Advertisement
ನನ್ನ ವೈದ್ಯಕೀಯ ವ್ಯಾಸಂಗದ ಕಾಲದಲ್ಲಿ ನನ್ನ ಕೊಠಡಿಯಲ್ಲಿ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ ಮೊದಲಾದ ಸಾಧಕರ ಭಾವಚಿತ್ರಗಳಿದ್ದುವು. ಈ ಚಿತ್ರಗಳನ್ನು ನೋಡಿ, ನನ್ನ ಆಸಕ್ತಿಗಳನ್ನು ತಿಳಿದು ಪ್ರಶಂಸಿಸಿದವರಲ್ಲಿ ಡಾ| ವಿ.ಎಸ್.ಆಚಾರ್ಯರು ಒಬ್ಬರು. ಕೇವಲ ಪ್ರಶಂಸೆ ವ್ಯಕ್ತಪಡಿಸಿದ್ದು ಮಾತ್ರವಲ್ಲ ಎಲ್ಲ ವಿದ್ಯಾರ್ಥಿಗಳನ್ನು ಕರೆದು ಅಲ್ಲೊಂದು ಪುಟ್ಟ ಸಭೆ ನಡೆಸಿ ಯುವಕರು ರೂಪುಗೊಳ್ಳಬೇಕಾದ, ಬದುಕನ್ನು ನೋಡಬೇಕಾದ ದೃಷ್ಟಿಕೋನದ ಬಗ್ಗೆ ಅವರು ಸುದೀರ್ಘ ಮಾತುಗಳನ್ನಾಡಿ ದ್ದರು. ಅವರಾಡಿದ ಮಾತುಗ ಳಲ್ಲಿ ಭವ್ಯ ಭಾರತದ ಅಭಿವೃದ್ಧಿ, ರಾಷ್ಟ್ರಪ್ರೇಮ, ಸರ್ವಸಮಾನ ತೆಯ ಸಂದೇಶಗಳಿದ್ದುವು. ಅವರಾಗಲೇ ಬಹುದೊಡ್ಡ ಸಾಧನೆ ಮಾಡಿದ ಸಚ್ಚಾರಿತ್ರ್ಯದ ಜನನಾಯಕರು. ನನಗಾಗಲೀ ಆಚಾರ್ಯರಿಗಾಗಲೀ ಪ್ರೇರಣೆ ನೀಡಿದ್ದು ನಮ್ಮ ಬದುಕಿನ ಹಿನ್ನೆಲೆಯಲ್ಲಿದ್ದ ಗ್ರಾಮೀಣ ಪ್ರದೇಶವೇ ಎಂದು ನಿಸ್ಸಂಶಯವಾಗಿ ನಾನು ಹೇಳಬಲ್ಲೆ.
Related Articles
Advertisement
ಗ್ರಾಮ ಪಂಚಾಯತ್ ಚುನಾವಣೆಯ ಹೊಸ್ತಿಲಲ್ಲಿ ನಾವಿಂದು ನಿಂತಿದ್ದೇವೆ. ಆಡಳಿತಾ ತ್ಮಕವಾಗಿ ಗ್ರಾಮೀಣ ಯುವಕರೇ ಪಂಚಾಯತ್ಗಳ ಆಡಳಿತದ ಚುಕ್ಕಾಣಿ ಹಿಡಿಯುವ ಸುವರ್ಣಾವಕಾಶವಿದು. ಗ್ರಾಮೀಣ ಜನರಿಗೆ ಶಿಕ್ಷಣ, ತರಬೇತಿ, ಆರೋಗ್ಯ, ನೈರ್ಮಲ್ಯ ಮುಂತಾದ ಸೌಲಭ್ಯಗಳನ್ನು ಒದಗಿಸಲು ಆಯಾ ಗ್ರಾಮದವರೇ ಹೆಚ್ಚು ಶಕ್ತರು. ಅಲ್ಲಿನ ಸಮಸ್ಯೆ ಗಳು ಅವರಿಗೆ ದೃಗ್ಗೊಚರವಾಗುವುದರಿಂದ ಪರಿಹಾರವೂ ಬಲು ಸುಲಭ. ವಿದ್ಯುತ್, ನೀರಾವರಿ, ಸಾರಿಗೆ, ಮಾರುಕಟ್ಟೆ ಮುಂತಾದ ಸೌಕರ್ಯಗಳನ್ನು ಒದಗಿಸಿ ಗ್ರಾಮದ ಜನರ ಬದುಕನ್ನು ಹಸನಾಗಿಸುವಲ್ಲಿ ಪಂಚಾಯತ್ನ ಪಾತ್ರ ಹಿರಿದು. ಬಡತನದ ಕಾರಣವಾಗಿ ಆಧು ನಿಕ ವಿದ್ಯಾಭ್ಯಾಸವನ್ನು ಮುಂದುವರಿಸಲಾಗದೆ ಸಾಂಪ್ರದಾಯಿಕ ವ್ಯವಸಾಯಗಳಲ್ಲಿ ತೊಡಗಿಸಿ ಕೊಂಡವರ ಬದುಕಿನ ಮಟ್ಟವನ್ನು ಮೇಲೆತ್ತು ವುದಕ್ಕಾಗಿ ಕೃಷಿಯ ಜತೆಗೆ ಪಶುಪಾಲನೆ, ಮೀನು ಗಾರಿಕೆ, ಕೋಳಿಸಾಕಣೆಯೇ ಮೊದಲಾದ ಕೃಷಿ ಸಂಬಂಧಿ ಚಟುವಟಿಕೆಗಳನ್ನು ಉತ್ತೇಜಿಸುವ ವ್ಯವಸ್ಥೆಯೂ ಆಗಬೇಕಾಗಿದೆ. ಕೃಷಿ ಕಾರ್ಮಿಕರು, ಹಿಂದುಳಿದ ಹಾಗೂ ಬಡಜನರಿಗೆ ನಿರಂತರ ವಾಗಿ ಉದ್ಯೋಗಾವಕಾಶಗಳು ದೊರೆಯು ವಂತೆ ಅವಕಾಶಗಳನ್ನು ಕಲ್ಪಿಸಿಕೊಡಬೇಕಾಗಿದೆ. ಮಹಿಳಾ ಸಶಕ್ತೀಕರಣಕ್ಕಾಗಿ ಕಾರ್ಯಯೋಜನೆ ರೂಪಿಸಬೇಕಾಗಿದೆ.
ಗ್ರಾಮೀಣ ಯುವಜನರೆಲ್ಲರೂ ಜನಪ್ರತಿ ನಿಧಿಯಾಗಲು ಸಾಧ್ಯವಿಲ್ಲ. ಪ್ರಜ್ಞಾವಂತ ಯುವ ಸಮುದಾಯವನ್ನು ಆರಿಸುವುದರಲ್ಲಿಯೂ ಯುವಜನತೆಯ ಪಾತ್ರವಿದೆ. ನಮ್ಮ ದೇಶದಲ್ಲಿ 18ನೇ ವರ್ಷಕ್ಕೆ ಯುವಕ- ಯುವತಿಯರು ಮತ ಚಲಾವಣೆಯ ಹಕ್ಕನ್ನು ಪಡೆದುಕೊಳ್ಳುತ್ತಾರೆ. ಮತ ಚಲಾಯಿಸುವುದಕ್ಕಿಂತ ಮೊದಲೇ ಯೋಗ್ಯ ಅಭ್ಯರ್ಥಿಯನ್ನು ನಿರ್ಧರಿಸುವ ಮತ್ತು ಆರಿಸುವ ಗುರುತರ ಜವಾಬ್ದಾರಿ ಪ್ರತಿಯೊಬ್ಬ ಪ್ರಜ್ಞಾವಂತ ಯುವಜನರದೂ ಆಗಿದೆ. ಯಾವುದೇ ಆಮಿಷಕ್ಕೊಳಗಾಗದೆ, ವ್ಯಕ್ತಿಪೂಜೆ, ಪಕ್ಷಪೂಜೆಗಳಿಗಿಳಿಯದೆ ಗ್ರಾಮಾಭಿವೃದ್ಧಿಯೇ ಆದ್ಯ ಧ್ಯೇಯವಾಗಿ ಅಭ್ಯರ್ಥಿಗಳ ಆಯ್ಕೆ ನಡೆದರೆ ಗ್ರಾಮ ಸುರಾಜ್ಯ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ. ತಾನು ಆರಿಸಿದ ಅಭ್ಯರ್ಥಿಯು ಕರ್ತವ್ಯಚ್ಯುತನಾದರೆ ಎಚ್ಚರಿಸಿ ಮುನ್ನಡೆಸಲೂ ಯೋಗ್ಯ ಮತದಾರನಿಗೆ ಸಾಧ್ಯವಾಗುತ್ತದೆ. ಗ್ರಾಮಾಭಿವೃದ್ಧಿಯಲ್ಲಿ ಜನಪ್ರತಿನಿ ಧಿಯಾಗಿಯೂ ಮತದಾರನಾಗಿಯೂ ಅಲ್ಲಿನ ಜನತೆ ಬಹು ಮಹತ್ವದ ಪಾತ್ರ ವಹಿಸಬೇಕಾಗಿದೆ. ಅವರ ಸ್ವಾರ್ಥರಹಿತ, ನೈಜ ಅಭಿವೃದ್ಧಿ ಪರ ಕಾಳಜಿಯು ಸಾದ್ಯಂತ ಪರಿವರ್ತನೆಗೆ ನಾಂದಿ ಹಾಡುವುದರಲ್ಲಿ ಸಂಶಯವಿಲ್ಲ.
