ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಆಡಳಿತದ ಆರಂಭಿಕ ಹಂತದಲ್ಲೇ ತನ್ನ ನೌಕರರಿಗೆ ಸಿಹಿ ಸುದ್ದಿ ನೀಡಿದ್ದು, ತುಟ್ಟಿಭತ್ತೆಯನ್ನು ಶೇ. 4ರಷ್ಟು ಹೆಚ್ಚಳ ಮಾಡಿದೆ.
2023ರ ಜ. 1ರಿಂದಲೇ ಜಾರಿಗೆ ಬರುವಂತೆ ತುಟ್ಟಿಭತ್ತೆಯನ್ನು ಮೂಲ ವೇತನದ ಶೇ. 31ರಿಂದ ಶೇ. 35ಕ್ಕೆ ಹೆಚ್ಚಿಸಿ ಮಂಗಳವಾರ ಆದೇಶ ಹೊರಡಿಸಿದೆ.
2018ರ ಪರಿಷ್ಕೃತ ವೇತನ ಶ್ರೇಣಿ ಗಳಲ್ಲಿ ವೇತನ ಪಡೆಯುತ್ತಿರುವ ಸರಕಾರಿ ನೌಕರರಿಗೆ 2023ರ ಜ. 1ರಿಂದಲೇ ಇದು ಅನ್ವಯವಾಗಲಿದೆ. ಯುಜಿಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತ ವೇತನದಾರರಿಗೂ ಇದು ಅನ್ವಯಿಸಲಿದೆ.
ಸರಕಾರದ ಮತ್ತು ಜಿ.ಪಂ.ಗಳ ಪೂರ್ಣಾವಧಿ ನೌಕರರಿಗೆ, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್ ಚಾರ್ಜ್ ನೌಕರರಿಗೆ ಹಾಗೂ ಸರಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರಿಗೆ ಈ ಆದೇಶ ಅನ್ವಯಿಸುತ್ತದೆ ಎಂದು ಸರಕಾರ ತಿಳಿಸಿದೆ.