Advertisement

ಹಣ ಹಂಚದೇ ರಾಜಕಾರಣ ಮಾಡಿದೆ

12:45 AM Feb 08, 2023 | Team Udayavani |

ಜಗದೀಶ್‌ ಶೆಟ್ಟರ್‌, ಮಾಜಿ ಮುಖ್ಯಮಂತ್ರಿ
ನಾನು ಮೊಟ್ಟ ಮೊದಲು ಚುನಾವಣೆ ಎದುರಿಸಿದ್ದು 1994ರಲ್ಲಿ. ಆಗ ಆ ಕ್ಷೇತ್ರದ ಹೆಸರು ಹುಬ್ಬಳ್ಳಿ ಗ್ರಾಮೀಣ ಎಂದಾಗಿತ್ತು. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಅನಂತರ ಇದು ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರ ಎಂದಾಯಿತು. ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ನಾಯಕನಾಗಿದ್ದೆ. ನನ್ನ ವಿದ್ಯಾಭ್ಯಾಸದ ಅನಂತರ ಹುಬ್ಬಳ್ಳಿ ನ್ಯಾಯಾಲಯದಲ್ಲಿ ವಕೀಲನಾಗಿ ವೃತಿ ಆರಂಭಿಸಿದೆ. ವಕೀಲ ವೃತ್ತಿಯ ಪ್ರಾಕ್ಟೀಸ್‌ ಚೆನ್ನಾಗಿತ್ತು. ಇದರಿಂದ ಜನ ಸಂಪರ್ಕವೂ ಸಾಧ್ಯವಾಯಿತು. ಹುಬ್ಬಳ್ಳಿ ಗ್ರಾಮೀಣ ಘಟಕದ ಬಿಜೆಪಿ ಅಧ್ಯಕ್ಷನಾಗಿ ಕೆಲಸ ಮಾಡುತ್ತಾ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡೆ. ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಪ್ರತೀ ಅಸೆಂಬ್ಲಿ ಚುನಾವಣೆಯಲ್ಲಿಯೂ ಸೋಲುತ್ತಿತ್ತು. ಈ ಕ್ಷೇತ್ರದಲ್ಲಿ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುತ್ತಾ ಬಂದೆ. ಇದೇ ಕ್ಷೇತ್ರದಿಂದಲೇ 1994ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದೆ. ಯಡಿಯೂರಪ್ಪ ಹಾಗೂ ಅನಂತಕ‌ು ಮಾರ್‌ ಅವರು ನನ್ನ ಗೆಲುವಿಗೆ ಶ್ರಮಿಸಿದರು.
ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಲ್ಲಿ ಆಗೆಲ್ಲ ಕಾಂಗ್ರೆಸ್‌-ಜನತಾ ಪರಿವಾರದ ಮಧ್ಯೆ ಸ್ಪರ್ಧೆ ನಡೆಯುತ್ತಿತ್ತು. ಮಾಜಿ ಮುಖ್ಯಮಂತ್ರಿ ಜನತಾದಳದ ಎಸ್‌.ಆರ್‌.ಬೊಮ್ಮಾಯಿ ಹಾಗೂ ಕಾಂಗ್ರೆಸಿನ ಗೋಪಿನಾಥ ಸಾಂಡ್ರಾ ಅವರ ಮಧ್ಯೆ ಪೈಪೋಟಿ ಇರುತ್ತಿತ್ತು. ಈ ಕ್ಷೇತ್ರದಲ್ಲಿ 1994ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧಿಸಿದೆ. ಜನತಾದಳದಿಂದ ಈಗ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಕಣಕ್ಕೆ ಇಳಿದಿದ್ದರು. ಕಾಂಗ್ರೆಸ್‌ನಿಂದ ರಾಜಾ ದೇಸಾಯಿ ಸ್ಪರ್ಧಿಸಿದ್ದರು. ಆಗ ರಾಜ್ಯದಲ್ಲಿ ಜನತಾದಳ ಅಲೆ ಇತ್ತು.

Advertisement

ಕ್ಷೇತ್ರದಲ್ಲಿ ನಾನು ಹತ್ತು ಸಾವಿರ ಹೊಸ ಮತದಾರರನ್ನು ಮತದಾರರ ಪಟ್ಟಿಗೆ ನೋಂದಾಯಿಸಿದ್ದೆ. ಪಕ್ಷದ ಕಾರ್ಯಕರ್ತರ ಪಡೆಯೊಂದಿಗೆ ಮನೆಮನೆ ಪ್ರಚಾರ ಕೈಗೊಂಡೆ. ಕಾರ್ನರ್‌ ಸಭೆಗಳನ್ನು ಮಾಡಿದೆ. ಎತ್ತರದ ಪ್ರದೇಶಗಳಲ್ಲಿದ್ದ ಒಂಟಿ ಮನೆಗಳಿಗೂ ಹೋಗಿ ಮತ ಯಾಚಿಸಿದೆ. ಐದಾರು ಮಹಡಿಗಳಿರುವ ಅಪಾರ್ಟ್‌ ಮೆಂಟ್‌ಗಳಿಗೆ ತೆರಳಿ ಮತ ನೀಡುವಂತೆ ಕೋರಿದೆ. ಮತದಾರರ ನೇರ ಸಂಪರ್ಕ ನನಗೆ ಪ್ಲಸ್‌ ಪಾಯಿಂಟ್‌ ಆಯಿತು. ನನ್ನ ಕಕ್ಷಿದಾರರು, ನನ್ನ ವಕೀಲ ಸ್ನೇಹಿತರು, ಗೆಳೆಯರು ನನ್ನ ಪರವಾಗಿ ನಿಂತರು. ನಮ್ಮ ತಂದೆ ಎಸ್‌.ಎಸ್‌.ಶೆಟ್ಟರ್‌ ಒಮ್ಮೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್‌ ಆಗಿದ್ದರು. ಅವರ ನಾಮಬಲವೂ ಇತ್ತು. ನನ್ನ ಸ್ನೇಹಿತರೇ ಚುನಾವಣೆಯಲ್ಲಿ ಹಣ ಖರ್ಚು ಮಾಡಿದರು. ಅತ್ಯಂತ ಕಡಿಮೆ ಹಣವನ್ನು ಆ ಚುನಾವಣೆಯಲ್ಲಿ ವೆಚ್ಚ ಮಾಡಿದೆ. ಚುನಾವಣ ಕಣದಲ್ಲಿ ಹೊಸಮುಖ ಎಂಬುದು ನನಗೆ ಅನುಕೂಲವಾಯಿತು. ಆ ಚುನಾವಣೆಯಲ್ಲಿ ಸುಮಾರು 16 ಸಾವಿರ ಮತಗಳ ಅಂತರದಿಂದ ಜನತಾದಳ ಅಭ್ಯರ್ಥಿ ವಿರುದ್ಧ ಜಯ ಸಾಧಿಸಿದೆ. ಮೊದಲ ಬಾರಿಗೆ ಬಿಜೆಪಿಯ ಕಮಲ ಈ ಕ್ಷೇತ್ರದಲ್ಲಿ ಅರಳಿತು.

