Advertisement

ಅಪೊಜಿಷನ್‌ ಸ್ಟ್ರಾಂಗ್‌ ಇದ್ರ ಸರ್ಕಾರ ಕಂಟ್ರೋಲ್‌ ನ್ಯಾಗ ಇರತೈತಿ!

11:43 AM Mar 27, 2022 | Team Udayavani |

ಮನ್ಯಾಗ ಏನರ ಅರ್ಜೆಂಟ್‌ ಬೇಕಂದ್ರ ಚಿಲ್ಲರಾ ಕೊಡಾಕ್‌ ಗೂಗಲ್‌ ಪೇ ಹಾಕಿಸಿ ಕೊಡ್ರಿ ಅಂತ ಯಜಮಾನ್ತಿ ಒನ್‌ ಲೈನ್‌ ರೆಜ್ಯುಲ್ಯೂಷನ್‌ ಪಾಸ್‌ ಮಾಡಿದದಲು. ಆಡಳಿತ ಪಕ್ಷ ಬೇಕಾಬಿಟ್ಟಿ ತೀರ್ಮಾನ ಮಾಡಿ, ರೆಜ್ಯುಲ್ಯೂಷನ್‌ ಪಾಸ್‌ ಮಾಡ್ರಿ ಅಂದ ಹೆಂಗ್‌ ಒಪ್ಪಕೊಳ್ಳಾಕಕ್ಕೇತಿ. ಈಗ ಅಧಿವೇಶನ ನಡದೈತಿ ಚರ್ಚೆ ಮಾಡಿ ತೀರ್ಮಾನ ಮಾಡೂನು ಅಂತ ನಾನೂ ಪ್ರತಿಪಕ್ಷದ ನಾಯಕ ಸಿದ್ರಾಮಯ್ಯನಂಗ ಒಂದ್‌ ಸಣ್‌ ಕೊಕ್ಕಿ ಹಾಕಿದ್ನಿ.

Advertisement

ಯಜಮಾನ್ತಿ ಇದ್ನ ಪ್ರತಿಷ್ಠೆಯಾಗಿ ತೊಗೊಂಡು ಚಿಲ್ಲರಾ ಖರ್ಚ್‌ ಮಾಡಾಕೂ ನಿನ್‌ ಪರ್ಮಿಷನ್‌ ತೊಗೊಬೇಕನ ಅಂತ ಯಾಡ್‌ ದಿನಾ ಸೈಲೆಂಟ್‌ ವಾರ್‌ ಶುರು ಮಾಡಿದ್ಲು. ಒಂದ್‌ ವ್ಯವಸ್ಥೆದಾಗ ಇದ್ದ ಮ್ಯಾಲ ನಯಾಪೈಸಾ ಖರ್ಚ್‌ ಮಾಡಾಕೂ ಒಂದು ಕಾರಣ ಇರಬೇಕು. ಆ ಖರ್ಚಿಗೆ ಒಂದ್‌ ಅರ್ಥ ಇರಬೇಕು. ಇಲ್ಲಾಂದ್ರ ದುಡ್ಡಿಗೆ ಬೆಲೆ ಎಲ್ಲಿಂದ ಬರತೈತಿ.

ಸರ್ಕಾರ ಯಾಡೂವರಿ ಲಕ್ಷ ಕೋಟಿ ರೂಪಾಯಿದು ಬಜೆಟ್‌ ಮಂಡನೆ ಮಾಡೇತಿ ಅಂದ್ರ ಅದೇನ್‌ ಸರ್ಕಾರದ ದುಡ್ಡಾ? ಕೂಲಿ ಮಾಡಾವನಿಂದ ಹಿಡದು ಕೋಟ್ಯಾಧಿಪತಿ ಮಟಾ ಟ್ಯಾಕ್ಸ್‌ ಕಟ್ಟಿದ್‌ ದುಡ್ಡದು. ಅದ್ರಾಗ ಕ್ವಾಟರ ಕುಡುಕುರು ಪಾಲ ಜಾಸ್ತಿ ಐತೆಂತ. ಅದ್ನ ಅಧಿಕಾರ ಐತಿ ಅಂತ ಸರ್ಕಾರ ಬೇಕಾಬಿಟ್ಟಿ ಖರ್ಚ್‌ ಮಾಡಿದ್ರ ಮೂರ್‌ ತಿಂಗಳದಾಗ ಗಲ್ಲೆ ಖಾಲಿಯಾಗಿ ಪಾಕಿಸ್ತಾನದಾರಂಗ ಸಾಲಾ ಮಾಡಾಕ ಕೈ ಚಾಚ್ಕೊಂಡು ನಿಲ್ಲಬೇಕಕ್ಕೇತಿ.

