಂತಿ ಹಾನಿಯಿಂದ 1.56 ಲಕ್ಷ ರೂ. ನಷ್ಟ ಉಂಟಾಗಿದೆ. ಒಂದು ಸೇತುವೆಗೆ ಹಾನಿಯಾಗಿ 15 ಲಕ್ಷ ರೂ., 5.80 ಕಿ.ಮೀ.ನಷ್ಟು ಗ್ರಾಮೀಣ ರಸ್ತೆಗೆ ಹಾನಿಯುಂಟಾಗಿ 50 ಲಕ್ಷ ರೂ. ಹಾನಿಯಾಗಿದೆ. ಮಂಗಳೂರಿನಲ್ಲಿ 7, ಕಡಬದಲ್ಲಿ 1, ಮೂಲ್ಕಿಯಲ್ಲಿ 1 ಮತ್ತು ಉಳ್ಳಾಲದಲ್ಲಿ 3 ಮನೆಗಳು ಸೇರಿ ಒಟ್ಟು 12 ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 80 ಮನೆ ಗಳಿಗೆ ಭಾಗಶಃ ಹಾನಿಯಾಗಿದೆ. ಒಟ್ಟು 42.86 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.ಮಳೆಯಿಂದಾಗಿ ಉಳ್ಳಾಲದಲ್ಲಿ ಓರ್ವನಿಗೆ ಗಾಯವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Advertisement

ತೆಂಗಿನಕಾಯಿ ಹಿಡಿಯಲು ಹೋಗಿ ವ್ಯಕ್ತಿ ನೀರುಪಾಲು
ಕುಂಬಳೆ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಕ ನಷ್ಟವಾಗಿದೆ. ಬೇಡಡ್ಕ ಮುಳ್ಳಂಗೋಡು ಪಾರಕ್ಕಡವಿನ ಭೂತಾರಾಧಕ ಕೆ. ಬಿ. ಬಾಲಚಂದ್ರನ್‌ ಎಂಬವರು ಪುತ್ರ ವಿಪಿನ್‌ ಜತೆ ಹೊಳೆ ನೀರಲ್ಲಿ ತೇಲಿ ಬಂದ ತೆಂಗಿನ ಕಾಯಿ ಹಿಡಿಯಲು ಮುಂದಾಗಿ ಹೊಳೆಗೆ ಜಾರಿ ಬಿದ್ದ ಘಟನೆ ನಡೆದಿದೆ. ಅಗ್ನಿ ಶಾಮಕ ದಳ ಮತ್ತು ಪೊಲೀಸರು ಆಗಮಿಸಿ ಶೋಧ ನಡೆಸಿದರೂ ಪತ್ತೆಯಾಗಿಲ್ಲ.

ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದ್ದು ಕುದ್ರೆಪ್ಪಾಡಿ ಕ್ಷೇತ್ರವೊಂದರ ಅಂಗಣ ಮತ್ತು ಉಪ್ಪಳ ಬಸ್‌ ನಿಲ್ದಾಣದಲ್ಲಿ ನೀರು ತುಂಬಿದೆ. ಹೆದ್ದಾರಿ ಷಟ³ಥ ರಸ್ತೆಯ ಕೆಲವು ಕಡೆ ನೀರು ತುಂಬಿ ಕಾಮಗಾರಿಗೆ ಅಡ್ಡಿಯಾಗಿದ್ದು ವಾಹನ ಸಂಚಾರಕ್ಕೆ ತೊಡಕಾಗಿದೆ.

ಉಡುಪಿ ಜಿಲ್ಲೆ: ಹಲವೆಡೆ ಬಿರುಸಿನ ಮಳೆ
ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ ಹಲವೆಡೆ ಬಿರುಸಿನ ಮಳೆಯಾಗಿದೆ. ಕುಂದಾಪುರ, ಕಾರ್ಕಳ, ಕಾಪು, ಉಡುಪಿ, ಹೆಬ್ರಿ, ಬ್ರಹ್ಮಾವರ, ಸಿದ್ದಾಪುರ ಭಾಗದಲ್ಲಿ ಮಳೆ ಸುರಿದಿದೆ. ಸಂಜೆಯ ಅನಂತರ ಗಾಳಿ ಸಹಿತ ಭಾರೀ ಮಳೆ ಸುರಿದಿದೆ.

ಬ್ರಹ್ಮಾವರ, ಉಡುಪಿ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಸುರಿದಿದ್ದು, ಜಿಲ್ಲೆಯಲ್ಲಿ 81. 7 ಮಿ. ಮೀ ಸರಾಸರಿ ಮಳೆಯಾಗಿದೆ.

