Advertisement

ಮಳೆಗೆ ಮಣ್ಣು ಪಾಲಾದ ವಾಣಿಜ್ಯ ಬೆಳೆ

10:45 AM Oct 18, 2021 | Team Udayavani |

ಕಲಬುರಗಿ: ಕಳೆದ ವರ್ಷ ಅಕ್ಟೋಬರ್‌ 12ರಂದು ಸುರಿದ ಶತಮಾನದ ರೌದ್ರಾವತಾರದ ಮಳೆಯನ್ನೂ ಮೀರಿಸುವ ಮಟ್ಟಿಗೆ ಕಳೆದ ತಿಂಗಳಿನಿಂದ ದಿನ ಬಿಟ್ಟು ದಿನ ಸುರಿಯುತ್ತಿರುವುದರಿಂದ ಬಹುತೇಕ ಎಲ್ಲ ಬೆಳೆಗಳು ನೀರಿನಲ್ಲಿ ಮುಳುಗಿ, ಮಣ್ಣು ಪಾಲಾಗಿವೆ.

Advertisement

ಪ್ರಮುಖವಾಗಿ ವಾಣಿಜ್ಯ ಬೆಳೆ ತೊಗರಿ ಸಂಪೂರ್ಣ ಹಾಳಾಗಿದೆ. ಇನ್ನೇನು ಉಳಿದಿದ್ದರೆ ಎತ್ತರ ಪ್ರದೇಶದಲ್ಲಿ ಅಲ್ಪ ಸ್ವಲ್ಪ ಬೆಳೆ ಉಳಿದಿದೆ. ಆದರೆ ಈಗ ಮತ್ತೆ ಸುರಿಯಲಾರಂಭಿಸಿದರೆ ಉಳಿದಿರುವಷ್ಟು ಬೆಳೆಯೂ ಹಾನಿಯಾಗಲಿದ್ದು, ರೈತನಿಗೆ ಬರೀ ದುಡಿಮೆ ಮಾತ್ರ ಎನ್ನುವಂತಾಗಿದೆ.

ವರ್ಷದ ಸರಾಸರಿಗಿಂತ ಶೇ. 30ರಷ್ಟು ಮಳೆ ಹೆಚ್ಚುವರಿ ಆಗಿದೆ. ಇಲ್ಲಿಯ ವರೆಗೆ ಸರಾಸರಿ ಮಳೆ 712 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಈ ಸಲ ಇಲ್ಲಿಯವರೆಗೆ 966 ಮಿ.ಮೀ ಮಳೆಯಾಗಿ ಶೇ. 30ರಷ್ಟು ಹೆಚ್ಚುವರಿ ಮಳೆಯಾಗಿದೆ.

ಕಳೆದ ಎರಡು ದಶಕಗಳಿಂದ ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷ ಮಾತ್ರ ಸರಾಸರಿಗಿಂತ ಹೆಚ್ಚುವರಿ ಮಳೆಯಾಗಿದೆ. ಇದನ್ನು ನೋಡಿದರೆ ಬಿಸಿಲು ನಾಡು ಕಲಬುರಗಿ ಮಳೆನಾಡಾಗುತ್ತಿದೆ ಎಂಬಂತೆ ಭಾಸವಾಗುತ್ತಿದೆ. ಮಳೆ ಸರಾಸರಿ ಹೆಚ್ಚಳದ ಜತೆಗೆ ಮೊದಲು ಮಳೆಬಂದು ತದನಂತರ ನಾಪತ್ತೆಯಾಗಿ, ಆಮೇಲೆ ಸತತ ಮಳೆ ಆಗುತ್ತಿರುವುದರಿಂದ ಬೆಳೆಗಳೆಲ್ಲ ಬುಡಮೇಲು ಆಗುವಂತಾಗಿದೆ. ಕೈಗೆ ಬಂದ ಅಲ್ಪಾವಧಿ ಬೆಳೆಗಳು ಸತತ ಮಳೆಗೆ ಸಿಲುಕಿ ಹಾಳಾಗಿವೆ.

ಪ್ರಮುಖ ವಾಣಿಜ್ಯ ಬೆಳೆ ತೊಗರಿಯಾದರೂ ಕೈಗೆ ಬರುವುದು ಎಂದು ನೇಗಿಲಯೋಗಿ ಬಲವಾಗಿ ನಂಬಿದ್ದ. ಆದರೆ ಆ ನಂಬಿಕೆಯೂ ಈಗ ಹುಸಿಯಾಗಿದೆ. ಜಿಲ್ಲೆಯಾದ್ಯಂತ 5 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ತೊಗರಿ ಬಿತ್ತನೆಯಾಗಿದೆ. ಇದರಲ್ಲಿ 2 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿನ ತೊಗರಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಜಂಟಿ ಸಮೀಕ್ಷೆ ನಂತರ ನಿಖರ ವರದಿ ಸಿಗಲಿದೆ.

