ಮಂಗಳೂರು: ದಕ್ಷಿಣ ಒಳನಾಡಿನಲ್ಲಿ ಮೇಲ್ಮೆ„ ಸುಳಿಗಾಳಿ ಉಂಟಾಗಿದ್ದು, ಕರಾವಳಿ ಮತ್ತು ಕೊಡಗು ಜಿಲ್ಲೆಯ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಮಂಗಳವಾರ ಸಂಜೆ ವೇಳೆಗೆ ಸುರಿದಿದೆ.
ಸುಳ್ಯ ನಗರ, ಅರಂತೋಡು, ಐವರ್ನಾಡು, ಪಂಜ, ಕೊಲ್ಲಮೊಗ್ರು, ತೋಡಿಕಾನ, ಪೆರಾಜೆ, ಕಲ್ಮಡ್ಕ, ಮರ್ಕಂಜ, ಕಾವು, ಅರಿಯಡ್ಕ, ಬಡಗನ್ನೂರು, ಪುತ್ತೂರು, ಬೆಟ್ಟಂಪಾಡಿ, ಕಲ್ಲಡ್ಕ, ವೀರಕಂಬ, ಕಾಸರಗೋಡು, ಬದಿಯಡ್ಕ ಸೇರಿದಂತೆ ವಿವಿಧ ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ. ಬೆಳಗ್ಗಿನ ವೇಳೆ ಮಂಜು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು.
ಹಲವೆಡೆ ದಿನವಿಡೀ ಮೋಡ ಕವಿದ ವಾತಾವರಣ ಇತ್ತು. ಮಳೆ ಮತ್ತು ಮೋಡದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ ಏರಿಕೆಯಾಗಿದೆ.
ಹವಾಮಾನ ಇಲಾಖೆ ಮಾಹಿತಿಯಂತೆ ಮಂಗಳವಾರ ಮಂಗಳೂರಿನಲ್ಲಿ 29.1 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿ ವಾಡಿಕೆಗಿಂತ 3 ಡಿ.ಸೆ. ಕಡಿಮೆ ಇತ್ತು. 23.4 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 2 ಡಿ.ಸೆ. ಹೆಚ್ಚಿತ್ತು.
ಇಂದು ಮಳೆ ಸಾಧ್ಯತೆ
ಐಎಂಡಿ ಅಧಿಕಾರಿ ಪ್ರಸಾದ್ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ವಾಡಿಕೆಯಂತೆ ಡಿಸೆಂಬರ್ನಲ್ಲಿ ಮುಂಗಾರು ಅಂತ್ಯಗೊಂಡರೂ ಕೆಲವೊಂದು ಬಾರಿ ಅದರ ಪ್ರಭಾವ ಜನವರಿ ಮೂರನೇ ವಾರದವರೆಗೂ ಇರುತ್ತದೆ. ಸದ್ಯ ಆಗ್ನೇಯ ದಿಕ್ಕಿನಿಂದ ಗಾಳಿ ಬೀಸುತ್ತಿದೆ. ವಾತಾವರಣದಲ್ಲಿ ತೇವಾಂಶ ಇರುವ ಕಾರಣ ಮಳೆ ಸುರಿಯುತ್ತಿದೆ. ಅದೇ ರೀತಿ, ದಕ್ಷಿಣ ಒಳನಾಡಿನಲ್ಲಿ ಸುಳಿಗಾಳಿ ಇದ್ದು, ಮಳೆಗೆ ಕಾರಣವಾಗುತ್ತಿದೆ. ಸದ್ಯದ ಮುನ್ಸೂಚನೆಯಂತೆ ಕರಾವಳಿ ಭಾಗದ ಕೆಲವು ಕಡೆಗಳಲ್ಲಿ ಜ. 25ರಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ’ ಎಂದಿದ್ದಾರೆ.