Advertisement

Harekala Hajabba: ಕೋಟಿ ಒಡೆಯನಲ್ಲ, ಆದರೂ ಈತ ಕೋಟಿಗೊಬ್ಬ

04:29 PM May 02, 2024 | Team Udayavani |

ಇವರು ಕೋಟಿಗಟ್ಟಲೆ ಆಸ್ತಿಯುಳ್ಳವರಲ್ಲ, ಕಡು ಬಡತನದಲ್ಲಿ ಹುಟ್ಟಿ ಬೆಳೆದವರು. ಆದರೆ ಇವರ ಕನಸುಗಳು ಎಂದಿಗೂ ಕೂಡ ಬಡತನಕ್ಕೆ ಸೀಮಿತವಾಗಿರಲಿಲ್ಲ. ದಿನಕೂಲಿಯಲ್ಲಿ ಜೀವನ ಸಾಗಿಸುತ್ತಿದ್ದವರು ಇವರು, ಆದರೆ ಶಿಕ್ಷಣದಿಂದ ವಂಚಿತರಾದ ಇವರಿಗೆ ತನ್ನೂರಿಗೆ ಒಂದು ಶಾಲೆಯನ್ನು ನಿರ್ಮಿಸಬೇಕು ಎಂಬ ಮಹದಾಸೆ.

Advertisement

ತನ್ನ ಕನಸನ್ನು ತನ್ನ ಕಿತ್ತಳೆ ಹಣ್ಣನ್ನು ಮಾರುವ ವ್ಯಾಪಾರದೊಂದಿಗೆ ಸಾಕಾರಗೊಳಿಸಿದವರು ಇವರು. ಇವರ ಈ ಸಮಾಜ ಸೇವೆಯನ್ನು ಗುರುತಿಸಿ ಇವರಿಗೆ ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ, ಹಾಗೂ ಭಾರತ ಸರಕಾರ ದೇಶದಲ್ಲೇ 4ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದರ ಜತೆಗೆ ಹಲವಾರು ಪ್ರಶಸ್ತಿಗಳು ಇವರ ಮೂಡಿಗೇರಿದೆ.

ಹೌದು ಇಷ್ಟೆಲ್ಲಾ ವಿಷಯಗಳನ್ನು ಹೇಳಿದ ಮೇಲೆ ಆ ವ್ಯಕ್ತಿ ಯಾರು ಎಂಬುದು ಅರಿವಾಗಿರಬಹುದು. ಇಲ್ಲಿ ನಾನು ಹೇಳಿದ ವ್ಯಕ್ತಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹರೇಕಳ ಗ್ರಾಮದವರಾದ ಹಾಜಬ್ಬನವರು.

2021 ರಲ್ಲಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅಂದು ರಾಷ್ಟ್ರಪತಿಗಳಾಗಿದ್ದ ಶ್ರೀ ರಮಾನಾಥ ಕೋವಿಂದ್‌ ಅವರಿಂದ ಬರಿಗಾಲಿನಲ್ಲಿ ಹೋಗಿ ಪ್ರಶಸ್ತಿಯನ್ನು ಪಡೆದ ಇವರು ಎಲ್ಲರಿಗೂ ತಮ್ಮ ಸರಳ ನಡೆ, ನುಡಿಯಿಂದಲೇ ಪರಿಚಿತ‌ರಾದರು.

ನಾನು ಹೇಗಿದ್ದರೂ ಶಿಕ್ಷಣದಿಂದ ದೂರ ಉಳಿದುಬಿಟ್ಟೆ, ಆದರೆ ಜೀವನಲ್ಲಿ ಶಿಕ್ಷಣದ ಪಾತ್ರ ಬಹಳ ದೊಡ್ಡದು. ಆದ್ದರಿಂದ ನನ್ನ ಊರಿನ ಯಾವ ಮಕ್ಕಳೂ ಬಡತನ ಎಂಬ ದೃಷ್ಟಿಯಿಂದ ಶಿಕ್ಷಣದಿಂದ ದೂರ ಉಳಿಯಬಾರದು. ಮನೆಯಲ್ಲಿನ ಬಡತನ ನನ್ನನ್ನು ಶಿಕ್ಷಣದಿಂದ ದೂರ ಉಳಿಸಿತ್ತು. ಶಿಕ್ಷಣದಿಂದ ವಂಚಿತನಾದ ನನಗೆ ಜೀವನಲ್ಲಿ ಶಿಕ್ಷಣದ ಪಾತ್ರ ಏನು ಎಂಬುದನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಟ್ಟಿತ್ತು. ಆದ್ದರಿಂದಲೇ ನಾನು ನನ್ನ ಊರಿನಲ್ಲಿ ಒಂದು ಶಾಲೆ ನಿರ್ಮಾಣ ಮಾಡಲೇಬೇಕು ಎಂದು ಹೊರಟಿದ್ದೆ ಎನ್ನುತ್ತಾರೆ ಹರೇಕಳ ಹಾಜಬ್ಬ.

