Advertisement

ತ್ರಿಬಲ್‌ ಎಂಜಿನ್‌ ಆಡಳಿತವಿದ್ರೂ ಬಡವರ ಏಳ್ಗೆ ಮಾಡದ ಕಾಂಗ್ರೆಸ್‌

10:19 PM Feb 25, 2023 | Team Udayavani |

ಕಲಾದಗಿ (ಬಾಗಲಕೋಟೆ): ಈ ದೇಶ ಮತ್ತು ರಾಜ್ಯದಲ್ಲಿ 50 ವರ್ಷ ಕಾಂಗ್ರೆಸ್‌ ಆಡಳಿತ ನಡೆಸಿದೆ. ಜತೆಗೆ ನಗರ ಸ್ಥಳೀಯ ಸಂಸ್ಥೆಗಳು, ಗ್ರಾಪಂ ಮಟ್ಟದಲ್ಲೂ ಅವರೇ ಅಧಿಕಾರದಲ್ಲಿದ್ದರು. ತ್ರಿಬಲ್‌ ಎಂಜಿನ್‌ ಸರ್ಕಾರ ಇದ್ದರೂ ಬಡವರ ಏಳ್ಗೆ ಮಾಡಲಿಲ್ಲ ಎಂದು ಕಂದಾಯ ಸಚಿವ ಆರ್‌. ಅಶೋಕ ಆರೋಪಿಸಿದರು.

Advertisement

ಕಲಾದಗಿಯಲ್ಲಿ ಶನಿವಾರ “ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಡಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ಬ್ರಿಟಿಷರ ಕಾಲದ ಅಮಲದಾರರು, ಜನರ ಮನೆ ಬಾಗಿಲಿಗೆ ಬರುತ್ತಿದ್ದರು. ಆದರೆ ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ಜನರೇ ಸರ್ಕಾರದ ಕಚೇರಿಗಳಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣ ಮಾಡಿತ್ತು. ಬಿಜೆಪಿ ನೇತೃತ್ವದ ನಮ್ಮ ಡಬಲ್‌ ಎಂಜಿನ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ “ನಾಳೆ ಬಾ’ ಎಂಬ ಸಂಸ್ಕೃತಿಯನ್ನೇ ತೊಡೆದು ಹಾಕಿ, ಬಡವರ ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯ ನೀಡುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್‌. ಅಶೋಕ ಹೇಳಿದರು.

ರೈತ ಈ ದೇಶದ ಬೆನ್ನೆಲುಬು. ಚುನಾವಣೆ ಬಂದಾಗ ಬಹುತೇಕರು, ಮನೆ ಬಾಗಿಲಿಗೆ ಬರುತ್ತಾರೆ. ಚುನಾವಣೆ ಮುಗಿದು ಅಧಿಕಾರಕ್ಕೆ ಬಂದವರು ವಿಧಾನಸೌಧದಲ್ಲಿ ಕುಳಿತುಕೊಳ್ಳುತ್ತಾರೆ. ಇದು ಒಂದು ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕ ಮಾಡಿದಂತೆ. ಆದರೆ ನಾವು ಅಧಿಕಾರಕ್ಕೆ ಬಂದ ಬಳಿಕ ಸರ್ಕಾರದ ಸೌಲಭ್ಯಗಳನ್ನು, ಬಡವರ ಕಷ್ಟ ಕೇಳಲು ಅವರಿದ್ದಲ್ಲಿಗೇ ಅಧಿಕಾರಿಗಳು ಬರುವ ಸಂಪ್ರದಾಯ ಆರಂಭಿಸಿದ್ದೇವೆ ಎಂದು ತಿಳಿಸಿದರು.

