Advertisement

ಗೆಲುವೆಂಬ ಕುದುರೆಯನೇರಿ…!

12:13 AM Dec 07, 2022 | Team Udayavani |

ಸತತ 27 ವರ್ಷಗಳಿಂದ ಒಂದೇ ಪಕ್ಷ… ಮೋದಿ ಬಿಟ್ಟರೆ ಬೇರೆ ಮಾತೇ ಇಲ್ಲ… ಅವರ ಮುಂದೆ ಯಾವ ಆರೋಪವೂ ಯಾವ ಘಟನೆಯೂ ಯಾವ ಪ್ರತಿರೋಧವೂ ಎಂಥ ವಿರೋಧಿ ಅಲೆಯೂ ಲೆಕ್ಕಕ್ಕಿಲ್ಲ.

Advertisement

ಇದು ಗುಜರಾತಿಗರ ಮನಃಸ್ಥಿತಿ. ಮತಗಟ್ಟೆ ಸಮೀಕ್ಷೆಗಳ ಭವಿಷ್ಯವನ್ನು ನಂಬುವುದಾದರೆ ಗುಜರಾತ್‌ನಲ್ಲಿ ಸತತ 7ನೇ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿಯಲು ಕಮಲ ಪಕ್ಷ ಸಜ್ಜಾಗಿ ನಿಂತಿದೆ. ಅದೂ ಸುಲಭ ಮತ್ತು ಪ್ರಚಂಡ ಜಯದ ಮೂಲಕ.

ಹೊಸದಾಗಿ ರಂಗಪ್ರವೇಶ ಮಾಡಿರುವ ಆಮ್‌ ಆದ್ಮಿ ಪಕ್ಷವು ಕಾಂಗ್ರೆಸ್‌ನ ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತದೆಯೇ ವಿನಾ ಬಿಜೆಪಿಯ ಮತಗಳನ್ನು ಅಲುಗಾಡಿಸಲೂ ಅದಕ್ಕೆ ಸಾಧ್ಯ ವಾಗುವುದಿಲ್ಲ ಎನ್ನುತ್ತವೆ ಸಮೀಕ್ಷಾ ವರದಿಗಳು. ಅಂದರೆ ಆಪ್‌ಗೆ ಪ್ಲಸ್‌ ಆಗುವ ಸೀಟುಗಳೆಲ್ಲವೂ ಕಾಂಗ್ರೆಸ್‌ನಿಂದ ಮೈನಸ್‌ ಆಗುವಂಥದ್ದು ಅಷ್ಟೆ.

ಚುನಾವಣೋತ್ತರ ಸಮೀಕ್ಷಾ ವರದಿಗಳು ಕಮಲ ಪಾಳಯದ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. 2024ರ ಲೋಕಸಭೆ ಚುನಾವಣೆ ಹತ್ತಿರದಲ್ಲೇ ಇರುವ ಕಾರಣ ಗುಜರಾತ್‌ನಲ್ಲಿ ಮತ್ತೆ ಜಯದ ನಗಾರಿ ಬಾರಿಸಬೇಕಾದ್ದು ಬಿಜೆಪಿಗೆ ಮುಖ್ಯವೂ ಆಗಿದೆ. ಇದೇ ಕಾರಣಕ್ಕಾಗಿ ಬಿಜೆಪಿ ಚುನಾವಣೆಗೆ ವರ್ಷಗಳಿರುವಾಗಲೇ ತಳಮಟ್ಟದಲ್ಲೇ ಕಾರ್ಯತಂತ್ರ ರೂಪಿಸಿ, ಪಕ್ಷ ಸಂಘಟನೆ, ಪ್ರಚಾರಕ್ಕೆ ಒತ್ತು ನೀಡುತ್ತಾ ಎಲ್ಲಿಯೂ ತಮ್ಮ ಮತಗಳು ಬೇರೆ ಕಡೆ ವಾಲದಂತೆ ನೋಡಿಕೊಳ್ಳುತ್ತಾ ಬಂದಿದೆ.

