Advertisement

“ಜಿನೋಮಿಕ್‌ ಸೀಕ್ವೆನ್ಸಿಂಗ್‌ ಲ್ಯಾಬ್‌’ಕೈ ಬಿಟ್ಟ ಸರಕಾರ

11:58 PM Jan 15, 2023 | Team Udayavani |

ಮಂಗಳೂರು: ಕೋವಿಡ್‌ ವೈರಸ್‌ ರೂಪಾಂತರಿಯನ್ನು ಪತ್ತೆ ಮಾಡಲು ಮಂಗಳೂರಿನಲ್ಲಿ ಜಿನೋಮಿಕ್‌ ಸೀಕ್ವೆನ್ಸಿಂಗ್‌ ಲ್ಯಾಬ್‌ ತೆರೆಯುವುದಾಗಿ ವರ್ಷದ ಹಿಂದೆ ಘೋಷಣೆ ಮಾಡಿದ್ದ ಸರಕಾರ ಸದ್ಯ ಆ ಪ್ರಸ್ತಾವವನ್ನು ಕೈಬಿಡಲು ನಿರ್ಧರಿಸಿದೆ.

Advertisement

ಕೊರೊನಾ ಎರಡನೇ ಅಲೆಯ ಸಂದರ್ಭ ಕಲಬುರಗಿ, ಬೆಂಗಳೂರು, ಮೈಸೂರು, ಮಂಗಳೂರು, ವಿಜಯಪುರದಲ್ಲಿ ಈ ಪ್ರಯೋಗಾಲಯ ನಿರ್ಮಾಣಕ್ಕೆ ರಾಜ್ಯ ಸರಕಾರ ಮುಂದೆ ಬಂದಿತ್ತು. ವೆನ್ಲಾಕ್ ಆಸ್ಪತ್ರೆಯಲ್ಲಿ ಈಗಾಗಲೇ ಇರುವ ಸ್ಥಳಾವಕಾಶವನ್ನು ಸರಕಾರ ಕೋರಿತ್ತು. ಆದರೆ ಸದ್ಯ ಈ ಪೈಕಿ ವಿಜಯಪುರ ಮತ್ತು ಮಂಗಳೂರನ್ನು ಕೈ ಬಿಡಲು ನಿರ್ಧಾರ ಮಾಡಿದೆ.

ಪ್ರಯೋಗಾಲಯ ಸ್ಥಾಪನೆಗೆ ಸುಮಾರು 2ರಿಂದ 3 ಕೋಟಿ ರೂ. ಅನುದಾನ ಬೇಕು. ಅದನ್ನು ಹೊಂದಿಸಲು ಸರಕಾರ ಉತ್ಸಾಹ ತೋರುತ್ತಿಲ್ಲ. ಈ ಲ್ಯಾಬ್‌ನಲ್ಲಿ ಮಾನವ ಸಂಪನ್ಮೂಲವನ್ನು ಹೊಸದಾಗಿ ಹೊಂದಿಸಬೇಕು. ಮಂಗಳೂರಿನಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಇಲ್ಲದ ಕಾರಣ ಮುಂದಿನ ದಿನಗಳಲ್ಲಿ ಈ ಲ್ಯಾಬ್‌ ಉಪಯೋಗ ಕಡಿಮೆ. ಹೀಗಾಗಿ ಪ್ರಯೋಗಾಲಯ ಸ್ಥಾಪನೆ ಕೈಬಿಡಲು ತೀರ್ಮಾನಿಸಿದೆ.

