Advertisement

ಟಿಕೆಟ್‌ಗೆ ಗುಜರಾತ್‌ ಸೂತ್ರ: ಲೋಕಸಭೆ, 9 ವಿಧಾನಸಭೆ ಚುನಾವಣೆಯಲ್ಲಿ ಪ್ರಯೋಗ ಖಚಿತ

09:29 PM Nov 26, 2022 | Team Udayavani |

ಗಾಂಧಿನಗರ/ನವದೆಹಲಿ: ಪ್ರಸಕ್ತ ಸಾಲಿನ ಗುಜರಾತ್‌ ವಿಧಾನಸಭೆ ಚುನಾವಣೆ 2024ರ ಲೋಕಸಭೆ ಮತ್ತು ಅದಕ್ಕಿಂತ ಮೊದಲು ನಡೆಯಲಿರುವ ಕರ್ನಾಟಕ ಸೇರಿದಂತೆ 9 ರಾಜ್ಯಗಳ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹೊಂದಿರುವ ವರ್ಚಸ್ಸು ಕೂಡ ಬಹುವಾಗಿ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

Advertisement

ಕಾಂಗ್ರೆಸ್‌ನಲ್ಲಿ ಸೂಕ್ತ ರೀತಿಯ ಅವಕಾಶ ಸಿಗದೆ ಇರುವುದರಿಂದ ಬೇಸತ್ತು ಈಗಾಗಲೇ ಕೆಲವು ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅಂಥ ಸಮರ್ಥ ನಾಯಕರನ್ನು ಬಿಜೆಪಿ ಗುರಿ ಮಾಡಿ, ಅವರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನದಲ್ಲಂತೂ ಇರಲಿದೆ.

ಗುಜರಾತ್‌ನ ಹಾಲಿ ವಿಧಾನಸಭೆ ಚುನಾವಣೆಯಲ್ಲಿ ಈ ಅಂಶ ವೇದ್ಯವಾಗಿದೆ. ಒಟ್ಟು ಮೂರು ಅಂಶಗಳ ಸೂತ್ರಗಳನ್ನು ಬಿಜೆಪಿ 2002, 2012 ಮತ್ತು ಹಾಲಿ ವರ್ಷದ ಚುನಾವಣೆಯಲ್ಲಿ ಅನುಸರಿಸಿದೆ.

ಆರ್ಥಿಕವಾಗಿ ಆಥವಾ ನೈತಿಕ ಸೇರಿದಂತೆ ಇತರ ಗುರುತರ ಆರೋಪಗಳನ್ನು ಎದುರಿಸುವ ಹಾಲಿ ಶಾಸಕರನ್ನು ಕೈಬಿಟ್ಟು ಹೊಸಬರ ಆಯ್ಕೆಗೆ ಬಿಜೆಪಿ ಕೈ ಹಾಕಿದೆ. ಇಷ್ಟು ಮಾತ್ರವಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಹೊರತಾಗಿ ಸ್ವಂತ ಬಲದಿಂದ ಗೆಲ್ಲುವ ಸಾಮರ್ಥ್ಯ ಇರುವ ಅಭ್ಯರ್ಥಿಗಳ ಆಯ್ಕೆಗೆ ಕೂಡ ವರಿಷ್ಠರು ಮನಸ್ಸು ಮಾಡಿದ್ದಾರೆ. ಇದರ ಜತೆಗೆ ಮಧ್ಯಮ ವರ್ಗ ಮತ್ತು ಯುವ ಸಮುದಾಯವನ್ನು ಸಳೆಯುವ ನಾಯಕರನ್ನೂ ಶೋಧಿಸಲು ಚಿಂತನೆ ನಡೆದಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಗುಜರಾತ್‌ನಲ್ಲಿ ಟಿಕೆಟ್‌ ವಂಚಿತರಾದ 40 ಹಾಲಿ ಶಾಸಕರ ಪೈಕಿ ಬಹುತೇಕ ಮಂದಿ 75 ವರ್ಷದೊಳಗಿನರೇ ಆಗಿದ್ದಾರೆ. ಟಿಕೆಟ್‌ ಸಿಗದ ಮಾಜಿ ಸಿಎಂ ವಿಜಯ ರೂಪಾಣಿ ಅವರಿಗೂ 66 ವರ್ಷ ವಯಸ್ಸು. ಇದೇ ವೇಳೆ, 76 ವರ್ಷ ವಯಸ್ಸಿನ ಯೋಗೇಶ್‌ ಪಟೇಲ್‌ಗೆ ಟಿಕೆಟ್‌ ನೀಡಲಾಗಿದೆ. ಅಂದರೆ, ಅಭ್ಯರ್ಥಿಗಳ ವರ್ಚಸ್ಸಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಇದೇ ಅಂಶವನ್ನು ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ ಅನುಸರಿಸುವುದೇ ನಿಜ ಎಂದಾದರೆ ಬಿಜೆಪಿಯ ಕೆಲವು ಹಾಲಿ ಶಾಸಕರು, ಸಂಸದರಿಗೆ ಅತ್ಯಂತ ಸವಾಲಿನ ದಿನಗಳು ಎದುರಾಗಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು, ಬಿಜೆಪಿಯ ಚಿಹ್ನೆ ಕಮಲ ಮತ್ತು ಪ್ರಧಾನಿ ಮೋದಿ ನಾಯಕತ್ವದ ಬಗ್ಗೆ ವಿಶ್ವಾಸವಿರುವ ಯುವ ನಾಯಕರನ್ನು ಹುಡುಕಿ, ಆಯ್ಕೆ ಮಾಡಲು ಪ್ರಯತ್ನಗಳು ನಡೆದಿವೆ.

