Advertisement

ಕುಮಾರಸ್ವಾಮಿ -ಯೋಗೇಶ್ವರ್‌ ನಡುವೆ “ಟಾಕ್‌ವಾರ್‌’

08:58 PM Oct 01, 2022 | Team Udayavani |

ಬೆಂಗಳೂರು/ಚನ್ನಪಟ್ಟಣ: ಕಾಮಗಾರಿಯೊಂದರ ಗುದ್ದಲಿ ಪೂಜೆ ನೆರವೇರಿಸುವ ವಿಚಾರದಲ್ಲಿ ಸ್ಥಳೀಯ ಶಾಸಕರೂ ಆದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಪರಿಷತ್‌ ಸದಸ್ಯ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ನಡುವೆ ಮಾತಿನ ಚಕಮಕಿ ನಡೆದಿದೆ.

Advertisement

ಎರಡೂ ಗುಂಪಿನ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರಿಗೆ ಆಹ್ವಾನ ಇಲ್ಲದ ಕಾರಣ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಇದಾದ ನಂತರವೂ ಯೋಗೇಶ್ವರ್‌ ನಿವಾಸದ ಮೇಲೆ ಕಲ್ಲು ಮೊಟ್ಟೆ ಎಸೆದ ಘಟನೆ ನಡೆದಿದೆ. ಇದರ ನಡುವೆ, ಕುಮಾರಸ್ವಾಮಿ ಹಾಗೂ ಯೋಗೇಶ್ವರ್‌ ಪರಸ್ಪರ ಆರೋಪ-ಪ್ರತ್ಯಾರೋಪವೂ ನಡೆದಿದೆ.

ಎಚ್‌ಡಿಕೆ ಏನೆಂದರು?
ಕ್ಷೇತ್ರದ ಶಾಸಕರನ್ನು ಕತ್ತಲೆಯಲ್ಲಿಟ್ಟು ಕಾಮಗಾರಿ ರಾಜಕೀಯ ಮಾಡಲಾಗುತ್ತಿದೆ. ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ನನಗೆ ಅಪಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿನ ಅಧಿಕಾರಿಗಳು ನನ್ನ ಪಾಲಿಗೆ ಹಕ್ಕುಚ್ಯುತಿ ಎಸಗಿದ್ದಾರೆ.

ಓರ್ವ ನಾಮನಿರ್ದೇಶಿತ ವಿಧಾನ ಪರಿಷತ್‌ ಸದಸ್ಯರ ರಾಜಕೀಯ ಹಿತರಕ್ಷಣೆ ಮಾಡುವ ಏಕೈಕ ಉದ್ದೇಶದಿಂದ ಎಲ್ಲ ಶಿಷ್ಟಾಚಾರಗಳನ್ನು ಗಾಳಿಗೆ ತೂರಿ ಅಪಚಾರ ಎಸಗಲಾಗಿದ್ದು ಚನ್ನಪಟ್ಟಣದಲ್ಲಿ ನಡೆದಿರುವ ಎಲ್ಲ ಘಟನೆಗಳಿಗೂ ಸರ್ಕಾರ, ಅಧಿಕಾರಿಗಳು ಮತ್ತು ವಿಧಾನಪರಿಷತ್‌ ಸದಸ್ಯರೇ ಕಾರಣ ಎಂದು ದೂರಿದರು.

