ಕಾಸರಗೋಡು: ಬಿರುಸಿನ ಗಾಳಿಮಳೆಯ ಹಿನ್ನೆಲೆಯಲ್ಲಿ ಮಂಗಳವಾರ ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಕೇಂದ್ರ ಹವಾಮಾನ ನಿಗಾ ಕೇಂದ್ರ ರೆಡ್ ಅಲೆರ್ಟ್ ಘೋಷಿಸಿದೆ.
ಜು.24ರಂದು ಕಾಸರಗೋಡು, ಕಣ್ಣೂರು, ಕೋಯಿಕೋಡ್ ಜಿಲ್ಲೆಗಳಲ್ಲಿ ಆರೆಂಜ್ ಅಲೆರ್ಟ್ ಘೋಷಿಸಲಾಗಿದೆ.
ರೆಡ್ ಅಲೆರ್ಟ್ ಘೋಷಿಸಲಾದ ಜಿಲ್ಲೆಗಳಲ್ಲಿ ಅತಿ ಬಿರುಸಿನ (24 ತಾಸುಗಳಲ್ಲಿ 204 ಮಿಮೀಗಿಂತ ಅಧಿಕ) ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಸಾರಲಾಗಿದೆ. ಸರಕಾರಿ ವ್ಯವಸ್ಥೆಗಳು ಮತ್ತು ಸಾರ್ವಜನಿಕರು ಜಾಗ್ರತೆ ಪಾಲಿಸುವಂತೆ, ಪುನರ್ವಸತಿ ಶಿಬಿರಗಳನ್ನು ಸಿದ್ಧ ಪಡಿಸುವಂತೆ ತಿಳಿಸುವ ನಿಟ್ಟಿನಲ್ಲಿ ರೆಡ್ ಅಲೆರ್ಟ್ ಘೋಷಿಸಲಾಗುತ್ತದೆ. ಮುಂದಿನ ದಿನಗಳಲ್ಲೂ ಬಿರುಸಿನ ಗಾಳಿಮಳೆಯಾಗುವ ಹಿನ್ನೆಲೆಯಲ್ಲಿ ನೆರೆ ಸಹಿತ ಪ್ರಕೃತಿ ವಿಕೋಪ ತಲೆದೋರುವ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದೆ.
ಆರೆಂಜ್ ಅಲೆರ್ಟ್ ಘೋಷಿಸಿರುವ ಜಿಲ್ಲೆಗಳಲ್ಲಿ ಕೆಲವು ಪ್ರದೇಶಗಳಲ್ಲಿ ಬಿರುಸಿನ (115 ಮಿಮೀ ವರೆಗಿನ), ಅತಿ ಬಿರುಸಿನ(115 ಮಿಮೀ ಗಿಂತ 204.5 ಮಿಮೀ ವರೆಗಿನ) ಮಳೆ ಸುರಿಯುವ ಸಾಧ್ಯತೆಗಳಿವೆ.
ಜು.25ರಂದು ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲೆರ್ಟ್ ಘೋಷಿಸಲಾಗಿದೆ.
ಶಿಕ್ಷಣಾಲಯಗಳಿಗೆ ರಜೆ
ಬಿರುಸಿನ ಗಾಳಿಮಳೆಯ ಪರಿಣಾಮ ಜಿಲ್ಲೆಯಲ್ಲಿ ರೆಡ್ ಅಲೆರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ಪ್ರೊಫೆಷನಲ್ ಕಾಲೇಜುಗಳ ಸಹಿತ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಮಂಗಳವಾರ ರಜೆ ಸಾರಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಅಂಗನವಾಡಿಗಳಿಗೂ ಈ ರಜೆ ಅನ್ವಯವಾಗಿದೆ ಎಂದವರು ಹೇಳಿದರು.