Advertisement

ಮಳೆ ಅಬ್ಬರಕ್ಕೆ ಕರಾವಳಿ, ಮಲೆನಾಡು ತತ್ತರ

06:00 AM Jun 12, 2018 | Team Udayavani |

ಬೆಂಗಳೂರು: ರಾಜ್ಯದ ವಿವಿಧೆಡೆ ವರುಣನ ಅಬ್ಬರ ಮುಂದುವರಿದಿದೆ. ಸೋಮವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಕರಾವಳಿ ಹಾಗೂ ಒಳನಾಡಿನಲ್ಲಿ ಮಳೆಯಾಯಿತು.

Advertisement

ಭಾಗಮಂಡಲದಲ್ಲಿ ರಾಜ್ಯದಲ್ಲೇ ಅಧಿಕವೆನಿಸಿದ 17 ಸೆಂ.ಮೀ. ಮಳೆ ಸುರಿಯಿತು. ಇದೇ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಬಿದ್ದ ಮಳೆ ಪ್ರಮಾಣ ಹೀಗಿತ್ತು(ಸೆಂ.ಮೀ.ಗಳಲ್ಲಿ): ಕ್ಯಾಸಲ್‌ರಾಕ್‌, ಸಕಲೇಶಪುರ ತಲಾ 15, ಜಗಲ್‌ಪೇಟ್‌, ಆಗುಂಬೆ ತಲಾ 14, ಕೊಟ್ಟಿಗೆಹಾರ 13, ಕೊಲ್ಲೂರು, ಶೃಂಗೇರಿ, ಕಮ್ಮರಡಿ ತಲಾ 11, ಧರ್ಮಸ್ಥಳ 10, ಕದ್ರಾ, ಕಳಸ,ಕೊಪ್ಪ ತಲಾ 9, ಹಳಿಯಾಳ, ಖಾನಾಪುರ, ಲೋಂಡ, ಪೊನ್ನಂಪೇಟೆ ತಲಾ 8, ಮೂಡಬಿದಿರೆ, ಮಂಚಿಕೇರಿ, ಮಡಿಕೇರಿ, ತಾಳಗುಪ್ಪದಲ್ಲಿ ತಲಾ 7 ಸೆಂಟಿ ಮೀಟರ್‌ ಮಳೆಯಾಗಿದೆ. ಬುಧವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹೆಚ್ಚಿನೆಡೆ ಹಾಗೂ ಉತ್ತರ ಒಳನಾಡಿನ ಹಲವೆಡೆ ಮಳೆಯಾಗಲಿದೆಯೆಂದು ಹವಾಮಾನ ಕಚೇರಿ ಪ್ರಕಟಣೆ ತಿಳಿಸಿದೆ.

ಮಲೆನಾಡು ಹಾಗೂ ಪಶ್ಚಿಮಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರ ಪರಿಣಾಮ ತುಂಗೆ, ಭದ್ರಾ, ಶರಾವತಿ ಸೇರಿ ಶಿವಮೊಗ್ಗ ಜಿಲ್ಲೆಯ ಬಹುತೇಕ ಎಲ್ಲ ನದಿಗಳು ತುಂಬಿ ಹರಿಯತೊಡಗಿವೆ.

ಕಳೆದ ಮೂರ್‍ನಾಲ್ಕು ದಿನಗಳಿಂದ ತುಂಗಾ ಜಲಾನಯನ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಸಮೀಪದ ಗಾಜನೂರಿನ ತುಂಗಾ ಜಲಾಶಯ ಈಗಾಗಲೇ ಸಂಪೂರ್ಣ ಭರ್ತಿಯಾಗಿದೆ.

ಜಲಾಶಯಕ್ಕೆ 26,843 ಕ್ಯೂಸೆಕ್‌ನಷ್ಟು ನೀರು ಹರಿದುಬರುತ್ತಿದೆ. ಅಣೆಕಟ್ಟೆಯಿಂದ ಸುಮಾರು 26,808 ಕ್ಯೂಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ.ತುಂಗಾ ನದಿ ಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು,ಶಿವಮೊಗ್ಗದ ಕೋರ್ಪಲಯ್ಯ ಛತ್ರದ ಬಳಿ ಇರುವ ಮಂಟಪ ಮುಕ್ಕಾಲು ಭಾಗ ಮುಳುಗಿದೆ. ಭದ್ರಾ ಜಲಾನಯನ ವ್ಯಾಪ್ತಿಯಲ್ಲೂ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಲಿಂಗನಮಕ್ಕಿ
ಜಲಾನಯನ ಪ್ರದೇಶದಲ್ಲೂ ವ್ಯಾಪಕ ಮಳೆಯಾಗುತ್ತಿರುವುದರ ಪರಿಣಾಮ ಶರಾವತಿ ನದಿ ಒಳಹರಿವಿನ ಪ್ರಮಾಣದಲ್ಲೂ ಏರಿಕೆಯಾಗಿದೆ.

