Advertisement

ಶ್ರವಣ ದೋಷಕ್ಕೆ ಪ್ರಮುಖ ಕಾರಣಗಳು…ಪರಿಹಾರವೇನು?

05:32 PM Feb 03, 2023 | Team Udayavani |

ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಖ್ಯಾನದಂತೆ “ಕಿವುಡು’ ಎಂದರೆ ಒಂದು ಅಥವಾ ಎರಡೂ ಕಿವಿಗಳಲ್ಲಿ ಶ್ರವಣ ಸಾಮರ್ಥ್ಯ ನಷ್ಟವಾಗಿದೆ. “ಶ್ರವಣ ಶಕ್ತಿ ನಷ್ಟ’ವನ್ನು ಕೇಳಿಸಿಕೊಳ್ಳುವ ಸಾಮರ್ಥ್ಯದ ಸಂಪೂರ್ಣ ಅಥವಾ ಭಾಗಶಃ ನಷ್ಟ ಎಂಬುದಾಗಿ ವಿಶ್ವಸಂಸ್ಥೆಯು ವ್ಯಾಖ್ಯಾನಿಸುತ್ತದೆ. ಶ್ರವಣ ಶಕ್ತಿ ನಷ್ಟವು ಪ್ರತ್ಯಕ್ಷದರ್ಶಿಯಲ್ಲ. ಹೀಗಾಗಿ ಅದರ ಪರಿಣಾಮವನ್ನು ಇತರರು ಕಾಣಲಾರರು, ಹೀಗಾಗಿ ಕಿವುಡರು ಮೌನವಾಗಿ ನೋವು ಅನುಭವಿಸುವಂತಾಗುತ್ತದೆ.

Advertisement

ಜನರು ಕುರುಡರ ಬಗ್ಗೆ ಕನಿಕರ, ಸಹಾನುಭೂತಿಯನ್ನು ತೋರುತ್ತಾರೆ, ಆದರೆ ಕಿವುಡರ ಬಗ್ಗೆ ಅವರ ನಡವಳಿಕೆ ತದ್ವಿರುದ್ಧವಾಗಿರುತ್ತದೆ. ಕಿವುಡರು ನಿಂದೆ, ಹೀಯಾಳಿಕೆಗಳಿಗೆ ಒಳಗಾಗುವುದೇ ಹೆಚ್ಚು. ಕಿವುಡ ವ್ಯಕ್ತಿಯು ಕುಟುಂಬ ಮತ್ತು ಗೆಳೆಯ/ಗೆಳತಿಯರಿಂದ ದೂರವಾಗಿ ಏಕಾಂಗಿಯಾಗುತ್ತಾನೆ ಹಾಗೂ ಅವರ ಸಹಾನುಭೂತಿ ರಹಿತ ನಡವಳಿಕೆಯಿಂದಾಗಿ ಆತ ಅಥವಾ ಆಕೆ ಖನ್ನತೆಗೊಳಗಾಗುತ್ತಾರೆ. ಇದರಿಂದಾಗಿ ಆಕೆ/ ಆತನಿಗೆ ಮಾನಸಿಕ ಆಪ್ತಸಮಾಲೋಚನೆ ಅಗತ್ಯವಾಗುತ್ತದೆ.

ಕಿವುಡುತನ ಅಥವಾ ಶ್ರವಣ ಶಕ್ತಿ ನಷ್ಟದಿಂದ ಜನ್ಮಾರಭ್ಯ ಬಳಲು ತ್ತಿರುವ ಮಗುವಿನ ಮೇಲೆ ಅದರ ಪ್ರತಿಕೂಲ ಪರಿಣಾಮಗಳು ತೀವ್ರವಾಗಿರುತ್ತವೆ. ಶ್ರವಣ ದೋಷ ಅಥವಾ ಕಿವುಡುತನ ಹೊಂದಿರುವ ಮಗುವಿನ ಭಾಷಿಕ ಮತ್ತು ಸಂವಹನ ಸಾಮರ್ಥ್ಯಗಳು ಸರಿಯಾಗಿ ಬೆಳವಣಿಗೆ ಹೊಂದುವುದಿಲ್ಲ. ಇದರಿಂದಾಗಿ ಮಗು ಶಾಲೆಯಲ್ಲಿ, ಉನ್ನತ ಶಿಕ್ಷಣ ಸಂದರ್ಭದಲ್ಲಿ ತೀವ್ರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಆತ/ಆಕೆಯ ಭವಿಷ್ಯದ ವೃತ್ತಿಪರ ಅವಕಾಶಗಳನ್ನು ಕೂಡ ಸೀಮಿತಗೊಳಿಸುತ್ತದೆ.