Advertisement

ಬಿಜೆಪಿ ಹಲವು ವರ್ಷಗಳಿಂದ ಗೆಲ್ಲಲು ಅಸಾಧ್ಯವಾಗಿರುವ ಕ್ಷೇತ್ರಗಳಲ್ಲಿ ಪ್ರತಿಪಕ್ಷಗಳ ಪ್ರಭಾವಿ ಮುಖಂಡರನ್ನು ಪಕ್ಷಕ್ಕೆ ಆಹ್ವಾನಿಸಿ, ಅವರಿಗೆ ಟಿಕೆಟ್‌ ನೀಡಿ ಕಣಕ್ಕೆ ಇಳಿಸಲು ಮುಂದಾಗಿದೆ. ಛೋಟಾ ಉದಯಪುರ ಕ್ಷೇತ್ರದಲ್ಲಿ ಬುಡಕಟ್ಟು ಸಮುದಾಯದ 78 ವರ್ಷದ ಮೋಹನ್‌ ಸಿಂಗ್‌ ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಅವರ ಬದಲಾಗಿ ಅಳಿಯನಿಗೆ ಆ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ನೀಡಲಾಗಿದೆ.

ಮೋದಿಯವರ ರಾಜಕೀಯ ಜೀವನದಲ್ಲಿ 2002 ಮಹತ್ವದ ವರ್ಷ. ಆ ವರ್ಷ ನಿಗದಿತ 8 ತಿಂಗಳು ಮೊದಲೇ ಗುಜರಾತ್‌ನಲ್ಲಿ ವಿಧಾನಸಭೆ ವಿಸರ್ಜಿಸಿ ಚುನಾವಣೆ ಘೋಷಣೆ ಮಾಡಿದ್ದರು. ಆಗ ಜಯವೂ ಸಿಕ್ಕಿತ್ತು. 2012ರ ಚುನಾವಣೆಯಲ್ಲಿ ಗೆದ್ದ ಬಳಿಕ ಅವರು ರಾಷ್ಟ್ರ ಮಟ್ಟಕ್ಕೆ ಪ್ರವೇಶ ಮಾಡುವ ಸುಳಿವೂ ಪ್ರಾಪ್ತವಾಗಿತ್ತು. ಹಾಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಪಕ್ಷದಲ್ಲಿ ಅವರ ವರ್ಚಸ್ಸು ಮತ್ತಷ್ಟು ಹೆಚ್ಚಿಸಲಿದೆ. ಜತೆಗೆ 2024ರ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮತ್ತು ಫ‌ಲಿತಾಂಶದ ದಿಕ್ಸೂಚಿಗೆ ಮುನ್ನುಡಿ ಬರೆದಂತೆ ಆಗಲಿದೆ.

ಸಮಾನ ನಾಗರಿಕ ಸಂಹಿತೆ ಜಾರಿಗೆ ಆದ್ಯತೆ
ಗುಜರಾತ್‌ ಚುನಾವಣೆ ಪ್ರಣಾಳಿಕೆಯನ್ನು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಗಾಂಧಿನಗರದಲ್ಲಿ ಬಿಡುಗಡೆ ಮಾಡಿದ್ದಾರೆ. ಸಮಾನ ನಾಗರಿಕ ಸಂಹಿತೆ (ಯುಸಿಸಿ) ಜಾರಿ, ಉಗ್ರ ನಿಗ್ರಹಕ್ಕಾಗಿ ಯುವಕರು ತೆÌàಷಮಯ ಭಾಷಣಗಳಿಗೆ ಮಾರು ಹೋಗದಂತೆ ಮಾಡಲು ವಿಶೇಷ ಸೆಲ್‌ ರಚನೆ, ಸ್ಲೀಪರ್ ಸೆಲ್‌ಗ‌ಳ ರಚನೆಗೆ ತಡೆ, 20 ಲಕ್ಷ ಉದ್ಯೋಗ ಸೃಷ್ಟಿ, ಮುಂದಿನ 5 ವರ್ಷಗಳಲ್ಲಿ ಗುಜರಾತ್‌ನ ಅರ್ಥ ವ್ಯವಸ್ಥೆಯನ್ನು ಒಂದು ಲಕ್ಷಕೋಟಿ ಡಾಲರ್‌ಗೆ ಏರಿಕೆ ಮಾಡುವ ವಾಗ್ಧಾನವನ್ನು ಮಾಡಲಾಗಿದೆ. ಅಲ್ಲದೇ, ದ್ವಾರಕಾದ ಅಭಿವೃದ್ಧಿಗೆ ದೇವಭೂಮಿ ದ್ವಾರಕಾ ಕಾರಿಡಾರ್‌ ನಿರ್ಮಾಣ. ಅದರಲ್ಲಿ ಜಗತ್ತಿನ ಅತಿ ಎತ್ತರದ ಕೃಷ್ಣ ವಿಗ್ರಹ ನಿರ್ಮಾಣ, 3ಡಿ ಭಗವದ್ಗೀತೆ ವಲಯ ರಚನೆ. ಸೋಮನಾಥ ಅಂಬಾಜಿ, ಪಾವಗಡ ದೇಗುಲಗಳ ಅಭಿವೃದ್ಧಿ ಮಾದರಿಯಲ್ಲಿ 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ದೇಗುಲಗಳ ಪುನರ್‌ ನಿರ್ಮಾಣದ ಆಶ್ವಾಸನೆಯನ್ನೂ ನೀಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next