Advertisement

ಹಾವೇರಿ: 74ರ ಹರೆಯದಲ್ಲೂ ಯೋಗ ನೀರು ಕುಡಿದಷ್ಟು ಸರಳ

05:21 PM Jun 21, 2023 | Team Udayavani |

ಹಾವೇರಿ: ನಗರದ ಹುಕ್ಕೇರಿ ಮಠದ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ರಾಮನಗೌಡ ಶಿವನಗೌಡ ಪಾಟೀಲ(74)ಅವರು ಜಿಲ್ಲೆಯಲ್ಲಿ ಯೋಗ ಮಾಸ್ತರ ಎಂದೇ ಹೆಸರು ಗಳಿಸಿದ್ದಾರೆ.

Advertisement

ಬಾಲ್ಯದಿಂದಲೇ ಯೋಗದ ನಂಟು ಬೆಳೆಸಿಕೊಂಡ ಪಾಟೀಲ ಅವರು ಅದರಿಂದಲೇ ಜೀವಕ್ಕೆ ಮಾರಕವಾಗಿದ್ದ ಅಸ್ತಮಾ ರೋಗದಿಂದ ವಿಮುಕ್ತಿ ಪಡೆದಿದ್ದಾರೆ. ಯೋಗ ಕಲಿಯಲು ಯಾವ ಗುರುಗಳ ಬಳಿಯೂ ತೆರಳದ ಅವರಿಗೆ ಪುಸ್ತಕವೇ ಗುರುವಾಯಿತು. ಯೋಗದ ಪುಸ್ತಕಗಳನ್ನು ಓದುವುದು, ಓದಿದ್ದನ್ನು ಕಾರ್ಯರೂಪಕ್ಕೆ ತರುವುದನ್ನು ನಿತ್ಯದ ಅಭ್ಯಾಸ ಮಾಡಿಕೊಂಡ ಪರಿಣಾಮ ಅವರು ಅನೇಕ ಆಸನಗಳನ್ನು ಬಲ್ಲ ಯೋಗಪಟುವಾಗಿದ್ದಾರೆ.

ವೃತ್ತಿಯಿಂದ ನಿವೃತ್ತಿ ಹೊಂದಿದರೂ ಪ್ರವೃತ್ತಿ ಯಿಂದ ಯೋಗಾಸನದ ವೈಜ್ಞಾನಿಕ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವು ದರ ಮೂಲಕ ಜನರಲ್ಲಿ ಯೋಗದ ಬಗ್ಗೆ ಪ್ರೇರಣೆ ನೀಡುತ್ತಿದ್ದಾರೆ. 47 ವರ್ಷಗಳಿಂದ ನಿರಂತರ ವಾಗಿ ರಾಜ್ಯಮಟ್ಟದ ಯೋಗ ತರಬೇತಿ ಶಿಬಿರಗಳ ಮೂಲಕ ರಾಜ್ಯಾದ್ಯಂತ ವಿದ್ಯಾರ್ಥಿಗಳು, ಆಶಾ ಕಾರ್ಯ ಕರ್ತೆಯರು, ಪೊಲೀಸರು, ಕ್ರೀಡಾಪಟುಗಳು, ಶಿಕ್ಷಕರು, ಸಾರ್ವಜನಿಕರು, ಕಾರ್ಮಿಕರು, ಗರ್ಭೀಣಿ ಯರು, ಸರ್ಕಾರಿ ನೌಕರರು ಹೀಗೆ ಎಲ್ಲರಿಗೂ ಯೋಗ ಕಲಿಸಿದ್ದಾರೆ. ದೂರದರ್ಶನದಲ್ಲೂ ಸಾಕಷ್ಟು ಯೋಗ ಪ್ರದರ್ಶಗಳನ್ನು ನೀಡಿದ್ದಾರೆ. ಕಠಿಣ ಎನ್ನಬಹುದಾದ ಜಲ ನೀತಿ, ಸೂತ್ರ ನೀತಿ, ಮಯೂರಾಸನ, ನಟರಾಜಾಸನ, ದುರ್ವಾಸಾಸನಗಳೆಂದರೆ ಇವರಿಗೆ ನೀರು ಕುಡಿದಷ್ಟು ಸರಳ. ರೋಗಗಳನ್ನು ಹೊತ್ತು ತಮ್ಮ ಬಳಿ ಬಂದವರಿಗೆ ಯೋಗ ವಿದ್ಯೆಯಿಂದ ಕಾಯಿಲೆಯ ಭಾರ ಇಳಿಸಿ ಕಳಿಸುತ್ತಾರೆ.ಯೋಗ ಕ್ಷೇತ್ರದಲ್ಲಿ ಇವರ ಅಮೋಘ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರ 2012ನೇ ಸಾಲಿನಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಸುಂದರ ಕುಲಕರ್ಣಿ: ಹಾವೇರಿ ನಗರದ ಸುಂದರ  ಕುಲಕರ್ಣಿ(59)ಅವರು ಕಳೆದ ಸುಮಾರು 18 ವರ್ಷಗಳಿಂದ ಯೋಗಾಭ್ಯಾಸದಲ್ಲಿ ತೊಡಗಿಕೊಂಡಿದ್ದು, ವಿವಿಧ ಭಂಗಿಗಳನ್ನು ಲೀಲಾಜಾಲವಾಗಿ ಮಾಡುವ ಮೂಲಕ ಯೋಗದಲ್ಲಿ ಪರಿಣಿತಿ ಸಾಧಿಸಿದ್ದಾರೆ. ಕಳೆದ 8-10 ವರ್ಷಗಳಿಂದ ನಗರದಲ್ಲಿ ಯೋಗ ತರಬೇತಿ ನೀಡುತ್ತಿದ್ದು, ಮಕ್ಕಳಿಂದ ಹಿಡಿದು ಇಳಿ
ವಯಸ್ಸಿನವರು ಇವರಲ್ಲಿ ಯೋಗ ತರಬೇತಿ ಪಡೆಯುತ್ತಿದ್ದಾರೆ.