ಭಾರತದಲ್ಲಿ “ಶ್ರವಣಾಂಗ ವಿಕಲ’ ಎಂಬುದನ್ನು 1992ರ ಭಾರತೀಯ ಪುನರ್ವಸತಿ ಮಂಡಳಿ ಕಾಯಿದೆಯ ಪ್ರಕಾರ “ಕೇಳುವಿಕೆ ಯಾವ ಕಿವಿಯಲ್ಲಿ ಉತ್ತಮವಾಗಿದೆಯೋ ಅದರಲ್ಲಿ 70 ಡೆಸಿಬಲ್‌ ಮತ್ತು ಅದಕ್ಕಿಂತ ಹೆಚ್ಚು ಅಥವಾ ಎರಡೂ ಕಿವಿಗಳಲ್ಲಿ ಸಂಪೂರ್ಣ ಶ್ರವಣ ಶಕ್ತಿ ನಷ್ಟ ಹೊಂದಿರುವವರು’ ಎಂಬುದಾಗಿ ವ್ಯಾಖ್ಯಾನಿಸಲಾಗಿದೆ. ಶ್ರವಣ ಶಕ್ತಿ ನಷ್ಟ ಮತ್ತು ಕಿವುಡನ್ನು ಹೊಂದಿರುವವರ ಸಂಖ್ಯೆ ವೃದ್ಧಿಸುತ್ತಿರುವುದರಿಂದ ಈ ಮಾನದಂಡವನ್ನು ಪರಿಷ್ಕರಿಸಿ 60 ಡೆಸಿಬಲ್‌ಗ‌ಳಿಗಿಂತ ಹೆಚ್ಚನ್ನೂ ಸೇರ್ಪಡೆಗೊಳಿಸಲಾಗಿದೆ.

ಶ್ರವಣ ಶಕ್ತಿ ನಷ್ಟ ಮತ್ತು ಕಿವುಡುತನಕ್ಕೆ ಸಂಬಂಧಿಸಿ ಅಂಕಿಸಂಖ್ಯೆಗಳು ಗಾಬರಿ ಹುಟ್ಟಿಸುವಂತಿವೆ. ಜಾಗತಿಕ ವಾಗಿ 36 ಕೋಟಿ ಮಂದಿ ಶ್ರವಣ ಶಕ್ತಿ ನಷ್ಟದಿಂದ ಬಳಲುತ್ತಿದ್ದಾರೆ. ಇದು ಜಗತ್ತಿನ ಒಟ್ಟು ಜನಸಂಖ್ಯೆಯ ಶೇ.5.3. ಭಾರತದಲ್ಲಿ ಶ್ರವಣ ಶಕ್ತಿ ನಷ್ಟ ಮತ್ತು ಕಿವುಡುತನ ಗಮನಾರ್ಹ ಪ್ರಮಾಣದಲ್ಲಿದೆ. ಅಂಕಿಸಂಖ್ಯೆಗಳು ಏರುಗತಿಯಲ್ಲಿದ್ದರೂ ಜಾಗತಿಕವಾಗಿ ಮತ್ತು ಭಾರತದಲ್ಲಿಯೂ ಈ ಗಂಭೀರ ವೈಕಲ್ಯವನ್ನು ಸಾಕಷ್ಟು ಪ್ರಮಾಣದಲ್ಲಿ ತಡೆಯಬಹುದಾಗಿದೆ ಮತ್ತು ದೂರ ಮಾಡಬಹುದಾಗಿದೆ.

Advertisement

ಭಾರತವು ಇತ್ತೀಚೆಗೆ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಹಕ್ಕುಗಳ ಕುರಿತಾದ ಒಪ್ಪಂದವೊಂದಕ್ಕೆ ವಿಶ್ವಸಂಸ್ಥೆಯ ಜತೆಗೆ ಸಹಿ ಮಾಡಿದೆ ಮತ್ತು ಅದನ್ನು ಅನುಮೋದಿಸಿದೆ. ಆದರೆ ಕಿವುಡವನ್ನು ತಡೆಯುವ ಉತ್ತಮ ಉದ್ದೇಶ ಮತ್ತು ಗುರಿಯ ಹೊರತಾಗಿಯೂ ಭಾರತದಲ್ಲಿ ಈ ಸಮಸ್ಯೆಯುಳ್ಳವರಿಗೆ ಸೇವೆಗಳು ಮತ್ತು ಸೌಕರ್ಯಗಳ ಕೊರತೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಭಾರತವು ಕಿವುಡು‌ ತಡೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ (ಎನ್‌ಪಿಪಿಸಿಡಿ)ಯನ್ನು ಆರಂಭಿಸಿದೆ.

