ಚಾಮರಾಜನಗರ: ಏಳನೇ ವೇತನ ಆಯೋಗ ಜಾರಿ, ಹಳೆಯ ಪಿಂಚಣಿ (ಒಪಿಎಸ್) ವ್ಯವಸ್ಥೆ ಮರು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಆಗ್ರಹಿಸಿ ಸರ್ಕಾರಿ ನೌಕರರು ಕರೆ ನೀಡಿದ್ದ ಮುಷ್ಕರ ಹಿನ್ನೆಲೆಯಲ್ಲಿ ಜಿಲ್ಲೆಯ ಸರ್ಕಾರಿ ಕಚೇರಿಗಳು, ಶಾಲೆಗಳು, ಸರ್ಕಾರಿ ಆಸ್ಪತ್ರೆಗಳು ನೌಕರ ರಿಲ್ಲದೇ ಬುಧವಾರ ಬಿಕೋ ಎನ್ನುತ್ತಿದ್ದವು.
ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ಹಾಗೂ ಹನೂರು ತಾಲೂಕು ವ್ಯಾಪ್ತಿ ಯಲ್ಲಿನ ಸರ್ಕಾರಿ ಕಚೇರಿಗಳು, ಆಸ್ಪತ್ರೆ, ಶಾಲೆಗಳಿಗೆ ನೌಕರರು ಗೈರಾಗುವ ಮೂಲಕ ಮುಷ್ಕರಕ್ಕೆ ಬೆಂಬಲ ಸೂಚಿಸಿದರು. ಇದರಿಂದಾಗಿ ಕಚೇರಿಗಳು ತೆರೆದಿದ್ದರೂ ನೌಕರರಿಲ್ಲದೇ ಬಿಕೋ ಎನ್ನುತ್ತಿದ್ದವು. ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಬಂದ ಜನರು ಅಧಿಕಾರಿಗಳು, ಸಿಬ್ಬಂದಿಗಳಿಲ್ಲದೇ ತಮ್ಮ ಮನೆಗಳತ್ತ ವಾಪಸ್ಸು ತೆರಳಿದರು.
ಉಳಿದಂತೆ ಮುಷ್ಕರಕ್ಕೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮುಷ್ಕರಕ್ಕೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಶಾಲೆಗಳಿಗೆ ಶಿಕ್ಷಕರು ಗೈರಾದರು. ಇದರಿಂದ ಬಹುತೇಕ ಸರ್ಕಾರಿ ಶಾಲೆಗಳು ಶಿಕ್ಷಕರಿಲ್ಲದೇ ಮುಚ್ಚಿದವು. ಶಾಲೆಗಳಿಗೆ ತೆರಳಿದ್ದ ವಿದ್ಯಾರ್ಥಿಗಳು ಸಹ ವಾಪಸ್ಸು ಮನೆಗಳಿಗೆ ತೆರಳಿದರು.
ಪರದಾಡಿದ ರೋಗಿಗಳು : ಸರ್ಕಾರಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಸರ್ಕಾರಿ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥ ಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವ ಹಿಸುತ್ತಿದ್ದ ನೌಕರರು ಕೆಲಸಕ್ಕೆ ಗೈರಾಗಿದ್ದರು. ಇದರಿಂದಾಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಆಗಮಿಸಿದ ರೋಗಿಗಳು ವೈದ್ಯರು ಸೇರಿದಂತೆ ಇತರೆ ಸಿಬ್ಬಂದಿ ಇಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು.
Related Articles
ಪರಿಣಾಮ ಅನಿವಾರ್ಯವಾಗಿ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ತೆರಳಿದರು. ಇದರಿಂದಾಗಿ ಬಹುತೇಕ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್ಗಳು ಜನರಿಂದ ತುಂಬಿ ತುಳುಕುತ್ತಿದ್ದವು. ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿ ಘೋಷಣೆ ಕೂಗಿದರು.
ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮಾತನಾಡಿ, 7ನೇ ವೇತನ ಆಯೋಗ ಜಾರಿಗೊಳಿಸಬೇಕು. ಒಪಿಎಸ್ ಅನ್ನು ಜಾರಿಗೆ ತರಬೇಕು. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಕರಾತ್ಮವಾಗಿ ಸ್ಪಂದಿಸಿದ್ದು ಲಿಖೀತ ಆದೇಶ ಬಾರದ ಕಾರಣ ಮುಷ್ಕರ ಮುಂದುವರಿಯುತ್ತಿದೆ. ಸರ್ಕಾರದಿಂದ ಲಿಖೀತ ಆದೇಶ ಬರುವವರೆಗೂ ಮುಷ್ಕರ ಮುಂದುವರಿಯುತ್ತದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳಾದ ವೇತನ-ಭತ್ಯೆಗಳಪರಿಷ್ಕರಣೆ ಹಾಗೂ ಹಳೆ ಚಿಂಚಣೀ ಯೋಜನೆಯನ್ನು ಜಾರಿ ಗೊಳಿಸುವ ಸಂಬಂಧ ಫೆ. 21 ರಂದು ನಡೆದ ರಾಜ್ಯ ಕಾರ್ಯಕಾರಿಣಿ ಮತ್ತು ವೃಂದ ಸಂಘಗಳ ಸಭೆಯಲ್ಲಿ ಕೈಗೊಂಡ ಸರ್ವಾನುಮತದ ತೀರ್ಮಾನದಂತೆ ರಾಜ್ಯದ ಸಮಸ್ತ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಬುಧವಾರ ಕರ್ತವ್ಯಕ್ಕೆ ಗೈರು ಹಾಜರಾಗಿ ಅನಿರ್ದಿಷ್ಟಾವದಿ ಮುಷ್ಕರವನ್ನು ನಡೆಸುತ್ತಿದ್ದೇವೆ. ನಮ್ಮ ಮುಷ್ಕರಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು, ರಾಜಕಾರಣಿಗಳು ಸಂಘ ಸಂಸ್ಥೆಗಳು ಬೆಂಬಲ ನೀಡಿವೆ ಎಂದರು.
ಪ್ರಧಾನ ಕಾರ್ಯದರ್ಶಿ ಮಹದೇವ ಸ್ವಾಮಿ, ಖಜಾಂಚಿ ಮಹದೇವಯ್ಯ, ರಾಜ್ಯ ಪರಿಷತ್ ಸದಸ್ಯ ಮಲ್ಲಿಕಾರ್ಜುನ್ ಕುಂಟೋಜಿ, ಗೌರವಾಧ್ಯಕ್ಷ ಶಿವಮೂರ್ತಿ, ಸದಸ್ಯರಾದ ಸಿದ್ದರಾಜು, ಮಲ್ಲಿಕಾರ್ಜುನ್, ಕೃಷ್ಣಮೂರ್ತಿ, ಶೈಲೇಂದ್ರ, ಯೋಗೇಶ್ಗೌಡ, ಸೈಮನ್, ಹಾಗೂ ಸಂಘದ ಪಧಾದಿಕಾರಿಗಳು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾದಪ್ಪ, ಮಹದೇವಸ್ವಾಮಿ, ಕೃಷ್ಣ ಮೂರ್ತಿ, ಎಂ.ಡಿ.ಮಹದೇವಯ್ಯ, ರಾಮಸ್ವಾಮಿ, , ಹಾಜರಿದ್ದರು.
ಹನೂರು ವರದಿ: ರಾಜ್ಯ ಸರ್ಕಾರಿ ನೌಕರರ ಮುಷ್ಕರದ ಹಿನ್ನೆಲೆ ಯಲ್ಲಿ ಹನೂರು ಪಟ್ಟಣದಲ್ಲೂ ಸರ್ಕಾರಿ ಕಚೇರಿಗಳು ನೌಕರ ರಿಲ್ಲದೇ ಖಾಲಿ ಹೊಡೆಯುತ್ತಿದ್ದವು. ರಾಜ್ಯ ಸರ್ಕಾರಿ ನೌಕ ರರು ಕರ್ತವ್ಯಕ್ಕೆ ಗೈರು ಹಾಜರಾಗಿ ಕಚೇರಿಯಿಂದ ಹೊರಗುಳಿದರು.