ಒಂದು ಜಿಲ್ಲೆಗೆ ಬರುವ ಜಿಲ್ಲಾಧಿಕಾರಿಗಳು, ಬಹಳ ಅಂದ್ರೆ ಒಂದೂವರೆ ವರ್ಷ ಇರುತ್ತಾರೆ. ಅವರು ಹಳ್ಳಿಗೆ ಹೋಗುವುದೇ ಇಲ್ಲ. ಹೀಗಾಗಿ ಬಡವರಿಗೆ ಸೌಲಭ್ಯ ಕಲ್ಪಿಸಲು ಹಳ್ಳಿಗೆ ಹೋಗಬೇಕು, ಕಾನೂನು ತಿದ್ದುಪಡಿ, ನಿಯಮ ರೂಪಿಸಲು ವಿಧಾನಸೌಧಕ್ಕೆ ಹೋಗಬೇಕು. ನಾವು ಆರಂಭಿಸಿದ ಗ್ರಾಮವಾಸ್ತವ್ಯ ಕಾರ್ಯಕ್ರಮದಿಂದ ಈವರೆಗೆ ಒಟ್ಟು 4.74 ಲಕ್ಷ ಫಲಾನುಭವಿಗಳಿಗೆ ವಿವಿಧ ಇಲಾಖೆಗಳ ವಿವಿಧ ಸೌಲಭ್ಯ ಒದಗಿಸಲಾಗಿದೆ. ಇವರೆಲ್ಲ ಡಿಸಿ, ತಹಶೀಲ್ದಾರ್‌ ಕಚೇರಿಗೆ ಹೋಗಿದ್ದರೆ ಎಷ್ಟು ಹಣ, ಸಮಯ ಖರ್ಚಾಗುತ್ತಿತ್ತು ಎಂದು ಪ್ರಶ್ನಿಸಿದರು.

ರೈತರ ಭೂಮಿ ಅಂದ್ರೆ ಆರಕ್ಕೆ ಮೂರರಂಗೆ ಕೇಳುವಂತಾಗಬಾರದು. ಅವರ ಭೂಮಿಗೂ ಬೆಲೆ ಬರಬೇಕು. ವಿದ್ಯಾವಂತರು ಕೃಷಿ ಮಾಡಲು ಬಂದರೆ ಅವಕಾಶ ಇರಬೇಕು. ಇದಕ್ಕಾಗಿ 79ಬಿ ಕಾನೂನು ಕಲಂ ತೆಗೆಯಲಾಗಿದೆ. ನಾನೂ ಕೂಡ ರೈತನ ಮಗ. ನಮ್ಮದು 65 ಎಕರೆ ಹೊಲ ಇತ್ತು. ಭೂಸ್ವಾಧೀನದಿಂದ ಈಗ ಕೇವಲ ಒಂದು ಎಕರೆ ಉಳಿದಿದೆ. ಈ ಕಲಾದಗಿ ಗ್ರಾಮದ ರೈತರ ಹೊಲವೂ ಸಾಕಷ್ಟು ಭೂಸ್ವಾಧೀನಗೊಳ್ಳುತ್ತದೆ. ಇದು ಆಲಮಟ್ಟಿ ಜಲಾಶಯ ಹಿನ್ನೀರು ವ್ಯಾಪ್ತಿಯಲ್ಲಿ ಮುಳುಗಡೆಯಾದ ಗ್ರಾಮ. ಇಲ್ಲಿನ ರೈತರ ನೋವು ಅರ್ಥವಾಗುತ್ತದೆ ಎಂದರು.
ಕಂದಾಯ ಸಚಿವನಾದ ಬಳಿಕ ಈವರೆಗೆ 60 ಲಕ್ಷ ರೈತರಿಗೆ ಪಹಣಿ ನೀಡಲಾಗಿದೆ. ಪಿಂಚಣಿಗಾಗಿ ಆರು ತಿಂಗಳ ಕಾಲ ತಹಶೀಲ್ದಾರ್‌ ಕಚೇರಿಗೆ ಅಲೆಯುವ ಪರಿಸ್ಥಿತಿ ಇತ್ತು. ಈಗ ಟೋಲ್‌ ಫ್ರೀ ನಂಬರ್‌ ಮಾಡಿದ್ದು, ಕರೆ ಮಾಡಿದ ಅಥವಾ ಅರ್ಜಿ ಕೊಟ್ಟ 72 ಗಂಟೆಯಲ್ಲಿ ಪಿಂಚಣಿ ಮಂಜೂರು ಮಾಡಲಾಗುತ್ತಿದೆ ಎಂದು ಹೇಳಿದರು.

