Advertisement

ಅನುದಾನ ಬಳಸದೇ ಶಾಸಕರಿಂದ ಸರಕಾರದ ಅಪಪ್ರಚಾರ: ಕುಪ್ಪಿ

05:26 PM May 05, 2022 | Team Udayavani |

ಗುರುಮಠಕಲ್‌: ಮತಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಸರಕಾರ ಕೋಟ್ಯಂತರ ಅನುದಾನ ಮಂಜೂರು ಮಾಡಿದೆ. ಯಾವುದೇ ಅನುದಾನ ಸರಕಾರ ವಾಪಸ್‌ ಪಡೆದಿಲ್ಲ. ಅಭಿವೃದ್ಧಿ ಕುಂಠಿತಗೊಂಡಿರುವುದರಿಂದ ಅದನ್ನು ಮರೆಮಾಚಲು ಸರಕಾರ ಅನುದಾನ ಹಿಂಪಡೆದಿದೆ ಎಂದು ಸರಕಾರದ ಮೇಲೆ ಶಾಸಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಮಾಜಿ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ ಆರೋಪಿಸಿದ್ದಾರೆ.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮೇ 5ರಂದು ಜನತಾ ಕೇಂದ್ರ ಆರಂಭಿಸಲಾಗುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದ ಅವರು, ಕ್ಷೇತ್ರದ ಶಾಸಕರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕ್ಷೇತ್ರದ ಅನುದಾನ ಹಿಂಪಡೆದಿದ್ದಾರೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಎಲ್ಲ ಕಡೆ ಅಪಪ್ರಚಾರ ಮಾಡುತ್ತಿದ್ದಾರೆ. ಇದು ನಿಜವಾದರೆ ಇದರ ಕುರಿತು ಪುರಾವೆಗಳು ಮತ್ತು ದಾಖಲೆ ಸಮೇತ ನೀಡಲಿ ಎಂದು ಸವಾಲು ಎಸೆದರು.

ಮೇ 5ರಿಂದ ಪಟ್ಟಣದಲ್ಲಿ ಜನ ಸಂಪರ್ಕ ಕೇಂದ್ರ ಆರಂಭಿಸಲಾಗುತ್ತಿದ್ದು, ಇನ್ನೂ ಮುಂದೆ ಜನತಾ ಸಂಪರ್ಕ ಕೇಂದ್ರದ ಮೂಲದಿಂದ ಪಕ್ಷದ ಹಾಗೂ ಮತಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಸ್ಥಳೀಯ ಶಾಸಕರು ಜನರ ಸಮಸ್ಯೆಗಳಿಗೆ ಸ್ಪಂ ದಿಸುವಲ್ಲಿ ವಿಫಲವಾಗಿದ್ದಾರೆ. ಜನರನ್ನು ವಂಚಿಸಲು ಹೇಗೆ ರಣತಂತ್ರ ರೂಪಿಸುತ್ತಿದ್ದಾರೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚುಡುತ್ತೇನೆ. ಮತಕ್ಷೇತ್ರದ ಜನರಲ್ಲಿ ಜನಜಾಗೃತಿ ಮೂಡಿಸಲು ಹೋರಾಟ ಮಾಡಲಾಗುವುದು ಎಂದು ಅವರು ತಿಳಿಸಿದರು.

ಬಿಜೆಪಿಯಲ್ಲಿ ನಾಯಕರ ಕೊರತೆ ಇಲ್ಲ. ಪ್ರಸ್ತುತ ಬಿಜೆಪಿ ನಾಯಕರು ಬೇರೆ ಪಕ್ಷಕ್ಕೆ ಹೋಗಿದ್ದರೂ ಅವರನ್ನು ವಿಶ್ವಾಸಕ್ಕೆ ತಂದು ಮರಳಿ ಪಕ್ಷಕ್ಕೆ ನಮ್ಮ ಹಿರಿಯ ನಾಯಕರು ಕರೆ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಹಿರಿಯ ಮುಖಂಡ ಮಲ್ಲೇಶಪ್ಪ ಬೇಲಿ, ಶ್ರೀಧರರೆಡ್ಡಿ, ಶ್ಯಾಮಪ್ಪ ಚಂಡರಕಿ, ನರೇಶ ಗೊಂಗ್ಲೆ, ಪರ್ವತರೆಡ್ಡಿ, ಬಸವರಾಜ ದಳಪತಿ, ಬಸವರಾಜ ನೆಲ್ಹೋಗಿ, ಪ್ರವೀಣರೆಡ್ಡಿ, ರವೀಂದ್ರರೆಡ್ಡಿ ಪೋತೂಲ್‌, ಪ್ರವೀಣ ಜೋಶಿ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next