Advertisement
ಹುಂಡೀಪುರ ಗ್ರಾಮದ ರವಿ, ಮಂಜು ಮತ್ತು ಕುಮಾರ ಎಂಬುವರ ಜಮೀನುಗಳಲ್ಲಿ ಬೆಳೆದಿದ್ದ ತೆಂಗು, ಬಾಳೆ ಮತ್ತು ಸೋಲಾರ್ ವಿದ್ಯುತ್ ತಂತಿ ಬೇಲಿಯನ್ನು ಆನೆಯೊಂದು ತಿಂದು, ತುಳಿದು ನಾಶ ಮಾಡಿತ್ತು. ಹಿಂದಿನ ಐದು ದಿನಗಳಲ್ಲೂ ಹಲವು ಕಡೆಗಳಲ್ಲಿ ಸಲಗದಿಂದ ಬೆಳೆ ಹಾನಿ ಸಂಭವಿಸಿತ್ತು. ಇದರಿಂದ ರೈತರು ಆಕ್ರೋಶಗೊಂಡಿದ್ದರು. ರೈತರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ನೌಕರರಿಂದ ಆನೆಯನ್ನು ಕಾಡಿಕಟ್ಟಲು ಸಾಧ್ಯವಾಗಿರಲಿಲ್ಲ. ಗುರುವಾರ ಬೆಳಗ್ಗೆ ಬೆಳೆ ಹಾನಿಯ ಬಗ್ಗೆ ಮಾಹಿತಿ ಪಡೆಯಲು ಬಂದ ಅರಣ್ಯ ಇಲಾಖೆ ನೌಕರರಿಗೆ ರೈತರು ದಿಗ್ಭಂಧನ ವಿಧಿಸಿದ್ದರು. ವಿಷಯ ತಿಳಿದ ಗೋಪಾಲಸ್ವಾಮಿ ಬೆಟ್ಟ, ಕುಂದಕೆರೆ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಮನವಿ ಆಲಿಸಿದರು. ಇದಕ್ಕೆ ಜಗ್ಗದ ರೈತರು ವಾಹನಗಳ ಗಾಳಿ ತೆಗೆಯುವ ಮೂಲಕ ಸ್ಥಳಕ್ಕೆ ಸಿಎಫ್ ಹಾಗು ಎಸಿಎಫ್ ಆಗಮಿಸಿ ಶಾಶ್ವತ ಪರಿಹಾರ ದೊರಕಿಸಿಕೊಡಬೇಕೆಂದು ಪಟ್ಟು ಹಿಡಿದರು.
Related Articles
Advertisement
ನಂತರ ಸ್ಥಳಕ್ಕಾಗಮಿಸಿದ ಎಸಿಎಫ್ ರವೀಂದ್ರ, ಬೆಳೆ ಹಾನಿಗೆ ಸೂಕ್ತ ಪರಿಹಾರ ಕೊಡಿಸಲಾಗುವುದು, ಹಾಳಾಗಿರುವ ಸೋಲಾರ್ ಫೆನ್ಸಿಂಗ್ ಅನ್ನು ಸರಿ ಪಡಿಸಿಕೊಡುವ ಜತೆಗೆ ಗೋಪಾಲಸ್ವಾಮಿ ಬೆಟ್ಟ ಮತ್ತು ಕುಂದಕೆರೆ ಅರಣ್ಯ ವಲಯದ ನೌಕರರು ರಾತ್ರಿವೇಳೆ ಗಂಟೆಗೊಮ್ಮ ಗಸ್ತು ತಿರುಗುವ ವ್ಯವಸ್ಥೆ ಮಾಡಿಸುತ್ತೇನೆ. ಕುಂದಕೆರೆ ವಲಯ ಅರಣ್ಯಾಧಿಕಾರಿ ವರ್ಗಾವಣೆ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು.
ಕುಂದಕೆರೆ ಮತ್ತು ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿಗಳಾದ ಶ್ರೀನಿವಾಸನಾಯಕ, ಎನ್.ಪಿ.ನವೀನ್ಕುಮಾರ್, ರೈತರಾದ ಕಂದಸ್ವಾಮಿ, ದಿಲೀಪ್, ಎಚ್.ಪಿ.ಮಹೇಂದ್ರ, ಬಸವಣ್ಣ, ಅಶೋಕ, ಗುರು, ನಾಗಪ್ಪ ಮತ್ತು ರೈತ ಸಂಘಟನೆ ಪದಾಧಿಕಾರಿಗಳು ಹಾಜರಿದ್ದರು.