ಕೊರೊನಾ ಬಂದ್‌ ಮ್ಯಾಲ್‌ ಸರ್ಕಾರಕ್ಕ ಆದಾಯ ಕಡಿಮಿ ಆಗೇತಂತೇಳಿ ಬೇಕಾಬಿಟ್ಟಿ ಖರ್ಚು ಮಾಡೂದ್ನ ಕಡಿಮಿ ಮಾಡಬೇಕು ಅಂತ ಅಧಿವೇಶನದಾಗ ಪ್ರತಿಪಕ್ಷದಾರು, ಆಡಳಿತ ಪಕ್ಷದಾರು ಅಷ್ಟ ಅಲ್ಲಾ ಸ್ವತಾ ಮುಖ್ಯಮಂತ್ರಿನೂ ಹೇಳ್ತಾರು. ಇದರ ನಡಕ ಯಾರಿಗೂ ಗೊತ್ತಾಗದಂಗ ಎಂಎಲ್‌ಎಗೋಳು, ಮಂತ್ರಿಗೋಳ ಪಗಾರ ಜಾಸ್ತಿ ಮಾಡ್ಕೊತಾರು. ಬಸ್‌ ಡ್ರೈವರ್‌ಗೊಳಿಗೆ ದುಡದಿರುದ್ಕ ಪಗಾರ ಕೊಡಾಕ್‌ ರೊಕ್ಕಿಲ್ಲಂತ ಬಾಯಿ ಬಿಟ್‌ ಹೇಳ್ತಾರು. ಸರ್ಕಾರಿ ನೌಕರಿದಾರಿಗೆ ಸೆಂಟ್ರಲ್‌ ಗೌರ್ನಮೆಂಟಿನ ನೌಕರಿದಾರರ ಸೇಮ್‌ ಪಗಾರ ಕೊಡ್ತೇವಿ ಅಂತ ಘೋಷಣೆ ಮಾಡ್ತಾರು. ಸರ್ಕಾರದ ಬಜೆಟ್‌ನ್ಯಾಗ ನಲವತ್ತು ಪರ್ಸೆಂಟ್‌ ಬರೇ ಆರ್‌ ಲಕ್ಷ ನೌಕರದಾರ ಪಗಾರ ಕೊಡಾಕ್‌ ಹೊಕ್ಕೇತಿ ಅಂದ್ರ, ಅಷ್ಟು ಪಗಾರ ಕೊಟ್‌ ಮ್ಯಾಲ್‌ ಅವರು ಎಷ್ಟು ಕೆಲಸಾ ಮಾಡ್ತಾರು ಅನ್ನೂದ್ನೂ ನೋಡಬೇಕಲ್ಲ. ಅಷ್ಟೆಲ್ಲಾ ಸವಲತ್ತು ಕೊಟ್ರೂನು, ವಯಸಾದಾರು ಪೆನ್ಸೆನ್‌ ತೊಗೊಳಾಕೂ, ಫೈಲ್‌ ಮುಂದೂಡಾಕ್‌ ಖರ್ಚಿಗಿ ಏನರ ಕೊಡಬೇಕು. ಎಸಿಬಿ ದಾಳ್ಯಾಗ ಅಧಿಕಾರಿಗೋಳ ಮನ್ಯಾಗ ಸಿಗೋ ಕೆಜಿಗಟ್ಟಲೇ ಬಂಗಾರದ, ಬ್ಯಾಂಕಿನ್ಯಾಗಿರುವಷ್ಟು ದುಡ್ಡು ನೋಡಿದ್ರ ಗೊತ್ತಕ್ಕೇತಿ. ಜನರ ದುಡ್ಡು ಎಲ್ಲಿ ಹೊಂಟೇತಿ ಅಂತ.