ದಣಿವರಿಯದೇ ಪ್ರಚಾರ: ಸಾಮಾಜಿಕ ಜಾಲತಾಣಗಳಿಂದ ಹಿಡಿದು ರ್ಯಾಲಿ, ರೋಡ್‌ ಶೋ, ಮನೆ ಮನೆ ಭೇಟಿವರೆಗೂ ಚುನಾವಣ ಪ್ರಚಾರದ ವಿಚಾರದಲ್ಲಿ ಬಿಜೆಪಿಯದ್ದೇ ಮೇಲುಗೈ. ಜನರಿಗೆ ಪರ್ಯಾಯ ರಾಜಕೀಯದ ಆಯ್ಕೆಯೇ ಇಲ್ಲದ್ದು ಕೂಡ ಬಿಜೆಪಿಗೆ ಪ್ಲಸ್‌ ಪಾಯಿಂಟ್‌. ಪ್ರಧಾನಿ ಮೋದಿಯ ವರಂತೂ ತವರು ರಾಜ್ಯದಲ್ಲಿ 27ಕ್ಕೂ ಅಧಿಕ ರ್ಯಾಲಿಗಳನ್ನು ನಡೆಸಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನವೇ ಹಲವು ಬಾರಿ ರಾಜ್ಯಕ್ಕೆ ಭೇಟಿ ಕೊಟ್ಟು, ಸಾವಿರಾರು ಕೋ.ರೂ. ಮೌಲ್ಯದ ಯೋಜನೆಗಳಿಗೆ ಶಿಲಾನ್ಯಾಸ, ಉದ್ಘಾಟನೆ ನೆರವೇರಿಸಿದ್ದಾರೆ. ಜನರ ಗಮನ ಅತ್ತಿತ್ತ ಹರಿಯದಂತೆ ನೋಡಿಕೊಂಡಿದ್ದಾರೆ. ಪ್ರಚಾರದಲ್ಲಿ ನಂ.2 ಸ್ಥಾನವನ್ನು ಆಪ್‌ಗೆ ನೀಡಬಹುದು. ದಿಲ್ಲಿ, ಪಂಜಾಬ್‌ನಲ್ಲಿ ಭರ್ಜರಿ ಜಯ ಗಳಿಸಿದ ಕೇಜ್ರಿವಾಲ್‌ ಅವರ ಆಮ್‌ ಆದ್ಮಿ ಪಕ್ಷ ರಾಷ್ಟ್ರಮಟ್ಟದ ರಾಜಕೀಯವನ್ನು ವಿಸ್ತರಿಸುವ ಕನಸಿನೊಂದಿಗೆ ಗುಜರಾತ್‌ನಲ್ಲಿ ಹಗಲುರಾತ್ರಿ ಎನ್ನದೇ ಶ್ರಮಿಸಿದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ತನ್ನ ವೋಟರ್‌ ಬೇಸ್‌ ಗಟ್ಟಿಗೊಳಿಸುವ ಉದ್ದೇಶವೂ ಆಪ್‌ನದ್ದಾಗಿತ್ತು.

