Advertisement

ಉಪನಗರ ರೈಲು ಯೋಜನೆ ರೂಪಿಸಿದ್ದು ನಾನು; ಮೋದಿ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ: HDK

06:46 PM Jun 21, 2022 | Team Udayavani |

ಬೆಂಗಳೂರು: ಬೇರೊಬ್ಬರು ಮಾಡಿದ ಕೆಲಸವನ್ನು ತಮ್ಮದೆಂದು ಬಿಂಬಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.

Advertisement

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ( ಮಂಗಳವಾರ) ಮಾಧ್ಯಮಗಳ ಜತೆ ಮಾತನಾಡಿದ ಅವರು; ಮೋದಿ ಅವರು ಬೆಂಗಳೂರಿನಲ್ಲಿ ಚಾಲನೆ ಮಾಡಿದ ಯೋಜನೆಗಳು ಶುರುವಾಗಿದ್ದು ಬಿಜೆಪಿ ಸರಕಾರದಿಂದ ಅಲ್ಲ. ಆದರೆ, ನಾನೇ ಆರಂಭ ಮಾಡುತ್ತಿದ್ದೇನೆ ಎಂದು ಅವರು ಭಾಷಣ ಮಾಡಿದ್ದಾರೆ. ಇದು ನರೇಂದ್ರ ಮೋದಿ ಅವರ ಚಾಳಿ ಎಂದು ಹರಿಹಾಯ್ದರು.

ರಾಜ್ಯಕ್ಕೆ ಎರಡು ದಿನ ಪ್ರಧಾನ ಮಂತ್ರಿಗಳು ಬಂದಿದ್ದರು. ಅವರ ಆಗಮನದ ಹಿನ್ನೆಲೆಯಲ್ಲಿ ಪ್ರೊಗ್ರೆಸ್ ರಿಪೋರ್ಟ್ ಅನ್ನು ಕೊಡಲಾಗಿದೆ. 33 ಸಾವಿರ ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿದರು ಎಂದು ಹೇಳುತ್ತಿದ್ದಾರೆ. ಮೋದಿ ಅವರು ತಾವೇ ರೂಪಿಸಿದ ಹೊಸ ಯೋಜನೆಗಳಿಗೆ ಚಾಲನೆ ನೀಡಿದರೋ ಅಥವಾ ಹಿಂದಿನ ಸರಕಾರಗಳು ರೂಪಿಸಿದ್ದ ಯೋಜನೆಗಳಿಗೆ ಚಾಲನೆ ನೀಡಿದರೋ ಎಂಬುದನ್ನು ಬಿಜೆಪಿ ನಾಯಕರು ಜನರಿಗೆ ತಿಳಿಸಬೇಕು ಎಂದು ಅವರು ಹೇಳಿದರು.

ಬೆಂಗಳೂರು ತಮ್ಮಿಂದಲೇ ಬೆಳಕು ಕಾಣುತ್ತಿದೆ ಇದೆ ಅನ್ನುವ ಹಾಗಿತ್ತು ಮೋದಿ ಅವರ ಭಾಷಣ. ಉಪನಗರ ರೈಲು  ಬಗ್ಗೆ ಪ್ರಧಾನಿಗಳು ಮಾತನಾಡಿದ್ದಾರೆ. 2018ರಲ್ಲಿ ಅಧಿಕಾರಕ್ಕೆ ಬರುವವರೆಗೆ ಈ ಯೋಜನೆ ಧೂಳು ಕುಡಿಯುತ್ತಿತ್ತು. ನಾನು 14 ತಿಂಗಳು ಸಿಎಂ ಆಗಿದ್ದಾಗ ರೇಲ್ವೆ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೆ. ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರೂ ಸಹಕಾರ ನೀಡಿದ್ದರು ಎಂದರು.

ಇದನ್ನೂ ಓದಿ:“ಮಹಾ” ರಾಜಕೀಯ ಬಿಕ್ಕಟ್ಟು: ಶಿವಸೇನಾ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಶಿಂಧೆಗೆ ಗೇಟ್ ಪಾಸ್