ಇಷ್ಟು ಖರ್ಚಾಗಾಕತ್ತಿದ್ರೂ, ಸರ್ಕಾರದಾಗ ಇನ್ನೂ ಯಾಡೂವರಿ ಲಕ್ಷ ಹುದ್ದೆ ಖಾಲಿ ಅದಾವ ನಮಗ ಕೆಲಸ ಜಾಸ್ತಿ ಆಗಾಕತ್ತೇತಿ ಅಂತ ಹೇಳ್ತಾರು. ಆಡಳಿತ ಸುಧಾರಣೆ ಮಾಡಾರು, ಜಾಸ್ತಿ ಹುದ್ದೆ ಆಗ್ಯಾವು ಒಂದಷ್ಟು ಮಂದಿನ ತಗಿರಿ ಅಂತ ವರದಿ ಕೊಡ್ತಾರು. ಅಧಿಕಾರಿಗೋಳು ರಾಜಕಾರಣಿಗೋಳು ನೀ ಅತ್ತಂಗ ಮಾಡು, ನಾ ಕರದಂಗ ಮಾಡ್ತೇನಿ ಅನ್ನೂ ಲೆಕ್ಕಾ ನಡಸಿದಂಗ ಕಾಣತೈತಿ. ಇಲಾಖೆಗೋಳ ಬಗ್ಗೆ ಗೊತ್ತಿರೊ ಮಂತ್ರಿಗೋಳು ಇದ್ದಿದ್ರ, ವ್ಯವಸ್ಥೆ ಇಷ್ಟ್ಯಾಕ ಹದಗೆಡ್ತಿತ್ತು. ಅಧಿಕಾರಿಗೋಳ ಮನ್ಯಾಗ ಕೆಜಿಗಟ್ಟಲೆ ಬಂಗಾರ್‌ ಯಾಕ್‌ ಸಿಗ್ತಿತ್ತು.

Advertisement

ಖರ್ಚು ಕಡಿಮಿ ಮಾಡಬೇಕು ಅಂತ ಭಾಷಣಾ ಮಾಡಾರು, ಒಬ್‌ ಎಂಎಲ್‌ಎ ಬೀದರ್‌ನಿಂದ ಬಂದು ಕಮಿಟಿ ಮೀಟಿಂಗಿಗಿ ಹಾಜರಿ ಹಾಕಿದ್ರ ನಲವತ್ತು ಸಾವಿರ ರೂಪಾಯಿ ಟಿಎ ತೊಗೊತಾರು. ಎಂಎಲ್‌ಎದು ಒಂದು ಕಿಲೋ ಮೀಟರ್‌ ಕಾರ್‌ ಓಡಿದ್ರು ಇಪ್ಪತೈದ್‌ ರೂಪಾಯಿ, ಟ್ರೇನ್‌ ನ್ಯಾಗ ಫ್ರೀಯಾಗಿ ಬಂದ್ರು ಕಿಲೋ ಮೀಟರಿಗೆ ಇಪ್ಪತೈದು ರೂಪಾಯಿ ಬೀಳತೈತಿ. ಬೀದರ್‌ನಿಂದ ಬೆಂಗಳೂರಿಗಿ ಇಮಾನದಾಗ ಬಂದು ಹೋದ್ರೂ ಹತ್‌ ಸಾವಿರ ದಾಟೂದಿಲ್ಲ. ಅಂತಾದ್ರಾಗ 40 ಸಾವಿರ ರೂ. ತೊಗೊಳ್ಳೋದು ದುಂಧುವೆಚ್ಚ ಅಂತ ಅನಸೂದಿಲ್ಲಾ?

