Advertisement

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಬಿಗ್ ಫೈಟ್‌

01:21 PM Mar 27, 2023 | Team Udayavani |

ಹರಪನಹಳ್ಳಿ: ವಿದ್ಯಾಸಿರಿ ನಾಡು ಎಂದೇ ಖ್ಯಾತಿ ಹೊಂದಿದ್ದಲ್ಲದೇ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರವಾಗಿ ಮಾರ್ಪಟ್ಟಿರುವ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ.

Advertisement

2008 ರಲ್ಲಿ ಕ್ಷೇತ್ರ ಮರು ವಿಂಗಡಣೆಯಾದ ಬಳಿಕ ಹರಪನಹಳ್ಳಿ ಸಾಮಾನ್ಯ ಕೇತ್ರವಾಗಿ ಬದಲಾದ ನಂತರ ಎರಡು ರಾಷ್ಟೀಯ ಪಕ್ಷದಲ್ಲಿ ಟಿಕೆಟ್‌ಗಾಗಿ ಬೇಡಿಕೆ ಹೆಚ್ಚಿದೆ. ಅದರಲ್ಲೂ ಈ ಬಾರಿ ಕಾಂಗ್ರೆಸ್‌ನಿಂದ 17 ಜನ ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹಾಗೂ ಅರಸೀಕೆರೆ ಎನ್.ಕೊಟ್ರೇಶ್ ನಡುವೆ ಕಾಂಗ್ರೆಸ್ ಟಿಕೆಟ್‌ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ ಎನ್ನಲಾಗಿದೆ.

ಅರಸೀಕೆರೆ ಎನ್.ಕೊಟ್ರೇಶ್ ಅವರು ಕಳೆದ ಎರಡು ಚುನಾವಣೆಗಳಲ್ಲಿ ಒಂದೊಂದು ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡು, ಇದೀಗ ಕೆಲ ದಿನಗಳಿಂದಷ್ಟೆ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮೂಲಕ ಟಿಕೆಟ್‌ಗಾಗಿ ಬಾರೀ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದ್ದು, ಇದು ಕ್ಷೇತ್ರದಲ್ಲಿ ಸಂಚಲ ಹುಟ್ಟುಹಾಕಿದೆ‌.

ಕ್ಷೇತ್ರ ಮರು ವಿಂಗಡಣೆಯಾದ ಬಳಿಕ 2008 ರಿಂದ ಬಿಜೆಪಿಯಿಂದ ಹಾಲಿ ಶಾಸಕ ಜಿ.ಕರುಣಾಕರರೆಡ್ಡಿಯವರೇ ಪ್ರತಿನಿಧಿಸುತ್ತಿದ್ದಾರೆ. ಕಾಂಗ್ರೆಸ್‌ ನಿಂದ ಮೊದಲ ಬಾರಿಗೆ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರ ಪುತ್ರ ಎಂ.ಪಿ.ರವೀಂದ್ರ 2013 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದು ಶಾಸಕರಾಗಿದ್ದರು.

2018ರಲ್ಲಿ ರವೀಂದ್ರ ಪುನ: ಸ್ಪರ್ಧಿಸಿ ಪರಾಭಗೊಂಡರು. ಹಾಗಾಗಿ ಕಳೆದ ಮೂರು ಚುನಾವಣೆಗಳಲ್ಲಿ ಕ್ಷೇತ್ರದಲ್ಲಿ ತಂದೆ ಹಾಗೂ ಸಹೋದರ ಪ್ರತಿನಿಧಿಸಿದ್ದು, ನಾವು ಸಹ ಕಳೆದ ನಾಲ್ಕು ವರ್ಷದಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಿಕೆಟ್ ತಮಗೆ ನೀಡುವಂತೆ ಎಂ.ಪಿ.ಲತಾ, ಎಂ.ಪಿ.ವೀಣಾ ಪಕ್ಷದ ವರಿಷ್ಠರಿಗೆ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆಂದೇ ಹೇಳಲಾಗುತ್ತಿದೆ.

Advertisement

ಕಾಂಗ್ರೆಸ್‌ನಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಆಕಾಂಕ್ಷಿಗಳಾದ ಶಶಿಧರ್ ಪೂಜಾರ್ ಹೆಚ್.ಬಿ. ಪರಶುರಾಮಪ್ಪ, ಡಾ.ಉಮ್ಮೇಶ್‌ಬಾಬು ಸೇರಿದಂತೆ ಅನೇಕರು ಹೈಕಮಾಂಡ್ ಬಳಿ ಒತ್ತಡ ಹಾಕುವ ಮೂಲಕ ತೆರೆಮರೆ ಯತ್ನದಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯಲ್ಲಿಯೂ ಸಹ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಪ್ರಮುಖವಾಗಿ ಜಿ.ನಂಜನಗೌಡ, ಆರುಂಡಿ ನಾಗರಾಜ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಸಂಸದ ವೈ.ದೇವೇಂದ್ರಪ್ಪ ಅವರ ಪುತ್ರ ವೈ.ಡಿ.ಅಣ್ಣಪ್ಪ ಅವರ ಹೆಸರು ಕೇಳಿ ಬರುತ್ತಿವೆ.

ಜೆಡಿಎಸ್ ಅಭ್ಯರ್ಥಿ ಯಾರು ಎಂದು ಪಕ್ಷ ಅಧಿಕೃತವಾಗಿ ಘೋಷಣೆ ಮಾಡದಿದ್ದರೂ ಕೂಡ್ಲಿಗಿಯ ಮಾಜಿ ಶಾಸಕ ಎನ್.ಎಂ.ನಬಿ ಅವರ ಪುತ್ರ ನೂರ್ ಅಹ್ಮದ್ ಅವರೇ ಬಹುತೇಕ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಆಮ್ ಅದ್ಮಿ ಪಕ್ಷದಿಂದ ಹೊಸಕೋಟೆ ನಾಗರಾಜ ಹೆಸರು ಅಂತಿಮವಾಗಿದ್ದು ಸ್ಪರ್ಧಿಸುವುದು ಖಚಿತವಾಗಿದೆ.

ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಸಂಸದರ ಪುತ್ರ ವೈ.ಡಿ.ಅಣ್ಣಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಬಿಜೆಪಿಯಿಂದ ಹಾಲಿ ಶಾಸಕ ಕರುಣಾಕರ ರೆಡ್ಡಿಗೆ ಟಿಕೆಟ್ ಫಿಕ್ಸ್ ಎನ್ನಲಾಗುತ್ತಿದೆ. ಕಾಂಗ್ರೆಸ್‌ನಿಂದ ಯಾರಿಗೆ ಟಿಕೆಟ್ ಸಿಗಲಿದೆ ಅಣ್ಣಪ್ಪ ಅವರ ಸ್ಪರ್ಧೆಯಿಂದ ಯಾರಿಗೆ ಮುಳುವಾಗಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

-ದೇವೇಂದ್ರ ಮಜ್ಜಿಗೇರಿ

Advertisement

Udayavani is now on Telegram. Click here to join our channel and stay updated with the latest news.

Next