Advertisement

ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

05:08 PM Jun 15, 2022 | Team Udayavani |

ಬ್ಯಾಡಗಿ: ಭೂಮಿಯಲ್ಲಿ ಉಳುಮೆಗೆಂದು ತೆರಳಿದ ದಲಿತ ಕುಟುಂಬಗಳಿಗೆ ಅವಕಾಶ ನೀಡದ ಹಾವೇರಿ ಹಾಲಿ ಶಾಸಕ ನೆಹರು ಓಲೇಕಾರ ಅವರ ಪುತ್ರ ಮಂಜುನಾಥ ಓಲೇಕಾರ ವರ್ತನೆಯಿಂದ ಬೇಸತ್ತ ನಾಲ್ವರು, ಜಮೀನಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಹಳೇ ಶಿಡೇನೂರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

Advertisement

ತಾಲೂಕಿನ ಶಿವಾಜಿ ನಗರದ(ಹೊಸ ಶಿಡೇನೂರ) ಪಾಂಡಪ್ಪ ಮಾನಪ್ಪ ಕಬ್ಬೂರ, ಗುರುಶಾಂತಪ್ಪ ಮೋಟಲೆಪ್ಪ ಲಮಾಣಿ, ಗಂಗವ್ವ ಟಾಕರೆಪ್ಪ ಕಬ್ಬೂರ, ಹನುಮಂತಪ್ಪ ದೊಡ್ಡಪುಟ್ಟಪ್ಪ ಬಡಿಗೇರ ಎಂಬುವರು ವಿಷ ಸೇವಿಸಿದ್ದು ತೀವ್ರ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಬ್ಯಾಡಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಶಿವಾಜಿ ನಗರ ಗ್ರಾಮಸ್ಥರು ಸಮುದಾಯ ಆರೋಗ್ಯ ಕೇಂದ್ರದ ಎದುರು ಜಮಾಯಿಸಿ ಪ್ರತಿಭಟನೆ ನಡೆಸಲಾರಂಭಿಸಿದರು. ಶಾಸಕರ ಪುತ್ರ ಮಂಜುನಾಥ ಓಲೇಕಾರ ವಿರುದ್ಧ ಘೋಷಣೆ ಕೂಗಿದರಲ್ಲದೇ, ಕೂಡಲೇ ಆತನನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಏನಿದು ಘಟನೆ?: ಸರ್ಕಾರ ಬಡವರಿಗೆಂದೇ ಉಳುಮೆ ಮಾಡಲು ಅಕ್ರಮ-ಸಕ್ರಮ ಯೋಜನೆಯಡಿ ಭೂಮಿ ನೀಡಿದೆ. ಶಿಡೇನೂರಿನ 29 ದಲಿತ ಕುಟುಂಬಗಳಿಗೆ ರಿ.ಸ.ನಂ.244 ಮತ್ತು 245 ರಲ್ಲಿ ಪ್ರತಿಯೊಬ್ಬರಿಗೆ 1.15 ಎಕರೆ ಭೂಮಿ ಮಂಜೂರು ಮಾಡಿದೆ. 23-11-2007ರಂದು ಪಟ್ಟಾ ನೀಡಿದ್ದಲ್ಲದೇ, 11-12-2008ರಂದು ಪಹಣಿ(ಉತಾರ)ಕೂಡ ನೀಡಿದೆ. ಸರ್ಕಾರ ನೀಡಿದ ಜಾಗದಲ್ಲಿ ನೆಮ್ಮದಿಯಿಂದ ಉಳುಮೆ ಮಾಡುತ್ತಿದ್ದ ಕುಟುಂಬಗಳಿಗೆ ಪ್ರಸಕ್ತ ಸಾಲಿನ ಮುಂಗಾರು ಆರಂಭದಿಂದಲೇ ಶಾಸಕ ನೆಹರು ಓಲೇಕಾರ ಪುತ್ರ ಮಂಜುನಾಥ ಓಲೇಕಾರ ತಕರಾರು ಮಾಡುತ್ತಾ ಬಂದಿದ್ದರು.ಮಂಗಳವಾರವೂ ಮಂಜುನಾಥ ತಕರಾರು ತೆಗೆದಿದ್ದೇ ನಾಲ್ಕು ಜನರ ಆತ್ಮಹತ್ಯೆ ಯತ್ನಕ್ಕೆ ಕಾರಣವೆನ್ನಲಾಗುತ್ತಿದೆ.

