Advertisement

ಖಾಸಗಿ ವೈದ್ಯರಿಂದ ರಾಜ್ಯಾದ್ಯಂತ ಪ್ರತಿಭಟನೆ ಬಿಸಿ: ಮುಷ್ಕರಕ್ಕೆ 2 ಬಲಿ

07:27 AM Nov 04, 2017 | |

ಬೆಂಗಳೂರು: ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ಕಾಯ್ದೆ ತಿದ್ದುಪಡಿ ಪ್ರಸ್ತಾವದಲ್ಲಿನ ಕೆಲ ಅಂಶ ಕೈಬಿಡುವಂತೆ ಒತ್ತಾಯಿಸಿ ಖಾಸಗಿ ಆಸ್ಪತ್ರೆ ವೈದ್ಯರು ಶುಕ್ರವಾರ 24 ಗಂಟೆಗಳ ಕಾಲ ಹೊರರೋಗಿ ಚಿಕಿತ್ಸೆ ಸೇವೆ ಸ್ಥಗಿತಗೊಳಿಸಿದರು. ಪರಿಣಾಮ ರಾಜ್ಯಾದ್ಯಂತ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಇದರಿಂದಾಗಿ ರೋಗಿಗಳು ಪರದಾಡುವಂತಾಯಿತು.

Advertisement

ಮುಷ್ಕರದ ಹಿನ್ನೆಲೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ದೊರಕದೆ ಬಳ್ಳಾರಿಯಲ್ಲಿ ವಕೀಲರೊಬ್ಬರು ಅಸುನೀಗಿದರೆ, ಬೀದರ್‌ನಲ್ಲಿ ಹಾವು ಕಚ್ಚಿದ್ದ ಬಾಲಕಿಯೊಬ್ಬಳು ಚಿಕಿತ್ಸೆ ಸಿಗದೆ ಕೊನೆಯುಸಿರೆಳೆದಿದ್ದಾಳೆ. ಈ ಮಧ್ಯೆ, ಬಾಗಲಕೋಟೆಯಲ್ಲಿ ತುಂಬು ಗರ್ಭಿಣಿಯೊಬ್ಬಳು ತೊಂದರೆಗೆ ಸಿಲುಕಿದ್ದು, ಮುಷ್ಕರದ ನಡುವೆಯೂ ವೈದ್ಯರೊಬ್ಬರು ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಇದೇ ವೇಳೆ, ರಾಜ್ಯದ ಹಲವೆಡೆ ರೋಗಿಗಳು ಸೂಕ್ತ ಚಿಕಿತ್ಸೆಗಾಗಿ ಪರದಾಡುತ್ತಿದ್ದ ದೃಶ್ಯ ಕಂಡು ಬಂತು.

ವೈದ್ಯರ ಮುಷ್ಕರದ ಬಿಸಿ ಗ್ರಾಮೀಣಕ್ಕಿಂತ ನಗರ ಪ್ರದೇಶಗಳಲ್ಲೇ ಹೆಚ್ಚಾಗಿ ತಟ್ಟಿದಂತಿತ್ತು. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಖಾಸಗಿ ಆಸ್ಪತ್ರೆಗಳು, ನರ್ಸಿಂಗ್‌ ಹೋಮ್‌ಗಳ ಓಪಿಡಿ ವಿಭಾಗದ ಸೇವೆ ಸ್ಥಗಿತಗೊಂಡಿತ್ತು. ಸಣ್ಣಪುಟ್ಟ ಕ್ಲಿನಿಕ್‌ ಗಳು, ಹೆಲ್ತ್‌ಕೇರ್‌ ಸೆಂಟರ್‌ಗಳು ಬಹುತೇಕ ಬಾಗಿಲು ಮುಚ್ಚಿದ್ದವು. ರಾಜ್ಯದಲ್ಲಿನ 800 ಪ್ರಾಥಮಿಕ ಆರೋಗ್ಯ ಕೇಂದ್ರಗಳಷ್ಟೇ ದಿನದ 24
ಗಂಟೆ ಕಾರ್ಯ ನಿರ್ವಹಿಸುತ್ತಿದ್ದು, ಉಳಿದವು ಹಗಲು ಹೊತ್ತಿನಲ್ಲಷ್ಟೇ ತೆರೆದಿರುವುದರಿಂದ ಸಂಜೆ ವೇಳೆ ಚಿಕಿತ್ಸೆಗಾಗಿ ಕೆಲವೆಡೆ ಪರದಾಡಿದ್ದು ಕಂಡು ಬಂತು. ಔಷಧಾಲಯಗಳು ಕೆಲವೆಡೆ ಮುಚ್ಚಿದ್ದ  ರಿಂದ ತೊಂದರೆ ಉಂಟಾಗಿತ್ತು. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಶುಕ್ರವಾರ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದವರ ಸಂಖ್ಯೆಯಲ್ಲಿ ತುಸು ಏರಿಕೆಯಾದರೂ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿ ದ್ದಾರೆ. ಈ ಮಧ್ಯೆ, 24 ಗಂಟೆ ಸೇವೆ ಸ್ಥಗಿತಗೊಳಿಸಿ ನಡೆಸಿದ ಹೋರಾಟಕ್ಕೆ ಸರ್ಕಾರದಿಂದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರು ತೀವ್ರ ಸ್ವರೂಪದ ಹೋರಾಟ
ನಡೆಸಲು ಚಿಂತಿಸಿದ್ದಾರೆ. 