ಹವಾಮಾನ ಇಲಾಖೆ ಮತ್ತು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸೂಚನೆಯಂತೆ ಜಿಲ್ಲೆಯ ಕರಾವಳಿ ಭಾಗದಲ್ಲಿ ಜು. 2ರಿಂದ 6ರ ವರೆಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರ ಮೀನುಗಾರರು ಹಾಗೂ ಪ್ರವಾಸಿಗರು ನದಿ ತೀರ ಮತ್ತು ಸಮುದ್ರಕ್ಕೆ ಇಳಿಯದಂತೆ ಎಚ್ಚರ ವಹಿಸುವಂತೆ ಸೂಚನೆ ನೀಡಿದೆ.

ತಗ್ಗು ಪ್ರದೇಶ, ಕೆರೆ, ನದಿತೀರ ಹಾಗೂ ಸಮುದ್ರ ತೀರ ಪ್ರದೇಶಗಳಿಗೆ ಮಕ್ಕಳು ತೆರಳದಂತೆ ಜಾಗ್ರತೆ ವಹಿಸಬೇಕು. ಅಪಾಯಕಾರಿ ವಿದ್ಯುತ್‌ ಕಂಬ ಹಾಗೂ ಮರಗಳ ಕೆಳಗೆ ನಿಲ್ಲದೇ ಸುರಕ್ಷಿತ ಸ್ಥಳಗಳಿಗೆ ತಲುಪಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿ ಇರಬೇಕು ಎಂದು ಜಿಲ್ಲಾಡಳಿತ ಪ್ರಕಟನೆಯಲ್ಲಿ ತಿಳಿಸಿದೆ. ಶುಕ್ರವಾರ ಬೆಳಗ್ಗೆ 8.30ರ ಹಿಂದಿನ 24 ತಾಸು ಉಡುಪಿ 97.6, ಬ್ರಹ್ಮಾವರ 102.9, ಕಾಪು 94.6, ಕುಂದಾಪುರ 78.9, ಬೈಂದೂರು 72.7, ಕಾರ್ಕಳ 67.3, ಹೆಬ್ರಿ 86.7 ಮಿ.ಮೀ. ಮಳೆಯಾಗಿದೆ.

ಮರವಂತೆ: ತೆಂಗಿನ ಮರಗಳು ಸಮುದ್ರಪಾಲು
ಕುಂದಾಪುರ : ಮರವಂತೆಯ ಕರಾವಳಿ ಭಾಗದಲ್ಲಿ ಕಡಲ್ಕೊರೆತ ಮತ್ತಷ್ಟು ತೀವ್ರಗೊಂಡಿದ್ದು, ತೀರದುದ್ದಕ್ಕೂ ಹಲವು ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ಕಡಲ್ಕೊರೆತ ತಡೆಗಾಗಿ ಹಾಕಲಾದ ಕಲ್ಲುಗಳು ಜಾರಿದ್ದು, ಕಡಲು ಸೇರುವ ಭೀತಿ ಎದುರಾಗಿವೆ.

ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಿಂದಾಗಿ ಅಲೆಗಳ ಅಬ್ಬರವು ಜೋರಾಗಿದ್ದು, ಕಡಲ್ಕೊರೆತವು ಬಿರುಸಾಗಿದೆ. ಮೀನುಗಾರರ ಶೆಡ್‌ಗಳು ಕಡಲು ಪಾಲಾಗುವ ಅಪಾಯದಲ್ಲಿದೆ. ಕೊರೆತ ಹೆಚ್ಚಾದಷ್ಟು ಇಲ್ಲಿನ ಮನೆಗಳು, ರಸ್ತೆಗೂ ಅಪಾಯ ತಪ್ಪಿದ್ದಲ್ಲ.

ತಹಶೀಲ್ದಾರ್‌ ಭೇಟಿ
ಶುಕ್ರವಾರ ಮರವಂತೆಯ ಕಡಲ್ಕೊರೆತ ಪ್ರದೇಶಕ್ಕೆ ಬೈಂದೂರಿನ ಪ್ರಭಾರ ತಹಶೀಲ್ದಾರ್‌ ಕಿರಣ್‌ ಜಿ. ಗೌರಯ್ಯ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಹೊಸಾಡಿನ ಕಂಚುಗೋಡು, ಗುಜ್ಜಾಡಿಯ ಬೆಣೆYರೆ ಪ್ರದೇಶದಲ್ಲೂ ಕಡಲ್ಕೊರೆತ ಮುಂದು ವರಿದಿದೆ.

