Advertisement

Hearing of cases: ಪೊಲೀಸ್‌ ಇಲಾಖಾ ವಿಚಾರಣೆ ನಿವೃತ್ತ ನ್ಯಾಯಾಧೀಶರ ಹೆಗಲಿಗೆ!

01:05 AM Sep 02, 2024 | Team Udayavani |

ಬೆಂಗಳೂರು: ಶಿಸ್ತಿನ ಇಲಾಖೆ ಎಂದೇ ಹೆಸರಾದ ಪೊಲೀಸ್‌ ಇಲಾಖೆಯಲ್ಲಿ “ಇಲಾಖಾ ವಿಚಾರಣೆ’ ಎಂಬ ಹೆಚ್ಚುವರಿ ಭಾರದಿಂದ ಮೇಲಧಿಕಾರಿಗಳಿಗೆ ಮುಕ್ತಿ ನೀಡಲು ಮುಂದಾಗಿರುವ ಗೃಹ ಇಲಾಖೆ, ಅದಕ್ಕಾಗಿ ನಿವೃತ್ತ ನ್ಯಾಯಾಧೀಶರ ಸೇವೆ ಪಡೆದುಕೊಳ್ಳಲು ಮುಂದಾಗಿದೆ.

Advertisement

ಇನ್ನು ಮುಂದೆ ಪೊಲೀಸ್‌ ಇಲಾಖೆಯಲ್ಲಿ ಯಾವುದೇ ಅಕ್ರಮಗಳು, ಕರ್ತವ್ಯ ಲೋಪ, ಭ್ರಷ್ಟಾಚಾರ, ಮೇಲಧಿಕಾರಿಗಳಿಂದ ಕಿರುಕುಳ ಇತ್ಯಾದಿ ಇಲಾಖಾ ವಿಚಾರಣೆಯ ವ್ಯಾಪ್ತಿಗೊಳಪಡುವ ಪ್ರಕರಣಗಳ ವಿಚಾರಣೆಯ ಜವಾಬ್ದಾರಿ ನಿವೃತ್ತ ನ್ಯಾಯಾಧೀಶರ ಹೆಗಲಿಗೆ ಬೀಳಲಿದೆ. ಈ ಮೂಲಕ ಪೊಲೀಸ್‌ ಮೇಲಧಿಕಾರಿಗಳಿಗಿದ್ದ ಇಲಾಖಾ ವಿಚಾರಣೆಯ ಹೊರೆ ತಪ್ಪಿದಂತಾಗಿದೆ.

ರಾಜ್ಯ ಸರಕಾರವು ಇಲಾಖಾ ವಿಚಾರಣೆಗಳಲ್ಲಿ ಕರ್ತವ್ಯ ನಿರತ ಅಧಿಕಾರಿಗಳನ್ನು ವಿಚಾರಣಾಧಿಕಾರಿ ಯಾಗಿ ನೇಮಕ ಮಾಡುವು ದರಿಂದ ಅವರು ದಿನ ನಿತ್ಯದ ಕರ್ತವ್ಯದ ಜತೆಗೆ ಅಪರಾಧ, ಕಾನೂನು ಸುವ್ಯವಸ್ಥೆ, ತನಿಖೆ, ಮೇಲ್ವಿಚಾರಣೆ ಮತ್ತು ಇತರ ಕರ್ತವ್ಯಗಳಿಗೆ ಅಡಚಣೆ ಉಂಟಾಗುತ್ತಿತ್ತು. ಜತೆಗೆ ಆದೇಶಿಸಲಾದ ಇಲಾಖಾ ವಿಚಾ ರಣೆಗಳು ಸಹ ತ್ವರಿತವಾಗಿ ಪೂರ್ಣಗೊಳ್ಳುತ್ತಿರಲಿಲ್ಲ. ಇದನ್ನು ಮನಗಂಡಿದ್ದ ಸರ್ಕಾರವು ನಿವೃತ್ತ ನ್ಯಾಯಾಧೀಶರನ್ನು ವಿಚಾರ ಣಾಧಿಕಾರಿಯಾಗಿ ನೇಮಿಸಿಕೊಳ್ಳಲು ಪೊಲೀಸ್‌ ಇಲಾಖೆಗೆ ಅವಕಾಶ ಕಲ್ಪಿಸಿಕೊಟ್ಟಿದೆ.

