ಮಂಗಳೂರು: ರಾಜ್ಯದ ಎಲ್ಲ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯ ಮೂರು ಸರಕಾರಿ ಶಾಲೆಗಳನ್ನು ದತ್ತು ಪಡೆದು ಮಾದರಿ ಶಾಲೆಯಾಗಿ ಅಭಿವೃದ್ಧಿ ಪಡಿಸುವಂತೆ ಶಿಫಾರಸು ಮಾಡಲಾಗಿತಲ್ಲದೇ 2020-21ರ ಸಾಲಿನ ರಾಜ್ಯ ಬಜೆಟ್ನಲ್ಲಿಯೂ ಘೋಷಿಸಲಾಗಿತ್ತು.
ಆದರೆ ಕೆಲವೇ ಮಂದಿ ಶಾಸಕರು ಮಾತ್ರ ತಮ್ಮ ಕ್ಷೇತ್ರದ ಶಾಲೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಉಳಿದ ಶಾಸಕರು ಯಾವುದೇ ಸ್ಪಂದನೆ ತೋರಿಲ್ಲ. ಇನ್ನಾದರೂ, ಅವರು ಈ ಬಗ್ಗೆ ಗಮನಹರಿಸುವಂತೆ ರಾಜ್ಯ ಸರಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ| ಎಂ.ಆರ್.ದೊರೆಸ್ವಾಮಿ ಕೋರಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಈಗಾಗಲೇ ನೀಡಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಆಸಕ್ತಿ ವಹಿಸುತ್ತಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಅವರ ಕ್ಷೇತ್ರದಲ್ಲೇ ದತ್ತು ತೆಗೆದುಕೊಳ್ಳುವ ಪ್ರಕ್ರಿಯೆ ಪೂರ್ಣವಾಗಿ ನಡೆದಿಲ್ಲ ಎಂದರು.
ವಿಶ್ವವಿದ್ಯಾನಿಲಯಗಳು, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳು ದತ್ತು ಪಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಶಿಫಾರಸು ಮಾಡಲಾಗಿದೆ. ಇದರಂತೆ, ಮಂಗಳೂರು ವಿಶ್ವವಿದ್ಯಾನಿಲಯ, ಶ್ರೀನಿವಾಸ್ ವಿ.ವಿ., ಎಸ್ಡಿಎಂ ಸಂಸ್ಥೆಗಳು ತಲಾ 10 ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಿವೆ ಎಂದು ಅವರು ಹೇಳಿದರು.
Related Articles
ಕುಲಪತಿ ಆಯ್ಕೆ: ಸುಧಾರಣೆ ಅಗತ್ಯ
ಕೆಲವು ವಿ.ವಿ.ಗಳ ಕುಲಪತಿ ಹುದ್ದೆಗೆ ಕೋಟ್ಯಂತರ ರೂ. ಲಂಚ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕುಲಪತಿ ಆಯ್ಕೆಯ ಕಾರ್ಯವಿಧಾನದಲ್ಲಿ ಸುಧಾರಣೆ ತರಲು ಶಿಫಾರಸು ಮಾಡಲಾಗಿದೆ. ದಿವ್ಯಾಂಗರಿಗೆ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕಾಗಿದೆ.
ಶಿಕ್ಷಣ ಸಂಸ್ಥೆಗಳಿಗಾಗಿ ಆಡಳಿತಾತ್ಮಕ ನ್ಯಾಯ ಮಂಡಳಿ ಸ್ಥಾಪನೆ, ಶಾಲೆ ಮತ್ತು ಉನ್ನತ ಶಿಕ್ಷಣ ಪಠ್ಯ ಕ್ರಮದಲ್ಲಿ ಯೋಗ ಅಳವಡಿಕೆ, ಅಭಿವೃದ್ಧಿಯಾಗದ ಪ್ರದೇಶಗಳಿಗೆ ವಿಶೇಷ ಶಿಕ್ಷಣ ನೀತಿ ಸಹಿತ ಹಲವು ಶಿಫಾರಸುಗಳನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದ ಅವರು, ತೆಲಂಗಾಣ ಸರಕಾರದ ಮಾದರಿಯಲ್ಲಿ ಕರ್ನಾಟಕ ಸರಕಾರ ಕೂಡ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅತೀ ಹೆಚ್ಚು ಅನುದಾನ ಘೋಷಿಸಬೇಕು ಎಂದರು.