ಈಗ ಇಡೀ ತಿಂಗಳು ಹಗಲು ರಾತ್ರಿ ಕೂಡೆ, ಬರೇ ಕಾಲ್‌ ಮಾಡೂದಷ್ಟ ಅಲ್ಲಾ, ಯು ಸರ್ಟಿಫಿಕೇಟ್‌ ಅಷ್ಟ ಅಲ್ಲಾ, ಎ ಸಟಿಫಿಕೇಟ್‌ ಇರೋ ಸಿನೆಮಾ ಅಸೆಂಬ್ಲ್ಯಾಗ ಕುಂತು ನೋಡಿದ್ರು ನಾಕ್‌ ನೂರ್‌ ರೂಪಾಯಿದಾಗ ಒಂದ್‌ ತಿಂಗಳು ಫ‌ುಲ್‌ ಟಾಕ್‌ಟೈಮ್‌, ಅನ್‌ಲಿಮಿಟೆಡ್‌ ಡಾಟಾ ಕೊಡ್ತಾರು. ಅಂತಾದ್ರಾಗ ಫೋನ್‌ ಬಿಲ್‌ ತಿಂಗಳಿಗಿ ಇಪ್ಪತ್ತು ಸಾವಿರ ರೂಪಾಯಿ ತೊಗೊಳ್ತಾರು. ಇಷ್ಟೆಲ್ಲಾ ಮಾಡಾಕತ್ತಿದ್ರೂ, ನಾವು ಸತ್‌ ಪ್ರಜೆಗಳು ನಮ್‌ ಸಲುವಾಗಿ ಅವರು ಏನೋ ಮಾಡಾಕತ್ತಾರು.

ಅರವ ರಿಣದಾಗ ನಾವು ಅದೇವಿ ಅನ್ನಾರಂಗ ಹೂವಿಂದಷ್ಟ ಹಾಕಿದ್ರ ಸಾಲೂದಿಲ್ಲ ಅಂತೇಳಿ ಸೇಬು ಹಣ್ಣಿನ ಮಾಲಿ ಹಾಕಿ ಮೆರವಣಿಗಿ ಮಾಡಾಕತ್ತೇವಿ. ಅವರು ಜಾತ್ರ್ಯಾಗ ಅವರ ಅಂಗಡಿ ಇಡಬಾರದು, ಇವರು ಅಂಗಡಿ ಇಡಬಾರದು ಅಂತ ನೇಮ ಮಾಡಿ ಜನರ್ನ ಹೊಡದ್ಯಾಡಕೊಳ್ಳಾಕ ಹಚ್ಚಿ, ವಿಧಾಸೌಧದಾಗ ಯಡಿಯೂರಪ್ಪ, ಬೊಮ್ಮಾಯಿ, ಸಿದ್ರಾಮಯ್ಯ ಜಮೀರು ಆಜುಬಾಜು ಕುಂತ ಕೊಬ್ಬರಿ ಹೋಳಗಿ ತಿಂತಾರು.

ಹಿಂದು ಮುಸುಲರ ವಿಚಾರದಾಗ ರಾಜ್ಯದಾಗ ನಡ್ಯಾಕತ್ತಿರೊ ಬೆಳವಣಿಗಿ ನೋಡಿದ್ರ ರಷ್ಯಾ ಉಕ್ರೇನ್‌ ನಡಕ ನಡದಿರೋ ಯುದ್ಧ ಎಲ್ಲಿ ನಮ್ಮ ದೇಶದಾಗ ನಡಿತೈತಿ ಅಂತ ಹೆದರಿಕಿ ಅಕ್ಕೇತಿ. ಕಾಂಗ್ರೆಸ್‌ನ್ಯಾರಿಗಂತೂ ಏನ್‌ ಮಾಡಬೇಕು ಅನ್ನೂದು ತಿಳಿದಂಗ ಆದಂಗ ಕಾಣತೈತಿ. ಬಿಜೆಪ್ಯಾರು ಮಾಡೂದ್ನ ವಿರೋಧ ಮಾಡಿದ್ರ ಹಿಂದೂ ವಿರೋಧಿ ಅಂತಾರು, ಮುಸ್ಲಿ ಮರ ಪರ ಮಾತಾಡ್ಲಿಲ್ಲಾ ಅಂದ್ರ ಅವರೆಲ್ಲಿ ಕೈ ಬಿಟ್ಟು ಕೇತಗಾನಳ್ಳಿ ಫಾರ್ಮ್ ಹೌಸಿಗಿ ಹೊಕ್ಕಾರೊ ಅಂತ ಹೆದರಿಕಿ ಶುರುವಾದಂಗ ಕಾಣತೈತಿ.