Advertisement

ಕಾಂಗ್ರೆಸ್‌ನ ದಿವ್ಯ ನಿರ್ಲಕ್ಷ್ಯ : ಗುಜರಾತ್‌ ಫ‌ಲಿತಾಂಶವು 2024ರ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿದ್ದರೂ ಪ್ರಚಾರದ ವಿಷಯದಲ್ಲಿ ಕಾಂಗ್ರೆಸ್‌ನ ದಿವ್ಯ ನಿರ್ಲಕ್ಷ್ಯ ವು ಈ ಕ್ಷಣಕ್ಕೂ ಅಚ್ಚರಿಯೇ ಸರಿ. ಬಿಜೆಪಿ, ಆಪ್‌ ಭರ್ಜರಿ ಪ್ರಚಾರದ ನಡುವೆ ಕಾಂಗ್ರೆಸ್‌ ಕಾಣಿಸಲೇ ಇಲ್ಲ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಒಂದು ದಿನವಷ್ಟೇ ಗುಜರಾತ್‌ಗೆ ಕಾಲಿಟ್ಟಿದ್ದರು. ಉಳಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಮತ್ತಿತರರು ಒಂದೆ ರಡು ಬಾರಿ ಅಲ್ಲಲ್ಲಿ ಕಾಣಿಸಿಕೊಂಡರು ಅಷ್ಟೆ. ಭಾರತ್‌ ಜೋಡೋ ಯಾತ್ರೆ ಮೂಲಕ ರಾಹುಲ್‌ರನ್ನು “ರೀಲಾಂಚ್‌’ ಮಾಡಲು ಕಾಂಗ್ರೆಸ್‌ ಪ್ರಯತ್ನ ಪಡುತ್ತಿದೆ. ಅದು ಯಶಸ್ವಿಯಾಗಲೂ ಬಹುದು. ಆದರೆ ಹೀಗಿದ್ದರೂ ಜೋಡೋ ಯಾತ್ರೆ ಸಾಗುವ ರಾಜ್ಯಗಳ ಪಟ್ಟಿಯಿಂದ “ಚುನಾವಣ ಕಾವಿನಲ್ಲಿದ್ದ ಗುಜರಾತ್‌’ ಅನ್ನು ಕಾಂಗ್ರೆಸ್‌ ಕೈಬಿಟ್ಟಿದ್ದೇಕೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಆ ಮೂವರು ನಾಯಕರು: 2017ರ ವಿಧಾನಸಭೆ ಚುನಾವಣೆ ಯಲ್ಲಿ ಮೂವರು ಯುವನಾಯಕರು ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಶಕ್ತಿಯಾಗಿದ್ದರು. ಹಾರ್ದಿಕ್‌ ಪಟೇಲ್ , ಅಲ್ಪೇಶ್‌ ಠಾಕೂರ್‌ ಮತ್ತು ಜಿಗ್ನೇಶ್‌ ಮೆವಾನಿ ಅವರ ಬಿಜೆಪಿ ವಿರೋಧಿ ನಿಲುವು ಅದಾಗಲೇ ಸೊರಗಿದ್ದ ಕಾಂಗ್ರೆಸ್‌ಗೆ “ಬೂಸ್ಟರ್‌ ಡೋಸ್‌’ ಕೊಟ್ಟಿತ್ತು. ಮೀಸಲಾತಿಗಾಗಿ ಪಟೇಲರು ನಡೆಸಿದ ಬಹುದೊಡ್ಡ ಹೋರಾಟದ ಹೀರೋ ಆಗಿ ಹಾರ್ದಿಕ್‌ ಮನೆಮಾತಾಗಿದ್ದರು. ಪಾಟೀದಾರ ಸಮುದಾಯದಲ್ಲಿ ಎದ್ದಿದ್ದ “ಪ್ರತಿರೋಧ’ದ ಕಿಡಿ ಕಾಂಗ್ರೆಸ್‌ನ ಕೈ ಹಿಡಿದಿತ್ತು. ರಾಜ್ಯದ ಹಿಂದುಳಿದ ವರ್ಗಗಳ ಮೇಲೆ ಹಿಡಿತ ಹೊಂದಿದ್ದ ಅಲ್ಪೇಶ್‌ ಠಾಕೂರ್‌ಗೆ ಒಬಿಸಿ ಮತಗಳನ್ನು ಸೆಳೆ ಯುವ ಛಾತಿಯಿತ್ತು. ದಲಿತರ ಧ್ವನಿಯಾಗಿ ಮಿಂಚಿದ ಜಿಗ್ನೇಶ್‌ ಮೆವಾನಿ ಅವರಿಗೆ ದಲಿತ ಸಮುದಾಯದ ಭಾರೀ ಬೆಂಬಲವಿತ್ತು. ಇವರೆಲ್ಲರ ಕಾರಣದಿಂದಾಗಿ ಕಾಂಗ್ರೆಸ್‌ ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿ, 77 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಕೊನೇ ಕ್ಷಣದವರೆಗೂ ಬಿಜೆಪಿಯ ಬೆವರಿಳಿಸಿತ್ತು.