ಸಕಾಲಕ್ಕೆ ಚಿಕಿತ್ಸೆ ಸಿಗದೇ ಬಾಲಕಿ ಸಾವು: ಬೀದರ
ತಾಲೂಕಿನ ಚಾಂಬೋಳ ಗ್ರಾಮದಲ್ಲಿ ಹಾವು ಕಚ್ಚಿ ಆಸ್ಪತ್ರೆ ಸೇರಿದ್ದ ಶಾಬಾನಾ (16) ಎಂಬ ಬಾಲಕಿ ವೈದ್ಯರ ಮುಷ್ಕರ ಹಿನ್ನೆಲೆಯಲ್ಲಿ ಚಿಕಿತ್ಸೆ ಸಿಗದೆ ಕೊನೆಯುಸಿರೆಳೆದಿದ್ದಾಳೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿತ್ತು. ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆ, ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮುಷ್ಕರ ಹಿನ್ನೆಲೆಯಲ್ಲಿ ವೈದ್ಯರು ಗೈರು ಹಾಜರಾಗಿದ್ದರು. ನರ್ಸ್‌ಗಳು ಬಾಲಕಿಯನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಘಟನೆ ಖಂಡಿಸಿ ಶಬಾನಾ ಕುಟುಂಬದವರು ಪ್ರತಿಭಟನೆ ನಡೆಸಿದರು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಚಿಕಿತ್ಸೆ ಸಿಗದೆ ವಕೀಲ ಸಾವು: ಬಂದ್‌ ಹಿನ್ನೆಲೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ಬಳ್ಳಾರಿಯಲ್ಲಿ ವಕೀಲರೊಬ್ಬರು ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ಮರಡೋಣಿ ಗ್ರಾಮದ ರಂಗನಗೌಡ (31) ಎಂಬುವರು ಶುಕ್ರವಾರ ಬೆಳಗ್ಗೆ 11ರ ಸುಮಾರಿಗೆ ವಕೀಲರ ಸಂಘದ ಕಚೇರಿಯಲ್ಲಿ ಹಠಾತ್‌ನೆ ಕುಸಿದು ಬಿದ್ದರು. ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ನ್ಯಾಯಾಲಯದ ಎದುರುಗಡೆ ಇರುವ ಇಂದಿರಾ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಮುಷ್ಕರ ಕೈಗೊಂಡಿದ್ದರಿಂದ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದರು. ವಿಮ್ಸ್‌ಗೆ ಕರೆದುಕೊಂಡು ಹೋದರು. ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.

Advertisement

ಬೇಡಿಕೆಯೇನು?
ಕೆಪಿಎಂಇ ಕಾಯ್ದೆ ತಿದ್ದುಪಡಿ ಪ್ರಸ್ತಾವದಲ್ಲಿ ವೈದ್ಯರಿಗೆ ಮಾರಕವಾಗಿರುವ ಕೆಲ ಅಂಶಗಳನ್ನು ಕೈಬಿಡಬೇಕು ಎಂಬುದು ಮುಷ್ಕರ ನಿರತರ ಆಗ್ರಹ. ಈ ಹಿನ್ನೆಲೆಯಲ್ಲಿ ಐಎಂಎ ಕರ್ನಾಟಕ ಶಾಖೆ ನೇತೃತ್ವದಲ್ಲಿ ನಾನಾ ಖಾಸಗಿ ಆಸ್ಪತ್ರೆಗಳ ವೈದ್ಯರು ಶುಕ್ರವಾರ ಬೆಳಗ್ಗೆ 8ರಿಂದ ಶನಿವಾರ ಬೆಳಗ್ಗೆ 8ರವರೆಗೆ ಹೊರರೋಗಿ ವಿಭಾಗದ ಸೇವೆ ಸ್ಥಗಿತಗೊಳಿಸಿ ಹೋರಾಟಕ್ಕಿಳಿದಿದ್ದರು.

