Advertisement

ಹಾವೇರಿ:ಸೋರುತಿಹುದು ಶಾಲಾ ಕೊಠಡಿ-ಕಾಡುತಿಹುದು ಪ್ರಾಣ ಭಯ

04:42 PM May 27, 2023 | Team Udayavani |

ಹಾವೇರಿ: ಜಿಲ್ಲೆಯಲ್ಲಿ ಮೇ 29ರಿಂದ ಶಾಲೆಗಳು ಪುನಾರಂಭಗೊಳ್ಳಲಿದ್ದು, ಮಕ್ಕಳನ್ನು ಸ್ವಾಗತಿಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಮತ್ತೂಂದೆಡೆ ಜಿಲ್ಲೆಯ ಹಲವು ಶಾಲೆಗಳಲ್ಲಿ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದ್ದು, ವಿದ್ಯಾರ್ಥಿಗಳು ಜೀವಭಯದಲ್ಲಿಯೇ ಶಾಲೆಗಳತ್ತ ಹೆಜ್ಜೆ ಹಾಕುವ ಅನಿವಾರ್ಯತೆ ಎದುರಾಗಿದೆ.

Advertisement

ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಸುಮಾರು 1.60 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಒಟ್ಟು 1160
ಪ್ರಾಥಮಿಕ ಹಾಗೂ 141 ಪ್ರೌಢಶಾಲೆಗಳು ಸೇರಿದಂತೆ 1301 ಶಾಲೆಗಳಿವೆ. ಇವುಗಳಲ್ಲಿ ಒಟ್ಟು 7761 ತರಗತಿ ಕೊಠಡಿಗಳಿವೆ. ಆದರೆ, ಪ್ರತಿ ವರ್ಷ ಅತಿವೃಷ್ಟಿ, ಬಿರುಗಾಳಿ ಸೇರಿದಂತೆ ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಹಲವು ಶಾಲಾ ಕೊಠಡಿಗಳು ಹಾಳಾಗಿವೆ. ಇನ್ನು ಕೆಲವು ಅನೇಕ ವರ್ಷಗಳಿಂದ ದುರಸ್ತಿಯನ್ನೇ ಕಾಣದೇ ಶಿಥಿಲಾವಸ್ಥೆಗೆ ತಲುಪಿವೆ.

ಶಿಥಿಲಾವಸ್ಥೆಯಲ್ಲಿ 2565 ಕೊಠಡಿ: ಜಿಲ್ಲೆಯ 7761 ತರಗತಿ ಕೋಣೆಗಳ ಪೈಕಿ 5196 ಕೊಠಡಿಗಳು ಮಾತ್ರ ಸುಸ್ಥಿತಿಯಲ್ಲಿವೆ. ಇನ್ನುಳಿದ ಸುಮಾರು ಎರಡೂವರೆ ಸಾವಿರ ಕೊಠಡಿಗಳು ಸಣ್ಣಪುಟ್ಟ ದುರಸ್ತಿ, ಮೇಜರ್‌ ರಿಪೇರಿಗೆ ಕಾಯುತ್ತಿವೆ. ಅವುಗಳಲ್ಲಿ ಕಳೆದ ವರ್ಷ ಎನ್‌ ಡಿಆರ್‌ಎಫ್‌, ವಿವೇಕ ಯೋಜನೆ, ಜಿಪಂ ಸೇರಿದಂತೆ ವಿವಿಧ ಯೋಜನೆಗಳಡಿ 839 ಶಾಲೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.

ಚುನಾವಣಾ ನೀತಿ ಸಂಹಿತೆ ಎಂಬ ಸಬೂಬು ಹೇಳುತ್ತ ಸಣ್ಣಪುಟ್ಟ ದುರಸ್ತಿಯನ್ನೂ ಮಾಡದೇ ಈಗ ಮಳೆಗಾಲ ಶುರುವಾಗುತ್ತಿದ್ದಂತೆ ಅಧಿ ಕಾರಿಗಳು ಎಚ್ಚರಗೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಿದ್ದ ಮಳೆಗೆ ಕೆಲವು ಶಾಲೆಗಳ ಮೇಲ್ಛಾವಣಿ ಹಾರಿ ಹೋಗಿವೆ. ಸವಣೂರು, ಹಾನಗಲ್ಲ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಶಾಲೆಗಳಿಗೆ ಹಾನಿಯಾಗಿದೆ.