ನಮ್ಮ ಆಡಳಿತ ವ್ಯವಸ್ಥೆ ರೂಪುಗೊಳ್ಳುತ್ತಿರುವುದು ದೇಶದ ರಾಜಧಾನಿಯಲ್ಲಿ. ಅಲ್ಲಿಂದ ಹಂತ ಹಂತವಾಗಿ ಆಡಳಿತ ಜಾರಿಯಾಗುತ್ತಾ ಹಳ್ಳಿಗಳನ್ನು ತಲುಪುತ್ತದೆ. ಈ ಚಲನೆಯು ಭ್ರಷ್ಟಾಚಾರ, ಸ್ವಜನಪಕ್ಷಪಾತ, ಹಣಬಲ, ತೋಳ್ಬಲ, ಸುಳ್ಳು ಗಳ ಬಲದಿಂದ ಕೂಡಿದ್ದು ಹೊಲಸಾಗಿ ಪರಿಣ ಮಿಸಿದೆ. ಈ ಚಲನೆ ವಿರುದ್ಧ ದಿಕ್ಕಿಗೆ ತಿರುಗಿ ಹಳ್ಳಿಯಿಂದ ದಿಲ್ಲಿಯ ಕಡೆಗೆ ಪ್ರವಹಿಸಬೇಕಾದ ತುರ್ತು ಇಂದಿನದು. ಏಕೆಂದರೆ ಹಳ್ಳಿಗಳನ್ನು ಈ ಹೊಲಸು ಇನ್ನೂ ಕುಲಗೆಡಿಸಿಲ್ಲ. ಈ ದುಶ್ಚಟಗಳು ವ್ಯಾಪಿಸದಂತೆ ತಡೆಯಲು ಹಳ್ಳಿಗಳಲ್ಲಿ ಪ್ರಜ್ಞಾವಂತ ಯುವಕರ ಪಡೆ ಇದೆ. ಅವರು ಸ್ವತ್ಛ ಆಡಳಿತದ ಪ್ರವಾಹವನ್ನು ಹಳ್ಳಿಯಿಂದ ರಾಜಧಾನಿಯ ಕಡೆಗೆ ಕೊಂಡೊಯ್ಯುತ್ತಾರೆಂಬ ನಂಬಿಕೆ ನನ್ನದು.
ಹಳ್ಳಿಯ ಅಧಿಕಾರ ಹಾಗೂ ಹಳ್ಳಿಯ ಅಭಿವೃದ್ಧಿಯ ಜವಾಬ್ದಾರಿಗಳನ್ನು ಹಳ್ಳಿಯ ಯುವಕರಿಗೇ ವಹಿಸಿಕೊಡುವ ಅಧಿಕಾರದ ವಿಕೇಂದ್ರೀಕರಣ ನಡೆಯಬೇಕಾಗಿದೆ. ನಮ್ಮ ಪರಂಪರೆ, ಸಂಸ್ಕೃತಿಯ ಅರಿವಿರುವ ರಾಷ್ಟ್ರಾಭಿಮಾನದ, ಸ್ವಾರ್ಥರಹಿತ, ಪರೋಪಕಾರ ಗುಣದ ಯುವಪಡೆ ಪಂಚಾಯತ್ನ ಅಧಿಕಾರ ವಹಿಸಿಕೊಂಡು ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಸಾಕಾರವಾಗಬೇಕಾಗಿದೆ. ಪದವೀಧರರು, ಎಂಜಿನಿಯರಿಂಗ್ ಪದವೀಧರರು ಚುನಾವಣೆಗೆ ನಿಂತ ಮಾಹಿತಿ ಲಭ್ಯವಾಗುತ್ತಿ ರುವುದು ಈ ನಿಟ್ಟಿನಲ್ಲಿ ಮೊದಲ ವಿಜಯದ ಸಂಕೇತವಾಗಿದೆ.
– ಡಾ| ಎಂ. ಮೋಹನ ಆಳ್ವಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.)ಮೂಡುಬಿದಿರೆ