Advertisement

ಪರಿಸ್ಥಿತಿಗೆ ಹೊಂದಿಕೊಂಡರಷ್ಟೆ ಉಳಿಗಾಲ

03:14 PM Sep 25, 2022 | Team Udayavani |

ಧಾರವಾಡ: ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಹವಾಮಾನ ವೈಪರೀತ್ಯ ನಮ್ಮ ಮುಂದಿರುವ ದೊಡ್ಡ ಸವಾಲುಗಳು. ಇವುಗಳನ್ನು ಗಮನದಲ್ಲಿಟ್ಟುಕೊಂಡು ಪದವೀಧರರು ವೃತ್ತಿ ಬದುಕು ಕಟ್ಟಿಕೊಳ್ಳಬೇಕು ಎಂದು ಎಫ್‌ಎಇಆರ್‌ ಸಂಸ್ಥಾಪಕ ಅಧ್ಯಕ್ಷ ಡಾ| ಡಿ.ಕೆ.ಸುಬ್ರಮಣಿಯನ್‌ ಹೇಳಿದರು.

Advertisement

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಕಾಲೇಜಿನ 12ನೇ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಿವಿಲ್‌, ಮೆಕ್ಯಾನಿಕಲ್‌, ಕಂಪ್ಯೂಟರ್‌ ಸೈನ್ಸ್‌ ಸೇರಿದಂತೆ ಎಲ್ಲ ವಿಭಾಗಗಳೂ ಈಗ ತಂತ್ರಜ್ಞಾನ ಎಂಬ ಸೂರಿನಡಿ ಪರಿಗಣಿಸಲ್ಪಡುತ್ತಿವೆ. ತಂತ್ರಜ್ಞಾನ ಬದಲಾದಂತೆ ನಾವೂ ಬದಲಾಗಬೇಕು. ಅಂದಾಗ ಭವಿಷ್ಯ ಕಾಣಲು ಸಾಧ್ಯ. ಬದಲಾಗುವ ಪರಿಸ್ಥಿತಿಗೆ ಯಾರು ಹೊಂದಿಕೊಳ್ಳುತ್ತಾರೋ ಅವರು ಮಾತ್ರ ಕ್ಷೇತ್ರದಲ್ಲಿ ಉಳಿಯಬಲ್ಲರು. ಇದು ಡಾರ್ವಿನ್‌ ಸಿದ್ಧಾಂತ. ಹಾಗೆಯೇ ನಾವು ನಮ್ಮ ಸುತ್ತಮುತ್ತ ನಡೆಯುವ ಬದಲಾವಣೆಗಳನ್ನು ಸದಾ ಗಮನಿಸುತ್ತಲೇ ಇರಬೇಕು. ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸೌರ, ಗಾಳಿ, ಜೈವಿಕ ಅನಿಲ, ಜೀವರಾಶಿ ಉತ್ತಮವಾಗಿ ಅಭಿವೃದ್ಧಿ ಹೊಂದಿದ್ದು, ನಾವು ಅವುಗಳನ್ನು ಬಳಸಿಕೊಳ್ಳಬೇಕು. ಆಹಾರ, ನೀರು, ಶಕ್ತಿ, ಖನಿಜಗಳ ಅತಿಯಾದ ಬಳಕೆ ನಿಲ್ಲಬೇಕು. ನಡವಳಿಕೆಯು ಜೀವನ, ಯಶಸ್ಸು ಮತ್ತು ನಾಯಕತ್ವವನ್ನು ನಿರ್ಧರಿಸುತ್ತದೆ. ಕೇವಲ ತಂತ್ರಜ್ಞಾನವಲ್ಲ. ಹೀಗಾಗಿ ಇತರರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜ ಮತ್ತು ಪ್ರಕೃತಿಯ ಬಗ್ಗೆ ಕಾಳಜಿ ತೋರಿಸಬೇಕು ಎಂದರು.

7 ಇಂಜಿನಿಯರಿಂಗ್‌ ವಿಭಾಗಗಳು ಮತ್ತು ಎಂಬಿಎಯಿಂದ ತಲಾ ಮೂರು ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ರ್‍ಯಾಂಕ್‌ ಮತ್ತು ಪದಕಗಳನ್ನು ನೀಡಲಾಯಿತು. ಒಟ್ಟು 697 ಸ್ನಾತಕ, 103 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಮತ್ತು 12 ಜನರಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಯಿತು.

