Advertisement

ಸ್ವಲ್ಪ ಮಳೆ ಬಂದರೂ “ತಲೆ ಮೇಲೆ ನೀರು’

06:02 PM Jul 21, 2022 | Team Udayavani |

ಸೈದಾಪುರ: ಪಟ್ಟಣದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ 15 ಕೋಣೆಗಳು ಶಿಥಿಲಗೊಂಡಿದ್ದು ವಿದ್ಯಾರ್ಥಿಗಳು ಭಯದಲ್ಲೇ ಪಾಠ ಕೇಳುವಂತಾದರೆ, ಶಿಕ್ಷಕರು ಭೀತಿಯಿಂದಲೇ ಪಾಠ ಹೇಳುವಂತಾಗಿದೆ.

Advertisement

1959ರಲ್ಲಿ ಸುಮಾರು 11826 ಚದರ ಅಡಿ ವಿಸ್ತಾರದಲ್ಲಿ ಈ ಶಾಲಾ ಕಟ್ಟಡ ನಿರ್ಮಾಣಗೊಂಡಿದೆ. ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಗಳು ನಡೆಯುತ್ತಿದ್ದು, ಸುಮಾರು 220 ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಗೋಡೆಗಳು ಮತ್ತು ಛಾವಣಿಯ ಸಿಮೆಂಟ್‌ ಪದರು ಕೆಲವೊಮ್ಮೆ ಶಾಲಾವಧಿಯಲ್ಲಿಯೇ ಉದುರಿ ಬೀಳುತ್ತಿದೆಯಲ್ಲದೇ ಕಬ್ಬಿಣದ ರಾಡ್‌ಗಳು ಹೊರಗಡೆ ಕಾಣುತ್ತಿವೆ.

15 ಕೋಣೆಗಳಲ್ಲಿ 4 ಕೋಣೆಗಳು ಸ್ವಲ್ಪ ಉತ್ತಮವಿದ್ದು, ಉಳಿದ 8 ಕೋಣೆಗಳು ಶಿಥಿಲಗೊಂಡಿವೆ. ಅದರಲ್ಲಿ 3 ಕೋಣೆಗಳು ಸಂಪೂರ್ಣ ಶಿಥಿಲಗೊಂಡಿದ್ದು, ತರಗತಿ ನಡೆಸಲು ಯೋಗ್ಯವಾಗಿಲ್ಲ. ಇದರಿಂದ ಅವುಗಳನ್ನು ಮುಚ್ಚಲಾಗಿದೆ. ಮಳೆಗಾಲದಲ್ಲಿ ಸ್ವಲ್ಪ ಮಳೆ ಬಂದರೆ ಸಾಕು ತರಗತಿಗಳಲ್ಲಿ ನೀರು ಸೋರುತ್ತದೆ. ಮಳೆ ನಿಲ್ಲುವವರೆಗೂ ಸೋರದಿರುವ ಕೋಣೆಯ ಯಾವುದಾದರೊಂದು ಮೂಲೆಯಲ್ಲಿ ಮಕ್ಕಳು ಪುಸ್ತಕ, ಚೀಲಗಳನ್ನು ಹಿಡಿದು ನಿಲ್ಲಬೇಕಾಗಿದೆ.

ಆಟದ ಮೈದಾನವಿಲ್ಲ: ಈ ಶಾಲೆಯಲ್ಲಿ ದೈಹಿಕ ಶಿಕ್ಷಕರಿದ್ದರೂ ಮಕ್ಕಳಿಗೆ ಆಟವಾಡಲು ಆಟದ ಮೈದಾನವಿಲ್ಲ. ಇದೇ ಶಾಲೆಯ ಹಿಂದೆ ಅಕ್ಕಪಕ್ಕದ ಖಾಲಿ ಜಾಗದಲ್ಲಿ ಮಕ್ಕಳು ಆಟವಾಡುತ್ತಾರೆ. ಇಲ್ಲಿಯೇ ತರಬೇತಿ ಪಡೆದ ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡೆಗಳಲ್ಲೂ ಭಾಗವಹಿಸಿ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ. ಒಂದು ಕಾಲದಲ್ಲಿ ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರಿಂದ ಅದೇ ಶಾಲೆಯ ಪರಿಸ್ಥಿತಿ ಗಮನಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ಜಾಣ ಕುರುಡುತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಪ್ರತಿ ವರ್ಷವೂ ಶಾಲೆ ಮುಖ್ಯ ಗುರುಗಳು ಶಾಲಾವಸ್ಥೆ ಬಗ್ಗೆ ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಮನವಿ ನೀಡಿದರೂ ಪ್ರಯೋಜನವಾಗಿಲ್ಲಈ ಶಾಲೆ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುವೆ. ಗ್ರಾಮದ ಮುಖಂಡರು ಸಹಕಾರ ನೀಡಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಡಲು ಪ್ರಯತ್ನಿಸುತ್ತೇವೆ. ಸ್ನೇಹಲ್ಆರ್‌, ಜಿಲ್ಲಾಧಿಕಾರಿ

Advertisement

ಈ ಭಾಗದಲ್ಲಿ ಮಾದರಿ ಶಾಲೆ ಎಂಬ ಖ್ಯಾತಿ ಪಡೆದು ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ನೀಡಿದ ಶಾಲೆ ಇಂದು ಶಿಥಿಲಾವಸ್ಥೆ ತಲುಪಿರುವುದು ದುರ್ದೈವ ಸಂಗತಿ. ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ನೂತನ ಕಟ್ಟಡ ನಿರ್ಮಿಸಲು ಸಹಾಯ-ಸಹಕಾರ ನೀಡಬೇಕು. ಬಸವರಾಜ ನಾಯಕ, ಎಸ್ಡಿಎಂಸಿ ಅಧ್ಯಕ್ಷ

-ಭೀಮಣ್ಣ . ವಡವಟ್

Advertisement

Udayavani is now on Telegram. Click here to join our channel and stay updated with the latest news.

Next