Advertisement

ಬಿಜೆಪಿ ವಚನ ಪಾಲಿಸಿದ್ದರೆ ಎಂವಿಎ ರಚನೆ ಆಗುತ್ತಿರಲಿಲ್ಲ

10:26 PM Jul 01, 2022 | Team Udayavani |

ಮುಂಬೈ/ನವದೆಹಲಿ: “2019ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಮ್ಮ ಮಾತಿಗೆ ಬದ್ಧರಾಗಿ ಇದ್ದಿದ್ದರೆ ಮಹಾ ವಿಕಾಸ್‌ ಅಘಾಡಿ ರಚನೆ ಮಾಡುವ ಅಗತ್ಯವೇ ಇರುತ್ತಿರಲಿಲ್ಲ. ಶಿವಸೇನೆಯ ಮುಖಂಡರನ್ನು ಮುಖ್ಯಮಂತ್ರಿ ಮಾಡುವುದಿದ್ದರೆ 2019ರಲ್ಲಿಯೇ ಮಾಡಬಹುದಿತ್ತಲ್ಲ?’

Advertisement

– ಹೀಗೆಂದು ಕಟುವಾಗಿ ಪ್ರಶ್ನೆ ಮಾಡಿದ್ದು ಶಿವಸೇನೆಯ ಮುಖ್ಯಸ್ಥ, ಮಾಜಿ ಸಿಎಂ ಉದ್ಧವ್‌ ಠಾಕ್ರೆ. ಅಧಿಕಾರ ಕಳೆದುಕೊಂಡ ಬಳಿಕ ಮೊದಲ ಬಾರಿಗೆ ಮುಂಬೈನಲ್ಲಿರುವ ಶಿವಸೇನೆಯ ಪ್ರಧಾನ ಕಚೇರಿಯಲ್ಲಿ ಗುರುವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಶಿವಸೇನೆಯವರನ್ನೇ ಸಿಎಂ ಹುದ್ದೆಗೆ ಆಯ್ಕೆ ಮಾಡುವುದೇ ಆಗಿದ್ದರೆ, 2019ರ ಚುನಾವಣೆ ವೇಳೆ ಯಾಕೆ ನಿರ್ಧಾರ ಕೈಗೊಳ್ಳಲಿಲ್ಲ. ಆ ಸಂದರ್ಭದಲ್ಲಿಯೇ ಪ್ರಸ್ತಾಪಕ್ಕೆ ಒಪ್ಪಿಕೊಂಡಿರುತ್ತಿದ್ದರೆ, ಈಗಿನ ಪರಿಸ್ಥಿತಿಯೇ ಬರುತ್ತಿರಲಿಲ್ಲ ಎಂದರು.

ಮುಖ್ಯಮಂತ್ರಿ ಸ್ಥಾನದ ಹಂಚಿಕೆಯ ಬಗ್ಗೆ ಆಗ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜತೆಗೆ ಚರ್ಚೆ ನಡೆಸಲಾಗಿತ್ತು. ಅವರು ಕೊಟ್ಟ ಮಾತಿಗೆ ನಡೆಯದೆ, ಮೋಸ ಮಾಡಿದರು ಎಂದು ಆರೋಪಿಸಿದರು ಮಾಜಿ ಸಿಎಂ.

ಮಹಾ ವಿಕಾಸ್‌ ಅಘಾಡಿ ಸರ್ಕಾರ ಪತನಗೊಂಡು, ಉಳಿದ ಅವಧಿಗೆ ಬಿಜೆಪಿ ತನ್ನ ವ್ಯಕ್ತಿಯನ್ನೇ ಸಿಎಂ ಹುದ್ದೆಗೆ ನೇಮಕ ಮಾಡಲಿಲ್ಲ. ಇದರಿಂದ ಬಿಜೆಪಿ ಏನು ಸಾಧಿಸಿದ ಹಾಗಾಯಿತು ಎಂದು ಪ್ರಶ್ನೆ ಮಾಡಿದರು ಮಾಜಿ ಸಿಎಂ ಉದ್ಧವ್‌ ಠಾಕ್ರೆ. ಮುಖ್ಯಮಂತ್ರಿ ಏಕನಾಥ ಶಿಂಧೆ ಶಿವಸೇನೆಯ ಮುಖ್ಯಮಂತ್ರಿ ಅಲ್ಲ. ಕೇವಲ ಹೆಸರು ಇರಿಸಿಕೊಂಡ ಮಾತ್ರಕ್ಕೆ ಶಿವಸೇನೆಯವರಾಗುವುದಿಲ್ಲ ಎಂದರು.