ಈ ಕಾರ್ಯಕ್ರಮವನ್ನು ಪ್ರಾಥಮಿಕ ಆರೋಗ್ಯ ಸೇವಾ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಇದು ಭಾರತದಲ್ಲಿ ಕಿವುಡುತನ ಮತ್ತು ಶ್ರವಣ ಶಕ್ತಿ ವೈಕಲ್ಯದ ಹೊರೆಯನ್ನು ಬೇರು ಮಟ್ಟದಿಂದಲೇ ಕಡಿಮೆಗೊಳಿಸುವ ಗುರಿಯನ್ನು ಹೊಂದಿದೆ.

ಕಿವುಡು: ಪ್ರಮುಖ ಕಾರಣಗಳು
ಭಾರತದಲ್ಲಿ ಕಿವುಡತನ, ಶ್ರವಣ ಶಕ್ತಿ ನಷ್ಟ ಮತ್ತು ಕಿವಿಯ ಕಾಯಿಲೆಗಳಿಗೆ ಪ್ರಧಾನ ಕಾರಣಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯ ಮೂಲಕ ಪಟ್ಟಿ ಮಾಡಲಾಗಿದೆ. ಶ್ರವಣ ಶಕ್ತಿ ವೈಕಲ್ಯಕ್ಕೆ ಕಾರಣಗಳನ್ನು ಸ್ಥೂಲವಾಗಿ ಎರಡು ವಿಭಾಗಳಾಗಿ ವರ್ಗೀಕರಿಸಬಹುದಾಗಿದೆ. ಒಂದನೆಯದು ಶಬ್ದ ವಾಹಕತ್ವಕ್ಕೆ ಸಂಬಂಧಿಸಿದ್ದು (ಕಂಡಕ್ಟಿವ್‌- ಕಿವಿಯ ಹೊರಭಾಗ ಅಥವಾ ಮಧ್ಯಕಿವಿಯಲ್ಲಿ ಉಂಟಾಗಿ ಶಬ್ದದ ಸಂವಹನಕ್ಕೆ ಅಡೆತಡೆ ಒಡ್ಡುವ ಸಮಸ್ಯೆಗಳು). ಎರಡನೆಯದು ಸೆನ್ಸೊನ್ಯೂರಲ್‌ (ಒಳಗಿವಿಯ ಸಮಸ್ಯೆಗಳು ಅಥವಾ ನರಹಾನಿ ಉಂಟಾಗಿ ಶಬ್ದವು ಮಿದುಳಿಗೆ ರವಾನೆಯಾಗುವುದಕ್ಕೆ ಅಡೆತಡೆ ಉಂಟಾಗುವುದು).

ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯ ಪ್ರಕಾರ ಕಿವಿ ಗುಗ್ಗೆ (ಇಯರ್‌ ವ್ಯಾಕ್ಸ್‌)ಯು ಗುಣಪಡಿಸಬಹುದಾದ ಶ್ರವಣ ಶಕ್ತಿ ನಷ್ಟಕ್ಕೆ ಬಹು ಸಾಮಾನ್ಯ (ಶೇ.15.9)ವಾದ ಕಾರಣವಾಗಿದೆ. ವಯಸ್ಸಾಗುವುದು ಮತ್ತು ಪ್ರಿಸಿºಕ್ಯುಸಿಸ್‌ ಅನಂತರದ ಸ್ಥಾನ (ಶೇ.10.3) ಸ್ಥಾನದಲ್ಲಿದೆ. ದೀರ್ಘ‌ಕಾಲಿಕ ಸಪ್ಯುರೇಟಿವ್‌ ಒಟಿಟಿಸ್‌ ಮೀಡಿಯ (ಶೇ.5.2) ಮತ್ತು ಗಂಭೀರ ಒಟಿಟಿಸ್‌ ಮೀಡಿಯ (ಶೇ.3) ಶ್ರವಣ ಶಕ್ತಿ ನಷ್ಟವುಂಟಾಗಲು ಇನ್ನಿತರ ಕಾರಣಗಳಾಗಿವೆ.

ಪ್ರತೀ ವರ್ಷ ಸೆಪ್ಟಂಬರ್‌ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಕಿವುಡರ ಸಪ್ತಾಹವನ್ನು ಆಚರಿಸಲಾಗುತ್ತದೆ. ಜತೆಗೆ, ಭಾರತದಲ್ಲಿ ಸೆಪ್ಟಂಬರ್‌ 26ನ್ನು “ಕಿವುಡರ ದಿನ’ವನ್ನಾಗಿ ಆಚರಿಸಲಾಗುತ್ತದೆ.

ಡಾ| ಪಾಂಡುರಂಗ ಕಾಮತ್‌,
ಕನ್ಸಲ್ಟಂಟ್‌ ಇಎನ್‌ಟಿ,
ಕೆಎಂಸಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next