ಮುಂದಿನ ಸಾರಿ ತಮ್ಮದ ಸರ್ಕಾರ ಬರತೈತಿ ಅಂತೇಳಿ, ಡಿಕೆಶಿ, ಸಿದ್ರಾಮಯ್ಯ, ಫಿಪ್ಟಿ ಫಿಪ್ಟಿ ಅಧಿಕಾರ ಮಾಡೂ ಲೆಕ್ಕದಾಗ ಇದ್ರಂತ ಕಾಣತೈತಿ. ಪಂಚರಾಜ್ಯಗಳ ರಿಸಲ್ಟಾ, ಹಿಜಾಬು, ಜಾತ್ರ್ಯಾಗ ಮುಸುಲರ ಅಂಗಡಿ ತಗಸೂದು ಎಲ್ಲಾ ನೋಡಿ, ಕಾಂಗ್ರೆಸ್ಸಿನ ಲೆಕ್ಕಾ ಆರವತ್ತಕ ಇಳದಂಗ ಕಾಣತೈತಿ. ಯಾಕಂದ್ರ ಕೆಪಿಸಿಸಿ ಅಧ್ಯಕ್ಷರು ಅಧಿವೇಶನ ಟೈಮಿನ್ಯಾಗೂ ರಾಜ್ಯಾ ಸುತ್ತಿ ಡಿಜಿಟಲ್‌ ಮೆಂಬರ್ಸ್‌ನ ಮಾಡಾಕ ಗಿಫ್ಟ್ ಕೊಡ್ತೇನಿ ಒಟಿಪಿ ಕೊಡ್ರಿ ಅಂದ್ರೂ ಜನರು ಕಾಂಗ್ರೆಸ್‌ಗೆ ಮೆಂಬರ್‌ ಆಗವಾಲ್ರಂತ ಅವರು ಟೆನ್ಶನ್‌ ಮಾಡ್ಕೊಂಡಾರಂತ. ಆದ್ರ ಸಿದ್ರಾಮಯ್ಯ ಸಾಹೇಬ್ರು, ಪಕ್ಷ ಅಧಿಕಾರಕ್ಕ ಬಂದ್ರ ಸಿಎಂ ಸ್ಥಾನ ಬೊನಸ್ಸು, ಬರದಿದ್ರ ವಿರೋಧ ಪಕ್ಷದ ನಾಯಕನ ಸ್ಥಾನ ಫಿಕ್ಸು ಅಂತೇಳಿ, ವಯಸ್ಸಾಗೇತಿ ಅನಕೋಂತನ ಊರ ಜಾತ್ರ್ಯಾಗ ಹರೇದು ಹುಡುಗೂರು ಕುಣದಂಗ ಕುಣುದು ಮಜಾ ಮಾಡ್ಯಾರು.