Advertisement

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಬ್ಟಾಳೆ ಸೇತುವೆ ನೀರಿನಲ್ಲಿ ಸಂಪೂರ್ಣ ಮುಳುಗಿದ್ದು, ಕಳಸ-ಹೊರನಾಡು ರಸ್ತೆ ಸಂಪರ್ಕ ಕಡಿತಗೊಂಡಿದೆ.ನಿರಂತರ ಮಳೆಯಿಂದ ತುಂಗಾ, ಭದ್ರಾ ಹೇಮಾವತಿ ನದಿಗಳಲ್ಲಿ ನೀರಿನ ಮಟ್ಟ ಏರಿದೆ. ಭದ್ರಾ ನದಿ ತುಂಬಿ ಹರಿದ ಪರಿಣಾಮ ಹೆಬ್ಟಾಳೆ ಸೇತುವೆ ಮುಳುಗಿದೆ.

ಇದರಿಂದ ಒಂದು ತಾಸಿಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತ್ತು. ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ ಹಾಗೂ ನರಸಿಂಹರಾಜಪುರ ತಾಲೂಕುಗಳಲ್ಲಿ ಮಳೆಯೊಂದಿಗೆ ಗಾಳಿಯೂ ಜೋರಾಗಿ ಬೀಸುತ್ತಿರುವುದರಿಂದ
ಹಲವೆಡೆಗಳಲ್ಲಿ ಮರ, ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ.

ಮೂಡಿಗೆರೆ ತಾಲೂಕಿನ ಬಣಕಲ್‌ ಹೋಬಳಿ ಕೂಳೂರು ಗ್ರಾಮದ ವೇದಾವತಿ ಎಂಬುವವರ ಮನೆಯ ಗೋಡೆ ಕುಸಿದು ಸುಮಾರು 30 ಸಾವಿರ ರೂ. ನಷ್ಟವಾಗಿದೆ. ಗೋಣಿಬೀಡು ಗ್ರಾಮದ ತಿಮ್ಮೇಗೌಡ ಎಂಬುವವರ ಮನೆಯ ಕಾಂಪೌಂಡ್‌ ಗೋಡೆ ಬಿದ್ದಿದ್ದರೆ, ಕೊಪ್ಪ ತಾಲೂಕು ಕಲಗೋಡು ಗ್ರಾಮದ ಅಣ್ಣೇಗೌಡ ಎಂಬುವವರ ಮನೆಗೆ ಹಾನಿಯಾಗಿದೆ. ಸಕಲೇಶಪುರ ತಾಲೂಕಿನಲ್ಲಿ ಕಳೆದ 5 ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಗೆ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದ ಪರಿಣಾಮ ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಚಾರ ಸ್ಥಗಿತಗೊಂಡಿತ್ತು. ಪಶ್ಚಿಮಘಟ್ಟದಲ್ಲಿರುವ ಯಡಕುಮರಿ ರೈಲ್ವೆ ನಿಲ್ದಾಣದ ಸಮೀಪ ಸೋಮವಾರ ಮುಂಜಾನೆ 8 ಗಂಟೆಯ ವೇಳೆ ಒಂಬತ್ತು ಸ್ಥಳದಲ್ಲಿ ಬೃಹತ್‌ ಗಾತ್ರದ ಗುಡ್ಡ ರೈಲ್ವೆ ಹಳಿಯ ಮೇಲೆ ಕುಸಿದ ಪರಿಣಾಮ ಈ ಭಾಗದಲ್ಲಿ ಸಂಚರಿಸುವ ಐದಕ್ಕೂ ಹೆಚ್ಚಿನ ಗೂಡ್ಸ್‌ ಹಾಗೂ ಎರಡು ಪ್ರಯಾಣಿಕರ ರೈಲು ಸಂಚಾರವನ್ನು ತಡೆ ಹಿಡಿಯಲಾಗಿದ್ದು ತೆರವು ಕಾರ್ಯಚರಣೆ ವೇಗವಾಗಿ ನಡೆಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗಿದೆ. ಸುಬ್ರಹ್ಮಣ್ಯದಲ್ಲಿ ಸುರಿದ ಜಡಿ ಮಳೆಯಿಂದಾಗಿ ಕುಮಾರಧಾರ ಸ್ನಾನಘಟ್ಟ ಮುಳುಗಿದೆ. ಭಕ್ತರು ನದಿ ದಡದಲ್ಲೇ ತೀರ್ಥ ಸ್ನಾನ ಮಾಡಿದರು. ಭಕ್ತರು ನದಿಗೆ ಇಳಿಯದಂತೆ ಸುಬ್ರಹ್ಮಣ್ಯ ಪೊಲೀಸರು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದರು. ಕಡಬ ಪರಿಸರದಲ್ಲಿ ಎರಡು ಸೇತುವೆಗಳು ಮುಳುಗಡೆಯಾಗಿವೆ.