ಆದರೆ ಈ ಬಾರಿ ಇವೆಲ್ಲವೂ ತಲೆಕೆಳಗಾಯಿತು. ಹಾರ್ದಿಕ್‌ ಹಾಗೂ ಅಲ್ಪೇಶ್‌ ನಿಷ್ಠೆ ಬದಲಿಸಿ, ಕಮಲದ ಕೈಹಿಡಿದರು. ಇವರಿಬ್ಬರ ಹಿಂದಿದ್ದ ಮತದಾರರೂ ಸಹಜವಾಗಿ ಬಿಜೆಪಿಯತ್ತ ಮುಖಮಾಡಿದರು. ಕಾಂಗ್ರೆಸ್‌ನಲ್ಲಿ ಉಳಿದಿದ್ದು ಮೆವಾನಿ ಮಾತ್ರ. ಗುಜರಾತ್‌ ಸರಕಾರ ರಚನೆಯಲ್ಲಿ ಪಟೇಲ್‌ ಸಮುದಾಯ ನಿರ್ಣಾಯಕ ಪಾತ್ರ ವಹಿಸುತ್ತದೆ. ಬಿಜೆಪಿ ಇದೇ ಸಮುದಾಯದ ಭೂಪೇಂದ್ರ ಪಟೇಲ್‌ಗೆ ಸಿಎಂ ಸ್ಥಾನ ನೀಡಿತು. ಹಾರ್ದಿಕ್‌ ಕೂಡ ಬಿಜೆಪಿಗೆ ಸೇರಿದ್ದು ಪಕ್ಷಕ್ಕೆ ವರವಾಗಿ ಪರಿಣಮಿಸಿತು.

ಇನ್ನು ಕಾಂಗ್ರೆಸ್‌ನ 77ರ ಪೈಕಿ 17 ಶಾಸಕರು ಪಕ್ಷಾಂತರ ಮಾಡಿ ಕಮಲ ಮುಡಿದರು. ಕಾಂಗ್ರೆಸ್‌ ದಿನೇದಿನೆ ಬಲ ಕಳೆದುಕೊಳ್ಳುತ್ತಲೇ ಹೋಯಿತು. 2017ರಲ್ಲೇ ಗುಜರಾತ್‌ನಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಹೋರಾಡಲು ಬೆಲೆಯೇರಿಕೆ, ಭ್ರಷ್ಟಾಚಾರದಂಥ ವಿಷಯಗಳಿದ್ದವು. ಕೊನೇ ಪಕ್ಷ ಮೊರ್ಬಿ ತೂಗುಸೇತುವೆ ದುರಂತ ವನ್ನೂ ಆಡಳಿತ ಪಕ್ಷದ ವಿರುದ್ಧದ ಅಸ್ತ್ರವಾಗಿ ಬಳಸಬಹುದಿತ್ತು. ಆದರೆ ಅದ್ಯಾವುದನ್ನೂ ಮಾಡದ ಕಾಂಗ್ರೆಸ್‌, ತನ್ನ ಸರಣಿ ಸೋಲು ಗಳ ಪಟ್ಟಿಗೆ ಮತ್ತೊಂದು ರಾಜ್ಯವನ್ನು ಸೇರಿಸಲು ಅಣಿಯಾಯಿತು.

ಮೋದಿ ಫ್ಯಾಕ್ಟರ್‌; ಟೀಕೆಗಳೇ ಅಸ್ತ್ರ: ಗುಜರಾತ್‌ನಲ್ಲಿ ಆಡಳಿತ ವಿರೋಧಿ ಅಲೆಯನ್ನೇ ನುಂಗಿಬಿಡುವಂಥ ಶಕ್ತಿಯಿರುವುದು ಮೋದಿ ಫ್ಯಾಕ್ಟರ್‌ಗೆ. ಅದು ಈ ಬಾರಿಯೂ ಕೆಲಸ ಮಾಡಿದಂತಿದೆ. ಮೋದಿಯವರನ್ನು ಬೇಷರತ್ತಾಗಿ ಆರಾಧಿಸುವ ಗುಜರಾತಿಗರಿಗೆ, ಸತತ ಸಾರ್ವಜನಿಕ ರ್ಯಾಲಿಗಳ ಮೂಲಕ ಪದೇ ಪದೆ ತಮ್ಮ ಆರಾಧ್ಯದೈವದ ದರ್ಶನವಾಗುತ್ತಿತ್ತು. ಬಹುತೇಕ ಗುಜರಾತಿಗರು ಮತ ಹಾಕುವುದು ಸಿಎಂ ಅಭ್ಯರ್ಥಿಯನ್ನಾಗಲೀ, ಪಕ್ಷವನ್ನಾಗಲೀ ನೋಡಿ ಅಲ್ಲ. ಅವರ ಮತವೇನಿದ್ದರೂ ಮೋದಿಗೆ.

