Advertisement

ಕೈಕೊಟ್ಟ ಮಳೆ: ತೆಂಗು ಬೆಳೆಗಾರರ ಸಂಕಷ್ಟ

07:16 AM Mar 08, 2019 | Team Udayavani |

ತಿಪಟೂರು: ಕಳೆದ ಐದಾರು ವರ್ಷಗಳಿಂದ ಕಲ್ಪತರು ನಾಡು ತಿಪಟೂರು ತಾಲೂಕಿನಲ್ಲಿ ಸರಿಯಾಗಿ ಮಳೆಯಾಗದೇ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾದ ತೆಂಗು ಸೇರಿದಂತೆ ಮುಖ್ಯ ಆಹಾರ ಬೆಳೆಗಳೂ ಕೈಕೊಟ್ಟಿವೆ. ಈ ಬಾರಿಯಂತೂ ತೀವ್ರ ಬರಗಾಲ ಉಂಟಾಗಿ ತಾಲೂಕನಾದ್ಯಂತ ಭೀಕರ ವಾತಾವರಣ ಸೃಷ್ಟಿಯಾಗಿದೆ. ರೈತರು ಮಳೆಗಾಗಿ ಕಾಲ ಕಳೆಯುವಂತಾಗಿದೆ. ಮಳೆ ಇಲ್ಲದೇ ರೈತರು ಜಾನುವಾರುಗಳಿಗೂ ನೀರು, ಮೇವು ಒದಗಿಸಲಾಗದೆ ಎಲ್ಲವನ್ನೂ ಬಿಟ್ಟು ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದಾರೆ.

Advertisement

ಕೇವಲ ಆಸೆ: ಕಳೆದ 15 ದಿನಗಳಿಂದ ಸಣ್ಣ ಸೋನೆ ಮಳೆ ಬಿದ್ದು ರೈತರಲ್ಲಿ ಆಸೆ ಚಿಗುರಿತ್ತಾದರೂ ಸೆಖೆ ತೀವ್ರವಾಗಿ ಮತ್ತಷ್ಟು ನಿರಾಸೆ ಮೂಡಿಸುತ್ತಿದೆ.

ವಿನಾಶದತ್ತ ತೆಂಗು ಬೆಳೆ: ತಾಲೂಕು ಭೀಕರ ಬರದ ಸುಳಿಗೆ ಸಿಲುಕಿರುವುದರಿಂದ ಪ್ರಮುಖ ವಾಣಿಜ್ಯ ಬೆಳೆಯಾದ ತೆಂಗು ಕಳೆದ ಹಲವಾರು ವರ್ಷಗಳಿಂದ ವಿನಾಶದಂಚಿಗೆ ತಲುಪಿದೆ. ಅಂತರ್‌ಜಲ ಸಾವಿರ ಅಡಿಗೂ ಮೀರಿ ಹೋಗಿರುವುದರಿಂದ ತೆಂಗು ಉಳಿಸಿಕೊಳ್ಳಲಾಗದೆ ತೆಂಗು ಬೆಳೆಗಾರರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಅಲ್ಲದೇ ಇತ್ತಿಚೆಗಂತೂ ನುಸಿಪೀಡೆ, ಗರಿರೋಗ, ರಸ ಸೋರುವ ರೋಗ ಸೇರಿದಂತೆ ವಿವಿಧ ರೋಗಗಳಿಗೆ ಮರಗಳು ತುತ್ತಾಗಿ ಬೆಳೆಗಾರರು ದಿಕ್ಕೆಡುವಂತೆ ಮಾಡಿದೆ.

ಹತ್ತಾರು ವರ್ಷಗಳ ಕಾಲ ಕಷ್ಟಪಟ್ಟು ಬೆಳೆಸಿದ ತೆಂಗು ಒಣಗಿ ಹೋಗುತ್ತಿರುವುದರಿಂದ ಬೆಳೆಗಾರರ ಬದುಕು ಮೂರಾಬಟ್ಟೆಯಾಗಿದೆ. ತೆಂಗು ಉಳಿಸಿಕೊಳ್ಳಲು ರೈತರು ಹರಸಾಹಸಕ್ಕಿಳಿಯುವಂತಾಗಿದೆ. ದುಬಾರಿ ಹಣ ತೆತ್ತು ತೆಂಗು ಹಾಗೂ ಅಡಕೆ ಮರಗಳನ್ನು ಜೀವಂತ ಉಳಿಸಿಕೊಳ್ಳಲು ಟ್ಯಾಂಕರ್‌ಗಳ ಮೂಲಕ ನೀರು ತರಿಸಿ ಹಾಯಿಸುತ್ತಿದ್ದು, ಇತ್ತೀಚೆಗೆ ಟ್ಯಾಂಕರ್‌ಗಳಿಗೂ ನೀರು ಸಿಗದಂತಾಗಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.

ಸಾವಿರಾರು ಅಡಿ ಆಳದ ಕೊಳವೆಬಾವಿ ತೆಗೆಸಿ ತೆಂಗು ಉಳಿಸಿಕೊಳ್ಳಲು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದು, ಬಡ್ಡಿ ಕಟ್ಟಲೂ ಸಾಧ್ಯವಾಗದೆ ಆತ್ಮಹತ್ಯೆಯತ್ತ ಮುಖಮಾಡುವಂತಾಗಿದ್ದರೂ ಸರ್ಕಾರ ತೆಂಗು ಉಳಿಸಿಕೊಳ್ಳಲು ಈ ಬಜೆಟ್‌ನಲ್ಲೂ ಯಾವುದೇ ನೆರವಿಗೂ ಬಾರದಿರುವುದು ಇಲ್ಲಿನ ತೆಂಗು ಬೆಳೆಗಾರರ ದುರಂತಕ್ಕೆ ಸಾಕ್ಷಿಯಾಗಿದೆ.  