ಸೋರುತಿಹುದು ಶಾಲಾ ಕೊಠಡಿ: ಅನೇಕ ವರ್ಷಗಳ ಹಿಂದೆ ನಿರ್ಮಿಸಿದ್ದ ಸರ್ಕಾರಿ ಶಾಲೆಗಳ ಕಟ್ಟಡಗಳು ಹೆಂಚು, ತಗಡಿನಿಂದ ಕೂಡಿವೆ. ಈ ಹೆಂಚುಗಳು ಮಳೆ, ಗಾಳಿಗೆ ಹಾರಿಹೋಗಿದ್ದರೂ ಅದನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡುವ ಕಾರ್ಯವೂ ಆಗುತ್ತಿಲ್ಲ. ಇದರಿಂದಾಗಿ ಹೆಂಚಿನ ಕಟ್ಟಡಗಳು ಮಳೆ ಬಂದರೆ ಸೋರುವುದು ಸಾಮಾನ್ಯವಾಗಿವೆ.

Advertisement

ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆರ್‌ಸಿಸಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಗುಣಮಟ್ಟದ ಕೊರತೆಯಿಂದಾಗಿ ಕಟ್ಟಿದ ವರ್ಷದಿಂದಲೇ ಬಿರುಕು ಬಿಟ್ಟು ಅವು ಸೋರುವಂತಾಗಿವೆ. ಕೆಲವು ಶಾಲೆಗಳಲ್ಲಿ ಸಿಮೆಂಟ್‌ ತುಂಡುಗಳು ಮಕ್ಕಳ ತಲೆ ಮೇಲೆ ಬೀಳುತ್ತಿರುವ ನಿದರ್ಶನಗಳು ಸಾಕಷ್ಟಿವೆ. ಅಂಥ ಅಪಾಯಕರ ಕಟ್ಟಡಗಳಲ್ಲೇ ಅನಿವಾರ್ಯವಾಗಿ ಮಕ್ಕಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ.

ಕೊಠಡಿಗಳಿಗೆ ದುರಸ್ತಿ ಭಾಗ್ಯ: 2022-23ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿ, ಪ್ರವಾಹದಿಂದ ನೂರಾರು ಶಾಲೆಗಳಿಗೆ
ಹಾನಿಯಾಗಿತ್ತು. ಎನ್‌ಡಿಆರ್‌ಎಫ್‌ ಯೋಜನೆಯಲ್ಲಿ 13.3 ಕೋಟಿ ರೂ. ಅನುದಾನ ಮಂಜೂರಾಗಿದ್ದು, 339 ಶಾಲೆಗಳಲ್ಲಿ 753 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಇನ್ನು ರಾಜ್ಯ ಸರ್ಕಾರದ ವಿವೇಕ ಯೋಜನೆಯಡಿ 21 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 147 ಶಾಲೆಗಳಲ್ಲಿ 197 ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಹೀಗೆ ಸಣ್ಣ ಪುಟ್ಟ ದುರಸ್ತಿ, ನಿರ್ಮಾಣ ಸೇರಿದಂತೆ 839 ಶಾಲೆಗಳಲ್ಲಿ 57.52 ಕೋಟಿ ರೂ. ವೆಚ್ಚದಲ್ಲಿ 1348 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಕೊಠಡಿ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ವಿವೇಕ ಯೋಜನೆಯಡಿ ಮುಂಜೂರಾದ 147 ಕೊಠಡಿಗಳಲ್ಲಿ 118ಕೊಠಡಿಗಳು ತಳಪಾಯದ ಹಂತದಲ್ಲಿದ್ದರೆ, 19 ಕೊಠಡಿಗಳ ಕಾಮಗಾರಿ ಆರಂಭವೇ ಆಗಿಲ್ಲ. 37 ಕೊಠಡಿಗಳು ಛಾವಣಿ ಹಂತಕ್ಕೆ ಬಂದಿವೆ.

