Advertisement

ಬೆಳ್ಳಾಯರು: ಬೆಳೆಯುತ್ತಿರುವ ಊರಿಗೆ ಬೇಕು ಹಲವು ಯೋಜನೆ

02:46 PM Aug 04, 2022 | Team Udayavani |

ಹಳೆಯಂಗಡಿ: ಪ್ರಗತಿಯೆಡೆಗಿನ ನಡೆಯಿಂದ ಮಾದರಿ ಗ್ರಾಮ ಎನ್ನುವ ಖ್ಯಾತಿ ಪಡೆದಿರುವ ಬೆಳ್ಳಾಯರು ಗ್ರಾಮ ಪಡುಪಣಂಬೂರು ವ್ಯಾಪ್ತಿಯಲ್ಲಿದೆ. ಕೆರೆಕಾಡು ಎಂಬ ಹೆಸರಿನ ಊರಿಗೆ ಬೆಳ್ಳಾಯರು ಎಂಬ ಪ್ರತ್ಯೇಕತೆಯೂ ಇದ್ದರೂ ಕೆರೆಕಾಡು ಎಂಬ ಹೆಸರಿಗೆ ಹೊಂದಿಕೊಂಡಿದೆ. ಎರಡು ಗ್ರಾಮ ಪಂಚಾಯತ್‌ನ ಗಡಿ ಪ್ರದೇಶವಾಗಿರುವುದು ಇಲ್ಲಿನ ವಿಶೇಷ.

Advertisement

ಮೂಲಸೌಕರ್ಯ ಅಭಿವೃದ್ಧಿಗೆ ಬೇಕಿದೆ ಒತ್ತು

ಶೇ.90ರಷ್ಟು ಭಾಗ ಜನ ವಸತಿ ಪ್ರದೇಶವಾಗಿರುವ ಬೆಳ್ಳಾಯರು ಗ್ರಾಮದಲ್ಲಿ ಮೂಲ ಸೌಕರ್ಯದ ಪ್ರಗತಿಗೆ ಬೇಡಿಕೆಯಿದೆ. ಸಣ್ಣ ಪ್ರದೇಶವಾದರೂ ಕೂಲಿ ಕಾರ್ಮಿಕರು, ನಿತ್ಯ ದುಡಿಯುವವರೇ ಹೆಚ್ಚಾಗಿದ್ದಾರೆ. ಎಲ್ಲ ವರ್ಗದ ಜನರೂ ಇಲ್ಲಿದ್ದಾರೆ. ಗ್ರಾಮೀಣ ಪ್ರದೇಶವನ್ನು ಸಂಪರ್ಕಿಸುವ ರಸ್ತೆಗಳು ಸುಸಜ್ಜಿತಗೊಂಡಿದ್ದರೂ ಚರಂಡಿ ಸಮಸ್ಯೆ ಕಾಡುತ್ತಿದೆ. ತಾಂತ್ರಿಕ ತೊಂದರೆ ಕೆಲ ವೊಂದು ಪ್ರದೇಶಗಳಲ್ಲಿ ಸಂಚಾರಕ್ಕೆ ತೊಂದರೆ ಸೃಷ್ಟಿಸುತ್ತಿದೆ.

ಕೊಂಕಣ ರೈಲ್ವೇಯು ಇಲ್ಲಿ ಹಾದು ಹೋದ ಅನಂತರ ಇಲ್ಲಿನ ಚಿತ್ರಣವೇ ಬದಲಾಗಿದೆ. ಅದರೊಂದಿಗೆ ಕೆಲವೊಂದು ಮನೆಗಳು ಇರುವಲ್ಲಿ ರಸ್ತೆಯನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪವು ಇದೆ. ರೈಲ್ವೇ ನಿಲ್ದಾಣದ ಬಳಿ ಹಾಗೂ ಒಳಲಂಕೆ ಪ್ರದೇಶದಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು, ಕಚ್ಚಾ ರಸ್ತೆಗಳನ್ನೇ ಅವಲಂಬಿಸಬೇಕಾಗಿದೆ. ಕಲ್ಲಾಪು ರೈಲ್ವೇ ಗೇಟ್‌ ಅನ್ನು ಹಳೆಯಂಗಡಿಯ ಮೇಲ್ಸೇತುವೆ ನಿರ್ಮಾಣ ಮಾಡುವಾಗ ವಿಲೀನದ ಯೋಚನೆಯೂ ಇದೆ. ನೂತನವಾಗಿ ನಿರ್ಮಾಣ ವಾಗಿರುವ ಪಂಚಾಯತ್‌ನ ತ್ಯಾಜ್ಯ ಸಂಗ್ರಹ ಪ್ರದೇಶವು ಅಭಿವೃದ್ಧಿ ಕಾಣಬೇಕಾಗಿದೆ. ವಿನಯ ಕೃಷಿ ಬಳಗವು ನೂರಾರು ಕೃಷಿ ಭೂಮಿಯನ್ನು ದತ್ತು ಪಡೆದುಕೊಂಡು ಕೃಷಿಯಲ್ಲಿ ತೊಡಗಿಸಿಕೊಂಡಿದೆ. ಹಕ್ಕುಪತ್ರದ ಸಮಸ್ಯೆಯಿಂದಾಗಿ ಹಲವಾರು ಮಂದಿ ಸವಲತ್ತುಗಳಿಂದ ವಂಚಿತರಾಗಿದ್ದಾರೆ.

