Advertisement

ನಮಗಾಗಿ ಕಾಯುತ್ತಿರುವ ಅವನು

12:38 PM Apr 23, 2021 | Team Udayavani |

ಶಾಲೆಯಿಂದ ಮಗಳನ್ನು ಕರೆದುಕೊಂಡು ವಾಪಸ್‌ ಮನೆಗೆ ಬರುವಾಗ ದೂರದಿಂದಲೇ ಪ್ಯಾಟ್ರಿಕ್‌ ಮತ್ತು ಬಾಬ್‌ ಕಾಣಿಸಿದರು. ಪ್ರತಿಬಾರಿಯಂತೆ ಮಗಳು ನನ್ನ ಕೈ ಬಿಡಿಸಿಕೊಂಡು ಅವರತ್ತ ಓಡಿದಳು.

Advertisement

ಪ್ಯಾಟ್ರಿಕ್‌ ನನ್ನೆಡೆಗೆ ನೋಡುತ್ತಾ ನಿಮ್ಮನ್ನೇ ಕಾಯುತ್ತಿದೆ. ನೋಡಿ ನಿನ್ನೆ ರಾತ್ರಿಯಿಂದ ಇವ ಊಟವೇ ಮಾಡಿಲ್ಲ ಎನ್ನುತ್ತಾ ಕಿಸೆಯಿಂದ ತಿಂಡಿ ಪೊಟ್ಟಣ ತೆಗೆದು ನನ್ನ ಮಗಳ ಕೈಗಿತ್ತು “ನೀ ತಿನ್ನಿಸು. ಆಡುವ ಗುಂಗಿನಲ್ಲಿ ಸ್ವಲ್ಪ ತಿಂದರೂ ತಿನ್ನಬಹುದು’ ಎಂದ. ಮಗಳು ನಿಯತಿ ಒಂದು ಒಣ ಕಟ್ಟಿಗೆಯ ತುಂಡನ್ನು ಹಿಡಿದು  ಬಾಬ್‌ನೊಂದಿಗೆ ಆಟವಾಡುತ್ತ ಅವನಿಗೆ ತಿಂಡಿ ತಿನ್ನಿಸಿದಳು. ಹದಿನೈದು ನಿಮಿಷದಲ್ಲಿ ಬಾಬ್‌ ಪೂರ್ತಿ ಪೊಟ್ಟಣ ತಿಂದು ಮುಗಿಸಿದ್ದನ್ನು ನೋಡಿ ಪ್ಯಾಟ್ರಿಕ್‌ ಮುಖದಲ್ಲಿ ಸಮಾಧಾನದ ನಗು ಹರಡಿತ್ತು.

ಬಾಬ್‌ ಮತ್ತು ಪ್ಯಾಟ್ರಿಕ್‌ ಪರಿಚಯವಾದದ್ದು 2 ವರ್ಷಗಳ ಹಿಂದೆ. ಆಗ ನಿಯತಿ ನರ್ಸರಿಯಲ್ಲಿದ್ದಳು. ಅಮ್ಮ  ನನಗೊಂದು ನಾಯಿಮರಿ ಬೇಕು ಎಂದು ಗಂಟು ಬಿದ್ದಿದ್ದಳು. ಊರಿನಲ್ಲಾದರೆ ಒಂದೇನು ಎರಡೆರಡು ತಂದು ಸಾಕಬಹುದಿತ್ತು. ಆದರೆ ಇಲ್ಲಿ  ಯಾವತ್ತೂ ಗೋಲ್ಡ… ಫಿಶ್‌ಗಿಂತ ಮೇಲಿನದನ್ನು ಯೋಚಿಸಲಾಗಿರಲಿಲ್ಲ. ಮಲೆನಾಡ ಸೆರಗಿನಲ್ಲಿರುವ ನನ್ನ ತವರಿನಲ್ಲಿ ಸಾಕು ಪ್ರಾಣಿಗಳು ಜೀವನದ ಒಂದು ಭಾಗವೇ ಆಗಿಬಿಟ್ಟಿದ್ದವು. ಪ್ರತಿ ನಾಯಿ, ಬೆಕ್ಕುಗಳ ಸುತ್ತ ನಮ್ಮ  ನೂರಾರು ನೆನಪುಗಳಿವೆ. ಅಂಥ  ಅನುಭವಗಳನ್ನು ನನ್ನ ಮಕ್ಕಳಿಗೆ ಕೊಡಲಾಗುತ್ತಿಲ್ಲವಲ್ಲ ಎಂಬ ಸಣ್ಣ ನಿರಾಸೆಯಿದೆ.