Advertisement

ಪರ್ಯಾಯದತ್ತ ಒಲವು

ಈಗ ತೊಗರಿ ಹಾಗೂ ಇತರ ಬೆಳೆಗಳೆಲ್ಲ ನೀರಲ್ಲಿ ನಿಂತು ಒಣಗಿದ್ದರಿಂದ ಮಳೆ ನಿಂತ ಮೇಲೆ ಭೂಮಿ ಸ್ವಲ್ಪ ಒಣಗಿದ ನಂತರ ಹಿಂಗಾರಿಯ ಯಾವುದಾದರೂ ಬೆಳೆ ಬೆಳೆಯಲು ಹರ ಸಾಹಸ ಮಾಡುವಂತಾಗಿದೆ. ಪ್ರಮುಖವಾಗಿ ಹೊಲ ಹಸನು ಮಾಡಲು, ಬೀಜ ಹಾಗೂ ಗೊಬ್ಬರ ಹಾಕಲು ಮತ್ತೆ ಸಾಲ ಮಾಡಬೇಕಿದೆ. ಹಾಳಾದ ಬೆಳೆ ಜಾಗದಲ್ಲಿ ಜೋಳ, ಕುಸುಬೆ, ಕಡಲೆಯನ್ನು ಹಿಂಗಾರಿಯಲ್ಲಿ ಪ್ರಮುಖವಾಗಿ ಬೆಳೆಯಲು ರೈತ ಮನಸ್ಸು ಮಾಡಿದ್ದಾನೆ. ಜೋಳದ ಬೀಜ ಕೊರತೆಯಾಗಲಿಕ್ಕಿಲ್ಲ. ಆದರೆ ಕಡಲೆ ಬೀಜ ಕೊರತೆಯಾಗುವ ಸಾಧ್ಯತೆಗಳಿವೆ. ಕಳೆದ ವರ್ಷಕ್ಕಿಂತ ಕಡಲೆ ದುಪ್ಪಟ್ಟು ಜಮೀನಿನಲ್ಲಿ ಬಿತ್ತನೆಯಾಗಲಿದೆ. ಸುಮಾರು 2 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆಯಾಗುವ ಅಂದಾಜಿದೆ.

ಉದ್ಯೋಗ ಖಾತ್ರಿ ಕೆಲಸಗಳು ನಡೆಯುತ್ತಿಲ್ಲ

ಸತತ ಮಳೆಯಿಂದ ಉದ್ಯೋಗ ಖಾತ್ರಿ ಕೆಲಸಗಳು ನಡೆಯುತ್ತಿಲ್ಲ. ಒಂದು ವೇಳೆ ವ್ಯತ್ಯಯ ಉಂಟಾದಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ನಡೆದು ಕೈಗೆ ಕೂಲಿ ಹಣವಾದರೂ ಬರುತ್ತಿತ್ತು ಎಂದು ಸಣ್ಣ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ನಾಳೆ ಈದ್‌ ಮಿಲಾದ್‌: ಮೆರವಣಿಗೆಗಿಲ್ಲ ಅನುಮತಿ

150 ಮಿ.ಮೀ ಮಳೆ: ತತ್ತರಿಸಿದ ಗ್ರಾಮಗಳು

ತಾಲೂಕಿನ ಐನಾಪುರ ವಲಯದಲ್ಲಿ ಶನಿವಾರ ರಾತ್ರಿ 150 ಮಿ.ಮೀ ದಾಖಲೆ ಮಳೆ ಸುರಿದಿದೆ. ತಾಲೂಕಿನ ಚಿಮ್ಮನಚೋಡ, ಐನಾಪುರ, ಗಡಿಲಿಂಗದಳ್ಳಿ, ಗಡಿಕೇಶ್ವಾರ, ಚಂದನಕೇರಾ, ಹಸರಗುಂಡಗಿ, ಚಿಂಚೋಳಿ, ಕುಂಚಾವರಂ, ಸುಲೇಪೇಟ, ಕೋಡ್ಲಿ, ಭೂಯ್ನಾರ, ಕೊಟಗಾ, ಚೆಂಗಟಾ ಶನಿವಾರ ರಾತ್ರಿ ನಿರಂತರ ಮಳೆ ಸುರಿದಿದೆ. ಕೆಳದಂಡೆ ಮುಲ್ಲಾಮಾರಿ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕ ಮಳೆ ಆಗಿರುವುದರಿಂದ ಜಲಾಶಯದಲ್ಲಿ ಒಳ ಹರಿವು ಉಂಟಾಗಿ ಒಟ್ಟು 3500 ಕ್ಯೂಸೆಕ್‌ ನೀರನ್ನು ಮುಲ್ಲಾಮಾರಿ ನದಿಗೆ ಬಿಡಲಾಗಿದೆ.

