Advertisement

ನಗರದಲ್ಲಿ‌ ಗುರು ನಾನಕ್ ಜಯಂತಿ ಸಂಭ್ರಮ: ದೇಶ- ವಿದೇಶದ ಸಿಖ್ಖರು ಭಾಗಿ

07:12 PM Nov 08, 2022 | Team Udayavani |

ಬೀದರ್: ಸಿಖ್ಖ್ ಬಾಂಧವರ ಆರಾಧ್ಯ ದೇವ ಗುರು ನಾನಕ್‌ಜೀ ದೇವ್ ಮಹಾರಾಜರ 553 ನೇ ಜನ್ಮ ದಿನ್ಮೋತ್ಸವ ನಿಮಿತ್ತ ನಗರದಲ್ಲಿ ಮಂಗಳವಾರ ಸಾಯಂಕಾಲ ಗುರು ಗ್ರಂಥಗಳ ಭವ್ಯ ಮೆರವಣಿಗೆ ನಡೆಯಿತು. ಈ ಅಭೂತಪೂರ್ವ ಕ್ಷಣಕ್ಕೆ ದೇಶ- ವಿದೇಶದಿಂದ ಆಗಮಿಸಿದ ಸಾವಿರಾರು ಸಿಖ್ ಧರ್ಮೀಯರು ಸಾಕ್ಷಿಯಾದರು.

Advertisement

ಜಯಂತಿ ಹಿನ್ನಲೆಯಲ್ಲಿ ನಗರದ ಗುರುದ್ವಾರ ಪರಿಸರದಲ್ಲಿ ಸಂಭ್ರಮ, ಸಡಗರ ಮನೆ ಮಾಡಿತ್ತು. ಕಳೆದೆರಡು ವರ್ಷ ಕೋವಿಡ್ ಸೋಂಕು ಹಿನ್ನಲೆಯಲ್ಲಿ ಜಯಂತಿಯನ್ನು ಸರಳವಾಗಿ ಆಚರಿಸಿದ್ದ ಸಿಖ್ಖ ಬಾಂಧವರು ಈ ಬಾರಿ ಅದ್ದೂರಿಯಾಗಿ ಆಚರಿಸಿದರು. ನಗರದ ಐತಿಹಾಸಿಕ ಗುರುದ್ವಾರ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಸಾವಿರಾರು ಭಕ್ತರಿಗಾಗಿ ಲಂಗರ್‌ನಲ್ಲಿ ಊಟ ಮತ್ತು ವಸತಿ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.

ಗುರುನಾನಕರ ಮಂದಿರದಲ್ಲಿ ದಿನವೀಡಿ ಧಾರ್ಮಿಕ ಕೈಂಕರ್ಯಗಳು, ಗ್ರಂಥ ಪಠಣ, ಕಥೆ- ಕೀರ್ತನೆಗಳು ಶ್ರದ್ಧಾ, ಭಕ್ತಿಯಿಂದ ನೆರವೇರಿದವರು. ಸಾಯಂಕಾಲ 4 ಗಂಟೆಗೆ ಆರಂಭವಾದ ಮೆರವಣಿಗೆಯೂ ಸಂಜೆ 7 ರವರೆಗೆ ಸಾಗಿತು. ವಿಶೇಷ ಅಲಂಕೃತ ವಾಹನದಲ್ಲಿ ಗುರುನಾನಕರ ಭಾವಚಿತ್ರ ವಾಹನ ಕಣ್ಮನ ಸೆಳೆಯಿತು. ಸಿಖ್ ಧರ್ಮಿಯರು ಭಕ್ತಿ- ಭಾವದೊಂದಿಗೆ ಭಾಗಿಯಾಗಿ ಹಾಡಿ, ಕುಣಿದು ಸಂಭ್ರಮಿಸಿದರಲ್ಲದೇ ಧಾರ್ಮಿಕ ಗ್ರಂಥ ಪಠಣ ಸಹ ನಡೆಸಿದರು.