ಆ ದಿನ ಎಂದಿನಂತೆ ನರ್ಸರಿಯಿಂದ ವಾಪಸ್‌ ಬರುವ ಹೊತ್ತು ಮೇಪಲ್‌ ಮರಗಳ ಕೆಳಗೆ ಕುಳಿತು ಅರಳುಗಣ್ಣುಗಳಿಂದ ಆಚೀಚೆ ಬರುವವರನ್ನು ನೋಡುತ್ತಾ ಅವರು ರಸ್ತೆಯ ತುದಿಯಲ್ಲಿ ತಿರುಗಿ ಮರೆಯಾಗುವ ತನಕ ಅವರತ್ತ ಕಣ್ಣು ನೆಟ್ಟು ಮತ್ತೆ ಇನ್ಯಾರೋ ಬಂದರೆನಿಸಿದರೆ ಪಟ್ಟನೆ ಕತ್ತು  ಹೊರಳಿಸಿ ನೋಡುತ್ತಿದ್ದ ಕಪ್ಪು ಬಿಳುಪಿನ ಬಾಬ್‌ ಯಾಕೋ ನಮ್ಮ ಮನೆಯಲ್ಲಿದ್ದ ಬುಧ ಎಂಬ ನಾಯಿಯನ್ನು ನೆನಪಿಸಿದ್ದ. ಮೊದಲ ಭೇಟಿಯಲಗಲೇ ಬಾಬ್‌ ನನ್ನ ಮಗಳಿಗೂ ತನ್ನ ಗುಂಗು ಹಿಡಿಸಿದ್ದ. ಮಾತೆತ್ತಿದರೆ ಬಾಬ್‌ ಎನ್ನುವಷ್ಟು ಸಲಿಗೆ. ಆಗ ಬಾಬ್‌ನ ಬಲಗಾಲು ಮುರಿದಿತ್ತು. ಗುಡ್ಡದಲ್ಲಿ ನಡೆದಾಡುತ್ತಿದ್ದಾಗ ನನಗೆ ರೆಕ್ಕೆಯೂ ಇದೆ ಎಂದು ಹಾರಲು ಹೋಗಿ ಕಾಲು ಮುರಿದುಕೊಂಡ. ಈಗ ಪ್ಲಾಸ್ಟರ್‌ ಬಿಚ್ಚಿದ್ದಾರೆ. ಆದರೆ ಮುಂಚಿನಂತೆ ಓಡಾಡಲು ಆಗುತ್ತಿಲ್ಲ. ಅದಕ್ಕೆ ತನ್ನ ಬಳಿ ಯಾರಾದರೂ ಆಡಲಿ, ಮಾತಾಡಲಿ ಎನ್ನುವ ಆಸೆಯಿಂದ ಶಾಲೆ ಮಕ್ಕಳು ಬರುವ ಹೊತ್ತಿಗೆ ಒದರಲು ಶುರು ಮಾಡುತ್ತಾನೆ. ಇನ್ನೆರಡು ಗಂಟೆ ಹೊರಗೆ ಇರಬೇಕು ನಾನು  ಎಂದು ಪಾಟ್ರಿಕ್‌ ಒಂದೇ ಸಮನೆ ಮಾತಾಡಿದ. ನಾವು ಆ ನೆರಳಲ್ಲೇ ಬಾಬ್‌ ಪಕ್ಕದಲ್ಲೇ ಕುಳಿತು ಅವನ ಕತ್ತು ಸವರಿ ಮುದ್ದು ಮಾಡಿ ಬಂದಿದ್ದೆವು. ಹೀಗೆ ಆಗಿತ್ತು ನಮ್ಮ ಮೊದಲ ಭೇಟಿ.