ಎರಡೂ ಗ್ರಾಮಕ್ಕೆ ಸಂಬಂಧಿಸಿದಂತೆ ವಾರದ ಸಂತೆ ನಡೆಸುವ ಯೋಜನೆ ಮಾಡ ಬೇಕಿದೆ. 20 ವರ್ಷಗಳ ಹಿಂದೆ ನಿರ್ಮಾಣವಾದ ಕುಡಿಯುವ ನೀರಿನ ಟ್ಯಾಂಕ್‌ ಬದಲಾಗಬೇಕಾಗಿದೆ. ಶಾಲಾ ಮಕ್ಕಳ ಸಹಿತ ಸ್ಥಳೀಯರಿಗೂ ಸುಸಜ್ಜಿತ ಆಟದ ಮೈದಾನದ ಅಗತ್ಯವಿದೆ.

Advertisement

ಪಂ.ಜಮೀನಿನಲ್ಲಿ ಅಂಗಡಿ ಮುಂಗಟ್ಟುಗಳನ್ನು ನಿರ್ಮಿಸಲು ಅವಕಾಶವಿದ್ದರೂ ಪ್ರಸ್ತುತ ದೂರದ ಮೂಲ್ಕಿ- ಕಿನ್ನಿಗೋಳಿಯನ್ನು ಅವಲಂಬಿಸಬೇಕಿದೆ.

ಹನುಮಂತ ಬಂದ ಒಳಲಂಕೆಗೆ

ಬೆಳ್ಳಾಯರು ಗ್ರಾಮವು ಒಳಲಂಕೆ ಪ್ರದೇಶವಿದ್ದು ಇಲ್ಲಿಗೆ ಹನುಮಂತನು ಸೀತೆಯನ್ನು ಹುಡುಕಿಕೊಂಡು ಬರುವಾಗ ರಾವಣನ ಊರೆಂದು ಒಳಲಂಕೆಗೆ ಬಂದಿಳಿದು ಅನಂತರ ಇಲ್ಲಿ ಸೀತೆ ಇಲ್ಲ ಎಂದು ಮರಳಿ ಪ್ರಯಾಣ ಬೆಳೆಸಿದ ಕಥಾನಕ ಇಂದಿಗೂ ಜೀವಂತವಾಗಿದೆ. ಇದೇ ಪ್ರದೇಶದಲ್ಲಿ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ ಇರುವುದು ವಿಶೇಷ.

2 ಪಂ.ನ ಗಡಿಯ ಊರು ಕೆರೆಕಾಡು ಪಡುಪಣಂಬೂರು ಗ್ರಾ.ಪಂ.ನ ಬೆಳ್ಳಾಯರು ಹಾಗೂ ಕಿಲ್ಪಾಡಿ ಗ್ರಾ.ಪಂ.ನ ಗಡಿ ಪ್ರದೇಶವಾಗಿರುವ ಕೆರೆಕಾಡು ಎರಡೂ ಗ್ರಾಮಕ್ಕಿರುವ ಹೆಸರು. ಒಂದು ರಸ್ತೆ ಮಾತ್ರ ನಡುವೆ ಸಾಗಿದೆ. ಈ ಹಿಂದೆ ಅರಸು ಕಾಡು ಎಂದೇ ಪ್ರಸಿದ್ಧಿಯಾಗಿದ್ದ ಈ ಊರು ಹುಲಿ, ಚಿರತೆ ಸಂಚರಿಸಿದ ಕಾಡಿನ ಪ್ರದೇಶವಾಗಿತ್ತು. ಈಗಲೂ ಕಾಡು ಹಂದಿ, ಮುಳ್ಳು ಹಂದಿ, ಬೆರು, ಹಾವು, ಹೆಬ್ಟಾವು, ನವಿಲು, ಕಾಡುಕೋಳಿ, ಗೀಜಗ, ಇನ್ನಿತರ ಪ್ರಾಣಿ-ಪಕ್ಷಿಗಳು ಇಲ್ಲಿ ಸಾಮಾನ್ಯ. ಮೂಲ್ಕಿ ಅರಮನೆಯ ಗೋವುಗಳಿಗೆ ಸೊಪ್ಪುಗಳನ್ನು ಸಂಗ್ರಹಿಸುವ ದಟ್ಟ ಅರಣ್ಯ ಪ್ರದೇಶವಾಗಿತ್ತು. ಗ್ರಾಮ ಬೆಳೆದಂತೆ ಇಲ್ಲಿನ ತೋಕೂರು ಜಳಕದ ಕೆರೆ ಅಭಿವೃದ್ಧಿ ಹೊಂದಿ ಕೆರೆಕಾಡು ಎಂಬ ಹೆಸರಿನಲ್ಲಿ ಪ್ರಸಿದ್ಧಿಯಾಗಿದೆ.

