Advertisement

ಹಳೆಯಂಗಡಿ-ಪಕ್ಷಿಕೆರೆ ರಸ್ತೆ ಚರಂಡಿ: ಮುಗಿಯದ ಗೋಳು!

09:01 PM Jul 22, 2021 | Team Udayavani |

ಹಳೆಯಂಗಡಿ: ರಾಷ್ಟ್ರೀಯ ಹೆದ್ದಾರಿ 66ರಿಂದ ಹಳೆಯಂಗಡಿ ಮುಖ್ಯ ಜಂಕ್ಷನ್‌ನಿಂದ ಪಕ್ಷಿಕೆರೆ ರಸ್ತೆಯಲ್ಲಿನ ರಕ್ತೇಶ್ವರೀ ಸ್ಥಳದ ವರೆಗೆ ಇರುವ ಇಕ್ಕಟ್ಟಾದ ರಸ್ತೆಯಲ್ಲಿ ವಾಹನ ಹಾಗೂ ಜನಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು ಸೂಕ್ತ ಚರಂಡಿ ಇಲ್ಲದೇ ಮಳೆ ನೀರು ರಸ್ತೆಯಲ್ಲಿಯೇ ಹರಿದಾಡುತ್ತಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.

Advertisement

ಇಂದಿರಾನಗರದ ರೈಲ್ವೇ ಗೇಟ್‌ನ ಅನಂತರ ರಕ್ತೇಶ್ವರೀ ಸ್ಥಳದವರೆಗೆ ಸಂಚಾರಕ್ಕೆ ಅನುಕೂಲವಾಗಿ ಸಂಚರಿಸಿದರೂ ಅಲ್ಲಿಂದ ಹಳೆಯಂಗಡಿ ಜಂಕ್ಷನ್‌ನವರೆಗೆ ಸಂಚರಿಸುವುದೇ ದುಸ್ತರವಾಗಿದೆ. ಇಕ್ಕಟ್ಟಾದ ರಸ್ತೆಯ ಜತೆಗೆ ಮಳೆಯ ನೀರು ರಸ್ತೆಯಲ್ಲಿಯೇ ಹರಿದಾಡುತ್ತಿದೆ. ಪಾದಚಾರಿಗಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದೇ ಸಂಚರಿಸಬೇಕಾಗಿದೆ. ವಾಹನಗಳಿಂದ ಸಿಂಪಡಣೆಯಾಗುವ ಮಳೆ ನೀರು ಮೇಲಿಗೆ ಬೀಳುತ್ತದೆ. ಒಂದು ಬಸ್‌ ಬಂದರೇ ಸಾಕು ಅಲ್ಲಿ ಸಂಚಾರದ ಒತ್ತಡ ಹೆಚ್ಚಾಗುತ್ತದೆ. ಇದರಿಂದ ನಡೆದಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಸ್ಥಳೀಯರ ದೂರು. ಇಂದಿನ ದಿನದಲ್ಲಿ ಸ್ಥಳೀಯವಾಗಿ ವಾಹನ ದಟ್ಟಣೆಯೂ ಹೆಚ್ಚಿದ್ದು ಅದಕ್ಕೆ ತಕ್ಕಂತೆ ರಸ್ತೆಯು ವಿಸ್ತರಣೆ ನಡೆದಲ್ಲಿ ಅನೂಕೂಲ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಎರಡೂ ಕಡೆಗಳಲ್ಲಿ ಖಾಸಗಿ ಜಮೀನು ಇರುವುದರಿಂದ ರಸ್ತೆ ವಿಸ್ತರಣೆಗೆ ಅಡಚಣೆಯಾಗಿದ್ದು ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಯಲ್ಲಿ 15 ವರ್ಷಗಳ ಹಿಂದೆ ಸರಕಾರಿ ರಜೆಯನ್ನು ಬಳಸಿಕೊಂಡು ಮೂರು ದಿನಗಳಲ್ಲಿ ರಾತ್ರಿ ಹಗಲು ಕಾಮಗಾರಿ ನಡೆಸಿ, ಕಾಂಕ್ರೀಟ್‌ ರಸ್ತೆಯನ್ನು ನಿರ್ಮಿಸಲಾಗಿತ್ತು. ಕಾರಣ ಜಮೀನುದಾರರು ನ್ಯಾಯಾಲಯದ ಮೊರೆ ಹೋದಲ್ಲಿ ಕಾಂಕ್ರೀಟ್‌ಗೆ ಅವಕಾಶ ಇರುತ್ತಿರಲಿಲ್ಲ ಎಂದು ಸ್ಥಳೀಯರೊಬ್ಬರು ನೆನಪಿಸುತ್ತಾರೆ.

ಶಾಸಕರ ಗಮನಕ್ಕೆ ತರಲಾಗಿದೆ:

ಈ ರಸ್ತೆಯ ಅಭಿವೃದ್ಧಿಯ ಬಗ್ಗೆ ಹಲವಾರು ಸಮಯಗಳಿಂದ ಬೇಡಿಕೆ ಇದೆ. ಈ ಬಗ್ಗೆ ಶಾಸಕ ಉಮಾನಾಥ ಕೋಟ್ಯಾನ್‌ ಅವರು ಸಹ ಜಿಲ್ಲಾಡಳಿತದ ಗಮನ ಸೆಳೆದಿದ್ದಾರೆ. ಖಾಸಗಿ ಜಮೀನಿನ ಒಡೆತನ ಇರುವುದರಿಂದ ರಸ್ತೆಯು ಪ್ರಗತಿ ಕಂಡಿಲ್ಲ, ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಮೂಲಕವೇ ಪರಿಹಾರ ನೀಡಲು ಪ್ರಯತ್ನ ನಡೆದಿದೆ ಎಂದು ಜಿ.ಪಂ. ಮಾಜಿ ಸದಸ್ಯ ವಿನೋದ್‌ಕುಮಾರ್‌ ಬೊಳ್ಳೂರು ಅವರ ಅಭಿಪ್ರಾಯ.

Advertisement

ಹಳೆಯಂಗಡಿ-ಪಕ್ಷಿಕೆರೆ ರಸ್ತೆಯ ಅಭಿವೃದ್ಧಿಗಾಗಿ 3 ಕೋ. ರೂಗಳ ಪ್ರಸ್ತಾವವನ್ನು ಶಾಸಕ ಉಮಾನಾಥ ಕೋಟ್ಯಾನ್‌ ಅವರು ಸರಕಾರಕ್ಕೆ ಕಳುಹಿಸಿದ್ದು ಅದು ಮಂಜೂರಾಗುವ ಹಂತದಲ್ಲಿದೆ. ರಸ್ತೆಯ ಪ್ರಗತಿಯ ಜತೆಗೆ ವಿಸ್ತರಣೆಯ ಬಗ್ಗೆ ಸೂಕ್ತವಾಗಿ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಕ್ರಮ ಕೈಗೊಂಡು ಮುಂದಿನ ಹಂತದಲ್ಲಿ ಕಾಮಗಾರಿ ನಡೆಯಲಿದೆ. ಈ ಬಗ್ಗೆ ಸ್ಥಳ ವೀಕ್ಷಣೆಯೂ ನಡೆಯಲಿದೆ. ಗೋಪಾಲ್‌, ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಮಂಗಳೂರು

-ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next