ಇದರ ನಡಕ ಕಾಗೇರಿ ಸಾಹೇಬ್ರು ಇಲೆಕ್ಷನ್‌ ಸುಧಾರಣೆ ಬಗ್ಗೆ ಮಾತ್ಯಾಡ್ಸಬೇಕಂತೇಳಿ ಎಲ್ಲಾ ಎಂಎಲ್‌ಎಗೋಳಿಗೆ ಸದನದಾಗ ಕುಂದ್ರಾಕ ಬ್ಯಾಸರಾಗಿದ್ರೂ ಮಾರ್ಚ್‌ ಮೂವತ್ತರ ಮಟಾ ಅಧಿವೇಶನ ನಡಿಸೇ ತೀರತೇನಿ ಅಂತ ಪಟ್ಟು ಹಿಡದು ಡಸಾಕತ್ತಾರು. ಇಪ್ಪತ್ತು ಮಂದಿ ಎಂಎಲ್‌ಎಗೋಳ್ನ ಒಳಗ ಕರದುಕುಂದ್ರಸಾಕ ಅರ್ಧಾ ತಾಸು ಗಂಟಿ ಹೊಡದು, ಹೆಣ್ಣಿನ ಕಡ್ಯಾರು ಬೀಗರಿಗೆ ಮರ್ಯಾದಿ ಕೊಟ್‌ ಕರದಂಗ ಕರದು ಕುಂದರಸಾಕತ್ತಾರು.

ಅಧಿವೇಶನ ನಡದಾಗ ಎಂಎಲ್‌ಎಗೋಳು ಬ್ಯಾರೆ ಕಾರ್ಯಕ್ರಮದಾಗ ಭಾಗವಹಿಸೋದ್ನ ಬ್ಯಾನ್‌ ಮಾಡಬೇಕು. ಯಡಿಯೂರಪ್ಪನಂತಾ ಹಿರೆ ಮನಷ್ಯಾ ಮುಂಜಾನಿಂದ ಸಂಜಿತನಾ ಸಣ್‌ ಹುಡುಗೂರು ಕುಂತಂಗ ಕುಂತು ಎಲ್ಲಾರದೂ ಮಾತು ಕೇಳತಾರು ಅಂತಾದ್ರಾಗ ಈಗಿನ ಎಂಎಲ್‌ಎಗೋಳು ಹೊರಗ ತಿರಗ್ಯಾಡುದಂದ್ರ ಏನರ್ಥ. ಅಧಿವೇಶನ ಅಂದ್ರ ಬರೇ ತೌಡು ಕುಟ್ಟೋದು ಅನ್ನೋ ಮನಸ್ಥಿತಿ ಭಾಳ ಮಂದಿಗಿ ಐತಿ. ಆದ್ರ ಪ್ರಜಾಪ್ರಭುತ್ವ ವ್ಯವಸ್ಥೆದಾಗ ಆಳು ಸರ್ಕಾರ ಏನ್‌ ಮಾಡಾತೈತಿ, ಏನ್‌ ಮಾಡಬಾರದು ಅಂತ ಹೇಳಾಕ ಕೇಳಾಕ ಇರೂದು ಅದೊಂದ ವೇದಿಕೆ. ಮುನ್ನೂರ್‌ ಮಂದ್ಯಾಗ ಕೃಷ್ಣ ಬೈರೇಗೌಡ್ನಂತಾ ಇಪ್ಪತ್ತು ಮಂದಿಯಾದ್ರೂ ರಾಜಕೀ ಮಾತಾಡೋ ಬದ್ಲು ವಾಸ್ತವ ಏನ್‌ ನಡದೈತಿ ಅಂತ ಮಾತ್ಯಾಡಿದಾಗ ಚಿಲ್ಲರಾ ನೆಪದಾಗ ಗೂಗಲ್‌ ಪೇ ಹಾಕಿಸಿಕೊಂಡು ಬೇಕಾಬಿಟ್ಟಿ ಖರ್ಚು ಮಾಡೂದಾದ್ರೂ ಒಂದ್‌ಸ್ವಲ್ಪ ಬ್ರೇಕ್‌ ಹಾಕಿದಂಗ ಅಕ್ಕೇತಿ. ಸರ್ಕಾರ ಚೊಲೊ ನಡಿಬೇಕಂದ್ರ ಸ್ಟ್ರಾಂಗ್‌ ಅಪೋಜಿಷನ್‌ ಇರಬೇಕಂತ ಹಂಗಂತ ನಾನೂ ಧೈರ್ಯ ಮಾಡೇನಿ

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next