Advertisement

23000 ಕೋಟಿ ರೂಪಾಯಿ ಮೊತ್ತದ ಯೋಜನೆಯನ್ನು ಸಿದ್ಧಪಡಿಸಿ,2018ರಲ್ಲಿ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ದೆಹಲಿಗೆ ಹೋಗಿದ್ದೆ. ತಕ್ಷಣ ಅಡಿಗಲ್ಲು ಹಾಕಿ ಎಂದು ನಾನು ಅಂದಿನ ರೇಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಮಾಡಿದೆ. ಆ ನಂತರ  ಕೃಷ್ಣಾ ಕಚೇರಿಯಲ್ಲಿ ಅಂದಿನ ರೇಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನೇ ಆಹ್ವಾನಿಸಿ ಚರ್ಚೆ ಮಾಡಿದ್ದೆ. ಮಾಧ್ಯಮಗಳಲ್ಲೂ ಈ ವಿಷಯ ವರದಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ಆಗ, ಲೋಕಸಭೆ  ಚುನಾವಣೆಗೂ ಮುನ್ನ ಉಪನಗರ ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡುತ್ತೇನೆ ಅಂದಿದ್ದೆ ನಾನು. 2019ರಲ್ಲಿಯೇ ಈ ಬಗ್ಗೆ ಖುದ್ದು ಮಾಧ್ಯಮಗಳ ಮುಂದೆ ಹೇಳಿದ್ದೆ. ಆದರೆ ಬಿಜೆಪಿಯವರು ಬೇಕೆಂದೇ ಅಡಿಗಲ್ಲು ಹಾಕಲು ಒಪ್ಪಿಗೆ ನೀಡಲಿಲ್ಲ. ಅವರ ಬದಲು ಕಾಂಗ್ರೆಸ್ ಜತೆ ಸರಕಾರ ಮಾಡಿದೆ ಎನ್ನುವ ಸಿಟ್ಟು ಅವರಿಗಿತ್ತು. ಆ ನಂತರ ಆಪರೇಶನ್ ಕಮಲದ ಮೂಲಕ ನನ್ನ ನೇತೃತ್ವದ ಮೈತ್ರಿ ಸರಕಾರವನ್ನು ತೆಗೆದು ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರಲಾಯಿತು. ಆಮೇಲೆ ಮೂರು ವರ್ಷ ಉಪನಗರ ರೈಲು ಯೋಜನೆಯನ್ನು ಬಾಕಿ ಇಟ್ಟರು ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು.

ಆಗಲೇ ಕಾಲಮಿತಿಯಲ್ಲಿ ಉಪನಗರ ರೈಲು ಯೋಜನೆ ಮುಗಿಸಲು ನಾನು ಸಂಪುಟದ ಒಪ್ಪಿಗೆ ತೆಗೆದುಕೊಂಡಿದ್ದೆ. ಅದಕ್ಕೆ ಕೇಂದ್ರ ಸರಕಾರ 19 ಷರತ್ತುಗಳನ್ನು ವಿಧಿಸಿತ್ತು. ಆ ಷರತ್ತುಗಳನ್ನು ನನ್ನ ಸರಕಾರ ಪೂರೈಸಿತ್ತು. ಆದರೆ, ಈಗ ಚುನಾವಣೆ ಬರುತ್ತಿದೆ ಎನ್ನುವ ಕಾರಣಕ್ಕೆ ಬಂದು ಯೋಜನೆಗೆ ಚಾಲನೆ ಕೊಟ್ಟಿದ್ದು ಕೇವಲ ಚುನಾವಣೆ ಗಿಮಿಕ್ ಅಷ್ಟೇ ಎಂದು ಅವರು ಕಟುವಾಗಿ ಟೀಕಿಸಿದರು.

ನಲವತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಕೇವಲ ನಲವತ್ತು ತಿಂಗಳಲ್ಲಿ ಕಾರ್ಯಗತ ಮಾಡುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ. ಈಗ ಇದು ಅರು ವರ್ಷದ ಕಾರ್ಯಕ್ರಮ ಆಗಿದೆ. ನಾನು ಸಿಎಂ ಆದಾಗ ಎಸ್ ಟಿ ಆರ್ ಆರ್ ಯೋಜನೆ ಕೈಗೊಂಡೆ. ಹೀಗೆ ಅನೇಕ ಯೋಜನೆಗಳಿಗೆ ಚಾಲನೆ ನೀಡಿದೆ. ನಾನು ಚಾಲನೆ ಕೊಟ್ಟ ಹಲವಾರು ಯೋಜನೆಗಳಿಗೆ ಬಿಜೆಪಿಯವರು ಇವತ್ತು ಪ್ರಚಾರ ಮಾಡಿಕೊಂಡಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ರಾಜ್ಯ ಬಿಜೆಪಿ ನಾಯಕರಿಗೆ ಮುಖ ಇಲ್ಲ:

ಪ್ರಧಾನಮಂತ್ರಿಗಳು ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾದಾಗ ಬರಲಿಲ್ಲ, ಯಾವುದೇ ಸಂಕಷ್ಟದ ಸಮಯದಲ್ಲೂ ಮೋದಿ ಬರಲಿಲ್ಲ. ಪ್ರತಿಯೊಂದು ವಿಷಯದಲ್ಲೂ ರಾಜ್ಯದ ಬಗ್ಗೆ ಮೋದಿ ಅವರು ಮಲತಾಯಿ ಧೋರಣೆ ನೀತಿ ಅನುಸರಿಸಿದರು. ಹೀಗಾಗಿ ರಾಜ್ಯ ಬಿಜೆಪಿ ನಾಯಕರಿಗೆ ಜನರ ಮುಂದೆ ಹೋಗಲು ಮುಖ ಇಲ್ಲ. ಹಾಗಾಗಿ ಮೋದಿಯವರನ್ನು ಮುಂದೆ ಇಟ್ಟುಕೊಂಡ ಹೋಗುತ್ತಿದ್ದಾರೆ.