ಅನಧಿಕೃತ ಬಣವೆ-ಮನೆ ನಿರ್ಮಾಣ: ದಲಿತರ ಕೃಷಿ ಭೂಮಿಗಳಲ್ಲಿ ಹಳೇ ಶಿಡೇನೂರಿನ ಶೇಖರಗೌಡ ಪಾಟೀಲ ಅನ ಧಿಕೃತವಾಗಿ ಬಣವೆ ನಿರ್ಮಿಸಿದ್ದಲ್ಲದೇ, ಮನೆ ನಿರ್ಮಾಣಕ್ಕೆ ಮಂದಾಗಿದ್ದಾರೆ. ಇದಕ್ಕೆ ಶಾಸಕರ ಪುತ್ರ ಮಂಜುನಾಥ ಓಲೇಕಾರ ಕುಮ್ಮಕ್ಕಿದೆ ಎಂದು ಪ್ರತಿಭಟನಾನಿರತ ದಲಿತ ಕುಟುಂಬಗಳು ಆರೋಪಿಸಿವೆ.

Advertisement

ದಲಿತ ಕುಟುಂಬಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ಕಾಂಗ್ರೆಸ್‌ ಮುಖಂಡರಾದ ಎಸ್‌.ಆರ್‌.ಪಾಟೀಲ, ಪ್ರಕಾಶ ಬನ್ನಿಹಟ್ಟಿ, ಮಂಜುನಾಥ ಬೋವಿ, ರಮೇಶ ಮೋಟೆಬೆನ್ನೂರ ಮುಂತಾದ ಮುಖಂಡರು ಸಾಂತ್ವನ ಹೇಳಲು ಮುಂದಾದರು. ಸ್ಥಳಕ್ಕೆ ತೆರಳಿದ ಹಿರಿಯ ಪೊಲೀಸ್‌ ಅಧಿಕಾರಿಗಳು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಸದರಿ ಜಮೀನನ್ನು ಕಳೆದ ಐದಾರು ದಶಕಗಳಿಂದ ಸ್ವತಃ ನಾವೇ ಉಳುಮೆ ಮಾಡುತ್ತಾ ಬಂದಿದ್ದೇವೆ. 2008ರಲ್ಲಿ ಹಕ್ಕುಪತ್ರ ಪಡೆದಿದ್ದೇವೆ. ಜಮೀನು ಉಳುಮೆ ಮಾಡಲು ನೆಹರು ಓಲೇಕಾರ ಕುಟುಂಬದವರು ಬಿಡುತ್ತಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರೇ ಓಲೇಕಾರ ಕುಟುಂಬಕ್ಕೆ ಬುದ್ಧಿವಾದ ಹೇಳಿ ದಲಿತರಿಗೆ ನ್ಯಾಯ ಒದಗಿಸಿಕೊಡಬೇಕು. –ಕುಮಾರ ಗುರುಶಾಂತಪ್ಪ ಲಮಾಣಿ, ಗ್ರಾ.ಪಂ. ಸದಸ್ಯ

ಶಿವಾಜಿ ನಗರದ ದಲಿತ ಕುಟುಂಬಗಳಿಗೆ ನನ್ನ ಅಧಿಕಾರವಧಿಯಲ್ಲಿ ಭೂಮಿ ಕೊಡಿಸಿದ್ದೆ. ಆದರೆ, ನಾನಾಗಲಿ ಅಥವಾ ನನ್ನ ಕುಟುಂಬದಿಂದ ಭೂಮಿ ಬಿಟ್ಟು ಕೊಡುವಂತೆ ಯಾರಿಗೂ ಹೇಳಿಲ್ಲ. ಕಾಂಗ್ರೆಸ್‌ನವರ ಕ್ಷುಲ್ಲಕ ರಾಜಕಾರಣ ಹಾಗೂ ಮುಖಂಡ ಎಸ್‌.ಆರ್‌. ಪಾಟೀಲ ಕುಮ್ಮಕ್ಕಿನಿಂದ ಘಟನೆ ನಡೆದಿದೆ. ದಲಿತ ರೈತರೊಂದಿಗೆ ಮಾತನಾಡಿ ಸರಿಪಡಿಸುತ್ತೇನೆ. –ನೆಹರು ಓಲೇಕಾರ, ಹಾವೇರಿ ಶಾಸಕ

ರಾಜಕೀಯ ಪ್ರಭಾವದಿಂದ ದಲಿತ ರೈತ ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ. ನೀವು ಇಂತಿಷ್ಟೇ ಭೂಮಿ ತೆಗೆದುಕೊಳ್ಳಿ ಎಂದು ಹೇಳಲು ನೆಹರು ಓಲೇಕಾರ ಅಥವಾ ಅವರ ಕುಟುಂಬಕ್ಕೆ ಅಧಿಕಾರ ಕೊಟ್ಟವರ್ಯಾರು? ಪ್ರಕರಣದ ಹಿಂದಿರುವ ವ್ಯಕ್ತಿಗಳ ಹಾಗೂ ಅವರ ಉದ್ದೇಶಗಳ ಬಗ್ಗೆ ಉನ್ನತ ಮಟ್ಟದ ತನಿಖೆಯಿಂದ ಸತ್ಯ ಹೊರ ಬರಬೇಕು. ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು. –ಎಸ್‌.ಆರ್‌.ಪಾಟೀಲ, ಕಾಂಗ್ರೆಸ್‌ ಮುಖಂಡ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next