Advertisement

ಪಶುಸಂಗೋಪನೆಗೂ ಕಂಟಕ: ತೆಂಗು ಉಳಿದರೆ ಉಳಿಯಲಿ, ಬಿಟ್ಟರೆ ಬಿಡಲಿ ಎಂದುಕೊಂಡು ಹತಾಶಭಾವದಿಂದ ಇಲ್ಲಿನ ರೈತರ ತಮ್ಮ ದಿನನಿತ್ಯದ ಬದುಕು ಸಾಗಿಸಲು ಪೂರ್ಣಪ್ರಮಾಣದಲ್ಲಿ ಪಶುಸಂಗೋಪನೆಯನ್ನೇ ಅವಲಂಬಿಸಿದ್ದಾರೆ. ಆದರೆ, ಮಳೆ ಸಂಪೂರ್ಣ ಮುನಿಸಿಕೊಂಡಿರುವುದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ತೀವ್ರವಾಗಿ ಕಾಡುತ್ತಿದೆ. ಕಳೆದ ವರ್ಷವೂ ಮಳೆ ಇಲ್ಲದ್ದರಿಂದ ರೈತರ ಬಳಿ ಮೇವು ಖಾಲಿಯಾಗಿದೆ. ಈಗ ಅನಿವಾರ್ಯವಾಗಿ ಮೇವು ಖರೀದಿಸಲು ತಾಲೂಕಿನ ರೈತರು ದುಂಬಾಲು ಬೀಳುತ್ತಿದ್ದರೂ ಮೇವು ದುಬಾರಿಯಾಗಿದೆಯಲ್ಲದೆ ಸಿಗುವುದೂ ಕಷ್ಟವಾಗಿದೆ. 

ಕೆರೆಗಳಲ್ಲಿ ನೀರಿಲ್ಲ: ತಾಲೂಕಿನ ಬಹುತೇಕ ಕೆರೆ-ಕಟ್ಟೆಗಳಲ್ಲಿ ಪಶು-ಪಕ್ಷಿಗಳಿಗೂ ಕುಡಿಯಲು ಹನಿ ನೀರಿಲ್ಲ. ಆಡು, ಕುರಿ, ದನಕರುಗಳಿಗೆ ರೈತರು ಗ್ರಾಮದ ಕಿರುನೀರು ಸರಬರಾಜು ಟ್ಯಾಂಕ್‌ಗಳನ್ನೇ ಅವಲಂಬಿಸಬೇಕಾಗಿದ್ದು, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು, ಆತಂಕದ ಪರಿಸ್ಥಿತಿ ಉಂಟಾಗಿದೆ.

ತಾಲೂಕಿನ ಒಳಗಡೆಯೇ ಹೇಮಾವತಿ ನಾಲೆಯಲ್ಲಿ 6 ತಿಂಗಳು ನೀರು ಹರಿದರೂ ತಾಲೂಕು ಆಡಳಿತ ಮಾತ್ರ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಪ್ರಯತ್ನ ಮಾಡದೆ ಕೇವಲ ಸಬೂಬು ಹೇಳಿಕೊಂಡು ರೈತರಿಗೆ ಅನ್ಯಾಯ ಮಾಡಿದ್ದು, ನೋಡಿದರೆ ತಾಲೂಕು ಆಡಳಿತ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಜನಪ್ರತಿನಿಧಿಗಳು, ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಇಲ್ಲಿನ ತೆಂಗುಬೆಳೆಗಾರರ ಬದುಕು ಬೆಂಕಿಯಿಂದ ಬಾಣಲೆಗೆ ಎಸೆದಂತಾಗಿದೆ.

ಒಟ್ಟಾರೆ ಬರದ ನಡುವೆ ಬದುಕು ಸವೆಸುತ್ತಿರುವ ಬೆಳೆಗಾರರ‌ ಸಂಕಷ್ಟಗಳ ಬಗ್ಗೆ, ತೆಂಗುವಿನಾಶದ ಬಗ್ಗೆ ಸರ್ಕಾರಕ್ಕೆ ಸಮರ್ಪಕ ಮಾಹಿತಿ ನೀಡುವ ಜನಪ್ರತಿನಿಧಿಗಳು ನಿರ್ಲಕ್ಷ್ಯದಿಂದಿರುವುದು ರೈತರಲ್ಲಿ ಆಕ್ರೋಶ ಉಂಟುಮಾಡಿದೆ. ಇನ್ನಾದರೂ ಸರ್ಕಾರ ಕಲ್ಪತರು ನಾಡಿನ ತೆಂಗುಬೆಳೆಗಾರರ ನೆರವಿಗೆ ಧಾವಿಸಿ ಶೀಘ್ರ ವಿಶೇಷ ಪ್ಯಾಕೇಜ್‌ ಮೂಲಕ ಪರಿಹಾರ ನೀಡಿ ವಿನಾಶದತ್ತ ಸಾಗಿರುವ ತೆಂಗುಬೆಳೆ ಹಾಗೂ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡುವುದೋ ಕಾಯ್ದು ನೋಡಬೇಕಿದೆ. 

* ಬಿ.ರಂಗಸ್ವಾಮಿ 

Advertisement

Udayavani is now on Telegram. Click here to join our channel and stay updated with the latest news.

Next