Advertisement

ರೈತರು ಕಳ್ಳರಲ್ಲ: ಸರ್ಕಾರಿ ಜಾಗೆಯಲ್ಲಿ ಮನೆ ಕಟ್ಟಿಕೊಂಡ ತಾಂಡಾ, ಗೊಲ್ಲರಹಟ್ಟಿ, ಹಟ್ಟಿ ಹಾಗೂ ಬಡಜನರಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಇದಕ್ಕಾಗಿ ಕಾನೂನು ತಿದ್ದುಪಡಿ ಮಾಡಲಾಗಿದೆ. ರೈತರು, ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದರೆ ಅವರನ್ನು ಕಳ್ಳರಂತೆ ಕಾಣಲಾಗುತ್ತಿತ್ತು. ಅವರು ಕಳ್ಳರಲ್ಲ. ದೇಶಕ್ಕೆ ಅನ್ನ ನೀಡುವ ಅನ್ನದಾತರು. ಅವರು ಕಟ್ಟಿಕೊಂಡ ಮನೆಗೆ, ಒತ್ತುವರಿ ಮಾಡಿಕೊಂಡ ಭೂಮಿಗೆ ಹಕ್ಕುಪತ್ರ ಕಲ್ಪಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಶಾ, ಪ್ರಧಾನ್‌ ವಾಸ್ತವ್ಯ
ಬಾಗಲಕೋಟೆ: ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಆಧಿಕಾರಕ್ಕೆ ತರಲು ಪಕ್ಷದ ರಾಷ್ಟ್ರೀಯ ನಾಯಕರಾದ ಅಮಿತ್‌ ಶಾ, ಧರ್ಮೇಂದ್ರ ಪ್ರಧಾನ್‌ ಮುಂತಾದವರು ರಾಜ್ಯದಲ್ಲೇ ಮನೆ ಮಾಡಿ ವಾಸ್ತವ್ಯ ಹೂಡಲಿದ್ದಾರೆ ಎಂದು ಸಚಿವ ಆರ್‌.ಅಶೋಕ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮದು ನಾಳೆ ಬಾ ಎನ್ನುವ ಪಕ್ಷವಲ್ಲ. ನಮ್ಮದು ಟು ಡೇ ಎನ್ನುವ ಪಕ್ಷ. ಕಾಂಗ್ರೆಸ್‌ನವರಂತೆ ರಾಜ್ಯಕ್ಕೆ ಬಂದು ಭಾಷಣ ಮಾಡಿ ಹೋಗುವ ಕೆಲಸವನ್ನು ನಮ್ಮ ಪಕ್ಷದ ನಾಯಕರು ಮಾಡಲ್ಲ. ನಮ್ಮ ವರಿಷ್ಠರು ಈಗಾಗಲೇ ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ದಾರೆ. ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಭಾಷಣ ಮಾಡಿ ಓಡಿ ಹೋಗುವ ಮನಸ್ಥಿತಿ ನಮ್ಮ ನಾಯಕರಲ್ಲಿಲ್ಲ ಎಂದರು.

ನಾವು ಪ್ರತಿ ಕುಟುಂಬದ ಮುಖ್ಯಸ್ಥ ಮಹಿಳೆಗೆ ಒಂದು ಸಾವಿರ ರೂ. ಘೋಷಣೆ ಮಾಡಿದ್ದೇವೆ. ಇದು ಶೀಘ್ರವೇ ಮಹಿಳೆಯರ ಖಾತೆಗೆ ಜಮೆಯಾಗಲಿದೆ. ಕಾಂಗ್ರೆಸ್‌ನವರು ಕೇವಲ ಭಾಷಣ ಮಾಡಿ, ಭರವಸೆ ಕೊಡುತ್ತಾರೆ. ನಾವು ಹೇಳದೇ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ಹಾಸ್ಟೆಲ್‌ ಒದಗಿಸಲಾಗಿದೆ. ಈಗ ಹಾಸ್ಟೆಲ್‌ಗ‌ಳ ಬೇಡಿಕೆಯೇ ಇಲ್ಲ ಎಂದರು.

500 ಎಕರೆ ಮಂಜೂರು: ಕಲಾದಗಿ ಮುಳುಗಡೆ ಗ್ರಾಮದ ಜನರಿಗೆ ಪುನರ್ವಸತಿ, ಪುನರ್‌ ನಿರ್ಮಾಣ ಸಹಿತ ವಿವಿಧ ಕಾರ್ಯಕ್ಕೆ 500 ಎಕರೆ ಭೂಮಿಯ ಬೇಡಿಕೆ ಇಡಲಾಗಿದೆ. ಈ ಗ್ರಾಮಸ್ಥರಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು 500 ಎಕರೆ ಭೂಮಿ ನೀಡಲು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗು ವು ದು. ಕಂದಾಯ ಮತ್ತು ವಿವಿಧ ಇಲಾಖೆಗಳ ಒಟ್ಟು 13 ಸಾವಿರ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next