Advertisement

ಮುಂದುವರಿಕೆ ಬೇಡ:
ಮುಂಬೈನ ಆರೇ ಕಾಲನಿಯಲ್ಲಿ ಉದ್ದೇಶಿತ ಮೆಟ್ರೋ-3 ಕಾರ್‌ ಯೋಜನೆಯನ್ನು ಮುಂದುವರಿಸುವ ಬಗ್ಗೆ ಆಲೋಚನೆ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಬಿಜೆಪಿ ನಮಗೆ ಮೋಸ ಮಾಡಿದಂತೆ ಮುಂಬೈ ಜನರಿಗೆ ಮೋಸ ಮಾಡಬಾರದು ಎಂದರು.

ಮೆಟ್ರೋ ಕಾರ್‌ ಶೆಡ್‌ ಯೋಜನೆ ಕಾಂಜುರ್‌ಮಾರ್ಗ್‌ನಲ್ಲಿಯೇ ಇರಲಿ. ನಿರ್ಧಾರ ಬದಲಿಸಿದರೆ, ಅದರಿಂದ ವನ್ಯಜೀವಿಗಳಿಗೆ ತೊಂದರೆಯಾಗಲಿದೆ ಎಂದು ಹೇಳಿದ್ದಾರೆ.

ಜು.4ಕ್ಕೆ ಶಿಂಧೆ ವಿಶ್ವಾಸ ಮತ ಯಾಚನೆ:
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಜು.4ರಂದು ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸಲಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಈ ಬಗ್ಗೆ ಶಿಂಧೆ ಮಾತನಾಡಿದ್ದು, “ಗುವಾಹಟಿಯಲ್ಲಿರುವ ಶಾಸಕರು ಜು.2ಕ್ಕೆ ಮುಂಬೈಗೆ ವಾಪಸು ಬರಲಿದ್ದಾರೆ. ಜು.3-4ರಂದು ಅಧಿವೇಶನಕ್ಕೆ ರಾಜ್ಯಪಾಲರು ಕರೆ ನೀಡಿದ್ದಾರೆ. ನಮಗೆ ಕನಿಷ್ಠ 170 ಶಾಸಕರ ಬೆಂಬಲವಿದೆ. ಅದು ದಿನೇ ದಿನೆ ಹೆಚ್ಚುತ್ತಿದೆ ಕೂಡ. ನಮ್ಮ ಸರ್ಕಾರ ರಚನೆಯಾಗುವುದರಲ್ಲಿ ಅನುಮಾನವಿಲ್ಲ’ ಎಂದಿದ್ದಾರೆ. ಬಿಜೆಪಿ ಶಾಸಕ ರಾಹುಲ್‌ ನರ್ವೇಕರ್‌ ಅವರು ಶುಕ್ರವಾರ ಸ್ಪೀಕರ್‌ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.

ಠಾಕ್ರೆಗೆ ಸ್ಥಳೀಯ ಚುನಾವಣೆ ಸವಾಲು:
ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿರುವ ಶಿವಸೇನೆ ನಾಯಕ ಉದ್ಧವ್‌ ಠಾಕ್ರೆ ಅವರಿಗೆ ಇದೇ ವರ್ಷದಲ್ಲಿ ಇನ್ನೊಂದು ಸವಾಲು ಎದುರಾಗಲಿದೆ. ಇದೇ ಸೆಪ್ಟೆಂಬರ್‌-ಅಕ್ಟೋಬರ್‌ ಸಮಯದಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಕಳೆದ 30 ವರ್ಷಗಳಿಂದಲೂ ಶಿವಸೇನೆ ಮೇಲುಗೈ ಸಾಧಿಸಿಕೊಂಡಿದೆ. ಆದರೆ ಇದೀಗ ಶಿವಸೇನೆ ಸರ್ಕಾರ ತಲೆಕೆಳಗಾಗಿ, ಅನೇಕ ಪ್ರಮುಖ ನಾಯಕರು ಬಂಡಾಯವೆದ್ದಿರುವುದು ಪಕ್ಷಕ್ಕೆ ದೊಡ್ಡ ಹೊಡೆತವಾಗುವ ಸಾಧ್ಯವಿದೆ.