ಆಕರ್ಷಿಸಿದ ಕಲೆಗಳ ಪ್ರದರ್ಶನ:

ಒಂದೆಡೆ ಬಾನಂಗಳದಲ್ಲಿ ಪಟಾಕಿಗಳ ಬೆಳಕಿನ ಚಿತ್ತಾರ ಮೂಡಿಸಿದರೆ ಮತ್ತೊಂದೆಡೆ ಪಾರಂಪರಿಕ ಕಲೆ ಪ್ರದರ್ಶನಗಳು ಮೈ ಜುಮ್ಮೆನಿಸಿದವು. ನೀಲಿ ಮತ್ತು ಹಳದಿ ದ್ವಜ (ನಿಶಾನೆ ಸಾಹೇಬ್) ಮತ್ತು ಸಿಖ್ಖರ ‘ಬೊಲೆ ಸೋನಿಹಾಲ್, ಸಶ್ರೀಯಾ ಅಕಾಲ್’ ಜಯ ಘೋಷಗಳು ಮೊಳಗಿದವು. ಅಲಂಕೃತ ಕುದರೆಗಳ ಮೇಲೆ ಸಿಖ್ ಧರ್ಮೀಯರು ಪಾರಂಪರಿಕ ತಲವಾರ್ ಮತ್ತು ಚಕ್ರ ತಿರುಗಿಸುವುದು, ಕೈಯಲ್ಲಿ ತಲವಾರ್ ಹಿಡಿದು ಓಡುವುದು ನೋಡುಗರನ್ನು ತನ್ನತ್ತ ಸೆಳೆಯಿತು. ಬಾಲಕ ಮತ್ತು ಬಾಲಕಿಯರು ಸಹ ತಲವಾರ್ ತಿರಿಸಿ ಸೈ ಎನಿಸಿಕೊಂಡರು. ಸುಮಾರು ಮೂರು ಕಿ.ಮೀ. ಉದ್ದದವರೆಗೆ ಮೆರವಣಿಗೆ ಸಾಗುವಾಗ ರಸ್ತೆಯ ಇಕ್ಕೆಡೆಗಳಲ್ಲಿ ನಗರದ ಜನ ವೈಭವವನ್ನು ಕಣ್ತುಂಬಿಕೊಂಡರು.

Advertisement

ಐತಿಹಾಸಿಕ ಗುರುದ್ವಾರದಿಂದ ಆರಂಭವಾದ ಮೆರವಣಿಗೆಯೂ ಮಡಿವಾಳ ವೃತ್ತ, ಕರಿಯಪ್ಪ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮೂಲಕ ಸಾಗಿ ನಂತರ ನೆಹರು ಕ್ರೀಡಾಂಗಣ ಮೂಲಕ ಪುನಃ ಗುರುನಾನಕ ದೇವಸ್ಥಾನಕ್ಕೆ ಆಗಮಿಸಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಿಖ್ ಬಾಂಧವರಿಗಾಗಿ ವಿವಿಧ ಸಂಘ- ಸಂಸ್ಥೆಗಳಿಂದ ರಸ್ತೆಯುದ್ದಕ್ಕೂ ಕುಡಿಯುವ ನೀರು, ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದು ವಿಶೇಷವಾಗಿತ್ತು.

ಗುರುದ್ವಾರ ಪ್ರಬಂಧಕ ಕಮಿಟಿ ಅಧ್ಯಕ್ಷ ಬಲಬೀರಸಿಂಗ್, ಪ್ರಮುಖರಾದ ಜ್ಞಾನಿ ದರ್ಬಾರ್‌ಸಿಂಗ್, ಮನಪ್ರೀತ್‌ಸಿಂಗ್ ಬಂಟಿ, ಪುನೀತ್ ಸಿಂಗ್, ಪವಿತ್ ಸಿಂಗ್ ಸೇರಿದಂತೆ ಬೆಂಗಳೂರು, ನಾಂದೇಡ, ಉದಗೀರ, ಲಾತೂರ, ಪುಣೆ, ಹೈದ್ರಾಬಾದ್ ಸೇರಿದಂತೆ ವಿವಿಧಡೆಯಿಂದ ಸಿಖ್ಖ್ ಬಾಂಧವರು ಭಾಗವಹಿಸಿದ್ದರು.‌

Advertisement

Udayavani is now on Telegram. Click here to join our channel and stay updated with the latest news.

Next