ಇತ್ತೀಚೆಗೆ ಕೆಐಎಡಿಬಿ ಸಭೆಯಲ್ಲೂ ಉಸ್ತುವಾರಿ ಸಚಿವರಾಗಿ ನಾನೇ ಎಲ್ಲಾ ಉದ್ಘಾಟನೆ ಕಾರ್ಯಕ್ರಮಗಳಿಗೆ ಬರುತ್ತೇನೆಂದು ರಾಮನಗರ ಉಸ್ತುವಾರಿ ಸಚಿವರು ಹೇಳಿದ್ದಾರೆ. ಮೊನ್ನೆ ಮುದ್ರಿಸಿ ಹೊರಡಿಸಿರುವ ಆಹ್ವಾನ ಪತ್ರಿಕೆಯನ್ನು ನನ್ನ ಗಮನಕ್ಕೆ ತಂದಿಲ್ಲ. ವಿಧಾನ ಪರಿಷತ್‌ ಸದಸ್ಯರ ಕೋರಿಕೆ ಮೇರೆಗೆ 50 ಕೋಟಿ ರೂ. ಬಿಡುಗಡೆ ಮಾಡಿದ್ದಾರೆಂದು ಸಿ.ಪಿ. ಯೋಗೇಶ್ವರ್‌ ಹೆಸರು ಹಾಕಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿ ಕ್ಷೇತ್ರದಲ್ಲೇ ಈ ರೀತಿ ದಬ್ಟಾಳಿಕೆ ಅಂದರೆ ನೀವೇ ಯೋಚನೆ ಮಾಡಿ ಎಂದರು.

Advertisement

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಕೆಡುವುದರಲ್ಲಿ ಸಿ.ಪಿ.ಯೋಗೇಶ್ವರ್‌ ಪಾತ್ರ ಏನು. ಆಗ ಅವರು ಯಾವ ಪಾಪದ ಹಣ ಬಳಸಿಕೊಂಡರು ಅನ್ನುವುದನ್ನು ನಾನು ಈಗ ಮಾತನಾಡುವುದಿಲ್ಲ. ಮುಂದಿನ ಆರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಹಣ ಹೊಡೆಯೋಕೆ ಯೋಗೇಶ್ವರ್‌ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಪ್ರೀತಿ, ವಿಶ್ವಾಸ ಮತ್ತು ಕಾನೂನಿಗೆ ತಲೆಬಾಗುತ್ತೇನೆ. ನೀವು ಧಮ್ಮು, ತಾಕತ್ತು ಎಂದು ಹೇಳಿ ತೋರಿಸುವುದಕ್ಕೆ ಬಂದರೆ ಅದಕ್ಕೆ ನಾವೂ ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.

ಸಿಪಿವೈ ವಾದ ಏನು?
ಶಾಂತಿಪ್ರಿಯ ಹಾಗೂ ಸ್ವಾಭಿಮಾನಿ ಚನ್ನಪಟ್ಟಣದಲ್ಲಿ ಗೂಂಡಾ ಸಂಸ್ಕೃತಿಗೆ ನಾಂದಿ ಹಾಡಿದ ಕೀರ್ತಿ ಮಾಜಿ ಸಿಎಂ, ಶಾಸಕ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ದೂರಿದ್ದಾರೆ.

ಕಳೆದ ಮೂವತ್ತು-ನಲವತ್ತು ವರ್ಷಗಳಿಂದ ತಾಲೂಕಿನಲ್ಲಿ ಜೆಡಿಎಸ್‌ ಪಕ್ಷವನ್ನು ಸಶಕ್ತವಾಗಿ ಸಂಘಟನೆ ಮಾಡಿಕೊಂಡು ಬಂದಿದ್ದ ಅನೇಕ ಪ್ರಭಾವಿ ಮುಖಂಡರು ಹಾಗೂ ಪ್ರಮುಖ ಕಾರ್ಯಕರ್ತರು ಅವರ ಪಕ್ಷವನ್ನು ತೊರೆಯುತ್ತಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ. ಜನರ ಮನಸ್ಥಿತಿಯನ್ನು ಬೇರೆಡೆಗೆ ತಿರುಗಿಸಲು ತಾಲೂಕಿನ ಹೊರಗಿನ ರೌಡಿ- ಗೂಂಡಾಗಳನ್ನು ಕರೆತಂದು ಗಲಾಟೆ, ಗದ್ದಲ ಮೂಡಿಸಿದ್ದಾರೆಂದು ಆರೋಪ ಮಾಡಿದ್ದಾರೆ.