ಆ ದಿನದಿಂದ ಶಾಲೆಯಿಂದ ಬರುವಾಗ  ಬಾಬ್‌ನೊಂದಿಗೆ 10 ನಿಮಿಷವಾದರೂ ಆಟವಾಡಿ ಬರುವುದು ರೂಢಿಯಾಯಿತು.  ಬಾಬ್‌ ಒಬ್ಬ ತುಂಟ ಪೋರ. ಆಟವಾಡುತ್ತಲೇ ಇರಬೇಕು ಅವನ ಹತ್ತಿರ. ಒಂದು ರಬ್ಬರ್‌ ಚಂಡು, ದಪ್ಪ ಹಗ್ಗದ ತುಂಡು ಅವನ ಆಟಿಕೆಗಳು. ಆದರೆ ಅವನಿಗೆ ಮಕ್ಕಳು ಎಸೆಯುವ ಕಟ್ಟಿಗೆ ತುಂಡು, ಪೇಪರ್‌ ಚೂರುಗಳೆಂದರೆ ವೀಪರೀತ ಪ್ರೀತಿ. ದೂರ ಎಸೆದ ಕಟ್ಟಿಗೆಯನ್ನು ಆರಿಸಿ ತಂದು ಹಲ್ಲಿನಿಂದ ಕಚ್ಚಿ ಚೂರು ಚೂರು ಮಾಡಿ ಮತ್ತೆ ಮಾಡು ಅಂತ ಪುಟ್ಟ ಮಕ್ಕಳಂತೆ ಗೋಗರೆಯುತ್ತ ನಿಲ್ಲುವ ಹೊತ್ತಿಗೆ ಇತ್ತ ಪ್ಯಾಟ್ರಿಕ್‌ ಹೆಮ್ಮೆಯಿಂದ ಬಾಬ್‌ ಬಗ್ಗೆ ಹೇಳಿಕೊಳ್ಳುತ್ತಾನೆ. ಈ ನಡುವೆ ಆಗಾಗ ತನ್ನ ಒಂಟಿತನ, ಆರೋಗ್ಯದ ಬಗ್ಗೆ ಹೇಳುತ್ತಾನೆ. ಕೆಲವೊಮ್ಮೆ ವಿಷಾದ ಆವರಿಸಿಕೊಂಡರೂ ಮರು ನಿಮಿಷದಲ್ಲೇ  ಬಾಬ್‌ನ ಸುದ್ದಿ ಅವನ ಹೊಗಳಿಕೆ ಶುರುವಾಗುತ್ತದೆ.

Advertisement

ಕಳೆದ ವಾರ ನನಗೆ ಜ್ವರವಿತ್ತು, ಬಾಬ್‌ ನನ್ನ ಪಕ್ಕವೇ ಮಲಗಿದ್ದ. ನಾ ಕೆಮ್ಮಿದರು ಏಳುತ್ತಿದ್ದ. ಮಕ್ಕಳು ಹತ್ತಿರವಿಲ್ಲದಿದ್ದರೆ ಏನಾಯಿತು ಇವನಿದ್ದಾನಲ್ಲ ಎಂದು $ಪಾಟ್ರಿಕ್‌ ಹೇಳಿದಾಗ ನನಗೆ ಪಿಚ್ಚೆನಿಸುತ್ತದೆ. ಅವನು ಹೇಳುವುದು ಸುಳ್ಳಲ್ಲ ಎಂಬುದೂ ಆ ಏರಿಯಾದಲ್ಲಿರುವ ಎಲ್ಲರಿಗೂ  ಗೊತ್ತು.