ಬೆಳ್ತಂಗಡಿ, ಉಜಿರೆ, ಧರ್ಮಸ್ಥಳದಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಗ್ಗೆ ಭಾರೀ ಮಳೆಯಾಗಿದೆ. ಮಳೆ ಹಿನ್ನೆಲೆಯಲ್ಲಿ ತಾಲೂಕಿನ ಕೆಲವು ಖಾಸಗಿ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿತ್ತು.

ನದಿಯಲ್ಲಿ ನೀರಿನ ಹರಿವು ಹೆಚ್ಚಿ ಕಡಬದ ಹೊಸಮಠ ಸೇತುವೆ ಹಾಗೂ ಬಿಳಿನೆಲೆ ಸೇತುವೆ ಧಾರಾಕಾರ ಮಳೆಗೆ ಮುಳುಗಿದೆ. ಚಾರ್ಮಾಡಿ ಘಾಟ್‌ ಬಳಿ ಗುಡ್ಡ ಕುಸಿತದಿಂದಾಗಿ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.

ಬೀದರ್‌ ಜಿಲ್ಲೆ ಭಾಲ್ಕಿ ಸಮೀಪ ಸೇತುವೆ ಕೆಳರಸ್ತೆಯಲ್ಲಿ ಚಲಿಸುತ್ತಿದ್ದ ಕ್ರೂಜರ್‌ ವಾಹನ ಹರಿಯುವ ನೀರಿನ ರಭಸಕ್ಕೆ ಹಳ್ಳಕ್ಕೆ ಬಿದ್ದಿದೆ. ವಾಹನದಲ್ಲಿ ಚಾಲಕನನ್ನು ಹೊರತುಪಡಿಸಿ ಯಾರೂ ಇಲ್ಲದ್ದರಿಂದ ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿದಂತಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯ ಬಾರ್ಗಲ್‌ ಬಳಿ ಮಳೆಯಿಂದ ದಾರಿ ಕಾಣದೆ ವಾಹನಗಳ ಮಧ್ಯೆ ಸರಣಿ ಅಪಘಾತವಾಗಿ ನಾಲ್ವರು ಗಾಯಗೊಂಡಿದ್ದಾರೆ.

ಜೋಗದಲ್ಲೀಗ ಜಲಧಾರೆ!
ಸಾಗರ
: ಮಾನ್ಸೂನ್‌ ಒಂದು ವಾರ ಮೊದಲೇ ಆರಂಭಗೊಂಡಿದ್ದರಿಂದ ನೀರಿಲ್ಲದೆ ಬಣಗುಡುತ್ತಿದ್ದ
ಜಗತøಸಿದ್ಧ ಜೋಗ ಜಲಪಾತಕ್ಕೆ ಈಗ ಜೀವಕಳೆ ಬರಲಾರಂಭಿಸಿದೆ. ರಾಜ, ರಾಣಿ, ರೋರರ್‌, ರಾಕೆಟ್‌
ಎಲ್ಲ ಟಿಸಿಲುಗಲ್ಲೂ ನೀರು ಧುಮ್ಮುಕ್ಕುತ್ತಿದ್ದು ಪ್ರವಾಸಿಗರನ್ನು ಕರೆಯುತ್ತಿದೆ. ಮಳೆ ಆಗುತ್ತಿರುವುದರಿಂದ ಜೋಗದತ್ತ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ.

4 ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ
ಭಾರೀ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ 4 ತಾಲೂಕುಗಳಲ್ಲಿ ಶಾಲಾ, ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿತ್ತು. ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ ಹಾಗೂ ನರಸಿಂಹರಾಜಪುರ ತಾಲೂಕುಗಳಲ್ಲಿ ಮಂಗಳವಾರವೂ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಆದೇಶಿಸಿದ್ದಾರೆ. ಸೋಮವಾರ ಬೆಳಗ್ಗೆ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ವಿಷಯ ತಿಳಿಯದೆ ಶಾಲಾ, ಕಾಲೇಜುಗಳಿಗೆ ಬಂದಿದ್ದ ಮಕ್ಕಳು ಮಳೆಯಲ್ಲಿ ಸಿಲುಕಿ ವಾಪಸ್  ಮನೆಗೆ ತೆರಳಲು ತೀವ್ರ ತೊಂದರೆ ಅನುಭವಿಸುವಂತಾಗಿತ್ತು.

ಜಲಾಶಯ ನೀರಿನಮಟ್ಟ
ಇಂದಿನ ಮಟ್ಟ ಗರಿಷ್ಠ ಮಟ್ಟ
ಲಿಂಗನಮಕ್ಕಿ 1754.25 ಅಡಿ 1819 ಅಡಿ
ಕೆಆರ್‌ಎಸ್‌ 80.70 ಅಡಿ 124.80 ಅಡಿ
ಆಲಮಟ್ಟಿ 508.7ಮೀ 519.600 ಮೀ.
ತುಂಗಭದ್ರಾ 1581.14 ಅಡಿ 1633 ಅಡಿ

Advertisement

Udayavani is now on Telegram. Click here to join our channel and stay updated with the latest news.

Next