Advertisement

ಅಬ್ಬರಿಸಿದ ಮಳೆ ಹೊಡೆತಕ್ಕೆ ತತ್ತರಿಸಿದ ಬೆಳೆ

03:06 PM Aug 06, 2022 | Team Udayavani |

ವಾಡಿ: ಮಂಜು ಮುಸುಕಿನ ದೃಶ್ಯದಂತೆ ಅಬ್ಬರಿಸಿದ ಮಹಾ ಮಳೆಗೆ ಹೊಲ, ಗದ್ದೆಗಳು ಜಲಾವೃತವಾಗಿ ಬೆಳೆಸಾಲುಗಳು ತತ್ತರಿಸಿವೆ.

Advertisement

ಚಿತ್ತಾಪುರ ತಾಲೂಕಿನಲ್ಲಿ ಗುರುವಾರ ಸಂಜೆ ಧಾರಾಕಾರ ಮಳೆ ಸುರಿದಿದ್ದು, ವರುಣನಾರ್ಭಟಕ್ಕೆ ರೈತರು ಬೆಚ್ಚಿಬಿದ್ದಿದ್ದಾರೆ. ಬೆವರು ಸುರಿಸಿ ಬೆಳೆದ ಬೆಳೆ ಕೈಗೆಟುಕುವ ಮೊದಲೇ ನೀರು ಪಾಲಾಗುತ್ತಿರುವುದನ್ನು ಕಂಡು ಮರುಗುತ್ತಿದ್ದಾರೆ. ಮೋಡ ಮುಗಿಲು ಆವರಿಸಿಕೊಂಡು ಕಗ್ಗತ್ತಲು ಆವರಿಸುತ್ತಿದ್ದಂತೆ ಭಾರಿ ಮಳೆಯ ಮುನ್ಸೂಚನೆ ಮೂಡಿ ಮಳೆಯ ಅಬ್ಬರ ಹೆಚ್ಚಿತ್ತು. ಒಂದೇ ನಿಮಿಷದಲ್ಲಿ ಹೊಲಗದ್ದೆಗಳು ನೀರಿನಿಂದ ಭರ್ತಿಯಾಗಿ ಬೆಳೆ ಮುಳುಗಿ ಜಲಪ್ರಳಯದ ದೃಶ್ಯ ಕಾಣಿಸಿತು.

ಹಸಿರು ಹಸಿರಾಗಿದ್ದ ಬಳವಡಗಿ, ಕೊಲ್ಲೂರ, ನಾಲವರ, ಸನ್ನತಿ, ಹಳಕರ್ಟಿ ಭಾಗದ ಹೊಲಗಳಲ್ಲಿ ಎಲ್ಲಿ ನೋಡಿದರಲ್ಲಿ ನೀರಿನ ಹೊಳೆ ಹರಿಯುತ್ತಿದ್ದ ನೋಟ ಗೋಚರಿಸಿತು. ಮಳೆ ನೀರಿಗೆ ಕೊಚ್ಚಿಕೊಂಡು ಹೋದ ಬೆಳೆ ರಕ್ಷಿಸದೇ ರೈತರು ಗೋಳಾಡಿದರು.

ಅತಿವೃಷ್ಟಿ ಅವಲೋಕಿಸಿದ ಬೆಳೆ ಪರಿಶೀಲಿಸಿದ ಪ್ರಿಯಾಂಕ್‌

ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಲು ಕೊಲ್ಲೂರು ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಪ್ರಿಯಾಂಕ್‌ ಖರ್ಗೆ ಬಳವಡಗಿ ಶಾಲೆ ಉದ್ಘಾಟನೆಗೆ ಹೊರಟ ಮಧ್ಯದಲ್ಲೇ ಮಳೆಗೆ ಸಿಲುಕಿದರು. ಮಳೆ ನಿಂತ ಮೇಲೆ ಕಾರಿನಿಂದ ಕೆಳಗಿಳಿದು ಕೋಲಕುಂದಾ ಸಮೀಪ ಜಲಾವೃತಗೊಂಡಿದ್ದ ಹೊಲಗಳನ್ನು ವೀಕ್ಷಿಸಿದರು.

Advertisement

ಹೆಸರು, ತೊಗರಿ, ಉದ್ದು, ಸೇಂಗಾ ಬೆಳೆಗಳೆಲ್ಲವೂ ನೀರುಪಾಲಾದ ಸ್ಥಿತಿಗೆ ಮರುಗಿದರು. ಅತಿವೃಷ್ಟಿಗೆ ಸಿಲುಕಿದ ಚಿತ್ತಾಪುರ ಮತಕ್ಷೇತ್ರದ ರೈತರ ಸಂಕಷ್ಟಕ್ಕೆ ನೆರವಾಗುವುದಾಗಿ ಭರವಸೆ ನೀಡಿದ ಪ್ರಿಯಾಂಕ್‌, ಬೆಳೆ ಸಮೀಕ್ಷೆಗೆ ಮುಂದಾಗುವಂತೆ ತಾಲೂಕಿನ ಅ ಧಿಕಾರಿಗಳಿಗೆ ಆದೇಶ ನೀಡಿದರು.

ಪರಿಹಾರಕ್ಕಾಗಿ ರೈತರ ಮನವಿ

ಮಳೆಯನ್ನೇ ನಂಬಿ ಮುಂಗಾರು ಬಿತ್ತನೆ ಮಾಡಿದ್ದ ನಾಲವಾರ ವಲಯದ ರೈತರು, ಮಳೆ ಹೊಡೆತದಿಂದಾಗಿ ಬೆಳೆ ನಷ್ಟ ಅನುಭವಿಸುವ ಮೂಲಕ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ರೈತರು ಕೃಷಿ ಚಟುವಟಿಕೆ ಎದುರಿಸುತ್ತಿರುವ ಬಿಕ್ಕಟ್ಟುಗಳಿಂದ ತತ್ತರಿಸಿದ್ದಾರೆ. ಆರಂಭದಲ್ಲಿ ಮಳೆ ಕೊರತೆ ಕಾಣಿಸಿತು. ಈಗ ಮಳೆ ಹೆಚ್ಚಾಗಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡಕ್ಕೂ ಸಿಲುಕಿ ಬೆಳೆ ಕೈಕೊಟ್ಟಿದೆ. ಉತ್ತಮ ಇಳುವರಿ ನಿರೀಕ್ಷೆ ಮೂಡಿಸಿದ್ದ ಹೆಸರು ಕೂಡ ಕೈಬಿಟ್ಟಿತು. ತೊಗರಿ ಮರು ಬಿತ್ತನೆ ಮಾಡಿದರೂ ಬದುಕುವ ಲಕ್ಷಣ ಕಾಣುತ್ತಿಲ್ಲ. ಈ ವರ್ಷ ಮತ್ತೆ ಬದುಕಿನ ಮೇಲೆ ಸಾಲದ ಹೊರೆ ಬಿದ್ದಿದೆ. ಸರ್ಕಾರದಿಂದ ಪರಿಹಾರ ಒದಗಿಸಿಕೊಡಬೇಕು ಎಂದು ರೈತರು ಶಾಸಕ ಖರ್ಗೆಗೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next