ಮನೆ ಹತ್ತಿರ ಒಂದು ವೃದ್ಧಾಶ್ರಮವಿದೆ. ಅಲ್ಲಿರುವ ಬಹುತೇಕ ಅಜ್ಜಿಯರಿಗೆ ಬಾಬ್‌ ಎಂದರೆ ಪ್ರಾಣ. ಅಲ್ಲಿ ಒಂದು ಅಜ್ಜಿ  ಗಟ್ಟಿಮುಟ್ಟಾಗಿದ್ದಾಳೆ. ಬಾಬ್‌ ಸೀದಾ ಅವಳ ಮೇಲೆ ಮುದ್ದಿನಿಂದ ಜಿಗಿದು ಆಕೆಯ ಹೊಟ್ಟೆ ಮೇಲೆ ಕಾಲಿಟ್ಟು ನಿಂತು ತಲೆ ನೇವರಿಸಿಕೊಳ್ಳುತ್ತಾನೆ. ವೀಲ್‌ಚಯರ್‌ ಮೇಲೆ ಇರುವ ಅಜ್ಜಿಯ ಹತ್ತಿರ ವಿಧೇಯ ಮಗುವಿನಂತೆ ಅಕ್ಕ ಪಕ್ಕ ಸುತ್ತುತ್ತಾನೆ. ಹಾಸಿಗೆ ಹಿಡಿರುವ ಅಜ್ಜಿ ಯ ಬಳಿ ಹೋಗಿ ಅವರ ಮಂಚದ  ಮೇಲೆ ಕಾಲಿಟ್ಟು ನಿಂತು ಮುದ್ದು ಮಾಡಿಸಿಕೊಂಡು ಬರುತ್ತಾನೆ. ಅದಕ್ಕೆ ಅವರು ಅವನಿಗೆ ತಿಂಡಿ ತರುವುದು, ಇವನಿಗೂ ಇದು ಅಭ್ಯಾಸವಾಗಿದೆ. ಯಾರು ಹೇಳಿದ್ದು ಪ್ರಾಣಿಗಳಿಗೆ ಸಭ್ಯತೆ ಇಲ್ಲ ಅಂತ! ನೋಡು ನನ್ನ ಹುಡುಗ ಎಷ್ಟು ಜಾಣ ಎಂದು ಹೆಮ್ಮೆಯಿಂದ ಬಾಬ್‌ ಕಡೆಗೆ ನೋಡುತ್ತಾನೆ. ಬಾಬ್‌ ಎಲ್ಲ ಅರ್ಥವಾದವರಂತೆ ಬಾಲ ಅಲ್ಲಾಡಿಸಿ ಕಣ್ಣರಳಿಸುತ್ತಾನೆ.

ಪ್ರತಿದಿನ ಭೇಟಿ ಬಾಬ್‌ನನ್ನು ಭೇಟಿ ಮಾಡುವುದು ಅಭ್ಯಾಸ ಆಗಿಬಿಟ್ಟಿತ್ತು. ಆ ದಿನ ನಿತ್ಯದ 10 ಆಟ ಮುಗಿಸಿ ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಬಾಬ್‌ ವಿಚಿತ್ರ ಧ್ವನಿ ತೆಗೆದ. ಅವನಿಗೆ ನೀವು ಹೋಗ್ತೀನೆ ಅಂದಿದ್ದು ಇಷ್ಟವಾಗ್ತಿಲ್ಲ ಎಂದು ಪ್ಯಾಟ್ರಿಕ್‌ ನಗಲು ಶುರು ಮಾಡಿದ. ನನಗೂ  ನಗು ಬಂದಿತ್ತು. ಮತ್ತೆ ಆ ದಿನ ಶುರುವಾದ ಈ ಅಳುವ ಕ್ರಮ ಈಗಲೂ ಜಾರಿಯಲ್ಲಿದೆ.

ಬಾಬ್‌ ಸ್ವಲ್ಪ ಚಟುವಟಿಕೆ ಕಡಿಮೆ ಮಾಡಿದರೂ  ಸಾಕು, ಪ್ಯಾಟ್ರಿಕ್‌ ಅವನನ್ನು ಕರೆದುಕೊಂಡು ಟ್ರಿಪ್‌ ಹೊರಡುತ್ತಾನೆ. ಸಮುದ್ರ ತೀರದಲ್ಲಿ ಕ್ಯಾರಾವ್ಯಾನ್‌ನಲ್ಲಿ ತಿಂಗಳುಗಟ್ಟಲೆ ಉಳಿದು ಬರುತ್ತಾರೆ. ಬಂದ  ಅನಂತರ ಬಾಬ್‌ನ  ವೀರಗಾಥೆಗಳನ್ನು ಕಣ್ಣೆದುರೇ ನಡೆದಂತೆ ಬಣ್ಣಿಸುತ್ತಾನೆ.