ಇತರ ಪಕ್ಷಗಳ ನಾಯಕರು ಮೋದಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದಾಗೆಲ್ಲ, ಅದು ಅವರಿಗೇ ತಿರುಗುಬಾಣ ವಾಗಿದ್ದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಹಿಂದೆಯೂ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ “ಸಾವಿನ ವ್ಯಾಪಾರಿ’ ಹೇಳಿಕೆ, ಮಣಿಶಂಕರ್‌ ಅಯ್ಯರ್‌ ಅವರ “ಚಾಯ್‌ವಾಲ’ ಹೇಳಿಕೆ ಹೇಗೆ ಮೋದಿ ಪಾಲಿಗೆ ವರವಾಗಿತ್ತೋ, ಅದೇ ರೀತಿ ಈ ಬಾರಿಯೂ ಆಯಿತು. ಕಾಂಗ್ರೆಸ್‌ ತನ್ನ ಹಿಂದಿನ ತಪ್ಪುಗಳಿಂದ ಪಾಠ ಕಲಿತಿಲ್ಲ ಎಂಬುದು ಇದರಿಂದ ಸ್ಪಷ್ಟ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿಯವರನ್ನು “ರಾವಣ’ನಿಗೆ ಹೋಲಿಸಿದರು. ಅದನ್ನೇ ಪ್ರಚಾರದ ದಾಳವನ್ನಾಗಿ ಬಳಸಿಕೊಂಡಿತು ಬಿಜೆಪಿ. ಖರ್ಗೆ ಹೇಳಿಕೆ ಬರೀ ಮೋದಿಯವರಿಗೆ ಮಾಡಿದ ಅವಮಾನವಲ್ಲ, ಪ್ರತಿಯೊಬ್ಬ ಗುಜರಾತಿಗನಿಗೂ ಮಾಡಿದ ಅವಮಾನ ಎಂಬಂತೆ ಬಿಂಬಿಸಿತು. ಗುಜರಾತ್‌ ಮಣ್ಣಿನ ಮಗನಿಗೆ ಆದ ಅವಮಾನಕ್ಕೆ ನೀವು ಮತಗಳ ಮೂಲಕ ಉತ್ತರ ಕೊಡಿ ಎಂದು ಕರೆಕೊಟ್ಟಿತು. ಹಾಗೆಂದು ಮೋದಿಯವರಾಗಲೀ, ಬಿಜೆಪಿಯಾಗಲೀ ಇತರ ಪಕ್ಷಗಳ ನಾಯಕರ ವಿರುದ್ಧ ವೈಯಕ್ತಿಕ ದಾಳಿ ನಡೆಸಿಲ್ಲವೇ? ಖಂಡಿತಾ ನಡೆಸಿದ್ದಾರೆ. ಆದರೆ ತಮ್ಮ ಮೇಲಿನ ದಾಳಿಯನ್ನು ಚುನಾವಣ ವಿಚಾರವನ್ನಾಗಿ ಟರ್ನ್ ಮಾಡುವಂಥ ಕಲೆ ಅವರಿಗೆ ಗೊತ್ತಿದೆ. ಆದರೆ ಈ ಚಾಣಾಕ್ಷತನ ಬೇರೆ ಪಕ್ಷಗಳಿಗಿಲ್ಲ.