ಇವು ಪೂರ್ಣಗೊಂಡು ಬಳಕೆಗೆ ಸಿಗುವ ವೇಳೆಗೆ ಬರುವ ಶೈಕÒ‌ಣಿಕ ವರ್ಷವೇ ಮುಗಿಯುವ ಸಾಧ್ಯತೆಯಿದೆ. ಇಂಗ್ಲಿಷ್‌ ಮಾಧ್ಯಮ ಇರುವ ಶಾಲೆಗಳಲ್ಲಿ ಒಂದೇ ತರಗತಿಗೆ ಎರಡು ಮಾಧ್ಯಮವಿರುವುದರಿಂದ ಕೊಠಡಿ ಗಳಿಲ್ಲದೇ ಸಮಸ್ಯೆಯಾಗುತ್ತಿದೆ. ಈ ವರ್ಷ 1ರಿಂದ 5ನೇ ತರಗತಿವರೆಗೆ ಆಂಗ್ಲ ಮಾಧ್ಯಮ ಇರಲಿದ್ದು, ಮತ್ತಷ್ಟು ಸಮಸ್ಯೆ ನಿಶ್ಚಿತ ಎನ್ನುವುದು ಪಾಲಕರ
ಅಭಿಪ್ರಾಯವಾಗಿದೆ.ನೂರಾರು ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಬಾಕಿಯಿದೆ. ಆಟದ ಮೈದಾನ, ಶಾಲೆಗಳಿಗೆ ಕಾಂಪೌಂಡ್‌ ಬೇಡಿಕೆಯಿದೆ. ಬಹುತೇಕ ಎಲ್ಲ ಶಾಲೆಗಳಲ್ಲಿ ಶೌಚಾಲಯಗಳಿದ್ದರೂ ಅವು ಬಳಕೆಗೆ ಬಾರದಂತಾಗಿವೆ. ಇವೆಲ್ಲ ಕಾರಣಗಳಿಂದ ಪಾಲಕರು ತಮ್ಮ ಮಕ್ಕಳನ್ನು ನಗರದ ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಿದ್ದಾರೆ.

250 ಕೊಠಡಿನಿರ್ಮಾಣಕ್ಕೆ ಪ್ರಸ್ತಾವನೆ

2023-24ನೇ ಶೈಕ್ಷಣಿಕ ಸಾಲಿಗೆ 250 ಕೊಠಡಿ ನಿರ್ಮಾಣಕ್ಕೆ, 350 ಶಾಲೆಗಳ 600 ಕೊಠಡಿ ದುರಸ್ತಿಗೆ ಶಿಕ್ಷ ಣ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. 638 ಶಾಲೆಗಳಿಗೆ ಬೆಂಚ್‌, ಡೆಸ್ಕ್ ಸೇರಿದಂತೆ 5000 ಪೀಠೊಪಕರಣಗಳ ಅಗತ್ಯವಿದೆ. 250 ಶಾಲೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ. 250 ಅಡುಗೆ ಕೋಣೆ ನಿರ್ಮಾಣಕ್ಕೂ ಬೇಡಿಕೆ ಇಡಲಾಗಿದೆ.

1737 ಶಿಕ್ಷಕರ ಕೊರತೆ
ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಸಮಸ್ಯೆಯಿಂದ ಮಕ್ಕಳು ಗುಣಮಟ್ಟಣದ ಶಿಕ್ಷಣದಿಂದ ವಂಚಿತಗೊಳ್ಳುವಂತಾಗಿದೆ. ಜಿಲ್ಲೆಯಲ್ಲಿ ಒಟ್ಟು ಪ್ರಾಥಮಿಕ ಶಾಲೆಗಳಲ್ಲಿ 1518 ಶಿಕ್ಷಕರು ಹಾಗೂ ಪ್ರೌಢಶಾಲೆಯಲ್ಲಿ 219 ಶಿಕ್ಷಕರ ಕೊರತೆ ಎದುರಾಗಿದೆ. ಈ ನಡುವೆ ಶಿಕ್ಷಕರ ಕೊರತೆ ಸಮಸ್ಯೆ ನೀಗಿಸಲು ಸರ್ಕಾರ ಅತಿಥಿ ಶಿಕ್ಷಕರ ನೇಮಕಕ್ಕೆ ಮುಂದಾಗಿದ್ದು, ಜಿಲ್ಲೆಯ ಪ್ರಾಥಮಿಕ ಶಾಲೆಗಳಿಗೆ 617 ಅತಿಥಿ ಶಿಕ್ಷಕರು ಹಾಗೂ ಪ್ರೌಢಶಾಲೆಗಳಿಗೆ 152 ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಡಿಪಿಐ ಬಿ.ಎಸ್‌. ಜಗದೀಶ್ವರ ತಿಳಿಸಿದ್ದಾರೆ.

*ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next