ಜತೆಗೆ ಇಲಾಖಾ ವಿಚಾರಣೆಗೆ ಸಮ್ಮತಿಸಿದ 135 ನಿವೃತ್ತ ನ್ಯಾಯಾ ಧೀಶರ ಪಟ್ಟಿಯನ್ನು ಸಹ ಪ್ರಕಟಿಸಿದ್ದು ಶಿಸ್ತು ಪ್ರಾಧಿಕಾರವು ಕಾನೂನು ಇಲಾಖೆಯು ಸೂಚಿಸಿರುವ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಲು ಇಚ್ಚಿಸಿದ್ದಲ್ಲಿ ಈ ಬಗ್ಗೆ ಆದೇಶ ಹೊರಡಿಸಿ ನೇಮಕ ಮಾಡಿಕೊಳ್ಳಲು ಪೊಲೀಸ್‌ ಇಲಾಖೆಗೆ ಸ್ಪಷ್ಟಿಕರಣವನ್ನೂ ನೀಡಿದೆ.

ಇದೀಗ ಸೇವೆ ಸಲ್ಲಿಸಲು ಇಚ್ಛೆ ವ್ಯಕ್ತಪಡಿಸಿರುವ ನಿವೃತ್ತ ನ್ಯಾಯಾಧೀಶರ ಹೆಸರುಗಳನ್ನು ಪೊಲೀಸ್‌ ವಲಯವಾರು ಪ್ರಕಟಿಸಲಾಗಿದೆ. ಅದರಂತೆ, ತಮ್ಮ ಘಟಕಗಳಲ್ಲಿ ಆದೇಶಿಸಲಾಗುವ ಇಲಾಖಾ ವಿಚಾರಣೆಗಳಲ್ಲಿ ನಿವೃತ್ತ ನ್ಯಾಯಾಧೀಶರನ್ನು ವಿಚಾರಣಾ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಕೊಳ್ಳುವಂತೆ ಎಲ್ಲ ಘಟಕಾಧಿಕಾರಿಗಳಿಗೆ ಡಿಜಿಪಿ ಕಚೇರಿಯಿಂದ ಹಿಂಬರಹ ಹೊರಡಿಸಲಾಗಿದೆ.

Advertisement

ಹೇಗಿರಲಿದೆ ಇಲಾಖಾ ವಿಚಾರಣೆ?
ಪೊಲೀಸ್‌ ಇಲಾಖೆಯಲ್ಲಿ ಇದುವರೆಗೆ ಕಾನ್‌ಸ್ಟೆಬಲ್‌, ಎಎಸ್‌ಐ, ಪಿಎಸ್‌ಐ, ಇನ್‌ಸ್ಪೆಕ್ಟರ್‌ಗಳ ವಿರುದ್ಧ ಆರೋಪಗಳು ಕೇಳಿಬಂದರೆ ಎಸಿಪಿ ಮಟ್ಟದ ಅಧಿಕಾರಿಗಳು ಇಲಾಖಾ ವಿಚಾರಣೆ ನಡೆಸಿ ಪೊಲೀಸ್‌ ಆಯುಕ್ತರು ಅಥವಾ ಎಸ್‌.ಪಿ. ಹಂತದ ಅಧಿಕಾರಿಗಳಿಗೆ ವರದಿ ನೀಡುತ್ತಿದ್ದರು.

