Advertisement

ಅನುದಾನ ಬಳಕೆ ಮಾನದಂಡ ಬದಲಾವಣೆಗೆ ಗ್ರಾ.ಪಂ.ಗಳ ಆಗ್ರಹ

11:56 PM Sep 06, 2021 | Team Udayavani |

ಉಪ್ಪುಂದ: ಕೇಂದ್ರ ಹಣಕಾಸು ಆಯೋಗದಿಂದ ಪ್ರತೀ ಪಂಚಾಯತ್‌ಗೆ ಬಿಡುಗಡೆಯಾಗುವ ಅನುದಾನದ ವಿನಿಯೋಗಕ್ಕೆ ವಿಧಿಸಿರುವ ಮಾನ ದಂಡಕ್ಕೆ ಕರಾವಳಿಯ ಬಹುತೇಕ ಗ್ರಾಮ ಪಂಚಾಯತ್‌ಗಳು ಆಕ್ಷೇಪ ವ್ಯಕ್ತ ಪಡಿಸಿವೆ. ಈ ಮಾರ್ಗಸೂಚಿಯು ಕುಡಿಯುವ ನೀರು ಮತ್ತು ನೈರ್ಮಲ್ಯ ಬಿಟ್ಟರೆ ಗ್ರಾಮಗಳ ಇನ್ನಿತರ ಅಭಿವೃದ್ಧಿಗೆ ಅಡ್ಡಿಯಾಗಿದೆ ಎನ್ನುವ ಕಳವಳ ಅವುಗಳದು.

Advertisement

ಕೇಂದ್ರ ಹಣಕಾಸು ಆಯೋಗದ ಅನುದಾನ ಬಿಡುಗಡೆಯಾಗುವುದು 15ನೇ ಹಣಕಾಸು ಆಯೋಗದ ಶಿಫಾ ರಸಿನ ಪ್ರಕಾರ, ಆಯಾ ಪಂಚಾಯತ್‌ನ ಜನಸಂಖ್ಯೆಯನ್ನು ಆಧರಿಸಿ ಮಾರ್ಗಸೂಚಿಯ ಪ್ರಕಾರ ಅನುದಾನದ ಶೇ. 60ರಲ್ಲಿ ಶೇ. 30ರಷ್ಟನ್ನು ಕುಡಿಯುವ ನೀರು ಸರಬರಾಜು ಮತ್ತು ನಿರ್ವಹಣೆಗೆ, ಶೇ. 30ರಷ್ಟನ್ನು ನೈರ್ಮಲೀಕರಣಕ್ಕೆ ಮಾತ್ರ ಬಳಸಬೇಕು. ಇನ್ನುಳಿದ ಶೇ. 40ರಲ್ಲಿ ಶೇ. 25ರಷ್ಟನ್ನು ಪರಿಶಿಷ್ಟ ಜಾತಿ, ಪಂಗಡಕ್ಕೂ ಶೇ. 5ರಷ್ಟನ್ನು ಅಂಗವಿಕಲರ ಶ್ರೇಯೋಭಿವೃದ್ಧಿಗೂ ವಿನಿಯೋಗಿಸಬೇಕು.

ಹಿಂದಿನ ಯೋಜನೆಯಲ್ಲೇ ವಿನಿಯೋಗ :

ಉಡುಪಿ ಜಿಲ್ಲೆಯಲ್ಲಿ ಜಲಜೀವನ್‌ ಮಿಷನ್‌, ವಾರಾಹಿ ಯೋಜನೆಯಿಂದಾಗಿ ಶೇ. 100ರಷ್ಟು ಕುಡಿಯುವ ನೀರು ಸರಬರಾಜು ಕಾಮಗಾರಿ ಪ್ರಗತಿಯಲ್ಲಿದೆ. ಗ್ರಾ.ಪಂ.ಗಳು 14ನೇ ಹಣಕಾಸು ಯೋಜನೆಯಡಿ ನೀರು, ನೈರ್ಮಲೀಕರಣಕ್ಕೆ ಒತ್ತು ನೀಡಿವೆ. ಈಗ ಮತ್ತೆ ಅದೇ ಕೆಲಸಗಳಿಗೆ ಬಹುಭಾಗ ಮೀಸಲಿಟ್ಟರೆ ಇತರ ಅಭಿವೃದ್ಧಿ ಹೇಗೆ ಎನ್ನುವ ಪ್ರಶ್ನೆ ಗ್ರಾ.ಪಂ.ಗಳದ್ದು.