ಲ್ಯಾಬ್‌ ಕೈಬಿಟ್ಟದ್ದರಿಂದ ನಷ್ಟವೇನು?
ವಿದೇಶದಲ್ಲಿ ಕೋವಿಡ್‌ ರೂಂಪಾತರಿ ವೈರಸ್‌ ಭೀತಿ ಹೆಚ್ಚುತ್ತಿರುವ ಸಮಯ ಹೆಚ್ಚಿನ ಪರೀಕ್ಷೆಯ ನಿಟ್ಟಿನಲ್ಲಿ ದ.ಕ. ಜಿಲ್ಲೆ ಯಲ್ಲಿಯೂ ಜಿನೋಮಿಕ್‌ ಸೀಕ್ವೆನ್ಸಿಂಗ್‌ ಲ್ಯಾಬ್‌ ತೆರೆಯಬೇಕು ಎಂಬ ಬೇಡಿಕೆ ಬಂದಿತ್ತು. ಆದರೆ ಈಗಾಗಲೇ ಭರವಸೆ ನೀಡಿದ್ದ ಸರಕಾರ ಮಾತ್ರ ಈ ಪ್ರಸ್ತಾವ ಕೈಬಿಟ್ಟಿದೆ. ಡೆಲ್ಟಾ, ಡೆಲ್ಟಾ ಪ್ಲಸ್‌, ಒಮಿಕ್ರಾನ್‌, ಎಕ್ಸ್‌ಬಿಬಿ, ಬಿಎಫ್‌.7, ನಾರ್ಸ್‌ ಸಿಒವಿ 2 ಸೇರಿದಂತೆ ಹಲವಾರು ರೂಪಾಂತರಿ ವೈರಸ್‌ಗಳ ಕಾಟ ಈ ಹಿಂದೆ ವಿದೇಶಕ್ಕೆ ತಟ್ಟಿತ್ತು. ಈ ವೇಳೆ ಮಂಗಳೂರು ಸಹಿತ ದೇಶದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿದೇಶಿ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗಿತ್ತು. ಈಗಲೂ ಹೈರಿಸ್ಕ್ ದೇಶಗಳಿಂದ ಬರುವ ಸೋಂಕುಪೀಡಿತರ ಗಂಟಲು ದ್ರವ ಮಾದರಿಯನ್ನು ಹೆಚ್ಚಿನ ಪರೀಕ್ಷೆಗೆ ಬೆಂಗಳೂರಿನ ಜಿನೋಮಿಕ್‌ ಸೀಕ್ವೆನ್ಸಿಂಗ್‌ ಲ್ಯಾಬ್‌ಗ ಕಳುಹಿಸಲಾಗುತ್ತಿದೆ. ಮಂಗಳೂರಿನಲ್ಲಿ ಈ ಪ್ರಯೋಗಾಲಯ ಇರದ ಕಾರಣ ವರದಿಗಾಗಿ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ.

ಏನಿದು ಜಿನೋಮಿಕ್‌ ಸೀಕ್ವೆನ್ಸಿಂಗ್‌ ಲ್ಯಾಬ್‌ ?
ವೈರಾಣುಗಳ ರೂಪಾಂತರ ಸಹಿತ ವಿವಿಧ ಸೂಕ್ಷ್ಮ ಪರೀಕ್ಷೆಗಳಿಗಾಗಿ ಇರುವ ಪ್ರಯೋಗಾಲಯ ಇದು. ಕೋವಿಡ್‌ ಅಥವಾ ವೇಗವಾಗಿ ರೂಪಾಂತರ ಹೊಂದಬಲ್ಲ ಇನ್ಯಾವುದೇ ಸೋಂಕು ಕಾರಕ ವೈರಾಣು ಗಳಲ್ಲಿ ಬೇಗನೆ ಉಪ ತಳಿಗಳು ಸೃಷ್ಟಿಯಾಗುತ್ತವೆ. ಸೋಂಕುಪೀಡಿತರ ಗಂಟಲು ದ್ರವ ಮಾದರಿಯನ್ನು ಪ್ರಯೋ ಗಾಲಯ ದಲ್ಲಿ ವಿಶೇಷ ತಪಾ ಸಣೆ ನಡೆಸಿದಾಗ ಮಾತ್ರ ಅದನ್ನು ಪತ್ತೆ ಮಾಡಲು ಸಾಧ್ಯ.

Advertisement

ಮಂಗಳೂರಿನಲ್ಲಿ ಜಿನೋಮಿಕ್‌ ಸೀಕ್ವೆನ್ಸಿಂಗ್‌ ಲ್ಯಾಬ್‌ ತೆರೆಯಲು ಆರೋಗ್ಯ ಇಲಾಖೆ ನಿರ್ಧರಿಸಿತ್ತು. ಆದರೆ ವಿವಿಧ ಹಂತ ಗಳ ಪರಿಶೀಲನೆಯ ಬಳಿಕ ಈ ಪ್ರಸ್ತಾವ ದಲ್ಲಿ ಮಂಗಳೂರನ್ನು ಕೈ ಬಿಟ್ಟಿ ದ್ದೇವೆ. ಈ ಪ್ರಯೋಗಾಲಯ ಸ್ಥಾಪನೆಗೆ ಹೆಚ್ಚಿನ ಹಣ ಬೇಕು. ನಿರ್ವಹಣೆಯೂ ಕಷ್ಟ. ಮಂಗಳೂರಿ ನಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಇಲ್ಲದ ಪರಿಣಾಮ ಪ್ರಯೋಗಾಲಯ ವಾಗಿಯೂ ಮುಂದಿನ ದಿನಗಳಲ್ಲಿ ಈ ಲ್ಯಾಬ್‌ ಉಪಯೋಗಕ್ಕೆ ಬರಲಾರದು.
– ಅನಿಲ್‌ ಕುಮಾರ್‌ ಟಿ.ಕೆ.,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ

- ನವೀನ್‌ ಭಟ್‌ ಇಳಂತಿಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next