ನಿಯತಿ ಕೂಡ  ಒಂದು ನಾಯಿ ಮರಿ ಬೇಕು ಅಂತಾಳೆ. ಆದ್ರೆ ನಮಗೆ ಧೈರ್ಯ ಇಲ್ಲ ಎಂದಾಗ  ಪಾಟ್ರಿಕ್‌ ಗಂಭೀರವಾಗಿ, ನಾವು ಮಕ್ಕಳನ್ನು ಬೆಳೆಸುತ್ತೇವೆ, ಕೇಳಿದ್ದೆಲ್ಲ ಕೊಡಿಸುತ್ತೇವೆ, ಅದಕ್ಕಾಗಿ ದಿನ ರಾತ್ರಿ ಕಷ್ಟಪಟ್ಟು ಕೆಲಸ ಮಾಡ್ತೇವೆ. ಒತ್ತಡದಲ್ಲಿ ಬದುಕುತ್ತೇವೆ. ಆದರೆ ಮಕ್ಕಳು ನಮ್ಮನ್ನು ಒಂಟಿಯಾಗಿ ಬಿಟ್ಟು ತಮ್ಮ ಕನಸುಗಳನ್ನ ಅರಸಿ ಹೊರಡುತ್ತಾರೆ ಅಥವಾ ಚಟಗಳಿಗೆ ಬಿದ್ದು ದಾರಿ ಹೆಣವಾಗಿ ಹೋಗ್ತಾರೆ. ಬಾಬ್‌ ನೋಡು  ನಾನು ಬರುವುದನ್ನು ಎದುರು ನೋಡ್ತಾನೆ. ಸದಾ ಹಿಂದೆ ಮುಂದೆ ಓಡಾಡ್ತಾನೆ. ಎಲ್ಲಿದ್ದಾರೆ ನಾ ಬೆಳೆಸಿದ ನನ್ನ ಮಕ್ಕಳು ಎಂದು ಬೇಸರಿಸಿದ.  ಒಂದು ಸಣ್ಣ ಮರಿಯನ್ನು ತಂದುಕೊಡಿ, ಅವಳ ಬಾಲ್ಯ ಇನ್ನು ಸುಂದರವಾಗುತ್ತದೆ ಎಂದು ಹೇಳಿ ಅವನೇನೋ ಸುಮ್ಮನಾದ. ಆದರೆ ನನ್ನ ತಲೆಯಲ್ಲಿ  ಮಹಾಪೂರ ಹರಿಬಿಟ್ಟ. ನಾನು ಬಿಟ್ಟು ಬಂದಿರುವ ಅಪ್ಪ ಅಮ್ಮ,  ಮನೆ ಮಗಳಾಗಿ ನನಗಿರುವ ಕರ್ತವ್ಯ. ಏನೇನೋ ತಲೆಯಲ್ಲಿ ಸುಳಿದಾಡಿತು. ನಮ್ಮ  ತಂದೆ ತಾಯಿ  ನಮ್ಮ ಬಗ್ಗೆ ಹೀಗೆ ಅಂದುಕೊಂಡರೆ, ನಾ ಅವರನ್ನು ಪ್ರೀತಿಸುವುದು ಸುಳ್ಳಲ್ಲ. ಆದರೆ ಜತೆಗಿರಲು ಆಗುವುದಿಲ್ಲ ಎನ್ನುವ ಸತ್ಯ ಅರಗಿಸಿಕೊಳ್ಳಲು ಸ್ವಲ್ಪ ಹೊತ್ತು ಹಿಡಿಯಿತು.

ಬಾಬ್‌ ಈಗಲೂ  ನಮಗಾಗಿ ಕಾಯುತ್ತಾನೆ, ನಾವು ಅವನಿಗೆ ಕೊಡುವ ಬರೀ ಕೆಲವು ನಿಮಿಷದ ಬದಲು, ಬದುಕಿನ ಅತಿ ಸುಂದರ ಪಾಠ ಹೇಳಿಕೊಟ್ಟ ಜೀವಿ ಬಾಬ್‌ .

ದೇಶ ಬಿಟ್ಟು ದೇಶಕ್ಕೆ ಬಂದಿರುವ ನನಗೆ  ಬರೀ ಮನುಷ್ಯ ಬಾಂಧವ್ಯಗಳಷ್ಟೇ ಅಲ್ಲ. ಕಾಲ ಕಾಲಕ್ಕೆ ಅರಳುವ ಹೂ, ಚಿಗುರಿ ಬರಿದಾಗಿ ಮತ್ತೆ ಹಸುರಾಗುವ ಮರಗಿಡಗಳು , ಹಕ್ಕಿ ಚಿಟ್ಟೆ  ಮಾತು ಬಾರದ ಈ ಪ್ರಾಣಿಗಳೂ  ಮನಸ್ಸನ್ನು , ಬದುಕನ್ನೂ ಬೆಚ್ಚಗಿಟ್ಟಿವೆ.

 

ಅಮಿತಾ ರವಿಕಿರಣ್‌,
ಬೆಲ್‌ಫಾಸ್ಟ್‌,
ನಾರ್ದನ್‌ ಐರ್ಲೆಂಡ್‌

Advertisement

Udayavani is now on Telegram. Click here to join our channel and stay updated with the latest news.

Next