ಎಷ್ಟು ಪಂಚಾಯತ್‌ಗಳು ಸುಸ್ಥಿರ? :

Advertisement

ಉಡುಪಿ ಜಿಲ್ಲೆಯಲ್ಲಿ 155 ಗ್ರಾ.ಪಂ.ಗಳಿವೆ. ಒಟ್ಟು 132 ಗ್ರಾ.ಪಂ.ಗಳು ಘನ-ದ್ರವ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಆರಂಭಿಸಿವೆ. ಕೆಲವು ಪಂಚಾಯತ್‌ಗಳು ಗ್ರಾಮ ಘಟಕದಡಿ ವಿಲೇವಾರಿ ಮಾಡುತ್ತಿವೆ. ದ.ಕ. ಜಿಲ್ಲೆಯಲ್ಲಿ 223 ಗ್ರಾ.ಪಂ.ಗಳಿವೆ. ಮಂಗಳೂರು, ಬಂಟ್ವಾಳ ವ್ಯಾಪ್ತಿಯ ಕೆಲವೆಡೆ ಮಾತ್ರ ನೀರಿನ ಸಮಸ್ಯೆ ಇದೆ. ಸಮಸ್ಯೆ ಒಟ್ಟು 10-12 ಗ್ರಾ.ಪಂ.ಗಳಲ್ಲಿ ಇರ

ಬಹುದು. 28 ಗ್ರಾ.ಪಂ.ಗಳಲ್ಲಿ ಸಮರ್ಪಕವಾಗಿ, ಇನ್ನು 47 ಗ್ರಾ.ಪಂ. ಮಾತ್ರವಲ್ಲದೆ, ಹೊಸದಾಗಿ 23 ತ್ಯಾಜ್ಯ ವಿಲೇ ಘಟಕಗಳು ಮಂಜೂರಾಗಿವೆ. ಸ್ವಚ್ಛತೆ, ನೀರಿನ ಸಮಸ್ಯೆ ಇರದಿದ್ದರೂ ನಿರ್ವಹಣೆಗೆ ಸ್ವಲ್ಪ ಅನುದಾನ ಬೇಕಿರುತ್ತದೆ.

ಗ್ರಾ.ಪಂ.ಗಳ ವಾದವೇನು? :