ಇನ್ನು ಎಸ್‌.ಪಿ. ಮಟ್ಟದ ಐಪಿಎಸ್‌ ಅಧಿಕಾರಿಗಳ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಐಜಿಪಿ, ಎಡಿಜಿಪಿ ಹಾಗೂ ಅದರಿಂದ ಮೇಲ್ಪಟ್ಟ ರ್‍ಯಾಂಕ್‌ನ ಅಧಿಕಾರಿಗಳು ಇಲಾಖಾ ವಿಚಾರಣೆ ನಡೆಸಿ ಅವರ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತಿದ್ದರು. ಇದೀಗ ಪೊಲೀಸ್‌ ಇಲಾಖೆಯ ಎಲ್ಲ ಹಂತದ ಸಿಬಂದಿ ಅಥವಾ ಅಧಿಕಾರಿಗಳ ವಿರುದ್ಧದ ಪ್ರಕರಣಗಳ ಇಲಾಖಾ ವಿಚಾರಣೆಯನ್ನು ನಿಯೋಜಿತ ನಿವೃತ್ತ ನ್ಯಾಯಾಧೀಶರೇ ನಿರ್ವಹಿಸಲಿದ್ದಾರೆ.

ವಿಚಾರಣಾಧಿಕಾರಿಗಳಾಗಿ ನಿವೃತ್ತ ನ್ಯಾಯಾಧೀಶರು ಪೊಲೀಸ್‌ ಆಧಿಕಾರಿ ಅಥವಾ ಸಿಬಂದಿಯ ಖುದ್ದು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡು ವರದಿ ತಯಾರಿಸಿ ಅವರ ಮೇಲಧಿಕಾರಿಗಳಿಗೆ ಸಲ್ಲಿಸಲಿದ್ದಾರೆ. ಇದರ ಆಧಾರದ ಮೇಲೆ ಆರೋಪಿತ ಪೊಲೀಸ್‌ ಸಿಬಂದಿಯ ಭವಿಷ್ಯ ನಿರ್ಧಾರವಾಗಲಿದೆ.

ವರ್ಷದಲ್ಲಿ ನೂರಾರು ವಿಚಾರಣೆ
ಶಿಸ್ತಿನ ಇಲಾಖೆ ಎಂದು ಗುರುತಿಸಿಕೊಂಡಿರುವ ಪೊಲೀಸ್‌ ಇಲಾಖೆಯ ಅಧಿಕಾರಿ, ಸಿಬಂದಿಗಳ ಮೇಲೆ ಭ್ರಷ್ಟಾಚಾರ, ಕರ್ತವ್ಯ ಲೋಪ, ದುರ್ನಡತೆಯ ಆರೋಪಗಳು ಹೆಚ್ಚಾಗುತ್ತಿದೆ. ಕಳೆದ 1 ವರ್ಷಗಳಲ್ಲಿ ಕರ್ನಾಟಕದಲ್ಲಿ ಸುಮಾರು 80ಕ್ಕೂ ಹೆಚ್ಚಿನ ಪೊಲೀಸ್‌ ಸಿಬಂದಿ ವಿರುದ್ಧ ಇಲಾಖಾ ವಿಚಾರಣೆ ನಡೆದಿರುವುದು ಮೇಲಿನ ಅಂಶಗಳಿಗೆ ಪುಷ್ಠಿ ನೀಡುತ್ತದೆ. ಈ ಪೈಕಿ ಕೆಲವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

“ಪೊಲೀಸ್‌ ಇಲಾಖೆಯಲ್ಲಿ ಇನ್ನು ಮುಂದೆ ನಿವೃತ್ತ ನ್ಯಾಯಾಧೀಶರು ವಿಚಾರಣಾಧಿಕಾರಿಯಾಗಿ ಇಲಾಖಾ ವಿಚಾರಣೆ ನಡೆಸಲಿದ್ದಾರೆ. ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್‌ ಅಧಿಕಾರಿಗಳಿಗೆ ಇತರ ಪ್ರಕರಣಗಳ ನಡುವೆ ಇಲಾಖಾ ವಿಚಾರಣೆ ನಡೆಸುವುದು ಹೊರೆಯಾಗಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆ ಜಾರಿಗೆ ತರಲಾಗಿದೆ.”
– ಕಲಾ ಕೃಷ್ಣಸ್ವಾಮಿ, ಎಐಜಿಪಿ (ಆಡಳಿತ), ರಾಜ್ಯ ಪೊಲೀಸ್‌ ಇಲಾಖೆ

-ಅವಿನಾಶ್‌ ಮೂಡಂಬಿಕಾನ 

Advertisement

Udayavani is now on Telegram. Click here to join our channel and stay updated with the latest news.

Next