ಕೋಡಿಕನ್ಯಾಣ, ಮಣೂರು ಪಡುಕರೆ
ವ್ಯಾಪಕ ಕಡಲ್ಕೊರೆತ; ಅಪಾಯದಲ್ಲಿ ಮನೆಗಳು, ರಸ್ತೆ
ಕೋಟ: ಕೋಟ ಹೋಬಳಿಯ ಕೋಡಿಕನ್ಯಾಣ ಹಾಗೂ ಮಣೂರು ಪಡುಕರೆಯಲ್ಲಿ ವಿಪರೀತ ಕಡಲ್ಕೊರೆತ ಉಂಟಾಗಿದ್ದು, ವ್ಯಾಪಕ ಹಾನಿಯಾಗುವ ಭೀತಿ ಎದುರಾಗಿದೆ.

ಮಣೂರು ಪಡುಕರೆಯ ಬಿ.ಎ. ಕಾಂಚನ್‌ ರಸ್ತೆಯಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಎರಡು-ಮೂರು ದಿನಗಳ ವರೆಗೆ ಕಡಲಬ್ಬರ ಇದೇ ರೀತಿ ಮುಂದುವರಿದಲ್ಲಿ ಸಂಪರ್ಕ ರಸ್ತೆ ಕಡಿತವಾಗುವ ಭೀತಿ ಇದೆ. ಇಲ್ಲಿನ ಲಿಲ್ಲಿ ಫೆರ್ನಾಂಡಿಸ್‌ ರಸ್ತೆಯಲ್ಲೂ ಕಡಲ್ಕೊರೆತ ಹೆಚ್ಚಿದ್ದು ಸಂಪರ್ಕ ರಸ್ತೆ, ತೀರ ಪ್ರದೇಶದ ಮನೆಗಳು ಅಪಾಯದಲ್ಲಿವೆ.
ಮೀನುಗಾರಿಕೆ ಹಾಗೂ ಬಂದರು ಇಲಾಖೆಯ ಅಧಿಕಾರಿ ಡಯಾಸ್‌ ಅವರು ಶುಕ್ರವಾರ ಪಡುಕರೆಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದರು. ಗ್ರಾ. ಪ. ಸದಸ್ಯ ಭುಜಂಗ ಗುರಿಕಾರ ಉಪಸ್ಥಿತರಿದ್ದರು.

ಕೋಡಿ ಕನ್ಯಾಣದಲ್ಲೂ ಸಮಸ್ಯೆ
ಕೋಡಿ ಗ್ರಾ.ಪಂ. ವ್ಯಾಪ್ತಿಯ ಹೊಸಬೆಂಗ್ರೆ ಮತ್ತು ಕೋಡಿ ಕನ್ಯಾಣದ ವಿವಿಧ ಕಡೆಗಳಲ್ಲಿ ಕಡಲ್ಕೊರೆತ
ಸಂಭವಿಸಿದ್ದು, ಸಂಪರ್ಕ ರಸ್ತೆ ಹಾಗೂ ಮನೆಗಳಿಗೆ ಹಾನಿಯಾಗುವ ಅಪಾಯವಿದೆ. ಗ್ರಾ. ಪಂ. ಅಧ್ಯಕ್ಷ ಕೆ. ಪ್ರಭಾಕರ ಮೆಂಡನ್‌, ಪಿಡಿಒ ರವೀಂದ್ರರಾವ್‌, ವಿ.ಎ. ಗಿರೀಶ್‌ ಕುಮಾರ್‌, ಗ್ರಾ. ಪಂ. ಸದ್ಯಸ್ಯ ಕೃಷ್ಣ ಪೂಜಾರಿ ಪಿ., ಸತೀಶ್‌ ಜಿ. ಕುಂದರ್‌, ಗೀತಾ ಖಾರ್ವಿ ಮುಂತಾದವರು ಸ್ಥಳ ಪರಿಶೀಲನೆ ನಡೆಸಿ ಬ್ರಹ್ಮಾವರ ತಹಶೀಲ್ದಾರರಿಗೆ ವರದಿ ನೀಡಿದರು.

ಸಮಸ್ಯೆ ಪರಿಹಾರಕ್ಕೆ ಮನವಿ
ಮಣೂರು- ಪಡುಕರೆಯಲ್ಲಿ ನೂರಕ್ಕೂ ಹೆಚ್ಚು ಮನೆಗಳು ಹಾಗೂ ರಸ್ತೆ ಅಪಾಯದಲ್ಲಿದ್ದು, ಕೋಡಿಕನ್ಯಾಣದಲ್ಲೂ ಸಾಕಷ್ಟು ಮನೆಗಳು ಅಪಾಯದಲ್ಲಿವೆ. ಈ ಬಗ್ಗೆ ಶೀಘ್ರ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next