ಚನ್ನಪಟ್ಟಣ ತಾಲೂಕಿನ ಜನತೆ ಹಾಗೂ ನಾವು (ಬಿಜೆಪಿ) ಕುಮಾರಸ್ವಾಮಿ ಕುತಂತ್ರ ರಾಜಕೀಯದಿಂದಾಗಿ ಬಲಿಪಶುಗಳಾಗಿದ್ದೇವೆ. ಕುಮಾರಸ್ವಾಮಿ ಒಬ್ಬ ಬ್ಲಾಕ್‌ ಮೇಲರ್‌, ರಾಜ್ಯ ಸರ್ಕಾರ ಹಾಗೂ ನಮ್ಮದೇ ಪಕ್ಷದ ಕೆಲವು ಸಚಿವರ ದೌರ್ಬಲ್ಯವನ್ನು ತಿಳಿದುಕೊಂಡು ಬ್ಲಾಕ್‌ವೆುàಲ್‌ ಮಾಡುವ ಮೂಲಕ ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಚನ್ನಪಟ್ಟಣ-ರಾಮನಗರದಲ್ಲಿ ಕುಮಾರಸ್ವಾಮಿ ಹಾಗೂ ಅವರ ಶ್ರೀಮತಿ ಅವರಿಗೆ ಹಿನ್ನಡೆಯಾಗುತ್ತಿರುವ ಲಕ್ಷಣಗಳನ್ನು ಮನಗಂಡು ರಾಜಕೀಯವಾಗಿ ಹತಾಶರಾಗಿ ಗೂಂಡಾಗಿರಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಕಳೆದ ನಾಲ್ಕು ಕಾಲು ವರ್ಷಗಳಲ್ಲಿ ಶಾಸಕರಾಗಿ ಕುಮಾರಸ್ವಾಮಿ ಅವರು ತಾಲೂಕಿನಲ್ಲಿ ಎಷ್ಟರಮಟ್ಟಿಗೆ ಶಿಷ್ಟಾಚಾರ ಪಾಲಿಸಿದ್ದಾರೆ ಎಂಬುದನ್ನು ಅವರೇ ಹೇಳಲಿ, ವಿಧಾನ ಪರಿಷತ್‌ ಸದಸ್ಯರು, ಸಂಸದರು, ಶಾಸಕರು, ಸಚಿವರು ಭಾಗವಹಿಸುವ ಎಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.ಯಾವ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಶಿಷ್ಟಾಚಾರ ಪಾಲಿಸಿದ್ದಾರೆ. ನಾಡಹಬ್ಬ, ರಾಷ್ಟ್ರೀಯ ಹಬ್ಬಗಳಲ್ಲಿ ಎಷ್ಟು ಬಾರಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ.
– ಸಿ.ಪಿ.ಯೋಗೇಶ್ವರ್‌ ಪರಿಷತ್‌ ಸದಸ್ಯ

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಮುಗಿಸಬೇಕು ಎಂದು ಕಾಂಗ್ರೆಸ್‌, ಬಿಜೆಪಿ ಪಕ್ಷಗಳು ಒಂದಾಗಿದ್ದವು. ಈಗ ರಾಮನಗರದಲ್ಲಿ ಒಬ್ಬರನ್ನು ತಯಾರು ಮಾಡಿ ಬಿಟ್ಟಿದ್ದಾರೆ. ಈಗ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ನನ್ನನ್ನು ಕಟ್ಟಿಹಾಕಲು ಬಿಜೆಪಿ, ಕಾಂಗ್ರೆಸ್‌ ಒಂದಾಗಿವೆ ಅನ್ನುವುದೂ ನನಗೆ ಗೊತ್ತಿದೆ. ಆದರೆ ನಾನು ಅಲ್ಲಿ ಜನರ ಮನೆಯ ಮಗನಾಗಿದ್ದೇನೆ. ಅವರು ಏನು ಮಾಡುವುದಕ್ಕೂ ಆಗುವುದಿಲ್ಲ.
-ಎಚ್‌.ಡಿ.ಕುಮಾರಸ್ವಾಮಿ ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next