ಇದರಿಂದಾಗಿ ಮುಲ್ಲಾಮಾರಿ ನದಿಪಾತ್ರದ ಗ್ರಾಮಗಳಾದ ಚಿಮ್ಮನಚೋಡ, ತಾಜಲಾಪುರ, ಕನಕಪುರ, ಗಾರಂಪಳ್ಳಿ, ಗೌಡನಹಳ್ಳಿ,ನಿಮಾಹೊಸಳ್ಳಿ, ಚಿಂಚೋಳಿ, ಚಂದಾಪುರ, ಪೋಲಕಪಳ್ಳಿ, ಗರಗಪಳ್ಳಿ, ಬುರುಗಪಳ್ಳಿ ಗ್ರಾಮಗಳ ಹತ್ತಿರ ಬ್ಯಾರೇಜ್‌ ಮೇಲೆ ನೀರು ಹರಿದಿದ್ದರಿಂದ ಜನರು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.

ರವಿವಾರ ದಿನವಿಡಿ ಮೋಡ ಕವಿದ ವಾತಾವರಣ ಇದ್ದಿದ್ದರಿಂದ ಬಿಸಿಲು ಬೀಳಲೇ ಇಲ್ಲ. ನಿರಂತರ ಮಳೆಯಿಂದ ಹಿಂಗಾರು ಬಿತ್ತನೆಗೆ ಅಡ್ಡಿಯಾಯಿತು. ಈಗ ಹೊಲಕ್ಕೆ ಹೋಗಿ ಸಮೀಕ್ಷೆ ಮಾಡುವಷ್ಟು ಭೂಮಿ ಒಣಗಿಲ್ಲ. ಇನ್ನೂ ಕೆಸರಿದೆ. ಹೀಗಾಗಿ ವಾರದ ನಂತರ ಬೆಳೆ ಹಾನಿಯ ಜಂಟಿ ಸಮೀಕ್ಷಾ ಕಾರ್ಯ ಶುರುವಾಗಲಿದೆ.

ಕಡಲೆ ಬೀಜವನ್ನು ರೈತ ಸಂಪರ್ಕ ಕೇಂದ್ರದ ಮೂಲಕ ವಿತರಣೆಗೆ ಮುಂದಾಗಲಾಗಿದೆ. ಹಿಂಗಾರಿನಲ್ಲಿ ಒಟ್ಟಾರೆ 3 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಡಾ| ರತೇಂದ್ರನಾಥ ಸುಗೂರ, ಜಂಟಿ ಕೃಷಿ ನಿರ್ದೇಶಕ ಕಂದಾಯ ಸಚಿವರ ವಿಡಿಯೋ ಕಾನ್ಫರೆನ್ಸ್‌ ಅತಿವೃಷ್ಟಿಯಿಂದ ಆಗಿರುವ ಬೆಳೆ ಹಾನಿ ಕುರಿತು ಕಂದಾಯ ಸಚಿವ ಆರ್‌. ಅಶೋಕ ಅ.18ರಂದು ವಿಡಿಯೋ ಕಾನ್ಪರೆನ್ಸ್‌ ನಡೆಸಲಿದ್ದಾರೆ. ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಕೃಷಿ ಜಂಟಿ ನಿರ್ದೇಶಕರೊಂದಿಗೆ ಮಾತನಾಡಿ ಹಾನಿ ವರದಿ ಪಡೆಯಲಿದ್ದಾರೆ. ತೊಗರಿ ಸಂಪೂರ್ಣ ಹಾಳಾಗಿದ್ದರಿಂದ ಈಗೇನಿದ್ದರೂ ಹಿಂಗಾರು ಬಿತ್ತನೆಯಾದ ನಂತರ ಬರುವ ಬೆಳೆಯೇ ಆಧಾರವಾಗಿದೆ.

ಈಗ ತುರ್ತಾಗಿ ಜಂಟಿ ಸಮೀಕ್ಷೆ ಕೈಗೊಂಡು ಶೀಘ್ರ ಪರಿಹಾರ ನೀಡಿದರೆ ಅನುಕೂಲವಾಗುತ್ತದೆ. ಕೇವಲ ಭರವಸೆ ಮಾತುಗಳಲ್ಲೇ ಕಾಲಹರಣ ಆಗದಿರಲಿ. -ಜೆ.ಡಿ. ಪಾಟೀಲ ರೈತ

ತೊಗರಿ ಸಂಪೂರ್ಣ ಹಾಳಾಗಿದ್ದರಿಂದ ಈಗೇನಿದ್ದರೂ ಹಿಂಗಾರು ಬಿತ್ತನೆಯಾದ ನಂತರ ಬರುವ ಬೆಳೆಯೇ ಆಧಾರವಾಗಿದೆ. ಆದ್ದರಿಂದ ಈಗ ತುರ್ತಾಗಿ ಜಂಟಿ ಸಮೀಕ್ಷೆ ಕೈಗೊಂಡು ಶೀಘ್ರ ಪರಿಹಾರ ನೀಡಿದರೆ ಅನುಕೂಲವಾಗುತ್ತದೆ. ಕೇವಲ ಭರವಸೆ ಮಾತುಗಳಲ್ಲೇ ಕಾಲಹರಣ ಆಗದಿರಲಿ. -ಜೆ.ಡಿ. ಪಾಟೀಲ, ರೈತ

Advertisement

Udayavani is now on Telegram. Click here to join our channel and stay updated with the latest news.

Next