Advertisement
ಮಂಗಳವಾರ ಶೃಂಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿದ್ದರೆ 24 ಗಂಟೆಯೊಳಗಾಗಿ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತಿದ್ದೆ. ಆದರೆ, ಈಗ ಸಮ್ಮಿಶ್ರ ಸರ್ಕಾರ ರಚನೆ ಯಾಗುತ್ತಿರುವುದರಿಂದ ತಾವೊಬ್ಬರೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಸಂಪೂರ್ಣ ಬಹುಮತ ನೀಡುವಂತೆ ರಾಜ್ಯದ ಜನತೆಯಲ್ಲಿ ಪರಿಪರಿಯಾಗಿ ಬೇಡಿಕೊಂಡಿದ್ದೆ. ಆದರೆ, ನಮ್ಮ ಮಾತಿಗೆ ಮನ್ನಣೆ ನೀಡಿಲ್ಲ. ಮತದಾರರು ನೀಡಿರುವ ತೀರ್ಪನ್ನು ನೋಡಿದರೆ ಅವರಿಗೆ ರೈತರ ಸಾಲಮನ್ನಾ ಮಾಡುವುದು ಬೇಕಿರಲಿಲ್ಲ ಎನಿಸುತ್ತದೆ. ಈ ಬಗ್ಗೆ ಹಲವರು ಟೀಕೆ ಮಾಡುತ್ತಿದ್ದಾರೆ. ಆದರೂ ರೈತರು ನೆಮ್ಮದಿಯಿಂದ ಇರಬೇಕೆಂಬುದು ನಮ್ಮ ಬಯಕೆ. ನಾವು ನೀಡಿರುವ ಭರವಸೆ ಹಾಗೂ ಕಾಂಗ್ರೆಸ್ನವರು ನೀಡಿರುವ ಭರವಸೆಯ ಬಗ್ಗೆ ಕುಳಿತು ಚರ್ಚಿಸಿ ಅವುಗಳ ಅನುಷ್ಠಾ ನಕ್ಕೆ ಪ್ರಯತ್ನಿಸುವುದಾಗಿ ಹೇಳಿದರು.
ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ
ಮಾಡುವುದಾಗಿ ಚುನಾವಣೆಗೆ ಪೂರ್ವದಲ್ಲಿ ಕುಮಾರಸ್ವಾಮಿ ಭರವಸೆ ನೀಡಿದ್ದರು. ಆದರೆ, ಈಗ ನಮ್ಮ ಪಕ್ಷಕ್ಕೆ ಬಹುಮತ ಬಂದಿಲ್ಲ ಎನ್ನುವ ಮೂಲಕ ರಾಜ್ಯದ ರೈತರಿಗೆ ವಂಚಿಸಿದ್ದಾರೆ. ಕುಮಾರಸ್ವಾಮಿ ಪಲಾಯನವಾದ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಶಿವಮೊಗ್ಗದಲ್ಲಿ ಮಾತನಾಡಿದ ಶಾಸಕ ಕೆ.ಎಸ್.ಈಶ್ವರಪ್ಪ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮೊದಲೇ ಕುಮಾರಸ್ವಾಮಿಯವರು ರಾಜ್ಯದ ರೈತರ ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿರುವುದು ರೈತರಿಗೆ ಮಾಡಿದ ದೊಡ್ಡ ದ್ರೋಹ ಎಂದು ಟೀಕಿಸಿದರು.