Advertisement

Gundlupete: ಜನಸ್ಪಂದನಾ ಕಾರ್ಯಕ್ರಮ ಮುಗಿಸಿ ಬರುವಾಗ ಅಪಘಾತ: ಆಹಾರ ನಿರೀಕ್ಷಕ ಸಾವು

08:01 PM Jun 28, 2024 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ಹಂಗಳ ಗ್ರಾಮದಲ್ಲಿ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ವೇಳೆ ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ಆಹಾರ ನಿರೀಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಆಹಾರ ಶಿರಸ್ತೇದಾರ್ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಬಸವಾಪುರ ಸಮೀಪ ರಾಷ್ಟ್ರೀಯ ಹೆದ್ದಾರಿ-67ರಲ್ಲಿ ಶುಕ್ರವಾರ ಸಂಜೆ ನಡೆದಿದೆ.

Advertisement

ತಾಲೂಕಿನ ಅಂಕಹಳ್ಳಿ ಗ್ರಾಮದ ಪಟ್ಟಣ ನಿವಾಸಿ ಆಹಾರ ನಿರೀಕ್ಷಕ ನಾಗೇಂದ್ರಪ್ಪ(46) ಮೃತರು. ಮೈಸೂರು ನಿವಾಸಿ ಆಹಾರ ಶಿರಸ್ತೇದಾರ್ ರಮೇಶ್(52) ತೀವ್ರವಾಗಿ ಗಾಯಗೊಂಡವರು. ಇಬ್ಬರು ಬೈಕ್ ನಲ್ಲಿ ಹಂಗಳ ಗ್ರಾಮದಿಂದ ಬರುತ್ತಿದ್ದ ವೇಳೆ ಗುಂಡ್ಲುಪೇಟೆ ಕಡೆಯಿಂದ ಹೋಗುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿಯಾಗಿದೆ. ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಯಿತು. ಪರೀಕ್ಷಿದ ವೈದ್ಯರು ನಾಗೇಂದ್ರಪ್ಪ ಮೃತಪಟ್ಟಿರುವುದನ್ನು ಧೃಡಪಡಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಸಲುವಾಗಿ ಶವಗಾರದಲ್ಲಿ ಇರಿಸಲಾಗಿದೆ. ಆಹಾರ ನಿರೀಕ್ಷಕ ರಮೇಶ್ ಅವರಿಗೆ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೋಯ್ಯಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ, ಪಿಎಸ್‍ಐ ಎಂ.ಎಸ್.ಶಿವಶಂಕರಪ್ಪ, ಜಯರಾಂ ಭೇಟಿ ನೀಡಿ ಪರಿಶೀಲನೆ ನಡೆಸಿ ಟ್ರ್ಯಾಕ್ಟರ್ ಮತ್ತು ಬೈಕ್ ವಶಕ್ಕೆ ಪಡೆಕೊಂಡು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಂಗಳ ನಾಡಕಚೇರಿಯಲ್ಲಿ ಊಟ ಮಾಡಿದ ನಂತರ ಪಟ್ಟಣಕ್ಕೆ ಬರುತ್ತಿದ್ದಾಗ ದುರ್ಘಟನೆ ನಡೆದು ಸಹೋದ್ಯೋಗಿ ಮೃತಪಟ್ಟ ಹಿನ್ನೆಲೆಯಲ್ಲಿ ತಹಶೀಲ್ದಾರ್ ರಮೇಶ್ ಬಾಬು ಮತ್ತು ಕಂದಾಯ ಇಲಾಖೆ ಅಧಿಕಾರಿ ಮತ್ತು ನೌಕರರು ಸಾರ್ವಜನಿಕ ಆಸ್ಪತ್ರೆ ಮುಂದೆ ಜಮಾಯಿಸಿದ್ದರು. ಮೃತ ನಾಗೇಂದ್ರಪ್ಪ ಅವರಿಗೆ ಪತ್ನಿ, 9ನೇ ತರಗತಿ ಕಲಿಯುತ್ತಿರುವ ಪುತ್ರ ಇದ್ದಾರೆ. ಅನುಕಂಪದ ನೌಕರಿ ಪಡೆದಿದ್ದ ನಾಗೇಂದ್ರಪ್ಪ ಕಳೆದ 20 ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next