ನಲವತ್ತು ತಿಂಗಳಲ್ಲಿ ಯೋಜನೆ ಮಾಡುತ್ತೇವೆ ಎಂದು ಹೇಳುತ್ತಿರುವ ಇವರು, ಬಜೆಟ್ ನಲ್ಲಿ ಈ ಯೋಜನೆಗೆ ಮೀಸಲಿಟ್ಟ ಹಣದ ಮೊತ್ತ ಕೇವಲ ಒಂದು ಕೋಟಿ ರೂಪಾಯಿ ಮಾತ್ರ. ಆಗ ಅರುಣ್ ಜೇಟ್ಲಿ ಅವರು ಕೇಂದ್ರ ವಿತ್ತ ಸಚಿವರಾಗಿದ್ದರು. ಸುಮಾರು 15000 ಕೋಟಿ ರೂಪಾಯಿ ಯೋಜನೆಯಾದ ಇದಕ್ಕೆ ಈಗ 415 ಕೋಟಿ ರೂಪಾಯಿ ಇಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು.

ಇಂದು ಬೆಂಗಳೂರು ನಗರದಿಂದ ಜಿಎಸ್ ಟಿ, ತೈಲ ಮತ್ತಿತರೆ ತೆರಿಗೆಗಳ ಮೂಲ ಅಪಾರ ಹಣಕಾಸು ಸಂಪನ್ಮೂಲವನ್ನು ಕೇಂದ್ರ ಸರಕಾರ ಸಂಗ್ರಹ ಮಾಡುತ್ತಿದೆ. ಆದರೆ, ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಮೋದಿ ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ. ನಮ್ಮ ತೆರಿಗೆ ಹಣವನ್ನು ಪಡೆದು ಕೇಂದ್ರವು ನಮಗೆ ಅನ್ಯಾಯ ಮಾಡುತ್ತಿದೆ ಎಂದು ಅವರು ದೂರಿದರು.

ಆಪರೇಶನ್ ಕಮಲದ ರಾಷ್ಟ್ರೀಕರಣ : 

ಕರ್ನಾಟಕದಲ್ಲಿ ಹುಟ್ಟುಹಾಕಿದ ಆಪರೇಶನ್ ಕಮಲ ಎಂಬ ಅನೈತಿಕ ಮತ್ತು ಅನಿಷ್ಠ ರಾಜಕಾರಣವನ್ನು ಎಂದು ಬಿಜೆಪಿ ರಾಷ್ಟ್ರೀಕರಣ ಮಾಡಿ, ಇಡೀ ದೇಶಕ್ಕೆ ಅನ್ವಯವಾಗುವಂತೆ ಮಾಡುತ್ತಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸಿದರು.

ಈಗಾಗಲೇ ಹಲವಾರು ರಾಜ್ಯಗಳಲ್ಲಿ ಆಪರೇಶನ್ ಕಮಲದ ಮೂಲಕ ಬಿಜೆಪಿ ಅಕ್ರಮವಾಗಿ ಅಧಿಕಾರಕ್ಕೆ ಬಂದಿದೆ. ಮಧ್ಯಪ್ರದೇಶದಲ್ಲಿಯೂ ಇಂಥದ್ದೇ ಅಡ್ಡದಾರಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ರಾಜಸ್ತಾನದಲ್ಲಿಯೂ ಇದು ಆಗಬೇಕಿತ್ತು, ಆದರೆ ಆಗಲಿಲ್ಲ. ಮಹಾರಾಷ್ಟ್ರದಲ್ಲಿ ಈಗ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಆಪರೇಶನ್ ಕಮಲ ನಡೆಸಿದಾಗ ನಾನು ಸಹನೆಯಿಂದ ನಡೆದುಕೊಂಡೆ. ಯಾವುದೇ ಗಲಭೆ, ಗಲಾಟೆಗೆ ಅವಕಾಶ ನೀಡಲಿಲ್ಲ. ಆದರೆ, ಮಹಾರಾಷ್ಟ್ರದಲ್ಲಿ ಶಿವಸೇನೆ ಸುಮ್ಮನಿರಲಾರದು. ಆ ಪಕ್ಷದ ಕಾರ್ಯಕರ್ತರು, ಆ ರಾಜ್ಯದ ಜನರು ತಾಳ್ಮೆಯಿಂದ ವರ್ತಿಸಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next