Advertisement

ಕಾರ್ಯದರ್ಶಿ ಜೀವಂಧರಕುಮಾರ, ಆಡಳಿತ ಮಂಡಳಿ ಸದಸ್ಯರು, ಶೈಕ್ಷಣಿಕ ಮಂಡಳಿ ಸದಸ್ಯರು, ಡೀನ್‌ಗಳು ಮತ್ತು ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಸಿಬ್ಬಂದಿ ಇದ್ದರು. ಡಾ| ಆರ್‌.ಎಲ್‌. ಚಕ್ರಸಾಲಿ ಪ್ರಮಾಣ ವಚನ ಬೋಧಿಸಿದರು. ಪ್ರಾಂಶುಪಾಲರಾದ ಡಾ|ಕೆ. ಗೋಪಿನಾಥ್‌ ಸ್ವಾಗತಿಸಿ, ಕಾಲೇಜಿನ ಸಾಧನೆಯ ವರದಿ ಮಂಡಿಸಿದರು. ಪ್ರೊ|ಇಂದಿರಾ ಉಮರ್ಜಿ ಪರಿಚಯಿಸಿದರು. ಪ್ರೊ| ವಿ.ಕೆ. ಪಾರ್ವತಿ ಹಾಗೂ ಇಂದಿರಾ ಉಮರ್ಜಿ ನಿರೂಪಿಸಿದರು. ಪ್ರೊ| ವಿ.ಕೆ.ಪಾರ್ವತಿ ವಂದಿಸಿದರು.

ಆದರ್ಶ ಶಾನಭಾಗ್‌ಗೆ ಡಾ| ವೀರೇಂದ್ರ ಹೆಗ್ಗಡೆ ಚಿನ್ನದ ಪದಕ

ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ವಿಭಾಗದ ಉತ್ತರಕನ್ನಡ ಜಿಲ್ಲೆಯ ಆದರ್ಶ ಅಶೋಕ್‌ ಶಾನಭಾಗ 9.79 ಸಿಜಿಪಿಎ ಉನ್ನತ ಅಂಕದೊಂದಿಗೆ ಪದ್ಮವಿಭೂಷಣ ಡಾ|ಡಿ.ವೀರೇಂದ್ರ ಹೆಗ್ಗಡೆ ಚಿನ್ನದ ಪದಕ ಪಡೆದಿದ್ದು, ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಯಿತು. ಆದರ್ಶ ಅವರ ತಂದೆ ಕಾರವಾರದಲ್ಲಿ ಹಾರ್ಡ್‌ವೇರ್‌ ಅಂಗಡಿ ಹೊಂದಿದ್ದು, ಸಹೋದರಿ ಕವಿವಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ. ಕಳೆದ ವರ್ಷ ಎಂಎಸ್ಸಿಯಲ್ಲಿ ಚಿನ್ನದ ಪಡೆದಿದ್ದ ಸಹೋದರಿ (ಅಕ್ಕ) ಸಾಧನೆಯ ಸ್ಪೂರ್ತಿ ಪಡೆದಿದ್ದ ಆದರ್ಶ, ಈ ವರ್ಷ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಕಠಿಣ ಪರಿಶ್ರಮಕ್ಕೆ ಪ್ರತಿಫಲವಾಗಿ ಚಿನ್ನದ ಪದಕ ಲಭಿಸಿದ್ದು ಖುಷಿಯಾಗಿದೆ. ಸದ್ಯ ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದು, ಎರಡ್ಮೂರು ವರ್ಷದ ಅನುಭವದ ಬಳಿಕವೇ ಮುಂದೆ ಏನು ಮಾಡಬೇಕೆಂದು ಯೋಚಿಸುತ್ತೇನೆ ಎಂದು ಆದರ್ಶ ಶಾನಭಾಗ ತಿಳಿಸಿದರು.

ಜೀವನಕ್ಕೆ ಕೋವಿಡ್‌ ಕಲಿಸಿದ ಪಾಠ ದೊಡ್ಡದಿದೆ. ಆದರೂ ಸೋಂಕು ದೂರವಾಗುತ್ತಿದ್ದಂತೆ ನಮ್ಮದು ಹಳೇ ಚಾಳಿ ಮುಂದುವರಿದಿದೆ. ಹೀಗಾದಲ್ಲಿ ಭವಿಷ್ಯದಲ್ಲಿ ಮತ್ತೂಂದು ದೊಡ್ಡ ಪಾಠ ಕಲಿಯಬೇಕಾಗಲಿದೆ. ಜೀವನದಲ್ಲಿ ಯಶಸ್ಸು ಸಾಧಿಸಲು ಕೃತಜ್ಞತಾಭಾವ ಅತ್ಯಗತ್ಯ.  -ಡಾ| ನಿರಂಜನಕುಮಾರ್‌, ಎಸ್‌ಡಿಎಂ ವಿವಿ ಉಪಕುಲಪತಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next