ಆ ಚುನಾವಣೆಯಲ್ಲಿ ನಾನು ಮುಖ್ಯವಾಗಿ ನೆನಪಿಸಿಕೊಳ್ಳುವುದು ಕೇಂದ್ರ ಚುನಾವಣ ಆಯೋಗದ ಅಂದಿನ ಮುಖ್ಯ ಆಯುಕ್ತರಾಗಿದ್ದ ಟಿ.ಎನ್‌.ಶೇಷನ್‌ ಅವರನ್ನು. ಅವರು ಚುನಾವಣ ಅಕ್ರಮಗಳಿಗೆ ಬಿಗಿ ಕಡಿವಾಣ ಹಾಕಿದರು. ಅಂದು ಧಾರವಾಡದ ಜಿಲ್ಲಾಧಿಕಾರಿಯಾಗಿದ್ದ ಜಾಧವ್‌ ಅವರು ಚುನಾವಣ ಅಕ್ರಮಗಳನ್ನು ತಡೆಯಲು ಬಿಗಿ ಕ್ರಮಗಳನ್ನು ಕೈಗೊಂಡರು. ಎಲ್ಲ ಜಿಲ್ಲಾಧಿಕಾರಿಗಳು ಮರಿ ಶೇಷನ್‌ ರೀತಿ ಇದ್ದರು. ಆ ಚುನಾವಣೆಯಿಂದ ಪ್ರತೀ ಚುನಾವಣೆಯಲ್ಲೂ ನನ್ನ ಗೆಲುವಿನ ಮತಗಳ ಅಂತರ ಹೆಚ್ಚಾಗುತ್ತಲೇ ಬಂದಿದೆ. ಕಳೆದ ಆರು ಚುನಾವಣೆಗಳಲ್ಲಿ ನನ್ನ ಎದುರಾಳಿಗಳಾಗಿ ಸ್ಪರ್ಧಿಸಿ ಪರಾಭವಗೊಂಡ ಅನೇಕ ಅಭ್ಯರ್ಥಿಗಳೇ ಅನಂತರ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ನಮ್ಮ ಪಕ್ಷದಲ್ಲಿರುವ ಹಾಗೆ ಬದ್ಧತೆಯ ಕಾರ್ಯಕರ್ತರ ಪಡೆ ಬೇರೆ ಪಕ್ಷಗಳಲ್ಲಿ ಇಲ್ಲ.

ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರದ ಜನತೆ ಚುನಾವಣೆಗಳಲ್ಲಿ ಹಣ ಬಲಕ್ಕೆ ಯಾವತ್ತೂ ಬೆಲೆ ಕೊಟ್ಟಿಲ್ಲ. ಚುನಾವಣೆಗಳಲ್ಲಿ ಅಭ್ಯರ್ಥಿಗಳ ಮಧ್ಯೆ ವೈಯಕ್ತಿಕ ನಿಂದನೆಯೂ ಬಹಳ ಕಡಿಮೆ. ಎದುರಾಳಿಗಳ ಬಗ್ಗೆ ನಾನೆಂದೂ ಕೀಳಾಗಿ ಮಾತಾಡಿಲ್ಲ. ನನ್ನ ಎದುರಾಳಿಗಳೂ ನನ್ನನ್ನು ಯಾವತ್ತೂ ವೈಯಕ್ತಿಕವಾಗಿ ನಿಂದಿಸಿಲ್ಲ. ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚುವುದಿಲ್ಲ ಎಂದು ಎಲ್ಲ ಪಕ್ಷದವರು ಇವತ್ತು ಹೇಳಬೇಕು. ಮತವನ್ನು ಮಾರಿಕೊಳ್ಳುವುದಿಲ್ಲ ಎಂದು ಮತದಾರರೂ ಇಚ್ಛಾಶಕ್ತಿ ತೋರಬೇಕು.

-ಕೂಡ್ಲಿ ಗುರುರಾಜ

Advertisement
Advertisement

Udayavani is now on Telegram. Click here to join our channel and stay updated with the latest news.

Next