Advertisement

ಪ್ರಾಥಮಿಕ ಶಾಲೆಯ ಕನಸನ್ನು ಕಂಡಿದ್ದ ಹಾಜಬ್ಬನವರು ಇದೀಗ ಅವರ ಕನಸನ್ನು ಸಾಕಾರಗೊಳಿಸಿ ಅವರ ನೇತೃತ್ವದಲ್ಲಿ ಪದವಿ ಕಾಲೇಜನ್ನು ಸಹ 1.45 ಎಕರೆಯಲ್ಲಿ ನಿರ್ಮಾಣ ಮಾಡಿದ್ದಾರೆ. ಆದರೂ ಕೂಡ ಇವರು ಅವರ ಪೂರ್ವಾಶ್ರಮದ ಕಿತ್ತಳೆ ಮಾರುವ ಕಾಯಕವನ್ನು ನಿಲ್ಲಿಸಿಲ್ಲ. ಇದರಿಂದಲೇ ಇವರ ವ್ಯಕ್ತಿತ್ವ ಏನು ಎಂಬುದನ್ನು ನಾವು ಕಂಡುಕೊಳ್ಳಬಹುದು. ಅಷ್ಟು ಸರಳ ವ್ಯಕ್ತಿ, ಎಂದಿಗೂ ತಾನು ಸವೆದು ಬಂದ ದಾರಿಯನ್ನು ಮರೆತವರಲ್ಲ.

ಇನ್ನು  ಪ್ರಶಸ್ತಿಯ ಬಗ್ಗೆ ಹೇಳುವುದಾದರೆ, ಖಂಡಿತವಾಗಿಯೂ ಇವರು ಪ್ರಶಸ್ತಿಯನ್ನು ಅರಸಿ ಹೋದವರಲ್ಲ. ಇವರ ನಿಸ್ವಾರ್ಥ ಸೇವೆಯನ್ನು ಕಂಡು ಒಂದು ಬಾರಿ ಒಂದು ಪತ್ರಿಕೆಯವರು ಇವರ ಬಗ್ಗೆ ಲೇಖನವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟ ಮಾಡಿದ್ದರು. ಅದನ್ನ ಗಮನಿಸಿದ ರಾಜ್ಯ ಸರಕಾರ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಇಲ್ಲಿಂದ ಇವರಿಗೆ ಗ್ರಾಮ, ಪಂಚಾಯತ್‌ ಅಧ್ಯಕ್ಷರಿಂದ ಹಿಡಿದು ಸಂಸದರ ವರೆಗಿನ ಪರಿಚಯ ಬಹಳ ಚೆನ್ನಾಗಿ ಆಗಿತ್ತು. ಇಲ್ಲಿಂದಲೇ ಶಾಲೆ ಕಟ್ಟುವ ಇವರ ಕನಸಿಗೆ ಇನ್ನೂ ರೆಕ್ಕೆ ಗಟ್ಟಿಯಾಗಿಯೇ ಬಂದಿತ್ತು. ಎಲ್ಲರ ಬಳಿ ಅಲೆದು ಅಲೆದು ಅವರ ಊರಿಗೊಂದು ಶಾಲೆಯನ್ನು ತಂದಿದ್ದಾರೆ.

-ಶ್ರೇಯಾ ಮಿಂಚಿನಡ್ಕ

ಎಸ್‌ ಡಿ ಎಂ ಕಾಲೇಜು ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next