ಬೇಜವಾಬ್ದಾರಿತನದ್ದು
ಸಾಮಾನ್ಯ ಜನರಿಗೆ ತೊಂದರೆಯಾಗುವಂತೆ ವೈದ್ಯರು ಖಾಸಗಿ ಆಸ್ಪತ್ರೆಗಳ ಹೊರ ರೋಗಿ ಹಾಗೂ ಕ್ಲಿನಿಕ್‌ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದು ಅತ್ಯಂತ ಬೇಜವಾಬ್ದಾರಿ ತನದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ತಿದ್ದುಪಡಿ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ
ಮುಷ್ಕರ ನಡೆಸುವುದು ಸೂಕ್ತವೆನಿಸದು. ವಿಧೇಯಕ ಸಿದ್ಧವಾಗಿದ್ದು, ಜಂಟಿ ಆಯ್ಕೆ ಸಮಿತಿ ಮುಂದಿದೆ. ಈ ಕುರಿತು ಚರ್ಚೆ ನಡೆಯ ಬೇಕಿದೆ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್‌ ಸೇಠ್, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ರಾಜ್ಯದಲ್ಲಿ ಯಾವುದೇ ರೋಗಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು.

ಪರದಾಡಿದ ಗರ್ಭಿಣಿ: ಮಾನವೀಯತೆ ತೋರಿದ ವೈದ್ಯ
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಚಿಕ್ಕಕೊಡಗಲಿ ತಾಂಡಾದ ಚೈತ್ರಾ ಎಂಬುವರು ಹೆರಿಗೆ ನೋವಿನಿಂದ ನರಳುತ್ತಿದ್ದು, ಆ್ಯಂಬುಲೆನ್ಸ್‌ ನಲ್ಲಿ ಇಳಕಲ್‌ನ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಆಸ್ಪತ್ರೆಗಳು ಬಂದ್‌ ಆಗಿದ್ದವು. ಬಳಿಕ, ಬಾಗಲಕೋಟೆ ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಗೆ ಕರೆತರಲಾಯಿತು. ಮಾನವೀಯತೆ ತೋರಿದ ಅಲ್ಲಿನ ವೈದ್ಯ ಡಾ.ಮನೋಹರ ಟಂಕಸಾಲಿ ಚಿಕಿತ್ಸೆ ನೀಡಿದ್ದರಿಂದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ವೈದ್ಯ ಡಾ.ಮನೋಹರ ಟಂಕಸಾಲಿ ಅವರ ಹೆಸರನ್ನಿಡಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.

ಎಲ್ಲಿಯೂ ಯಾವುದೇ ರೀತಿಯಲ್ಲಿ ರೋಗಿಗಳಿಗೆ ತೊಂದರೆಯಾಗಿರುವ ಬಗ್ಗೆ ಮಾಹಿತಿ ಇಲ್ಲ. ರಜೆಯಲ್ಲಿದ್ದ ವೈದ್ಯರು, ಅರೆವೈದ್ಯ ಸಿಬ್ಬಂದಿಯೂ ಕರ್ತವ್ಯಕ್ಕೆ ಹಾಜರಾಗಿ ಸೇವೆ ಸಲ್ಲಿಸಿದ್ದಾರೆ. ಈ ಬಗ್ಗೆ ಹಲವು ಜಿಲ್ಲಾ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
 ●ಅಜಯ್‌ ಸೇಠ್, ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ.

‌ುುಷ್ಕರ ಯಶಸ್ವಿಯಾಗಿದೆ. ಇಷ್ಟಾದರೂ ರಾಜ್ಯ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದಿರುವುದು ದುರದೃಷ್ಟಕರ. ಭಾನುವಾರ ರಾಜ್ಯ ಪದಾಧಿಕಾರಿಗಳ ಸಭೆ ನಡೆಸಿ ಅನಿರ್ದಿಷ್ಟಾವಧಿ ಮುಷ್ಕರ ಇಲ್ಲವೇ ಉಗ್ರ ಹೋರಾಟ
ನಡೆಸಲು ನಿರ್ಧಾರ ಕೈಗೊಳ್ಳಲಾಗುವುದು.

 ●ಡಾ.ಬಿ.ವೀರಣ್ಣ, ಐಎಂಎ ಕರ್ನಾಟಕ ಘಟಕದ ಗೌರವ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next