Advertisement

ಅರಸೀಕೆರೆ ತಾಲೂಕು ಕೇಂದ್ರ ಘೋಷಣೆಗೆ ಒತ್ತಾಯ

05:08 PM Nov 13, 2019 | Naveen |

ಅರಸೀಕೆರೆ ಹೋಬಳಿಯನ್ನು ತಾಲೂಕು ಕೇಂದ್ರವಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಕೋಲುಶಾಂತೇಶ್ವರ ಮಠದಿಂದ ಸಾರ್ವಜನಿಕ ಆಸ್ಪತ್ರೆಯವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.

Advertisement

ಅರಸೀಕೆರೆ ತಾಲೂಕು ಹೋರಾಟ ಸಮಿತಿ ಸದಸ್ಯ ಯರಬಳ್ಳಿ ಉಮಾಪತಿ ಮಾತನಾಡಿ, ಅರಸೀಕೆರೆ ಹೋಬಳಿಯನ್ನು ಎರಡು ಭಾಗವಾಗಿ ವಿಂಗಡಿಸಿ ಹರಪನಹಳ್ಳಿ ಹಾಗೂ ಜಗಳೂರು ವಿಧಾನ ಸಭಾ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ. ಇದರಿಂದ ಸ್ಥಳೀಯರನ್ನು ಪರೋಕ್ಷವಾಗಿ ರಾಜಕೀಯವಾಗಿ ಕುಗ್ಗಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ಅರಸೀಕೆರೆ ಹೋಬಳಿಯ ಹಿರೇಮೆಗಳಗೆರೆ, ಕಂಚಿಕೆರೆ, ಲಕ್ಷ್ಮೀಪುರ, ಸಿಂಗ್ರಿಹಳ್ಳಿ ಪಂಚಾಯಿತಿಗಳು ಹರಪನಹಳ್ಳಿ ಕ್ಷೇತ್ರಕ್ಕೆ ಒಳಪಟ್ಟಿದೆ. ಅರಸೀಕೆರೆ, ಹೊಸಕೋಟೆ, ಉಚ್ಚಂಗಿದುರ್ಗ, ಚಟ್ನಿಹಳ್ಳಿ, ಅಣಜಿಗೆರೆ, ತವಡೂರು, ಪುಣಬಗಟ್ಟಿ ಗ್ರಾಮ ಪಂಚಾಯತಿಗಳು ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಳಗೊಂಡಿದೆ. ಹಲವು ವರ್ಷಗಳಿಂದ ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಮುಖಂಡರು ಕಾರ್ಯಕರ್ತರಾಗಿಯೇ ಉಳಿಯುವಂತಾಗಿದೆ ಎಂದು ಕಿಡಿಕಾರಿದರು.

ಹರಪನಹಳ್ಳಿ ವಿಶಾಲವಾದ ತಾಲೂಕು ಕೇಂದ್ರವಾಗಿದ್ದು, ಹೋಬಳಿ ಸೇರಿದಂತೆ ಗಡಿಭಾಗದ ಪಂಚಾಯತಿಗಳು ಅಭಿವೃದ್ಧಿ ಕಾಣದೆ ಸೊರಗಿ ಹೋಗಿದೆ. ಸರಕಾರ ಈ ಕಡೆ ಗಮನ ಹರಿಸಿ ಅರಸೀಕೆರೆ ಹೋಬಳಿಯನ್ನು ಪ್ರತ್ಯೇಕ ತಾಲೂಕು ರಚನೆಗೆ ಸಹಕರಿಸಬೇಕು ಎಂದರು.

ತಾಪಂ ಸದಸ್ಯ ಪಾಟೀಲ್‌ ಕೆಂಚನಗೌಡ ಮಾತನಾಡಿ, ಹೋಬಳಿಯ ಮೂರು ಜಿಪಂ, ಎಂಟು ತಾಪಂ ಸದಸ್ಯರಲ್ಲಿ ಬಹುತೇಕರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಶಾಸಕರು, ಸಂಸದರ ಬೆಂಬಲ ಪಡೆದು ತೀವ್ರ ಹೋರಾಟ ನಡೆಸಲಾಗುವುದು. ಭೌಗೋಳಿಕವಾಗಿ ಅಲ್ಲದೆ ಜನಸಂಖ್ಯೆ ಆಧಾರವಾಗಿ ಅರಸೀಕೆರೆ ಈ ಹಿಂದೆಯೇ ತಾಲೂಕು ಕೇಂದ್ರವಾಗಿ ಘೋಷಣೆಯಾಗಬೇಕಾಗಿತ್ತು. ಆದರೆ ಸಮನ್ವಯತೆ ಕೊರತೆಯಿಂದ ತಡವಾಗಿದೆ. ಇಂದಾದರೂ ಸರಕಾರ ಎಚ್ಚೆತ್ತುಕೊಂಡು ತಾಲೂಕು ಕೇಂದ್ರವಾಗಿ ರಚಿಸಬೇಕು ಎಂದು ಒತ್ತಾಯಿಸಿದರು.

Advertisement

ಕಿಸಾನ್‌ ಸಭಾ ರಾಜ್ಯ ಉಪಾಧ್ಯಕ್ಷ ಹೊಸಳ್ಳಿ ಮಲ್ಲೇಶ್‌ ಮಾತನಾಡಿದರು. ಇದಕ್ಕೂ ಮೊದಲು ವಿವಿಧ ಸಂಘಟನೆಗಳು ಕಾರ್ಯಕರ್ತರು,ಚುನಾಯಿತ ಪ್ರತಿನಿ ಧಿಗಳು, ಸಾರ್ವಜನಿಕರು ಗ್ರಾಮದ ಹೊರಗಿನ ಕೋಲಶಾಂತೇಶ್ವರ ಮಠದಿಂದ ಘೋಷಣೆ ಕೂಗುತ್ತಾ ಕಾಲ್ನಡಿಗೆ ಜಾಥಾ ಹೊರಟಿತು. ಬಸ್‌ ನಿಲ್ದಾಣ, ಕೆರೆಗುಡಿಹಳ್ಳಿ ಸರ್ಕಲ್‌ವರೆಗೂ ಸಾಗಿ ಮಾನವ ಸರಪಳಿ ನಿರ್ಮಿಸಿ ತಾಲೂಕು ಕೇಂದ್ರ ಘೋಷಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಚಂದ್ರನಾಯ್ಕ, ಪೂಜಾರ ಮರಿಯಪ್ಪ, ಅಣ್ಣಪ್ಪ, ಡಾ.ಸುರೇಶ್‌, ವಕೀಲ ಪುಣಬಗಟ್ಟ ನಿಂಗಪ್ಪ ಮಾತನಾಡಿದರು. ಸಿಪಿಐ ತಾಲೂಕು ಅಧ್ಯಕ್ಷ ಗುಡಿಹಳ್ಳಿ ಹಾಲೇಶ್‌, ರೈತ ಸಂಘ ರಾಜ್ಯ ಉಪಾಧ್ಯಕ್ಷ ಬುದಿಹಾಳ್‌ ಸಿದ್ದಪ್ಪ, ಎನ್‌.ಸಿದ್ದಪ್ಪ, ಸಿದ್ದನಗೌಡ, ಪ್ರಶಾಂತ್‌ ಪಾಟೀಲ್‌, ಎನ್‌.ಹರೀಶ್‌, ಬಾಲೆನಹಳ್ಳಿ ಕೆಂಚನಗೌಡ, ಫಣಿಯಾಪುರ ಲಿಂಗರಾಜ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next