ಜು.11ರಂದೇ ವಿಚಾರಣೆ:
ಶಿವಸೇನೆಯ 15 ಮಂದಿ ಭಿನ್ನಮತೀಯ ಶಾಸಕರನ್ನು ಸದನದಿಂದ ಸಸ್ಪೆಂಡ್‌ ಮಾಡಬೇಕು ಎಂಬ ಅರ್ಜಿಯನ್ನು ಜು.11ರಂದೇ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ. ಈ ವಿಚಾರದ ಬಗ್ಗೆ ನ್ಯಾಯಪೀಠದ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಇದೆ ಎಂದು ನ್ಯಾ.ಸೂರ್ಯಕಾಂತ್‌ ಮತ್ತು ನ್ಯಾ.ಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ. ಶಿವಸೇನೆಯ ಮುಖ್ಯ ಸಚೇತಕ ಸುನೀಲ್‌ ಪ್ರಭು ಪರವಾಗಿ ವಾದಿಸಿದ ಖ್ಯಾತ ನ್ಯಾಯವಾದಿ ಕಪಿಲ್‌ ಸಿಬಲ್‌ ಮುಖ್ಯಮಂತ್ರಿ ಏಕನಾಥ ಶಿಂಧೆ ಸೇರಿದಂತೆ 15 ಮಂದಿ ಶಾಸಕರ ಅನರ್ಹತೆ ವಿಚಾರ ಇನ್ನೂ ಅಪೂರ್ಣವಾಗಿದೆ. ಹೀಗಾಗಿ, ಮಧ್ಯಂತರ ಆದೇಶದ ಅಗತ್ಯವಿದೆ ಎಂದು ಅರಿಕೆ ಮಾಡಿಕೊಂಡರು.

ವಿಧಾನಸಭೆಯಲ್ಲಿ ಶೀಘ್ರವೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯಲಿದೆ ಮತ್ತು ಮತಗಳ ಗಣನೆ ಹೇಗೆ ಆಗಬೇಕು ಎನ್ನುವುದೇ ಸ್ಪಷ್ಟವಿಲ್ಲ. ಸಂವಿಧಾನದ 10ನೇ ಷೆಡ್ನೂಲ್‌ ಪ್ರಕಾರ ಶಿಂಧೆ ಅವರ ಬಣ ಬಿಜೆಪಿಯಲ್ಲಿ ವಿಲೀನವಾಗಿಲ್ಲ. ಶಿವಸೇನೆಯ ಎರಡೂ ಬಣಗಳು ಶಾಸಕರಿಗೆ ವಿಪ್‌ ನೀಡಲಾಗುತ್ತದೆ. ಶಿಂಧೆಯವರ ಬಣವೇ ನಿಜವಾದ ಶಿವಸೇನೆ ಎಂಬ ಅಂಶವನ್ನು ಚುನಾವಣಾ ಆಯೋಗವೇ ನಿರ್ಧರಿಸಬೇಕಷ್ಟೇ ಎಂದರು. ಅದಕ್ಕೆ ಉತ್ತರ ನೀಡಿದ ನ್ಯಾಯಪೀಠ “ಎಲ್ಲಾ ವಿಚಾರಗಳ ಬಗ್ಗೆ ನಮಗೆ ಅರಿವು ಇದೆ. ವಿಚಾರಣೆಯನ್ನು ಜು.11ರಂದೇ ಕೈಗೆತ್ತಿಕೊಳ್ಳಲಿದ್ದೇವೆ’ ಎಂದಿತು.

ಫ‌ಡ್ನವಿಸ್‌ಗೆ ಒಲ್ಲದ ಮನಸ್ಸು: ಪವಾರ್‌
ಮುಖ್ಯಮಂತ್ರಿಯಾಗಿದ್ದವರು ಸಾಮಾನ್ಯವಾಗಿ ಮುಂದಿನ ಸರ್ಕಾರಗಳಲ್ಲಿ ಅದಕ್ಕಿಂತ ಕೆಳಗಿನ ಸ್ಥಾನವನ್ನು ಅಲಂಕರಿಸಲು ಹಿಂದೇಟು ಹಾಕುತ್ತಾರೆ. ಮಹಾರಾಷ್ಟ್ರದಲ್ಲಿ ನೂತನವಾಗಿ ರಚನೆಯಾಗಿರುವ ಸರ್ಕಾರದಲ್ಲೂ ಮಾಜಿ ಸಿಎಂ ಫ‌ಡ್ನವೀಸ್‌ ಅವರು ಉಪ ಮುಖ್ಯಮಂತ್ರಿ ಸ್ಥಾನವನ್ನು ಒಲ್ಲದ ಮನಸ್ಸಿನಿಂದಲೇ ಬಹುಶಃ ಒಪ್ಪಿಕೊಂಡಿರುತ್ತಾರೆ ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next