ಮಾರ್ಗಸೂಚಿ ಪ್ರಕಾರ ಅನುದಾನದ ಶೇ. 60ರಲ್ಲಿ ಬಹ್ವಂಶ ಬಳಕೆಯಾದರೆ ಉಳಿಯು ವುದು ಶೇ. 15ರಷ್ಟು ಮಾತ್ರ. ಅಂದರೆ 1 ಕೋ.ರೂ. ಅನುದಾನ ಸಿಕ್ಕಿದರೆ ಕೇವಲ 15 ಲಕ್ಷ ರೂ. ಮಾತ್ರ ಇತರ ಅಭಿವೃದ್ಧಿಗಳಿಗೆ  ಸಿಗುತ್ತದೆ. ಈ ನಿಬಂಧನೆಗಳಿಂದ ಕುಡಿಯುವ ನೀರು, ನೈರ್ಮಲ್ಯ ವಿಚಾರದಲ್ಲಿ ಅಭಿವೃದ್ಧಿ ಸಾಧಿಸಿರುವ ಗ್ರಾ.ಪಂ.ಗಳಿಗೆ ಇತರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಉಪಯೋಗಿಸಲು ಅಡ್ಡಿಯಾಗುತ್ತದೆ. ಈ ಅಡ್ಡಿಯನ್ನು ನಿವಾರಿಸಿ ಕುಡಿಯುವ ನೀರು, ನೈರ್ಮಲ್ಯ ವಿಚಾರದಲ್ಲಿ ಅಭಿವೃದ್ಧಿಯಾಗಿರುವ ಗ್ರಾ.ಪಂ.ಗಳಿಗೆ ಅನುದಾನವನ್ನು ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲು ಅವಕಾಶ ನೀಡಬೇಕು; ಅದಕ್ಕಾಗಿ ಮಾರ್ಗಸೂಚಿಯಲ್ಲಿ ಬದಲಾವಣೆ ತರಬೇಕು ಎಂಬುದು ಆಗ್ರಹ. ಇಲ್ಲದಿದ್ದರೆ ಹಲವು ಗ್ರಾ.ಪಂ.ಗಳಲ್ಲಿ ಈ ಅನುದಾನವನ್ನು ಬಳಕೆ ಮಾಡಲಾಗದೆ ಹಿಂದಿರುಗಿಸಬೇಕಾದ ಸ್ಥಿತಿ ಉಂಟಾಗುತ್ತದೆ ಎನ್ನುತ್ತಾರೆ ಶಿರೂರು ಗ್ರಾ.ಪಂ. ಸದಸ್ಯ ನಾಗೇಶ ಅಳ್ವೆಗದ್ದೆ.

ಪ್ರತೀ ಪಂಚಾಯತ್‌ನಿಂದಲೂ ಏನೆಲ್ಲ ಅಭಿವೃದ್ಧಿಗೆ ಒತ್ತು ನೀಡಬೇಕೋ ಆ ಬಗ್ಗೆ ಜಿ.ಪಂ. ಸಿಇಒಗಳಿಗೆ ಪತ್ರ ಬರೆದು, ಪ್ರತಿಯನ್ನು ನನಗೆ ಕಳುಹಿಸಿಕೊಡಲಿ. ಅದರ ಬಗ್ಗೆ ನಾವು ನಮ್ಮ ಕಡೆಯಿಂದ ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಮಾಡುತ್ತೇವೆ.  ಕೆ.ಎಸ್‌. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್‌ ಸಚಿವ

ಕೇಂದ್ರದ ಬಳಕೆ ಸೂತ್ರವನ್ನು ಬದಲಾಯಿಸಲಾಗದ್ದರಿಂದ ಅದನ್ನೇ ಅನುಸರಿಸಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಈ ಅನುದಾನದ ಒಂದು ಭಾಗವನ್ನು ರಾಜ್ಯ ಸರಕಾರವು ವಿದ್ಯುತ್‌ ಬಿಲ್‌ಗಾಗಿ ಪ್ರತ್ಯೇಕವಾಗಿ ಇರಿಸುವ ಎಸ್ಕ್ರೊ  ಖಾತೆಗೆ ವರ್ಗಾಯಿಸುತ್ತಿದೆಯಲ್ಲ? ಅಂದರೆ, ರಾಜ್ಯ ಸರಕಾರಕ್ಕೆ ಕೇಂದ್ರದ ಸೂತ್ರವನ್ನು ಬದಲಿಸಲು ಸಾಧ್ಯ ಎಂದಾಯಿತು. ಆದ್ದರಿಂದ ಮಾರ್ಗಸೂಚಿಯನ್ನು ಬದಲಿಸಲು ಶಾಸಕರು, ಸಂಸದರು ಪ್ರಯತ್ನಿಸಬೇಕು.  ಜನಾರ್ದನ ಮರವಂತೆ, ಪಂ. ರಾಜ್‌ ಒಕ್ಕೂಟದ ಸಂಪನ್ಮೂಲ ವ್ಯಕ್ತಿ

 

-ಕೃಷ್ಣ ಬಿಜೂರು

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next