Advertisement

ಹರಿಹರೇಶ್ವರಸ್ವಾಮಿ ರಥೋತ್ಸವ

11:24 AM Feb 10, 2020 | Naveen |

ಹರಿಹರ: ಮಧ್ಯ ಕರ್ನಾಟಕದಲ್ಲೇ ಪ್ರಸಿದ್ಧವಾದ ಶ್ರೀ ಹರಿಹರೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ನಗರದಲ್ಲಿ ಭಾನುವಾರ ಶ್ರದ್ಧೆ, ಭಕ್ತಿ, ಸಡಗರದಿಂದ ನೆರವೇರಿತು.

Advertisement

ಶಾಸಕ ಎಸ್‌.ರಾಮಪ್ಪ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ದೇವಸ್ಥಾನ ರಸ್ತೆಯ ತೇರುಗಡ್ಡೆ ವೃತ್ತದಿಂದ. ಶಿವಮೊಗ್ಗ ವೃತ್ತದವರೆಗೆ ಭಕ್ತರು ಹರ ಹರ ಮಾಹದೇವ್‌, ಗೋವಿಂದಾ… ಗೋವಿಂದಾ… ಎಂದು ನಾಮಸ್ಮರಣೆ ಮಾಡುತ್ತಾ ರಥ ಎಳೆದರು.

ಕೆಲವರು ತೇರಿನ ಮುಕುಟಕ್ಕೆ ಬಾಳೆಹಣ್ಣು, ಹೂವು, ಉತ್ತತ್ತಿ ಎಸೆದರು. ತೇರಿನ ಗಾಲಿಗಳಿಗೆ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು. ರಥೋತ್ಸವದಲ್ಲಿ ಸಾವಿರಾರು ಜನ ಭಕ್ತಿ, ಶ್ರದ್ಧೆಯಿಂದ ಪಾಲ್ಗೊಂಡರು.

ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ದೇವಸ್ಥಾನ ಸಮಿತಿ ಕಾರ್ಯದರ್ಶಿ ಎಚ್‌.ವೆಂಕಟೇಶ್‌, ಮಾಜಿ ಶಾಸಕ ಬಿ.ಪಿ.ಹರೀಶ್‌, ಮುಖಂಡರಾದ ಎಸ್‌.ಎಂ.ವೀರೇಶ್‌, ಜಿಪಂ ಸದಸ್ಯ ಬಿ.ಎಂ.ವಾಗೀಶ್‌ಸ್ವಾಮಿ, ನಗರಸಭೆ ಸದಸ್ಯರು, ದೇವಸ್ಥಾನ ಸಮಿತಿ ಸದಸ್ಯರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ರಥೋತ್ಸವಕ್ಕೂ ಮುನ್ನ ಪುರಾಣ ಪ್ರಸಿದ್ದ ಹರಿಹರೇಶ್ವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆ ನಡೆಸಿ ನಂತರ ರಥದೊಳಗೆ ಅಲಂಕರಿಸಲಾಯಿತು.

Advertisement

ದೇವಸ್ಥಾನದ ಸಂಚಾಲನಾ ಸಮಿತಿ, ಕೋಟೆಕೇರಿ ಗಜಾನನ ಯುವಕ ಸಂಘದ ಸಹಯೋಗದಲ್ಲಿ ಸಮೀಪದ ಬಿರ್ಲಾ ಕಲ್ಯಾಣ ಮಂಟಪದಲ್ಲಿ, ದೇವಸ್ಥಾನ ರಸ್ತೆಯಲ್ಲಿ ನಡುವಲಪೇಟೆ ಯುವಕ ಸಂಘದಿಂದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ವಾಸವಿ ಯುವಜನ ಸಂಘ, ಕಾಳಿದಾಸ ಸ್ವಸ್ತಿಕ, ಧನ್ವಂತರಿ ಪತಂಜಲಿ ಮತ್ತಿತರೆ ಸಂಘಗಳಿಂದ ಉಪಾಹಾರ, ಮಜ್ಜಿಗೆ, ಶರಬತ್‌ ಸಹ ವಿತರಿಸಲಾಯಿತು.

ದೇವಸ್ಥಾನದಲ್ಲಿ ಬೆಳಗಿನ ಜಾವದಿಂದಲೇ ಗಣಪತಿ ಪೂಜೆ, ರುದ್ರಾಭಿಷೇಕ, ಅಲಂಕಾರ, ನವಗ್ರಹ ಪೂಜೆ, ಜಪ ಹೋಮ ಹವನಾದಿಗಳನ್ನು ನಡೆದವು. ರಥೋತ್ಸವ ನಿಮಿತ್ತ ಸೋಮವಾರ ಸಂಜೆ 6-30ಕ್ಕೆ ಕಲಾವಿದೆ ರಾಧಾ ನೇತೃತ್ವದಲ್ಲಿ ಸಂಕರ್ಷಣ ನೃತ್ಯ ಮತ್ತು ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮವಿದೆ.

3 ದಿನ ಜಾತ್ರೆ: ರಥೋತ್ಸವ ನಿಮಿತ್ತ ದೇವಸ್ಥಾನ ರಸ್ತೆಯಲ್ಲಿ ಖಾರಾ ಮಂಡಕ್ಕಿ, ಬೆಂಡು, ಬತಾಸೆ, ಮಕ್ಕಳ ಆಟಿಕೆ, ಬಳೆ ಸೇರಿದಂತೆ ಮಹಿಳೆಯರ ಅಲಂಕಾರಿಕ ವಸ್ತುಗಳ ನೂರಾರು ಅಂಗಡಿಗಳು ತಲೆ ಎತ್ತಿದ್ದು, 3 ದಿನ ಜಾತ್ರಾ ಸಡಗರ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next