ವಿಶೇಷತೆಗಳು

 ಯೋಗೀಶ್‌ ಮಾಸ್ಟರ್‌ ಅವರು ಇಲ್ಲಿ ಮುಳಿಹುಲ್ಲಿನ ಕೊಠಡಿಯ ಮೂಲಕ ಆರಂಭಿಸಿದ ಶಿಕ್ಷಣ ಸಂಸ್ಥೆ ಇಂದು ಸರಕಾರಿ ಮಟ್ಟದಲ್ಲಿ ಹೆಮ್ಮರವಾಗಿ ಬೆಳೆದು ಹಿರಿಯ ಪ್ರಾಥಮಿಕ ಶಾಲೆಯಾಗಿ ಉತ್ತಮ ಶಿಕ್ಷಣ ನೀಡುವ ಸಂಸ್ಥೆಯಾಗಿದೆ. ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

 ಕೊರಗರ ಕಾಲನಿಯು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಲ್ಲಿನ ಡೋಲು ವಾದಕರು, ಬುಟ್ಟಿ ನೇಯ್ಗೆ ಮಾಡುವವರು ವಿವಿಧ ಪ್ರದೇಶದಲ್ಲಿ ಪ್ರಸಿದ್ಧರಾಗಿದ್ದು, ಪರಂಪರೆಯೊಂದಿಗೆ ಬೆಸೆದುಕೊಂಡಿದ್ದಾರೆ. ರಾಜ್ಯದ ಮಂತ್ರಿಗಳಾಗಿದ್ದ ಎಚ್‌. ಆಂಜನೇಯ ಅವರು ಇಲ್ಲಿ ಗ್ರಾಮ ವಾಸ್ತವ್ಯ ನಡೆಸಿದ್ದು, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು ಒಂದಷ್ಟು ಯೋಜನೆಗಳು ಸಾಕಾರಗೊಂಡಿವೆ. ಪಂಚಾಯತ್‌ನಿಂದಲೂ ವಿಶೇಷ ಅನುದಾನಗಳು ಇಲ್ಲಿಗೆ ಮೀಸಲಾಗಿದೆ. ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ನೆಲಸಿದ್ದು, ಕೊರಗ ಸಮುದಾಯದ ಕೊಲ್ಲು ಅವರು ಪಂಚಾಯತ್‌ ಅಧ್ಯಕ್ಷರಾಗಿದ್ದರು. ಆರೋಗ್ಯ ಉಪ ಕೇಂದ್ರ ಇಲ್ಲದಿದ್ದರೂ ಪಕ್ಕದ ಯುನಾನಿ ಆಸ್ಪತ್ರೆಯು ಪರಿಸರಕ್ಕೆ ಪೂರಕವಾಗಿದೆ.

 ಕರ್ನಾಟಕ ಗೃಹ ಮಂಡಳಿಯ ಮೂಲಕ ಸುಮಾರು 50 ಮನೆಗಳು ಹುಡ್ಕೊà ಕಾಲೋನಿಯಾಗಿ ನಿರ್ಮಾಣವಾಗಿದ್ದು, ಈಗ ಆ ಪ್ರದೇಶವನ್ನು ಪಂಚಾಯತ್‌ಗೆ ಹಸ್ತಾಂತರಿಸಿದ್ದರಿಂದ ಇಲ್ಲಿನ ಮೂಲ ಸೌಕರ್ಯವನ್ನು ನಿಭಾಯಿಸುತ್ತಿದೆ.

 ಪವಿತ್ರವಾದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವರ ಜಳಕದ ಕೆರೆಯು ಮೂಡಾದ ವಿಶೇಷ ಅನುದಾನದ ಮೂಲಕ ಅಭಿವೃದ್ಧಿಗೊಳ್ಳುತ್ತಿದ್ದು, ಕಳೆದ ಐದು ವರ್ಷದಿಂದ ಆಮೆಗತಿಯಲ್ಲಿ ಕಾಮಗಾರಿ ಸಾಗಿದೆ. ಶೇ.70 ಭಾಗದ ಕೆಲಸ ಮುಗಿದಿದೆ. ಪವಿತ್ರವಾದ ಪೂಪಾಡಿಕಟ್ಟೆಯಲ್ಲಿ ದೇವರ ಸಾನ್ನಿಧ್ಯಕ್ಕೆ ವಿಶೇಷ ಸ್ಥಾನಮಾನ ಇದ್ದು, ಇದರ ಅಡಿಯಲ್ಲಿ ದೊಡ್ಡ ಗುಹೆಯೊಂದು ಇದೆ ಎನ್ನಲಾಗುತ್ತದೆ.