ಮುಗಿದಿಲ್ಲ, ಮುಗಿಯಲ್ಲ: “ಗೆದ್ದಾಗ ಬೀಗಬಾರದು, ಸೋತಾಗ ಕುಗ್ಗಬಾರದು’ ಎಂಬ ನೀತಿಯನ್ನು ಬಿಜೆಪಿ ಚೆನ್ನಾಗಿಯೇ ಅನುಸರಿಸುತ್ತಾ ಬರುತ್ತಿದೆ. ಒಂದು ಚುನಾವಣೆ ಮುಗಿಯಿತೆಂದು ವಿಶ್ರಾಂತಿಗೆ ಹೋಗುವ ಜಾಯಮಾನ ಅದರದ್ದಲ್ಲ. ಈ ರಾಜ್ಯದ ಬಳಿಕ ಮತ್ತೂಂದು ರಾಜ್ಯ ಗೆಲ್ಲಬೇಕು, ಗೆದ್ದಲ್ಲಿ ಮುಂದಿನ ಬಾರಿ ಇನ್ನಷ್ಟು ಸೀಟು ಗಳಿಸಬೇಕು, ಸೋತರೆ ಗೆಲ್ಲುವವರೆಗೂ ಅಲ್ಲೇ ನೆಲೆನಿಲ್ಲಬೇಕು ಎಂಬ ಸಂಕಲ್ಪದೊಂದಿಗೆ ಸದಾ ಕಾರ್ಯನಿರತವಾ ಗಿರುತ್ತದೆ. (ಪ.ಬಂಗಾಲ, ತ.ನಾಡು, ತೆಲಂಗಾಣ, ಕೇರಳದಲ್ಲಿ ಬಿಜೆಪಿ ನಡೆಸುತ್ತಿರುವ ಪಕ್ಷ ಸಂಘಟನೆಯೇ ಇದಕ್ಕೆ ತಾಜಾ ಉದಾಹರಣೆ). ಗುಜರಾತ್‌ನ ಕೊನೇ ಹಂತದ ಮತದಾನ ಮುಗಿದ ಕ್ಷಣದÇÉೇ ಆರಂಭಗೊಂಡ ಬಿಜೆಪಿ ಪದಾಧಿಕಾರಿಗಳ ಸಭೆಯೇ ಇದಕ್ಕೆ ಸಾಕ್ಷಿ. ನಿರಂತರ ಪ್ರಚಾರದಲ್ಲಿ ತೊಡಗಿದ್ದ ಪ್ರಧಾನಿ ಮೋದಿ, ಕೊನೇ ದಿನ ತವರು ರಾಜ್ಯದಲ್ಲಿ ಹಕ್ಕು ಚಲಾ ಯಿಸಿ, ಅಲ್ಲಿಂದ ನೇರವಾಗಿ ದಿಲ್ಲಿಗೆ ಬಂದು ಪದಾಧಿಕಾರಿಗಳ ಸಭೆಗೆ ಚಾಲನೆ ನೀಡಿದರು. ಕರ್ನಾಟಕ ಸಹಿತ ಮುಂದೆ ನಡೆಯಲಿರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ, 2024ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಕೆಲಸ ಆರಂಭಿಸಿದರು. ಇದುವೇ ಬಿಜೆಪಿಯ ಗೆಲುವಿನ ಗುಟ್ಟು.

ಇದೇ ಗುರುವಾರ ಗುಜರಾತ್‌ ರಾಜಕೀಯ ಪಕ್ಷಗಳ ನೈಜ ಭವಿಷ್ಯ ಬಯಲಾಗಲಿದೆ. ಈ ಫ‌ಲಿತಾಂಶ ಸಮೀಕ್ಷೆಗಳಿಗಿಂತ ಭಿನ್ನವಾಗಿರುವ ಸಾಧ್ಯತೆ ತೀರಾ ಕಡಿಮೆ. ಹಾಗೆಯೇ ಎಲ್ಲಿಯವರೆಗೆ ಪರ್ಯಾಯ ರಾಜಕೀಯ ಶಕ್ತಿಯೊಂದು ಪ್ರಬಲವಾಗಿ ಬೆಳೆದು ನಿಲ್ಲುವುದಿಲ್ಲವೋ ಅಲ್ಲಿಯವರೆಗೂ ಬಿಜೆಪಿಯ ಗೆಲುವಿನ ಕುದುರೆಯನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ.

-ಹಲೀಮತ್‌ ಸಅದಿಯಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next