ಸ್ವತಃ ಸುಂದರ ಕುಲಕರ್ಣಿ ಅವರು ಬ್ಯಾಕ್‌ ಪೇನ್‌, ಕಿಡ್ನಿಯಲ್ಲಿನ ಹರಳು ಸೇರಿದಂತೆ ಆರೋಗ್ಯದಲ್ಲಿ ಸಮಸ್ಯೆ ಎದುರಿಸುತ್ತಿದ್ದರು. ಈ ಸಮಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಯೋಗ ಮಾಡುವಂತೆ ಸಲಹೆ ನೀಡಿದ್ದರಿಂದ ಯೋಗಾಭ್ಯಾಸದಲ್ಲಿ ತೊಡಗಿಕೊಂಡರು. ನಂತರದ ದಿನಗಳಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದರಿಂದ ಪ್ರೇರಣೆಗೊಂಡು ನಿರಂತರವಾಗಿ ಯೋಗಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

Advertisement

ದಿನ ಕಳೆದಂತೆ ತಾವು ಕಲಿತ ಯೋಗವನ್ನು ಇತರರಿಗೆ ಉಚಿತವಾಗಿ ಹೇಳಿ ಕೊಡುವ ಮೂಲಕ ಯೋಗದ ಕುರಿತು ಜಾಗೃತಿ ಮೂಡಿಸಲು ಆರಂಭಿಸಿದರು. ಇದುವರೆಗೂ ಸುಮಾರು 700ಕ್ಕೂ ಹೆಚ್ಚು ಶಿಬಿರಗಳನ್ನು ಆಯೋಜಿಸಿ ಯೋಗ ತರಬೇತಿ ನೀಡಿದ್ದಾರೆ. ಶಾಲಾ-ಕಾಲೇಜುಗಳಿಗೆ ತೆರಳಿ ಮಕ್ಕಳಿಗೂ ಯೋಗ ತರಬೇತಿ ನೀಡಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಕಳೆದ 8-10 ವರ್ಷಗಳಿಂದ ನಿರಂತರವಾಗಿ ಯೋಗ ತರಬೇತಿ ನೀಡುತ್ತಿದ್ದಾರೆ.

ಸ್ವತಃ ಬ್ಯಾಕ್‌ ಪೇನ್‌, ಕಿಡ್ನಿಯಲ್ಲಿ ಹರಳು ಸೇರಿದಂತೆ ಆರೋಗ್ಯದಲ್ಲಿ ಸಮಸ್ಯೆ ಎದುರಿಸುತ್ತಿದ್ದೆ. ಯೋಗ ಮಾಡುವಂತೆ ಸಲಹೆ ನೀಡಿದ್ದರಿಂದ ಯೋಗಾಭ್ಯಾಸದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಆರೋಗ್ಯದಲ್ಲಿ ಚೇತರಿಕೆ ಕಂಡುಕೊಂಡೆ. ಇದುವರೆಗೂ ಸುಮಾರು 700ಕ್ಕೂ ಹೆಚ್ಚು ಶಿಬಿರಗಳನ್ನು ಆಯೋಜಿಸಿ ಯೋಗ ತರಬೇತಿ ನೀಡಲಾಗಿದೆ.
ಸುಂದರ ಕುಲಕರ್ಣಿ, ಯೋಗಪಟು

ಶಿಕ್ಷಕನಾಗಿದ್ದಾಗ ಪಾಠದೊಂದಿಗೆ ನಿರಂತರವಾಗಿ ಯೋಗ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೆ. ಇದರಿಂದ ಸಾಕಷ್ಟು ಅವಮಾನ-ಸನ್ಮಾನವನ್ನೂ ಸಂಪಾದಿಸಿದ್ದೇನೆ. ಯೋಗ ನಮ್ಮಲ್ಲಿ ಸುಪ್ತವಾಗಿ ಅಡಗಿರುವ ಅಪಾರ ಸಾಮರ್ಥ್ಯವನ್ನು
ಅಭಿವ್ಯಕ್ತಗೊಳಿಸಿ ದೇಹದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿದೆ.
ರಾಮನಗೌಡ ಪಾಟೀಲ, ಯೋಗಪಟು

Advertisement

Udayavani is now on Telegram. Click here to join our channel and stay updated with the latest news.

Next