 ಸಾರ್ವಜನಿಕ ರುದ್ರಭೂಮಿಯನ್ನು ಸಾರ್ವಜನಿಕ ಸಮಿತಿಯೊಂದು ನಿರ್ವಹಿಸುತ್ತಿದೆ. ಇಲ್ಲಿನ ಉತ್ತಮ ನಿರ್ವಹಣೆಗೆ ಧರ್ಮಸ್ಥಳದಿಂದ ವಿಶೇಷವಾಗಿ ಗುರುತಿಸಿದೆ. ಸ್ಥಳೀಯ ಅನೇಕ ಗ್ರಾಮದ ಜನರಿಗೆ ಸೇವೆ ನೀಡುತ್ತಿದೆ.

 ಮುಳಿಹುಲ್ಲಿನಡಿ ಯಲ್ಲಿ ಪ್ರಾರಂಭಗೊಂಡ ಶ್ರೀ ದುರ್ಗಾಪರಮೇಶ್ವರೀ ಭಜನ ಮಂದಿರ ಇಂದು ಧಾರ್ಮಿಕ ಕ್ಷೇತ್ರವಾಗಿ ಭಜನೆ, ಯಕ್ಷಗಾನ, ನಾಟಕ, ಗ್ರಾಮೋತ್ಸವ, ಕಲಾ ಆರಾಧನೆ, ವಿವಿಧ ಆಚರಣೆಗಳು, ಪ್ರತೀ ವಾರ ಭಜನೆ, ಮನೆ ಮನೆ ಭಜನೆ, ಮಕ್ಕಳ ಕುಣಿತ ಭಜನ ತಂಡದ ಮೂಲಕ ಪ್ರಸಿದ್ಧಿ ಪಡೆದಿದೆ.

 ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ಮಾರಿ ಪೂಜೆ, ನವರಾತ್ರಿ ಮಹೋತ್ಸವ ಸಂಭ್ರಮದಲ್ಲಿ ಜರಗುತ್ತದೆ, ವಿವಿಧ ದೈವಸ್ಥಾನಗಳಲ್ಲಿ ವರ್ಷಾವಧಿ ನೇಮೋತ್ಸವ ನಡೆಯುತ್ತದೆ.

ಹಳ್ಳಿ ಬೆಳೆದಂತೆ ಪಟ್ಟಣವಾಗುವತ್ತ ಬೆಳ್ಳಾಯರು ಸನ್ನದ್ಧವಾಗುತ್ತಿದೆ. ಇಲ್ಲಿಗೆ ಅನೇಕ ಯೋಜನೆಗಳು, ಸಚಿವರ, ಸಂಸದರ, ಶಾಸಕರ, ಜಿ.ಪಂ. ತಾ.ಪಂ. ಸಹಿತ ಗ್ರಾಮ ಪಂ. ಸಹ ವಿವಿಧ ರೀತಿಯಲ್ಲಿ ಅನುದಾನ ವಿನಿಯೋಗಿಸುತ್ತಿದೆ. ಜನರ ಸಮಸ್ಯೆಗೆ ಸ್ಪಂದಿಸುವ ಪ್ರಯತ್ನ ಪಂ.ಮಾಡುತ್ತಿದೆ. – ಪೂರ್ಣಿಮಾ, ಅಧ್ಯಕ್ಷರು, ಪಡುಪಣಂಬೂರು ಗ್ರಾ. ಪಂ.

ನಮ್ಮೂರು ಅಭಿವೃದ್ಧಿ ಆಗುತ್ತಿದೆ ಎನ್ನುವುದು ಸತ್ಯ. ಆದರೆ ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚಿದಂತೆ ಪ್ರಗತಿಗೆ ಪೂರಕವಾಗಿ ಸಮಸ್ತ ಅಭ್ಯುದಯಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ನಡೆಸಬೇಕು. ಜನರ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತದೆ. ಗ್ರಾಮ ಬೆಳೆದಂತೆ ಮೂಲ ಸೌಕರ್ಯವೂ ಹೆಚ್ಚಬೇಕು. – ರಾಜೇಶ್‌ಕುಮಾರ್‌ ಪಿ.ಆರ್‌.,ಗ್ರಾಮಸ್ಥರು

-ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next